AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೇಣುಕಾ ಸ್ವಾಮಿ ಪ್ರಕರಣದಲ್ಲಿ ಮತ್ತೆ ಜೈಲಿಗೆ ದರ್ಶನ್, ಮುಂದಿರುವ ಆಯ್ಕೆಗಳೇನು?

Darshan Thoogudeepa: ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಏಳು ಆರೋಪಿಗಳ ಜಾಮೀನು ರದ್ದಾಗಿದೆ. ನಟ ದರ್ಶನ್ ತೂಗುದೀಪ, ಆತನ ಆಪ್ತ ಗೆಳತಿ ಪವಿತ್ರಾ ಗೌಡ ಸೇರಿದಂತೆ ಒಟ್ಟು ಏಳು ಜನ ಈಗ ಮತ್ತೆ ಜೈಲು ಸೇರಲಿದ್ದಾರೆ. ಕೆಲವೇ ಗಂಟೆಗಳಲ್ಲಿ ನಟ ದರ್ಶನ್ ಮತ್ತೆ ಜೈಲು ಸೇರಲಿದ್ದಾರೆ. ಅವರ ಮುಂದಿನ ನಡೆ ಏನಾಗಿರಲಿದೆ, ಅವರ ಮುಂದಿರುವ ಆಯ್ಕೆಗಳೇನು?

ರೇಣುಕಾ ಸ್ವಾಮಿ ಪ್ರಕರಣದಲ್ಲಿ ಮತ್ತೆ ಜೈಲಿಗೆ ದರ್ಶನ್, ಮುಂದಿರುವ ಆಯ್ಕೆಗಳೇನು?
Darshan Thoogudeepa1
ಮಂಜುನಾಥ ಸಿ.
|

Updated on: Aug 14, 2025 | 5:43 PM

Share

ರೇಣುಕಾ ಸ್ವಾಮಿ (Renuka Swamy) ಕೊಲೆ ಪ್ರಕರಣದಲ್ಲಿ ನಟ ದರ್ಶನ್, ಪವಿತ್ರಾ ಗೌಡ ಹಾಗೂ ಇತರೆ ಕೆಲ ಆರೋಪಿಗಳು ಮತ್ತೊಮ್ಮೆ ಜೈಲು ಸೇರುತ್ತಿದ್ದಾರೆ. ರಾಜ್ಯ ಹೈಕೋರ್ಟ್, ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಎಲ್ಲ ಆರೋಪಿಗಳಿಗೂ ಜಾಮೀನು ಮಂಜೂರು ಮಾಡಿತ್ತು. ನಟ ದರ್ಶನ್​ಗೆ ಎಲ್ಲರಿಗಿಂತಲೂ ತುಸು ಮುಂಚಿತವಾಗಿ ಮಧ್ಯಂತರ ಜಾಮೀನು ನೀಡಿತ್ತು. ಇದೀಗ ಸುಪ್ರೀಂಕೋರ್ಟ್ ಜಾಮೀನು ರದ್ದು ಮಾಡಿದ್ದು, ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಏಳು ಆರೋಪಿಗಳು ಮತ್ತೆ ಜೈಲು ಸೇರಲಿದ್ದಾರೆ.

ಜಾಮೀನು ಪಡೆದು ಸ್ವತಂತ್ರ್ಯ ಹಕ್ಕಿಯಾಗಿದ್ದ ದರ್ಶನ್ ಈಗ ಮತ್ತೆ ಜೈಲು ಸೇರುತ್ತಿದ್ದಾರೆ. ಈ ಬಾರಿ ದೇಶದ ಪರಮೋಚ್ಛ ನ್ಯಾಯಾಲಯ ಸುಪ್ರೀಂಕೋರ್ಟ್​ನಿಂದಲೇ ಜಾಮೀನು ರದ್ದು ಆದೇಶ ಹೊರಬಿದ್ದಿದೆ. ಜಾಮೀನು ರದ್ದು ಮಾಡಿರುವುದು ಮಾತ್ರವೇ ಅಲ್ಲದೆ, ದರ್ಶನ್​ಗೆ ಜೈಲಿನಲ್ಲಿ ರಾಜಾತಿಥ್ಯ ನೀಡಿದ್ದ ಪ್ರಕರಣದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಮತ್ತೊಮ್ಮ ಹಾಗಾಗದಂತೆ ಎಚ್ಚರಿಕೆ ವಹಿಸುವಂತೆ ಕಠಿಣ ಎಚ್ಚರಿಕೆ ನೀಡಿದೆ.

ದರ್ಶನ್ ಈಗ ಮತ್ತೆ ಜೈಲು ಸೇರಲಿದ್ದು, ಅವರ ಮುಂದೆ ಈಗ ಇರುವ ಆಯ್ಕೆಗಳೇನು? ಪ್ರಶ್ನೆ ಸಹಜವಾಗಿಯೇ ಅಭಿಮಾನಿಗಳಲ್ಲಿ ಮೂಡಿದೆ. ದೇಶದ ಪರಮೋಚ್ಛ ನ್ಯಾಯಾಲಯವೇ ಜಾಮೀನು ರದ್ದು ಮಾಡಿರುವ ಕಾರಣ, ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸುವ ಅವಕಾಶವೂ ಸಹ ದರ್ಶನ್​ಗೆ ಸದ್ಯಕ್ಕೆ ಇಲ್ಲದಾಗಿದೆ. ಹಾಗಾಗಿ ಕನಿಷ್ಟ ಆರು ತಿಂಗಳುಗಳ ಕಾಲ ನಟ ದರ್ಶನ್ ಜೈಲಿನಲ್ಲಿ ಕಡ್ಡಾಯವಾಗಿ ಕಾಲ ಕಳೆಯಲೇ ಬೇಕಾಗಿದೆ. ಆರು ತಿಂಗಳ ಬಳಿಕ ಜಾಮೀನಿಗೆ ಮತ್ತೊಮ್ಮೆ ಅರ್ಜಿ ಹಾಕಬಹುದಾಗಿದೆ. ಅದೂ ಸಹ ಸುಪ್ರೀಂಕೋರ್ಟ್​​ನಲ್ಲಿಯೇ ಈ ಅರ್ಜಿ ಹಾಕಬೇಕಿದ್ದು ಅದರ ವಿಚಾರಣೆಗೆ ಸಾಕಷ್ಟು ಸಮಯವನ್ನು ಸುಪ್ರೀಂಕೋರ್ಟ್ ತೆಗೆದುಕೊಳ್ಳಲಿದೆ.

ಇದನ್ನೂ ಓದಿ:ಯಾವ ಜೈಲಿಗೆ ಹೋಗಲಿದ್ದಾರೆ ದರ್ಶನ್, ಬಳ್ಳಾರಿ ಜೈಲಿನಲ್ಲಿ ಸಿದ್ಧತೆ?

ಇದರ ಹೊರತಾಗಿ ದರ್ಶನ್​ ಆರೋಗ್ಯದ ನೆಪ ವೊಡ್ಡಿ ಮಧ್ಯಂತರ ಜಾಮೀನು ಪಡೆಯುವ ಅವಕಾಶ ಇದೆ. ಆದರೆ ಅದಕ್ಕೆ ದರ್ಶನ್​ಗೆ ನಿಜವಾಗಿಯೂ ಅನಾರೋಗ್ಯ ಇರಬೇಕಾಗುತ್ತದೆ. ಕಳೆದ ಬಾರಿಯಂತೆ ಶಸ್ತ್ರಚಿಕಿತ್ಸೆಯ ಕಾರಣ ನೀಡಿ ಆ ಬಳಿಕ ಕೇವಲ ಫಿಸಿಯೋಥೆರಪಿಗೆ ಸೀಮಿತವಾಗುವಂತಿಲ್ಲ. ಗಂಭೀರ ಆರೋಗ್ಯದ ಸಮಸ್ಯೆ ಇದ್ದಲ್ಲಿ ಮಾತ್ರವೇ ದರ್ಶನ್​ಗೆ ಮಧ್ಯಂತರ ಜಾಮೀನು ಸಿಗಲಿದೆ.

ರೇಣುಕಾ ಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ಸೆಷನ್ಸ್​ ನ್ಯಾಯಾಲಯದಲ್ಲಿ ನಡೆಯುತ್ತಿದ್ದು, ನ್ಯಾಯಾಲಯವು ಲಘು ಬಗೆಯಲ್ಲಿ ಪ್ರಕರಣದ ವಿಚಾರಣೆ ನಡೆಸಿ ಒಂದೊಮ್ಮೆ ದರ್ಶನ್ ಹಾಗೂ ಇತರೆ ಆರೋಪಿಗಳದ್ದು ತಪ್ಪಿಲ್ಲ ಎಂದು ತೀರ್ಪು ಪ್ರಕಟಿಸಿದರೆ ದರ್ಶನ್ ಜೈಲಿನಿಂದ ಬಿಡುಗಡೆ ಆಗಬಹುದಾಗಿದೆ. ಆದರೆ ಈ ಸಾಧ್ಯತೆ ಬಹಳ ಕಡಿಮೆ. ದರ್ಶನ್​ಗೆ ಈ ಪ್ರಕರಣದಲ್ಲಿ ಶಿಕ್ಷೆ ಆಗುವುದು ಖಂಡಿತ ಎನ್ನಲಾಗುತ್ತಿದೆ.

ಇನ್ನೂ ಒಂದು ಆಯ್ಕೆ ಎಂದರೆ. ಸೆಷನ್ಸ್ ನ್ಯಾಯಾಲಯದಲ್ಲಿ ದರ್ಶನ್​ಗೆ ಶಿಕ್ಷೆ ಆಗಿ, ಆ ಶಿಕ್ಷೆಯ ಅವಧಿಯನ್ನು ದರ್ಶನ್ ಪೂರ್ಣಗೊಳಿಸಿದರೆ ದರ್ಶನ್​ ಜೈಲಿನಿಂದ ಬಿಡುಗಡೆ ಹೊಂದಬಹುದು. ಆದರೆ ಇದು ಶೀಘ್ರವಾಗಿ ಆಗುವಂಥಹದ್ದಲ್ಲ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ