ಮಲ್ಲಿಕಾರ್ಜುನ್ ನಂಬಿ ಮೋಸ ಹೋಗಬೇಡಿ: ಎಚ್ಚರಿಕೆ ನೀಡಿದ ದಿನಕರ್ ತೂಗುದೀಪ

ನಟ ದರ್ಶನ್ ಅವರ ಮಾಜಿ ಮ್ಯಾನೇಜರ್ ಮಲ್ಲಿಕಾರ್ಜುನ್ ಮೇಲೆ ದಿನಕರ್ ತೂಗುದೀಪ ಹಲವು ಆರೋಪ ಮಾಡಿದ್ದಾರೆ. ‘ನಮ್ಮ ನಂಬಿಕೆಗೆ ದ್ರೋಹ ಮಾಡಿರುವ ಮೋಸಗಾರ ಇವನು’ ಎಂದು ಅವರು ಖಾರವಾಗಿ ಹೇಳಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ದಿನಕರ್ ತೂಗುದೀಪ ಅವರು ಹಂಚಿಕೊಂಡಿರುವ ಪೋಸ್ಟ್ ವೈರಲ್ ಆಗಿದೆ.

ಮಲ್ಲಿಕಾರ್ಜುನ್ ನಂಬಿ ಮೋಸ ಹೋಗಬೇಡಿ: ಎಚ್ಚರಿಕೆ ನೀಡಿದ ದಿನಕರ್ ತೂಗುದೀಪ
Dinakar Thoogudeepa, Mallikarjun

Updated on: Apr 21, 2026 | 8:09 PM

ಹಲವು ವರ್ಷಗಳ ಕಾಲ ನಾಪತ್ತೆ ಆಗಿದ್ದ ದರ್ಶನ್ ಮಾಜಿ ಮ್ಯಾನೇಜರ್ ಮಲ್ಲಿಕಾರ್ಜುನ್ (Darshan Ex Manager Mallikarjun) ಇತ್ತೀಚೆಗೆ ದಿಢೀರ್ ಪ್ರತ್ಯಕ್ಷ ಆದರು. ಬಳಿಕ ಅವರು ಸುದ್ದಿಗೋಷ್ಠಿ ನಡೆಸಿ ಹಲವು ವಿಷಯಗಳ ಬಗ್ಗೆ ಸ್ಪಷ್ಟನೆ ನೀಡಿದರು. 7 ವರ್ಷ ತಾವು ಕಾಣೆ ಆಗಿದ್ದಕ್ಕೆ ಕಾರಣ ಏನು ಎಂಬುದನ್ನು ಕೂಡ ಅವರು ವಿವರಿಸಿದರು. ಆದರೆ ಈಗ ಮಲ್ಲಿಕಾರ್ಜುನ್ ವಿರುದ್ಧ ದರ್ಶನ್ ಸಹೋದರ ದಿನಕರ್ ತೂಗುದೀಪ (Dinakar Thoogudeepa) ಗುಡುಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅವರು ಮಲ್ಲಿಕಾರ್ಜುನ್ ಬಗ್ಗೆ ಪೋಸ್ಟ್ ಮಾಡಿದ್ದಾರೆ. ಮಲ್ಲಿಕಾರ್ಜುನ್ ಓರ್ವ ವಂಚಕ ಎಂದು ದಿನಕರ್ ತೂಗುದೀಪ ಹೇಳಿದ್ದಾರೆ. ಅವರ ಪೋಸ್ಟ್ ಈ ಕೆಳಗಿನಂತಿದೆ.

‘ಮಲ್ಲಿಕಾರ್ಜುನ್ ಗದಗ ಅಲಿಯಾಸ್ ಚೀಟರ್ ಮಲ್ಲು ಎಂಬ ಫ್ರಾಡ್ ಎಂಟು ವರ್ಷಗಳ ಹಿಂದೆ ನಮಗೂ ಹಣಕಾಸಿನಲ್ಲಿ ಮೋಸ ಮಾಡಿ ನನ್ನ ಹೆಸರನ್ನು, ದರ್ಶನ್ ಅವರ ಹೆಸರನ್ನು ಮತ್ತು ನಮ್ಮ ತೂಗುದೀಪ ಸಂಸ್ಥೆ ಹೆಸರನ್ನು ದುರ್ಬಳಕೆ ಮಾಡಿ, ನಮ್ಮ ಪರಿಚಯದವರ, ಸ್ನೇಹಿತರ ಹಾಗೂ ನಮ್ಮ ಸಂಪರ್ಕದಲ್ಲಿದ್ದ ಅನೇಕ ವ್ಯಕ್ತಿಗಳ ಬಳಿ ಸುಳ್ಳು ಹೇಳಿ ಹಣ ಪಡೆದು ವಂಚಿಸಿ ಪರಾರಿಯಾಗಿದ್ದವನು ಈಗ ದಿಢೀರನೆ ಪ್ರತ್ಯಕ್ಷನಾಗಿ 16-04-2026 ರಂದು ಪತ್ರಿಕಾಗೋಷ್ಠಿ ನಡೆಸಿರುತ್ತಾನೆ.’

‘ಅದರಲ್ಲಿ ಜನರನ್ನು ನಂಬಿಸಲು ತನಗೆ ಬೇಕಾದಂತೆ ಹೇಳಿಕೆ ಕೊಟ್ಟಿರುತ್ತಾನೆ. ತನಗೆ ಏನೇನೆಲ್ಲಾ ಆಯಿತು ಎಂದು ಹೇಳುತ್ತಿರುವ ಈತ ತನ್ನಿಂದ ಯಾರಿಗೆಲ್ಲ ಏನು ಅನಾಹುತ ಆಯಿತು ಎಂದು ಹೇಳಿರುವುದಿಲ್ಲ. ಈತ ಮಹಾ ಮೋಸಗಾರ. ಆ ಪತ್ರಿಕಾಗೋಷ್ಠಿಯಲ್ಲಿ ತನ್ನ ಲಾಭಕ್ಕೆ ತಕ್ಕಂತೆ ಪದೇ ಪದೇ ನಮ್ಮ ತೂಗುದೀಪ ಸಂಸ್ಥೆಯ ಹೆಸರು, ದರ್ಶನ್ ಅವರ ಹೆಸರು ಮತ್ತು ನನ್ನ ಹೆಸರನ್ನು ದುರ್ಬಳಕೆ ಮಾಡಿರುತ್ತಾನೆ.’

ದಿನಕರ್ ತೂಗುದೀಪ ಅವರ ಇನ್​ಸ್ಟಾಗ್ರಾಮ್ ಪೋಸ್ಟ್:

‘ನಮ್ಮ ನಂಬಿಕೆಗೆ ದ್ರೋಹ ಮಾಡಿರುವ ಮೋಸಗಾರ ಇವನು. ಮೋಸ ಮಾಡುವ ಮುನ್ನ ಈತ ಬಳಸುವ ದಾಳವೇ ಸಿಂಪತಿ. ಅದನ್ನು ಪಡೆಯಲು ಈತ ಹೇಳುವುದೇ ಕಟ್ಟು ಕತೆಗಳು. ಇವನನ್ನು ಯಾರೂ ನಂಬಬೇಡಿ. ನಾನಾಗಲಿ, ನಮ್ಮ ತೂಗುದೀಪ ಸಂಸ್ಥೆ, ದರ್ಶನ್ ಅವರು ಯಾರೂ ಈತನನ್ನು ಸೇರಿಸುವುದಿಲ್ಲ. ಈ ನಂಬಿಕೆ ದ್ರೋಹಿಗೂ ನಮಗೂ ಯಾವುದೇ ಸಂಬಂಧವಿರುವುದಿಲ್ಲ.’

ಇದನ್ನೂ ಓದಿ: ದರ್ಶನ್​ಗೆ ಮುಖ ತೋರಿಸಲು ಸಾಧ್ಯವಾಗದೇ ಊರು ಬಿಟ್ಟೆ: ಎಲ್ಲವನ್ನೂ ಹೇಳಿದ ಮಲ್ಲಿಕಾರ್ಜುನ್

‘ಈತ ಎಲ್ಲಾದರೂ ನಮ್ಮ ಒಡನಾಟದ ಬಗ್ಗೆ ಹೇಳಿಕೊಂಡು ಲಾಭ ಮಾಡಲು ಬಂದರೆ ಯಾಮಾರಬೇಡಿ. ದರ್ಶನ್ ಅವರ ಹೆಸರನ್ನು ಬಳಸಿ ದುಡ್ಡು ಮಾಡುವ ಇನ್ನೊಂದು ಹುನ್ನಾರವಷ್ಟೇ. ದಯವಿಟ್ಟು ಯಾರೂ ಇವನ ಮಾತನ್ನು ನಂಬಿ ಮೋಸ ಹೋಗಬೇಡಿ. ಇಂತಿ ನಿಮ್ಮ, ದಿನಕರ್ ತೂಗುದೀಪ’ ಎಂದು ಅವರು ಪೋಸ್ಟ್ ಮಾಡಿದ್ದಾರೆ. ಇದಕ್ಕೆ ಮಲ್ಲಿಕಾರ್ಜುನ್ ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಕಾದುನೋಡಬೇಕು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us