ನಟ ಚೇತನ್​ಗೆ ಮತ್ತೊಂದು ಸಂಕಷ್ಟ; ಚಾರ್ಜ್ ಶೀಟ್ ಸಲ್ಲಿಕೆಗೆ ಅನುಮತಿ ಕೋರಿ ರಾಜ್ಯ ಸರ್ಕಾರಕ್ಕೆ ಪತ್ರ ಬರೆದ ಪೊಲೀಸರು

Actor Chetan: ಸ್ಯಾಂಡಲ್​ವುಡ್ ನಟ ಚೇತನ್​ಗೆ ಮತ್ತೊಂದು ಸಂಕಷ್ಟ ಎದುರಾಗುವ ಸಾಧ್ಯತೆ ಇದೆ. ಅವರ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಕೆಗೆ ಅನುಮತಿ ಕೋರಿ ಬಸವನಗುಡಿ ಠಾಣೆ ಪೊಲೀಸರಿಂದ ರಾಜ್ಯ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ.

ನಟ ಚೇತನ್​ಗೆ ಮತ್ತೊಂದು ಸಂಕಷ್ಟ; ಚಾರ್ಜ್ ಶೀಟ್ ಸಲ್ಲಿಕೆಗೆ ಅನುಮತಿ ಕೋರಿ ರಾಜ್ಯ ಸರ್ಕಾರಕ್ಕೆ ಪತ್ರ ಬರೆದ ಪೊಲೀಸರು
ಚೇತನ್
Edited By:

Updated on: Mar 05, 2022 | 7:49 AM

ಬೆಂಗಳೂರು: ಸ್ಯಾಂಡಲ್​ವುಡ್ ನಟ ಚೇತನ್​ಗೆ (Actor Chetan) ಮತ್ತೊಂದು ಸಂಕಷ್ಟ ಎದುರಾಗುವ ಸಾಧ್ಯತೆ ಇದೆ. ಅವರ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಕೆಗೆ ಅನುಮತಿ ಕೋರಿ ಬಸವನಗುಡಿ ಠಾಣೆ ಪೊಲೀಸರಿಂದ ರಾಜ್ಯ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಐಪಿಸಿ ಸೆಕ್ಷನ್ 153(A) ಅಡಿಯಲ್ಲಿ ಚಾರ್ಜ್‌ಶೀಟ್ ಸಲ್ಲಿಕೆಗೆ ಅನುಮತಿ ಕೋರಿ ಪೊಲೀಸರು ಪತ್ರ ಬರೆದಿದ್ದಾರೆ. ಏನಿದು ಪ್ರಕರಣ? ಚಾರ್ಜ್​ಶೀಟ್​ಗೆ ಸರ್ಕಾರದ ಅನುಮತಿ ಏಕೆ ಬೇಕು? ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ. 2021ರ ಜೂನ್‌ 10ರಂದು ನಟ ಚೇತನ್ ಮೇಲೆ 2 ಎಫ್​ಐಆರ್ ದಾಖಲಾಗಿತ್ತು. ಈ ಪ್ರಕರಣಗಳು ಬಸವನಗುಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದವು. ಈ ವೇಳೆ IPC 153(A) ಅಡಿಯಲ್ಲಿ ಪೊಲೀಸರು ಕೇಸ್ ದಾಖಲಿಸಿದ್ದರು. IPC 153(A) ಅಡಿಯಲ್ಲಿ ಕೇಸ್ ದಾಖಲಾದರೆ ಚಾರ್ಜ್ ಶೀಟ್ ಸಲ್ಲಿಕೆಗೆ ರಾಜ್ಯ ಸರ್ಕಾರದ ಅನುಮತಿ ಕಡ್ಡಾಯವಾಗಿದೆ. ಚೇತನ್ ವಿರುದ್ಧ ಈ ಸೆಕ್ಷನ್ ಅಡಿಯಲ್ಲಿ ಕೇಸ್ ದಾಖಲಾಗಿದ್ದೇಕೆ? ಇಲ್ಲಿದೆ ಮಾಹಿತಿ.

ಚೇತನ್ ವಿರುದ್ಧ ಐಪಿಸಿ 153(ಎ) ದಾಖಲಾಗಲು ಕಾರಣವೇನು?

ಕಾನೂನು ಉಲ್ಲಂಘನೆ ಹಿನ್ನಲೆಯಲ್ಲಿ ನಟ ಚೇತನ್ ಮೇಲೆ ಈ ಸೆಕ್ಷನ್ ಅಡಿಯಲ್ಲಿ ಕೇಸ್ ದಾಖಲಿಸಲಾಗಿತ್ತು. ಧರ್ಮ ಒಡೆಯುವಂತಹ ಹೇಳಿಕೆ, ಧರ್ಮವನ್ನು ಚೇಡಿಸಿವುದು, ಧರ್ಮಗಳ ನಡುವೆ ಕಲಹ ಸಂಘರ್ಷ ಉಂಟು ಮಾಡಿದರೆ ಈ ಸೆಕ್ಷನ್ ಅಡಿ ಕೇಸ್ ದಾಖಲಾಗುತ್ತದೆ. ಹೀಗೆ ಬ್ರಾಹ್ಮಣ ಸಮುದಾಯದ ಬಗ್ಗೆ ನಿಂದನೆ ಹಾಗೂ ಹಿಂದೂ ಸಮುದಾಯದಲ್ಲಿ ವಿಷ ಬೀಜ ಬಿತ್ತುವ ಹಾಗೆ ಮಾತನಾಡಿದ್ದಾರೆ ಎನ್ನುವ ಆರೋಪದಲ್ಲಿ ಈ ಹಿಂದೆ 2 ಎಫ್​ಐಆರ್ ದಾಖಲಾಗಿತ್ತು.

ಸದ್ಯ ಈ ಪ್ರಕಣರದಲ್ಲಿ ಈಗಾಗಲೇ ನಟ ಚೇತನ್ ಹೇಳಿಕೆಗಳನ್ನು ಪೊಲೀಸರು ದಾಖಲಿಸಿದ್ದಾರೆ. ಹೀಗಾಗಿ ಚಾರ್ಜ್ ಶೀಟ್ ಸಲ್ಲಿಕೆಗೆ ರಾಜ್ಯಸರ್ಕಾರದ ಅನುಮತಿ ಕೋರಿ ಪತ್ರ ಬರೆಯಲಾಗಿದೆ. ಸರ್ಕಾರದಿಂದ ಅನುಮತಿ ಸಿಕ್ಕ ಕೂಡಲೇ ಚೇತನ್ ಮೇಲೆ ಚಾರ್ಜ್ ಶೀಟ್ ದಾಖಲು ಮಾಡಲಾಗುತ್ತದೆ. ಇತ್ತೀಚೆಗಷ್ಟೇ ಮತ್ತೊಂದು ಕೇಸ್​ನಲ್ಲಿ ಜಾಮೀನಿನ ಮೇಲೆ ಜೈಲಿನಿಂದ ಚೇತನ್ ಹೊರಬಂದಿದ್ದರು.

ಹೈಕೋರ್ಟ್ ನ್ಯಾಯಮೂರ್ತಿ ಸಂಬಂಧ ಅವಹೇಳನಕಾರಿ ಟ್ವೀಟ್ ಮಾಡಿದ್ದ ಹಿನ್ನಲೆಯಲ್ಲಿ, ಚೇತನ್ ಜೈಲು ಸೇರಿದ್ದರು. ಪ್ರಸ್ತುತ ಚಾರ್ಜ್​ಶೀಟ್​​ ಸಲ್ಲಿಕೆಗೆ ಪೊಲೀಸರು ಪತ್ರ ಬರೆದಿರುವುದರಿಂದ ಕೆಲವೇ ದಿನದಲ್ಲಿ ಚೇತನ್​ಗೆ ಮತ್ತೊಂದು ಸಂಕಷ್ಟ ಎದುರಾಗುವ ಸಾಧ್ಯತೆ ದಟ್ಟವಾಗಿದೆ.

ಗನ್​ಮ್ಯಾನ್ ಹಿಂಪಡೆದಿದ್ದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದ ನಟ ಚೇತನ್:

ವಿವಾದಾತ್ಮಕ ಟ್ವೀಟ್​ ಹಿನ್ನೆಲೆಯಲ್ಲಿ ನಟ ಚೇತನ್​ ಅವರನ್ನು ಬಂಧಿಸಿ, 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. ಪ್ರಸ್ತುತ ಜಾಮೀನಿನ ಮೇಲೆ ಅವರು ಬಿಡುಗಡೆ ಹೊಂದಿದ್ದಾರೆ. ನ್ಯಾಯಾಂಗ ಬಂಧನದ ಬಳಿಕ ಅವರಿಗೆ ನೀಡಲಾಗಿದ್ದ ಗನ್​ಮ್ಯಾನ್ ವಾಪಸ್ ಪಡೆಯಲಾಗಿದೆ. ಈ ಹಿನ್ನೆಲೆಯಲ್ಲಿ ನಗರ ಪೊಲೀಸ್ ಆಯುಕ್ತ ಕಮಲ್​ ಪಂತ್​ ಅವರನ್ನು ಶುಕ್ರವಾರ ಚೇತನ್ ಭೇಟಿ ಆಗಿದ್ದರು. ಆ ಬಳಿಕ ಮಾತನಾಡಿದ್ದ ಚೇತನ್, ‘ಗೌರಿ ಲಂಕೇಶ್ ಹತ್ಯೆಯ ಬಳಿಕ ನನಗೆ ಗನ್ ಮ್ಯಾನ್ ನೀಡಲಾಗಿತ್ತು. ಆದರೆ, ಈಗ ಅದನ್ನು ಹಿಂಪಡೆಯಲಾಗಿದೆ. ಮೊದಲಿನಿಂದಲೂ ನನಗೆ ಜೀವ ಬೆದರಿಕೆಯಿದೆ. ಗನ್ ಮ್ಯಾನ್ ನೀಡುವಂತೆ ಮನವಿ ಮಾಡಿದ್ದೇನೆ. ಮನೆ ಬಳಿ ಬೀಟ್ ವ್ಯವಸ್ಥೆ ಹೆಚ್ಚಿಸುವುದಾಗಿ ಭರವಸೆ ನೀಡಿದ್ದಾರೆ. ನನ್ನ ಒಸಿಐ (Overseas Citizen Of India) ರದ್ದುಪಡಿಸುವ ಬಗ್ಗೆ ಕೆಲ ಮಾಧ್ಯಮಗಳಲ್ಲಿ ವರದಿಯಾಗಿದೆ. ನಾನೂ ಭಾರತೀಯ, ಕನ್ನಡಿಗನೇ. ಯಾವುದೇ ರೀತಿಯಲ್ಲೂ ಒಸಿಐ ನಿಯಮ ಉಲ್ಲಂಘಿಸಿಲ್ಲ’ ಎಂದಿದ್ದರು.

ಇದನ್ನೂ ಓದಿ:

ರಾಯರ ಸನ್ನಿಧಿಯಲ್ಲಿ ನಟ ‘ಕಿಚ್ಚ’ ಸುದೀಪ್​; ಇಲ್ಲಿದೆ ವಿಡಿಯೋ

‘ನನಗೆ ನೀಡಿದ್ದ ಗನ್​ಮ್ಯಾನ್​ ಹಿಂಪಡೆಯಲಾಗಿದೆ’; ನಟ ಚೇತನ್​ ಅಸಮಾಧಾನ