ಐತಿಹಾಸಿಕ ಚಿತ್ರಕ್ಕಾಗಿ ಕೈ ಜೋಡಿಸಿದ ದರ್ಶನ್​-ತರುಣ್; ‘ಕಾಟೇರ’ ಬಳಿಕ ಸಿಂಧೂರ ಲಕ್ಷ್ಮಣನ ಕಥೆ

|

Updated on: Feb 16, 2024 | 11:03 AM

ದರ್ಶನ್​ ಅವರು ಐತಿಹಾಸಿಕ ಸಿನಿಮಾದಲ್ಲಿ ನಟಿಸುತ್ತಾರೆ ಎಂದರೆ ಅಭಿಮಾನಿಗಳ ಪಾಲಿಗೆ ಹಬ್ಬ. ‘D59’ ಸಿನಿಮಾದಲ್ಲಿ ಸಿಂಧೂರ ಲಕ್ಷ್ಮಣನ ಕಥೆ ಇರಲಿದೆ. ಈ ಸಿನಿಮಾಗೆ ತುರುಣ್​ ಸುಧೀರ್​ ನಿರ್ದೇಶನ ಮಾಡಲಿದ್ದಾರೆ. ಶೈಲಜಾ ನಾಗ್​ ಮತ್ತು ಬಿ. ಸುರೇಶ ಅವರು ನಿರ್ಮಾಣ ಮಾಡಲಿದ್ದಾರೆ. ವಿ. ಹರಿಕೃಷ್ಣ ಅವರ ಸಂಗೀತ ನಿರ್ದಶನ ಈ ಚಿತ್ರಕ್ಕೆ ಇರಲಿದೆ.

ಐತಿಹಾಸಿಕ ಚಿತ್ರಕ್ಕಾಗಿ ಕೈ ಜೋಡಿಸಿದ ದರ್ಶನ್​-ತರುಣ್; ‘ಕಾಟೇರ’ ಬಳಿಕ ಸಿಂಧೂರ ಲಕ್ಷ್ಮಣನ ಕಥೆ
ದರ್ಶನ್​
Follow us on

ನಟ ‘ಚಾಲೆಂಜಿಂಗ್​ ಸ್ಟಾರ್​’ ದರ್ಶನ್​ ಅವರ ಹುಟ್ಟುಹಬ್ಬವನ್ನು (Darshan Birthday) ಅಭಿಮಾನಿಗಳು ಇಂದು (ಫೆಬ್ರವರಿ 16) ಅದ್ದೂರಿಯಾಗಿ ಆಚರಿಸುತ್ತಿದ್ದಾರೆ. ಅವರ ನಿವಾಸದ ಬಳಿ ಅಪಾರ ಸಂಖ್ಯೆಯ ಅಭಿಮಾನಿಗಳು ನೆರೆದಿದ್ದಾರೆ. ಅಭಿಮಾನಿಗಳು, ಸೆಲೆಬ್ರಿಟಿಗಳು ದರ್ಶನ್​ಗೆ ಶುಭಾಶಯ ತಿಳಿಸುತ್ತಿದ್ದಾರೆ. ಇದೇ ಖುಷಿಯಲ್ಲಿ ಹೊಸ ಸಿನಿಮಾ ಅನೌನ್ಸ್​ ಆಗಿದೆ. ಖ್ಯಾತ ನಿರ್ದೇಶಕ ತರುಣ್​ ಸುಧೀರ್​ (Tharun Sudhir) ಮತ್ತು ದರ್ಶನ್​ ಅವರ ಕಾಂಬಿನೇಷನ್​ನಲ್ಲಿ ಮತ್ತೊಂದು ಸಿನಿಮಾ ಮೂಡಿಬರಲಿದ್ದು, ಇದರಲ್ಲಿ ಐತಿಹಾಸಿಕ ಕಥಾಹಂದರ ಇರಲಿದೆ. ಈ ಸಿನಿಮಾವನ್ನು ಶೈಲಜಾ ನಾಗ್​ ಮತ್ತು ಬಿ. ಸುರೇಶ ಅವರು ನಿರ್ಮಾಣ ಮಾಡಲಿದ್ದಾರೆ. ದರ್ಶನ್​ (Darshan) ಹುಟ್ಟುಹಬ್ಬದ ಪ್ರಯುಕ್ತ ಈ ಸಿನಿಮಾದ ಪೋಸ್ಟರ್​ ಬಿಡುಗಡೆ ಮಾಡಲಾಗಿದೆ.

ದರ್ಶನ್​ ಅವರಿಗೆ ಐತಿಹಾಸಿಕ ಮತ್ತು ಪೌರಾಣಿಕ ಸಿನಿಮಾ ಎಂದರೆ ವಿಶೇಷ ಆಸಕ್ತಿ. ಹಾಗಾಗಿ ಅವರು ಅಂತಹ ಸ್ಕ್ರಿಪ್ಟ್​ಗಳಿಗೆ ಮೊದಲ ಆದ್ಯತೆ ನೀಡುತ್ತಾರೆ. ಈ ಮೊದಲು ಸಂಗೊಳ್ಳಿ ರಾಯಣ್ಣನಾಗಿ ಅಬ್ಬರಿಸಿದ್ದ ದರ್ಶನ್ ಅವರು ಈಗ ಸಿಂಧೂರ ಲಕ್ಷ್ಮಣನ ಪಾತ್ರ ಮಾಡಲು ಒಪ್ಪಿಕೊಂಡಿದ್ದಾರೆ. ಹೌದು, ತರುಣ್​ ಸುಧೀರ್​ ಮತ್ತು ದರ್ಶನ್​ ಕಾಂಬಿನೇಷನ್​ನಲ್ಲಿ ಮೂಡಿಬರಲಿರುವ ಈ ಸಿನಿಮಾದಲ್ಲಿ ಸಿಂಧೂರ ಲಕ್ಷ್ಮಣನ ಕಥೆ ಇರಲಿದೆ ಎಂಬುದು ವಿಶೇಷ. ಹಾಗಾಗಿ ಅಭಿಮಾನಿಗಳ ಮನದಲ್ಲಿ ನಿರೀಕ್ಷೆ ಹೆಚ್ಚಾಗಿದೆ.

ತರುಣ್​ ಸುಧೀರ್ ಎಕ್ಸ್ (ಟ್ವಿಟರ್​) ಪೋಸ್ಟ್​:

‘ರಾಬರ್ಟ್​’ ಮತ್ತು ‘ಕಾಟೇರ’ ಸಿನಿಮಾಗಳಲ್ಲಿ ತರುಣ್​ ಸುಧೀರ್​ ಮತ್ತು ದರ್ಶನ್​ ಅವರ ಕಾಂಬಿನೇಷನ್​ ಜನಮೆಚ್ಚುಗೆ ಗಳಿಸಿತು. ಈಗ ಅವರು ಮೂರನೇ ಬಾರಿಗೆ ಕೈ ಜೋಡಿಸುತ್ತಿರುವುದರಿಂದ ಹೈಪ್​ ಹೆಚ್ಚಾಗಲಿದೆ. ಈಗಾಗಲೇ ತರುಣ್​ ಸುಧೀರ್​ ಅವರು ಈ ಸಿನಿಮಾದ ಸ್ಕ್ರಿಪ್ಟ್​ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ದರ್ಶನ್​ ನಟನೆಯ 59ನೇ ಸಿನಿಮಾವಾಗಿ ಈ ಚಿತ್ರ ಮೂಡಿಬರಲಿದೆ. ಹೆಚ್ಚಿನ ಮಾಹಿತಿ ತಿಳಿಯಲು ಫ್ಯಾನ್ಸ್​ ಕಾದಿದ್ದಾರೆ.

ಇದನ್ನೂ ಓದಿ: ದರ್ಶನ್ ಮನೆ ಎದುರು ಅಭಿಮಾನಿಗಳ ಸಂಭ್ರಮ ಹೇಗಿತ್ತು ನೋಡಿ..

‘ಸದ್ಯಕ್ಕೆ ಸ್ಕ್ರಿಪ್ಟ್​ ಕೆಲಸಗಳು ನಡೆಯುತ್ತಿವೆ. ದೊಡ್ಡ ಬಜೆಟ್​ನಲ್ಲಿ ಈ ಸಿನಿಮಾ ಮೂಡಿಬರಲಿದೆ’ ಎಂದು ನಿರ್ಮಾಪಕಿ ಶೈಲಜಾ ನಾಗ್​ ಅವರು ಹೇಳಿದ್ದಾರೆ. ಈ ಮೊದಲು ದರ್ಶನ್​ ನಟಿಸಿದ್ದ ‘ಯಜಮಾನ’ ಮತ್ತು ‘ಕ್ರಾಂತಿ’ ಸಿನಿಮಾಗಳಿಗೆ ‘ಮೀಡಿಯಾ ಹೌಸ್​ ಸ್ಟುಡಿಯೋ’ ಸಂಸ್ಥೆಯ ಮೂಲಕ ಶೈಲಜಾ ನಾಗ್​ ಮತ್ತು ಬಿ. ಸುರೇಶ್​ ಅವರು ಬಂಡವಾಳ ಹೂಡಿದ್ದರು. ಈಗ ಮೂರನೇ ಬಾರಿಗೆ ಅವರು ದರ್ಶನ್​ ಅಭಿನಯದ ಚಿತ್ರವನ್ನು ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಈ ಸಿನಿಮಾಗೆ ವಿ. ಹರಿಕೃಷ್ಣ ಸಂಗೀತ ನೀಡಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ