
ನಟ ದರ್ಶನ್ ಪ್ರಮುಖ ಆರೋಪಿ ಆಗಿರುವ ರೇಣುಕಾಸ್ವಾಮಿ ಕೊಲೆ ಪ್ರಕರಣದ (Renukaswamy Case) ತನಿಖೆ ವೇಳೆ ಲಕ್ಷಾಂತರ ರೂಪಾಯಿ ಹಣ ಪತ್ತೆ ಆಗಿತ್ತು. ಅದಕ್ಕೆ ಸಂಬಂಧಿಸಿದಂತೆ ಐಟಿ ಅಧಿಕಾರಿಗಳ ತನಿಖೆ ನಡೆಸುತ್ತಿದ್ದಾರೆ. ದರ್ಶನ್ (Darshan) ಅವರು ಈಗಾಗಲೇ ಅದಕ್ಕೆ ತಮ್ಮ ಹೇಳಿಕೆ ನೀಡಿದ್ದಾರೆ. ಆದರೆ ಈ ಪ್ರಕರಣದಲ್ಲಿ ಸಿಲುಕಿರುವ ಇನ್ನುಳಿದ ಆರೋಪಿಗಳು ವ್ಯತಿರಿಕ್ತ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದರಿಂದಾಗಿ ದರ್ಶನ್ ಅವರಿಗೆ ಸಂಕಷ್ಟ ಹೆಚ್ಚುವ ಸಾಧ್ಯತೆ ಇದೆ. ದರ್ಶನ್ ಆಪ್ತ ಪ್ರದೋಷ್ (Pradosh) ಹೇಳಿಕೆಯನ್ನು ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಪಡೆದುಕೊಂಡಿದ್ದಾರೆ.
ಮನೆಯಲ್ಲಿ ಸಿಕ್ಕ ಹಣಕ್ಕೆ ಪಕ್ಕಾ ಲೆಕ್ಕ ಕೊಡಲು ಪ್ರದೋಷ್ ಅವರಿಂದ ಸಾಧ್ಯವಾಗಿಲ್ಲ. ಅವರ ಹೇಳಿಕೆಯಿಂದ ತನಿಖೆ ಮತ್ತಷ್ಟು ಚುರುಕುಗೊಂಡಿದೆ. ಆದಾಯ ತೆರಿಗೆ ಇಲಾಖೆ ಮುಂದೆ ಪ್ರದೋಷ್ ನೀಡಿದ ಹೇಳಿಕೆಯ ಪ್ರತಿ ಟಿವಿ9ಗೆ ಲಭ್ಯವಾಗಿದೆ. ಮನೆಯಲ್ಲಿ ಸಿಕ್ಕ 30 ಲಕ್ಷ ರೂಪಾಯಿ ಹಣಕ್ಕೆ ಪ್ರದೋಷ್ ದ್ವಂದ್ವ ಉತ್ತರ ನೀಡಿದ್ದಾರೆ. ಇದರಿಂದಾಗಿ ದರ್ಶನ್ ಮತ್ತೆ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ದಟ್ಟವಾಗಿದೆ.
‘ಮನೆಯಲ್ಲಿ ಸಿಕ್ಕ ಹಣ ನನ್ನದಲ್ಲ. ನನ್ನ ಕುಟುಂಬಕ್ಕೂ ಸೇರಿದಲ್ಲ’ ಎಂದು ಪ್ರದೋಷ್ ಹೇಳಿಕೆ ನಿಡಿದ್ದಾರೆ. ಇದರಿಂದಾಗಿ ಹಲವು ಪ್ರಶ್ನೆಗಳು ಹುಟ್ಟಿಕೊಳ್ಳುವಂತಾಗಿದೆ. ಹಾಗಾದರೆ ಈ 30 ಲಕ್ಷ ರೂಪಾಯಿ ಹಣ ಎಲ್ಲಿಂದ ಬಂತು? ಕೊಟ್ಟವರು ಯಾರು ಎಂಬುದಕ್ಕೆ ಪ್ರದೋಷ್ ಉತ್ತರ ನೀಡಿಲ್ಲ. ಇದರಿಂದ ದರ್ಶನ್ ಅವರನ್ನು ಮತ್ತೆ ವಿಚಾರಣೆಗೆ ಒಳಪಡಿಸಲು ಐಟಿ ಅಧಿಕಾರಿಗಳು ತಯಾರಿ ಮಾಡಿಕೊಳ್ಳುತ್ತಿದ್ದಾರೆ.
ಅಧಿಕಾರಿಗಳ ಪ್ರಶ್ನೆ: ಮೇಲೆ ತಿಳಿಸಿದ 30,00,000 ರೂಪಾಯಿ ನಗದು ವಶಪಡಿಸಿಕೊಳ್ಳಲಾದ ಹಣದ ಮೂಲವನ್ನು ದಯವಿಟ್ಟು ಒದಗಿಸಿ.
ಪ್ರದೋಷ್ ಉತ್ತರ: ಸರ್, ಮೇಲೆ ತಿಳಿಸಿದ 30,00,000 ರೂಪಾಯಿ ನಗದು ವಶಪಡಿಸಿಕೊಳ್ಳಲಾದ ಹಣದ ಮೂಲ ನನಗೆ ತಿಳಿದಿಲ್ಲ. ಏಕೆಂದರೆ ಅದು ನನಗೆ ಅಥವಾ ನನ್ನ ಕುಟುಂಬದ ಸದಸ್ಯರಿಗೆ ಸೇರಿಲ್ಲ.
ಇದನ್ನೂ ಓದಿ: ವಶಪಡಿಸಿಕೊಂಡಿದ್ದ 82 ಲಕ್ಷ ರೂಪಾಯಿಗೆ ಲೆಕ್ಕ ಕೊಟ್ಟ ದರ್ಶನ್
ಅಧಿಕಾರಿಗಳ ಪ್ರಶ್ನೆ: 12.06.2024ರಂದು ನಿಮ್ಮ ನಿವಾಸದಿಂದ ಪತ್ತೆಯಾದ ಮತ್ತು ವಶಪಡಿಸಿಕೊಂಡ ಹಣದ ಮೂಲದ ಬಗ್ಗೆ ಸರಿಯಾದ ವಿವರಣೆ ಇಲ್ಲದಿದ್ದರೆ, ಸಂಪೂರ್ಣ ನಗದನ್ನು ವಶಪಡಿಸಿಕೊಳ್ಳಲಾಗುತ್ತದೆ. ಇದರ ಬಗ್ಗೆ ನಿಮಗೆ ಯಾವುದೇ ಆಕ್ಷೇಪಣೆ/ಕಾಮೆಂಟ್ಗಳಿವೆಯೇ?
ಪ್ರದೋಷ್ ಉತ್ತರ: ಸರ್, 12.06.2024ರಂದು ನನ್ನ ನಿವಾಸದಿಂದ ಪತ್ತೆಯಾದ ಮತ್ತು ವಶಪಡಿಸಿಕೊಂಡ ಹಣದ ಮೂಲ ಇನ್ನೂ ವಿವರಿಸಲಾಗಿಲ್ಲ ಎಂದು ನಾನು ಒಪ್ಪುತ್ತೇನೆ ಮತ್ತು ಅದನ್ನು ವಶಪಡಿಸಿಕೊಳ್ಳಬಹುದು ಮತ್ತು ಅದಕ್ಕೆ ಅನುಗುಣವಾಗಿ ತೆರಿಗೆ ವಿಧಿಸಬಹುದು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.