ಸುದೀಪ್​ ನಟನೆಯ ‘ವಿಕ್ರಾಂತ್​ ರೋಣ’ ಸಿನಿಮಾದ ಪೋಸ್ಟರ್​ ಕದ್ದ ಬಾಲಿವುಡ್; ಸೋಶಿಯಲ್​ ಮೀಡಿಯಾದಲ್ಲಿ ಟ್ರೋಲ್​

|

Updated on: Jul 09, 2021 | 7:01 PM

‘ವಿಕ್ರಾಂತ್ ರೋಣ’ ಚಿತ್ರಕ್ಕಾಗಿ ಸುದೀಪ್​ ಭಿನ್ನ ಅವತಾರ ತಾಳಿದ್ದಾರೆ. ‘ರಂಗಿತರಂಗ’ ಖ್ಯಾತಿಯ ನಿರ್ದೇಶಕ ಅನೂಪ್​ ಭಂಡಾರಿ ಅವರು ಈ ಚಿತ್ರಕ್ಕೆ ಆ್ಯಕ್ಷನ್​-ಕಟ್​ ಹೇಳಿದ್ದಾರೆ. ಈ ಕಾರಣಕ್ಕೆ ಚಿತ್ರದ ಬಗ್ಗೆ ದೊಡ್ಡ ಮಟ್ಟದ ನಿರೀಕ್ಷೆ ಇದೆ.

ಸುದೀಪ್​ ನಟನೆಯ ವಿಕ್ರಾಂತ್​ ರೋಣ’ ಸಿನಿಮಾದ ಪೋಸ್ಟರ್​ ಕದ್ದ ಬಾಲಿವುಡ್; ಸೋಶಿಯಲ್​ ಮೀಡಿಯಾದಲ್ಲಿ ಟ್ರೋಲ್​
ಸುದೀಪ್​ ನಟನೆಯ ವಿಕ್ರಾಂತ್​ ರೋಣ ಸಿನಿಮಾದ ಪೋಸ್ಟರ್​ ಕದ್ದ ಬಾಲಿವುಡ್; ಸೋಶಿಯಲ್​ ಮೀಡಿಯಾದಲ್ಲಿ ಟ್ರೋಲ್​
Follow us on

ಸುದೀಪ್​ ನಟನೆಯ ‘ವಿಕ್ರಾಂತ್​ ರೋಣ’ ಸಿನಿಮಾ ಬಗ್ಗೆ ಪ್ರೇಕ್ಷಕರಲ್ಲಿ ದೊಡ್ಡ ಮಟ್ಟದ ನಿರೀಕ್ಷೆ ಇದೆ. ಕೇವಲ ಸ್ಯಾಂಡಲ್​ವುಡ್​ಗೆ ಸೀಮಿತವಾಗದೆ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಈ ಚಿತ್ರ ರಿಲೀಸ್​ ಆಗುತ್ತಿದೆ. ಈ ಮಧ್ಯೆ, ಬಾಲಿವುಡ್​ ಮಂದಿ ಈ​ ಸಿನಿಮಾದ ಪೋಸ್ಟರ್​ ಕಾಪಿ ಮಾಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆ ಆಗುತ್ತಿದೆ.

‘ವಿಕ್ರಾಂತ್ ರೋಣ’ ಚಿತ್ರಕ್ಕಾಗಿ ಸುದೀಪ್​ ಭಿನ್ನ ಅವತಾರ ತಾಳಿದ್ದಾರೆ. ‘ರಂಗಿತರಂಗ’ ಖ್ಯಾತಿಯ ನಿರ್ದೇಶಕ ಅನೂಪ್​ ಭಂಡಾರಿ ಅವರು ಈ ಚಿತ್ರಕ್ಕೆ ಆ್ಯಕ್ಷನ್​-ಕಟ್​ ಹೇಳಿದ್ದಾರೆ. ಈ ಕಾರಣಕ್ಕೆ ಚಿತ್ರದ ಬಗ್ಗೆ ದೊಡ್ಡ ಮಟ್ಟದ ನಿರೀಕ್ಷೆ ಇದೆ. ಕೆಲ ತಿಂಗಳ ಹಿಂದೆ ರಿಲೀಸ್​ ಆಗಿದ್ದ ಸಿನಿಮಾ ಪೋಸ್ಟರ್​ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಈಗ ಈ ಪೋಸ್ಟರ್​ಅನ್ನು ಕಾಪಿ ಮಾಡುವ ಕೆಲಸವನ್ನು ಬಾಲಿವುಡ್ ಮಂದಿ ಮಾಡಿದ್ದಾರೆ.

ಪವನ್​ ಕೃಪಲಾನಿ ನಿರ್ದೇಶನ ಮಾಡಿರುವ ಹಿಂದಿಯ ‘ಭೂತ್​ ಪೊಲೀಸ್​’ ತಂಡ ನಿತ್ಯ ಹೊಸ ಪೋಸ್ಟರ್​ಗಳನ್ನು ರಿಲೀಸ್ ಮಾಡುತ್ತಿದೆ. ಇತ್ತೀಚೆಗೆ ಬಿಡುಗಡೆಯಾಗಿದ್ದ ಸೈಫ್​ ಫಸ್ಟ್​ ಲುಕ್​ ವಿವಾದಕ್ಕೆ ತುತ್ತಾಗಿತ್ತು. ಹಿಂದೂ ಸಂತರನ್ನು ಬಳಕೆ ಮಾಡಿಕೊಂಡಿದ್ದಕ್ಕೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದರು. ಈಗ ಚಿತ್ರದ ಯಾಮಿ ಗೌತಮ್​ ಹಾಗೂ ಜಾಕ್ವಲೀನ್​ ಫರ್ನಾಂಡೀಸ್ ಲುಕ್​ ಅನಾವರಣಗೊಂಡಿದೆ. ‘ವಿಕ್ರಾಂತ್ ರೋಣ’ ಚಿತ್ರದ ಪೋಸ್ಟರ್​ಗೂ ಇದಕ್ಕೂ ಸಾಮ್ಯತೆ ಇದೆ.

‘ವಿಕ್ರಾಂತ್ ರೋಣ’ ಸಿನಿಮಾದ ಪೋಸ್ಟರ್​ನಲ್ಲಿ ಸುದೀಪ್​ ಗುಹೆಯ ಬಳಿ ಬಲಗೈನಲ್ಲಿ ಪಂಜು ಹಾಗೂ ಎಡಗೈನಲ್ಲಿ ಛಾಟಿ ಹಿಡಿದು ನಿಂತಿದ್ದಾರೆ. ಯಾಮಿ ಗೌತಮ್​ ಲುಕ್​ನಲ್ಲಿ ಛಾಟಿ ಒಂದನ್ನು ಬಿಟ್ಟು ಉಳಿದೆಲ್ಲವೂ ಒಂದೇ ತೆರನಾಗಿದೆ. ಇನ್ನು, ಜಾಕ್ವಲೀನ್​ ಫರ್ನಾಂಡೀಸ್ ಪೋಸ್ಟರ್​ನಲ್ಲಿ ಕೈಯಲ್ಲಿ ಹಿಡಿದಿರುವ ಛಾಟಿ ವಿಕ್ರಾಂತ್​ ರೋಣ ಚಿತ್ರದಲ್ಲಿ ಬಳಕೆಯಾದ ಛಾಟಿ ರೀತಿಯಲ್ಲೇ ಇದೆ.

ಈ ವಿಚಾರದ ಬಗ್ಗೆ ಈಗ ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತಿದೆ. ಅನೇಕರು ಬಾಲಿವುಡ್​ ಮಂದಿ ನಮ್ಮ ಪೋಸ್ಟರ್​ ಕಾಪಿ ಮಾಡಿದ್ದಾರೆ ಎನ್ನುತ್ತಿದ್ದಾರೆ. ಇನ್ನೂ ಕೆಲವರು, ಬಾಲಿವುಡ್​ನವರು ಸ್ಯಾಂಡಲ್​​ವುಡ್​ನವರನ್ನು ಅನುಸರಿಸುವಂತಾಯಿತು ಎಂದು ಹೆಮ್ಮೆ ವ್ಯಕ್ತಪಡಿಸಿದ್ದಾರೆ.

ಶಾಲಿನಿ ಮಂಜುನಾಥ್​ ಮತ್ತು ಅಲಂಕಾರ್ ಪಾಂಡಿಯನ್​ ಈ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಅದ್ದೂರಿ ಬಜೆಟ್​ನಲ್ಲಿ ಚಿತ್ರ ಮೂಡಿಬರುತ್ತಿದೆ. ವಿಲಿಯಮ್​ ಡೇವಿಡ್​ ಛಾಯಾಗ್ರಹಣ, ಅಜನೀಶ್​ ಲೋಕನಾಥ್​ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ. ಈಗಾಗಲೇ ಬಿಡುಗಡೆ ಆಗಿರುವ ಪೋಸ್ಟರ್​ ಮತ್ತು ಟೀಸರ್​ಗಳು ಸಿಕ್ಕಾಪಟ್ಟೆ ಕೌತುಕ ಮೂಡಿಸಿವೆ. ಸುದೀಪ್​ ಜೊತೆ ನೀತಾ ಅಶೋಕ್​, ನಿರೂಪ್​ ಭಂಡಾರಿ ಮುಂತಾದವರು ಪ್ರಮುಖ ಪಾತ್ರಗಳನ್ನು ನಿಭಾಯಿಸಿದ್ದಾರೆ.

‘ಭೂತ್​ ಪೊಲೀಸ್​’ ಚಿತ್ರದಲ್ಲಿ ಅರ್ಜುನ್​ ಕಪೂರ್​, ಜಾಕ್ವಲೀನ್​ ಫರ್ನಾಂಡೀಸ್​, ಯಾಮಿ ಗೌತಮ್​ ಮುಂತಾದವರು ನಟಿಸುತ್ತಿದ್ದಾರೆ.

ಇದನ್ನೂ ಓದಿ: ಮತ್ತೆ ಹಿಂದೂಗಳ ಭಾವನೆಗೆ ಧಕ್ಕೆ ತಂದ ಸೈಫ್​ ಅಲಿ ಖಾನ್​; ಈ ಪೋಸ್ಟರ್​ನಲ್ಲಿ ಇರುವ ವಿವಾದ ಏನು?

‘ವಿಕ್ರಾಂತ್​ ರೋಣ’ ಬಜೆಟ್​ ಎಷ್ಟು? ನಂಬರ್​ ಹೇಳುವ ಬದಲು ನಿರ್ದೇಶಕರು ಹೇಳಿದ್ದೇ ಬೇರೆ​

Published On - 6:59 pm, Fri, 9 July 21