ಡೇರ್​ಡೆವಿಲ್ ಮುಸ್ತಾಫಾ ನೋಡಿ ಬಂದ ಆಟೋ ಡ್ರೈವರ್​ಗೆ ಎದುರಾದ ಅಯ್ಯಂಗಾರಿ-ಮುಸ್ತಾಫಾ: ಆಮೇಲೇನಾಯ್ತು?

Daredevil Mustafa: ಡೇರ್​ಡೆವಿಲ್ ಮುಸ್ತಾಫಾ ಸಿನಿಮಾ ನೋಡಿ ಆಟೋ ಡ್ರೈವರ್ ಒಬ್ಬರಿಗೆ ದಾರಿಯಲ್ಲಿ ಅಯ್ಯಂಗಾರಿ ಹಾಗೂ ಮುಸ್ತಾಫಾ ಎದುರಾಗಿದ್ದಾರೆ!

ಡೇರ್​ಡೆವಿಲ್ ಮುಸ್ತಾಫಾ ನೋಡಿ ಬಂದ ಆಟೋ ಡ್ರೈವರ್​ಗೆ ಎದುರಾದ ಅಯ್ಯಂಗಾರಿ-ಮುಸ್ತಾಫಾ: ಆಮೇಲೇನಾಯ್ತು?
ಡೇರ್​ಡೆವಿಲ್ ಮುಸ್ತಾಫಾ

Updated on: May 23, 2023 | 6:01 PM

ಪೂರ್ಣಚಂದ್ರ ತೇಜಸ್ವಿ (Poornachandra Tejaswi) ಅವರ ಸಣ್ಣ ಕತೆ ಡೇರ್​ಡೆವಿಲ್ ಮುಸ್ತಾಫಾ (Daredevil Mustafa) ಅದೇ ಹೆಸರಿನಲ್ಲಿ ಸಿನಿಮಾ ಆಗಿದೆ. ಕಳೆದ ವಾರ ಬಿಡುಗಡೆ ಆದ ಈ ಸಿನಿಮಾಕ್ಕೆ ಸಹೃದಯ ಪ್ರೇಕ್ಷಕರ ಭರಪೂರ ಮೆಚ್ಚುಗೆ ದೊರೆತಿದೆ. ಡೇರ್​ಡೆವಿಲ್ ಮುಸ್ತಾಫಾ ಸಿನಿಮಾ ಎಲ್ಲ ವರ್ಗದ ಪ್ರೇಕ್ಷಕರನ್ನೂ ಸೆಳೆದಿದ್ದು. ಸಿನಿಮಾ ಭಾಷೆಯಲ್ಲಿಯೇ ಹೇಳುವುದಾದರೆ ಎ, ಬಿ ಹಾಗೂ ಸಿ ಸೆಂಟರ್​ ಮೂರು ವಿಧದ ಪ್ರೇಕ್ಷಕರಿಗೂ ಈ ಸಿನಿಮಾ ಇಷ್ಟವಾಗಿದೆ. ಇದಕ್ಕೆ ಸಾಕ್ಷಿಯೊಂದನ್ನು ನಟ ಧನಂಜಯ್ (Daali Dhananjay) ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಡೇರ್​ಡೆವಿಲ್ ಮುಸ್ತಾಫಾ ಸಿನಿಮಾ ನೋಡಿಕೊಂಡು ಹೊರಟಿದ್ದ ಆಟೋ ಡ್ರೈವರ್ ಒಬ್ಬನಿಗೆ ಸಿನಿಮಾದ ಪಾತ್ರಗಳಾದ ರಾಮಸ್ವಾಮಿ ಅಯ್ಯಂಗಾರಿ ಹಾಗೂ ಡೇರ್​ಡೆವಿಲ್ ಮುಸ್ತಾಫಾ ರಸ್ತೆಯಲ್ಲಿ ಸಿಕ್ಕಿದ್ದಾರೆ! ಆಗಿರುವುದಿಷ್ಟು, ಡೇರ್​ಡೆವಿಲ್ ಮುಸ್ತಾಫಾ ಸಿನಿಮಾದ ನಟ ಹಾಗೂ ನಿರ್ದೇಶಕರು ಕಾರಿನಲ್ಲಿ ಹೋಗುತ್ತಿರುವಾಗ ಅದೇ ತಾನೆ ಅವರದ್ದೇ ಸಿನಿಮಾ ನೋಡಿದ್ದ ಆಟೋ ಡ್ರೈವರ್ ಒಬ್ಬರು ಅವರ ಕಾರಿನ ಪಕ್ಕ ಬಂದಿದ್ದಾರೆ. ಆಗ ನಿರ್ದೇಶಕ ಶಶಾಂಕ್ ಸೋಗಾಲ, ಕಾರಿನ ಚಾಲನೆ ಮಾಡುತ್ತಿದ್ದ ಅಯ್ಯಂಗಾರಿ ಪಾತ್ರಧಾರಿ ಆದಿತ್ಯರನ್ನು ತೋರಿಸಿ ಯಾರಿವರು ಗುರುತಿಸಿ ಎಂದಾಗ ಸಿನಿಮಾ ನೋಡಿದ್ದ ಆಟೋ ಡ್ರೈವರ್ ಇವರು ಶಾಸ್ತ್ರಿ ಎಂದಿದ್ದಾರೆ. ಆ ಬಳಿಕ ನಟ ಶೀಷೀರ್ ಅನ್ನು ತೋರಿಸಿ ಇವರು ಯಾರು ಹೇಳಿ ಎಂದಾಗ ಮುಸ್ತಾಫಾ ಎಂದಿದ್ದಾರೆ ಆಟೋ ಚಾಲಕ.

ಮುಂದುವರೆದು, ಸಿನಿಮಾ ಸಖತ್ತಾಗಿದೆ ಎಂದಿದ್ದಾರೆ ಆಟೋ ಡ್ರೈವರ್. ಬಳಿಕ ತಮ್ಮ ಪರಿಚಯ ಮಾಡಿಕೊಂಡ ಶಶಾಂಕ್, ನಾನೇ ಸಹ ಸಿನಿಮಾ ನಿರ್ದೇಶಕ ಎಂದಿದ್ದಾರೆ. ಬಳಿಕ ಕತೆ ಬರೆದಿರುವುದು ತೇಜಸ್ವಿಯವರು ಎಂದು ಹೇಳಿದ್ದಾರೆ. ಸರಿ ಸರ್ ಸಿನಿಮಾ ಚೆನ್ನಾಗಿದೆ ಎನ್ನುತ್ತಾ ಆಟೋ ಓಡಿಸಿಕೊಂಡು ಹೋಗಿದ್ದಾನೆ ಆ ಚಾಲಕ. ಈ ವಿಡಿಯೋವನ್ನು ನಟ ಡಾಲಿ ಧನಂಜಯ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಡೇರ್ ಡೆವಿಲ್ ಮುಸ್ತಫಾ ನೋಡಿದವರೆಲ್ಲ ಖುಷಿಯಪ್ಪ ಎಂದು ಬರೆದುಕೊಂಡಿದ್ದಾರೆ. ಮುಂದುವರೆದು, ”ಖುಷಿ ಪಟ್ಟು ಡೇರ್ ಡೆವಿಲ್ ತಂಡವನ್ನು ಗುರುತಿಸಿ wish ಮಾಡಿದ ರೀತಿ ಇಷ್ಟ ಆಯ್ತು, ನಮಗೆ ಅವರನ್ನು ಭೇಟಿ ಆಗುವ ಹಂಬಲವಿದೆ ಎಂದಿದ್ದಾರೆ.

ಇದನ್ನೂ ಓದಿ:ಪೂಚಂತೆಯ ಡೇರ್​ಡೆವಿಲ್ ಮುಸ್ತಾಫಾ ಸಿನಿಮಾ ಆದ ಕತೆ: ಈ ಸಿನಿಮಾಕ್ಕೆ ನೂರು ಜನ ನಿರ್ಮಾಪಕರು!

ತೇಜಸ್ವಿಯವರ ಕತೆಯೊಳಗಿನ ಮ್ಯಾಜಿಕ್ ಅನ್ನು ತೆರೆ ಮೇಲೆ ತರಲು ನಿರ್ದೇಶಕ ಶಶಾಂಕ್ ಸೋಗಾಲ ಯಶಸ್ವಿಯಾಗಿದ್ದು, ಅದೇ ಮ್ಯಾಜಿಕ್ ಈಗ ಎಲ್ಲ ವರ್ಗದ ಎಲ್ಲ ವಯೋಮಾನದವರನ್ನು ಚಿತ್ರಮಂದಿರದತ್ತ ಸೆಳೆಯುತ್ತಿದೆ. ಆಟೋ ಡ್ರೈವರ್​ಗಳಿಂದ ಹಿಡಿದು ವಿಶ್ವವಿದ್ಯಾನಿಲಯದ ಉಪನ್ಯಾಸರು, ಸಾಹಿತಿಗಳು ಗಂಭೀರ ಸಿನಿಮಾ ಕರ್ಮಿಗಳು ಎಲ್ಲರಿಗೂ ಸಿನಿಮಾ ಇಷ್ಟವಾಗುತ್ತಿದೆ. ಮಾನವೀಯತೆ, ಮನುಷ್ಯ ಪ್ರೇಮ, ಸ್ನೇಹಗಳನ್ನು ಸಾರುವ ಸಿನಿಮಾಕ್ಕೆ ಎಲ್ಲರೂ ಉಘೆ ಎನ್ನುತ್ತಿದ್ದಾರೆ.

ತೇಜಸ್ವಿಯವರು ಸುಮಾರು ನಾಲ್ಕು ದಶಕದ ಹಿಂದೆ ಬರೆದ ಸಣ್ಣ ಕತೆ ಡೇರ್​ಡೆವಿಲ್ ಮುಸ್ತಾಫಾ ಆ ಕತೆಯನ್ನು ಅದೇ ಹೆಸರಿನಲ್ಲಿ ಶಶಾಂಕ್ ಸೋಗಾಲ ಸಿನಿಮಾ ಮಾಡಿದ್ದಾರೆ. ತೇಜಸ್ವಿಯವರ ಅಭಿಮಾನಿಗಳೇ ಸೇರಿ ಹಣ ಹೂಡಿ ಈ ಸಿನಿಮಾ ಮಾಡಿರುವುದು ವಿಶೇಷ. ಸಿನಿಮಾವನ್ನು ಡಾಲಿ ಧನಂಜಯ್ ಪ್ರೆಸೆಂಟ್ ಮಾಡಿದ್ದಾರೆ. ವಿತರಣೆ ಹೊಣೆಯನ್ನು ಕೆಆರ್​ಜಿ ವಹಿಸಿಕೊಂಡಿದೆ. ಸಿನಿಮಾದ ಕಲೆಕ್ಷನ್ ಚೆನ್ನಾಗಿದೆ ಎಂದು ಕೆಆರ್​ಜಿಯ ಕಾರ್ತಿಕ್ ಗೌಡ ಹೇಳಿದ್ದಾರೆ. ವೀಕೆಂಡ್​ನಲ್ಲಿ ತುಂಬಿದ ಗೃಹದ ಪ್ರದರ್ಶನ ಕಂಡ ಈ ಸಿನಿಮಾ ಸೋಮವಾರದ ಬಳಿಕ ಬೆಂಗಳೂರಿನ ಹಲವು ಚಿತ್ರಮಂದಿರ ಹಾಗೂ ಮಲ್ಟಿಪ್ಲೆಕ್ಸ್​ಗಳಲ್ಲಿ ಶೋಗಳನ್ನು ಹೆಚ್ಚಿಸಿಕೊಂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:00 pm, Tue, 23 May 23

Loading...
Unable to load recommendations.
Follow Us