‘ಉತ್ತರಕಾಂಡ’ದಲ್ಲಿ ‘ಗಬ್ರು ಸತ್ಯ’ನಾಗಿ ಡಾಲಿ ಧನಂಜಯ್: ಹುಟ್ಟುಹಬ್ಬಕ್ಕೆ ಖಡಕ್ ಎಂಟ್ರಿ

Uttarakaanda: ಡಾಲಿ ಧನಂಜಯ್ ನಟನೆಯ 'ಉತ್ತರಕಾಂಡ' ಸಿನಿಮಾದ ಕ್ಯಾರೆಕ್ಟರ್ ಟೀಸರ್ ಬಿಡುಗಡೆ ಆಗಿದೆ. ಗಬ್ರು ಸತ್ಯನ ಅವತಾರದಲ್ಲಿ ಸಖತ್ ಆಗಿ ಕಾಣಿಸಿಕೊಂಡಿದ್ದಾರೆ. ಉತ್ತರ ಕರ್ನಾಟಕದಲ್ಲಿ ನಡೆವ ಕತೆಯನ್ನು ಹೊಂದಿರುವ ಈ ಸಿನಿಮಾ ಶೀಘ್ರದಲ್ಲಿಯೇ ತೆರೆಗೆ ಬರಲಿದೆ.

ಉತ್ತರಕಾಂಡದಲ್ಲಿ ಗಬ್ರು ಸತ್ಯನಾಗಿ ಡಾಲಿ ಧನಂಜಯ್: ಹುಟ್ಟುಹಬ್ಬಕ್ಕೆ ಖಡಕ್ ಎಂಟ್ರಿ

Updated on: Aug 22, 2023 | 8:14 PM

ಡಾಲಿ ಧನಂಜಯ್ ನಾಳೆ (ಆಗಸ್ಟ್ 23) ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದಾರೆ. ಅವರ ಹುಟ್ಟುಹಬ್ಬದ ವಿಶೇಷವಾಗಿ ಇಂದು (ಆಗಸ್ಟ್ 22) ಅವರ ನಟನೆಯ ಹೊಸ ಸಿನಿಮಾ ‘ಉತ್ತರಕಾಂಡ’ದ ಕ್ಯಾರೆಕ್ಟರ್ ಟೀಸರ್ ಬಿಡುಗಡೆ ಮಾಡಲಾಗಿದೆ. ಸಿನಿಮಾದಲ್ಲಿ ‘ಗಬ್ರು ಸತ್ಯ’ನ ಪಾತ್ರದಲ್ಲಿ ಸಖತ್ ಆಗಿ ಮಿಂಚಿದ್ದಾರೆ ನಟ ಡಾಲಿ ಧನಂಜಯ್. ಇದೀಗ ಬಿಡುಗಡೆ ಆಗಿರುವ ಟೀಸರ್​ನಲ್ಲಿ ಉಡಾಳ ಗ್ಯಾಂಗ್​ಸ್ಟರ್ ಪಾತ್ರದಲ್ಲಿ ಡಾಲಿ ಧನಂಜಯ್ ಕಾಣಿಸಿಕೊಂಡಿದ್ದಾರೆ.

ಟೀಸರ್​ನಲ್ಲಿ ಗಬ್ರು ಸತ್ಯನ ಲುಕ್​ನ ಪರಿಚಯದ ಜೊತೆಗೆ ವ್ಯಕ್ತಿತ್ವದ ಝಲಕ್ ಅನ್ನು ನಿರ್ದೇಶಕ ರೋಹಿತ್ ಪದಕಿ ನೀಡಿದ್ದಾರೆ. ಟೀಸರ್ ಆರಂಭದಲ್ಲಿಯೇ ಡಾಲಿ ಧನಂಜಯ್ ಅಲಿಯಾಸ್ ಗಬ್ರು ಸತ್ಯ ವಿವಸ್ತ್ರನಾಗಿ ಕೇವಲ ಒಂದು ಬಣ್ಣದ ಚಡ್ಡಿ ಹಾಕಿಕೊಂಡು ಪೊಲೀಸ್ ಠಾಣೆಯಲ್ಲಿ ಕೂತಿರುತ್ತಾನೆ, ಪೊಲೀಸ್ ಅಧಿಕಾರಿಯೊಬ್ಬರು ಗಬ್ರುಗೆ ಕೆಟ್ಟದಾಗಿ ಬೈಯ್ಯುತ್ತಾ, ವ್ಯಂಗ್ಯ ಮಾಡುತ್ತಾ ಇನ್ನೊಮ್ಮೆ ಹೆಸರು ಕಿವಿಗೆ ಬಿದ್ದರೆ ಶೂಟ್ ಮಾಡಿ ಕೊಲ್ಲುವುದಾಗಿ ಬೆದರಿಕೆ ಹಾಕುತ್ತಾರೆ. ಆದರೆ ಗಬ್ರು ಸತ್ಯ ಮಾತ್ರ ತೀರ ನಾಟಕೀಯವಾಗಿ ಅಮಾಯಕನಂತೆ ನಟಿಸುತ್ತಾ ಹೊರಗೆ ಬರುತ್ತಾನೆ.

ಆದರೆ ಹೊರಗೆ ಬೇರೆಯದ್ದೇ ಚಿತ್ರಣ ಇರುತ್ತದೆ. ಗಬ್ರು ಹುಟ್ಟುಹಬ್ಬಕ್ಕಾಗಿ ಗಾನಾ-ಬಜಾನ ಆಯೋಜಿತವಾಗಿರುತ್ತದೆ. ಗಬ್ರುನನ್ನು ಸ್ವಾಗತಿಸಲು ಯುವಕರ ಗುಂಪು ಸೇರಿರುತ್ತದೆ. ಠಾಣೆಯಿಂದ ಹೊರಗೆ ಬಂದ ಗಬ್ರು, ಸಿಹಿ ತಿಂಡಿಯ ಪ್ಯಾಕೇಟ್ ಹಿಡಿದು ಮತ್ತೆ ಠಾಣೆಯ ಒಳಗೆ ಹೋಗಿ ತನಗೆ ಬೆದರಿಕೆ ಹಾಕಿದ ಪೊಲೀಸ್​ಗೆ ಸಿಹಿ ತಿಂಡಿ ಕೊಟ್ಟು ಹೊರಬಂದು ಸ್ಟೈಲ್ ಆಗಿ ಬೈಕ್ ಏರಿ, ಪೊಲೀಸಪ್ಪನಿಂದಲೇ ಕದ್ದ ಸಿಗರೇಟು ಹೊತ್ತಿಸುತ್ತಾನಷ್ಟೆ, ಗಬ್ರು ಇಟ್ಟು ಬಂದ ಸ್ಪೋಟಕ ತುಂಬಿದ ಸಿಹಿ ತಿನಿಸಿನ ಡಬ್ಬಿ ಸಿಡಿಯುತ್ತದೆ. ‘ಕರ್ನಾಟಕದ ಮನಿ ಮಗ ಯಾರ್ರಲೇ’ ಎಂದು ಖಡಕ್ ಡೈಲಾಗ್​ ಹೊಡೆಯುತ್ತಾನೆ ಗಬ್ರು.

ಟೀಸರ್​ನಲ್ಲಿ ಪಕ್ಕಾ ಉಡಾಳ ಬುದ್ಧಿಯ ಗ್ಯಾಂಗ್​ಸ್ಟರ್ ಆಗಿ ಡಾಲಿ ಧನಂಜಯ್ ಕಾಣಿಸಿಕೊಂಡಿದ್ದಾರೆ. ಉತ್ತರ ಕರ್ನಾಟಕದಲ್ಲೇ ನಡೆಯುವ ಕತೆಯನ್ನು ಆಧರಿಸಿದ ಸಿನಿಮಾ ಆದ್ದರಿಂದ ಅಲ್ಲಿನ ಭಾಷೆಯನ್ನೇ ಬಳಸಲಾಗಿದೆ. ಸಖತ್ ಮಾಸ್ ಅವತಾರದಲ್ಲಿ ಡಾಲಿ ಕಾಣಿಸಿಕೊಂಡಿದ್ದು, ಡಾಲಿಯ ಪಾತ್ರಕ್ಕೆ ಚಿತ್ರಮಂದಿರದಲ್ಲಿ ಪಕ್ಕಾ ಶಿಳ್ಳೆ-ಚಪ್ಪಾಳೆ ಬೀಳುವುದು ಖಾಯಂ ಎನಿಸುತ್ತಿದೆ.

ಈ ಹಿಂದೆ ಡಾಲಿ ನಾಯಕನಾಗಿದ್ದ ‘ರತ್ನನ್ ಪ್ರಪಂಚ’ ಸಿನಿಮಾ ನಿರ್ದೇಶಿಸಿದ್ದ ರೋಹಿತ್ ಪದಕಿ ‘ಉತ್ತರ ಕಾಂಡ’ ಸಿನಿಮಾವನ್ನೂ ನಿರ್ದೇಶನ ಮಾಡಿದ್ದಾರೆ. ಉತ್ತರ ಕರ್ನಾಟಕದಲ್ಲಿ ನಡೆವ ಗ್ಯಾಂಗ್​ವಾರ್ ಕತೆಯನ್ನು ಸಿನಿಮಾ ಒಳಗೊಂಡಿದೆ ಎನ್ನಲಾಗುತ್ತಿದೆ. ಸಿನಿಮಾದಲ್ಲಿ ಡಾಲಿ ಧನಂಜಯ್ ಜೊತೆಗೆ ನಟಿ ರಮ್ಯಾ ಸಹ ಇದ್ದಾರೆ. ಶಿವರಾಜ್ ಕುಮಾರ್ ಸಹ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾವನ್ನು ಕೆಆರ್​ಜಿ ಸ್ಟುಡಿಯೋಸ್​ನ ಕಾರ್ತಿಕ್ ಗೌಡ ಹಾಗೂ ಯೋಗಿ ಜಿ ರಾಜ್ ನಿರ್ಮಾಣ ಮಾಡಿದ್ದಾರೆ. ಸಂಗೀತ ನೀಡಿರುವುದು ಚರಣ್ ರಾಜ್. ಸಿನಿಮಾ ಶೀಘ್ರವೇ ತೆರೆಗೆ ಬರಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us