AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದರ್ಶನ್ ಜಾಮೀನು ಅರ್ಜಿಯಲ್ಲಿ ದರ್ಶನ್ ಆಸ್ತಿ ವಿವರ ಬಹಿರಂಗ

ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ತೂಗುದೀಪ ಜಾಮೀನು ಅರ್ಜಿ ವಿಚಾರಣೆ ಇಂದು ನಡೆಯಲಿದೆ. ಜಾಮೀನು ಅರ್ಜಿಯಲ್ಲಿ ದರ್ಶನ್​ರ ಸಾಮಾಜಿಕ ಕಾರ್ಯಗಳ ಜೊತೆಗೆ ಅವರ ಆಸ್ತಿಯ ಕೆಲ ವಿವರಗಳನ್ನು ಸಹ ನಮೂದಿಸಲಾಗಿದ್ದು, ಅವುಗಳ ಮಾಹಿತಿ ಇಲ್ಲಿದೆ.

ದರ್ಶನ್ ಜಾಮೀನು ಅರ್ಜಿಯಲ್ಲಿ ದರ್ಶನ್ ಆಸ್ತಿ ವಿವರ ಬಹಿರಂಗ
ಮಂಜುನಾಥ ಸಿ.
|

Updated on:Sep 27, 2024 | 5:46 PM

Share

ನಟ ದರ್ಶನ್ ತೂಗುದೀಪ, ರೇಣುಕಾ ಸ್ವಾಮಿ ಕೊಲೆ ಆರೋಪದಲ್ಲಿ ಬಂಧಿತರಾಗಿ ನಾಲ್ಕು ತಿಂಗಳಾಗುತ್ತಾ ಬಂದಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ದರ್ಶನ್ ಅನ್ನು ಒಂದು ತಿಂಗಳ ಹಿಂದೆ ಬಳ್ಳಾರಿ ಜೈಲಿಗೆ ಸ್ಥಳಾಂತರ ಮಾಡಲಾಗಿದೆ. ರೇಣುಕಾ ಸ್ವಾಮಿ ಕೊಲೆ ಪ್ರಕರಣದ ತನಿಖೆ ಮುಗಿಸಿರುವ ಪೊಲೀಸರು ಈಗಾಗಲೇ ಆರೋಪ ಪಟ್ಟಿ ಸಲ್ಲಿಕೆ ಮಾಡಿದ್ದಾರೆ. ಆರೋಪ ಪಟ್ಟಿಯನ್ನು ಕೂಲಂಕುಶವಾಗಿ ಪರಿಶೀಲನೆ ಮಾಡಿರುವ ದರ್ಶನ್ ಪರ ವಕೀಲರು ಜಾಮೀನು ಅರ್ಜಿ ಸಲ್ಲಿಸಿದ್ದು, ಇಂದು (ಸೆಪ್ಟೆಂಬರ್ 27) ಜಾಮೀನು ಅರ್ಜಿ ಕುರಿತ ಆದೇಶ ಹೊರಬೀಳುವ ಸಾಧ್ಯತೆ ಇದೆ.

ಈ ನಡುವೆ ದರ್ಶನ್ ಪರ ವಕೀಲರು ಸಲ್ಲಿಸಿರುವ ಜಾಮೀನು ಅರ್ಜಿಯಲ್ಲಿ ಹಲವು ವಿಷಯಗಳನ್ನು ಉಲ್ಲೇಖಿಸಲಾಗಿದ್ದು, ಅರ್ಜಿಯಲ್ಲಿ ಪ್ರಕರಣದಲ್ಲಿ ದರ್ಶನ್​ರ ‘ಮುಗ್ಧತೆ’ಯ ಜೊತೆಗೆ ಅವರ ಸಾಮಾಜಿಕ ಇಮೇಜು, ಅವರು ನಾಗರೀಕರಾಗಿ ನಿರ್ವಹಿಸುತ್ತಿರುವ ‘ಜವಾಬ್ದಾರಿ’, ಸಮಾಜ ಸೇವೆ ಇನ್ನಿತರೆ ವಿಷಯಗಳ ಉಲ್ಲೇಖಗಳೂ ಸಹ ಇದೆ. ಅರ್ಜಿಯಲ್ಲಿ ದರ್ಶನ್​ರ ಆಸ್ತಿ ವಿವರಗಳನ್ನು ಸಹ ಕೆಲವನ್ನು ನಮೂದು ಮಾಡಲಾಗಿದೆ.

ದರ್ಶನ್​ಗೆ ಬೆಳ್ಳಂದೂರಿನಲ್ಲಿ ಕೋಟ್ಯಂತರ ಮೌಲ್ಯದ ನಿವೇಶನ ಹೊಂದಿದ್ದಾರೆ, ರಾಜರಾಜೇಶ್ವರಿ ನಗರದಲ್ಲಿ ಮನೆ ಇದೆ, ಮಲ್ಲತ್ ಹಳ್ಳಿಯಲ್ಲಿ ಮನೆ ಇದೆ, ದೇವನಹಳ್ಳಿ ಪ್ರೆಸ್ಟೀಜ್ ಅಪಾರ್ಟ್​ಮೆಂಟ್​ನಲ್ಲಿ ಫ್ಲ್ಯಾಟ್ ಇದೆ. ಇನ್ನೂ ಕೆಲವು ಆಸ್ತಿಗಳು ದರ್ಶನ್ ಹೆಸರಲ್ಲಿದ್ದು ಎಲ್ಲದಕ್ಕೂ ತಪ್ಪದೆ ಆದಾಯ ತೆರಿಗೆ ಪಾವತಿಸಿಕೊಂಡು ಹೋಗುತ್ತಿರುವುದಾಗಿ ಉಲ್ಲೇಖಿಸಲಾಗಿದೆ. ಇದರ ಜೊತೆಗೆ ದರ್ಶನ್ ಸಿನಿಮಾದಲ್ಲಿ ನಟಿಸಿದರೆ ಹಲವಾರು ಮಂದಿಗೆ ಉದ್ಯೋಗ ಸಿಗುತ್ತದೆ ಎಂಬುದನ್ನು ಸಹ ಜಾಮೀನು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ:ಬಳ್ಳಾರಿ ಜೈಲಿಗೆ ದರ್ಶನ್ ಶಿಫ್ಟ್ ಆಗಿ ಒಂದು ತಿಂಗಳು; ಜಾಮೀನಿಗಾಗಿ ಚಾತಕ ಪಕ್ಷಿಯಂತೆ ಕಾದ ದಾಸ

ರೇಣುಕಾ ಸ್ವಾಮಿ ಕೊಲೆ ಮುಚ್ಚಿಹಾಕಲು ಯತ್ನಿಸಿದ್ದ ದರ್ಶನ್ ಕೆಲವರಿಗೆ ಲಕ್ಷಾಂತರ ರೂಪಾಯಿ ಹಣ ನೀಡಿದ್ದರ ಬಗ್ಗೆ ಚಾರ್ಜ್​ಶೀಟ್​ನಲ್ಲಿ ಉಲ್ಲೇಖವಾಗಿತ್ತು. ಅದರ ಆಧಾರದ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದರ್ಶನ್​ ಮೇಲೆ ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಇತ್ತೀಚೆಗಷ್ಟೆ ಬಳ್ಳಾರಿ ಜೈಲಿಗೆ ಭೇಟಿ ನೀಡಿ ದರ್ಶನ್ ಅನ್ನು ಈ ಸಂಬಂಧ ವಿಚಾರಣೆ ನಡೆಸಿದ್ದಾರೆ. ಸುಮಾರು 7 ಗಂಟೆಗಳ ಕಾಲ ದರ್ಶನ್ ಅನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ ಎನ್ನಲಾಗುತ್ತಿದೆ.

ಇನ್ನು ದರ್ಶನ್ ಜಾಮೀನು ಅರ್ಜಿಯ ವಿಚಾರಣೆ ಇಂದು ಸಹ ನಡೆಯಲಿದೆ. ಈಗಾಗಲೇ ದರ್ಶನ್ ಪರ ವಕೀಲರು, ಕೊಲೆಗೂ ದರ್ಶನ್​ಗೂ ಸಂಬಂಧವಿಲ್ಲವೆಂದು, ರೇಣುಕಾ ಸ್ವಾಮಿಯನ್ನು ಕೊಲೆ ಮಾಡುವುದು ದರ್ಶನ್​ರ ಉದ್ದೇಶವಾಗಿರಲಿಲ್ಲವೆಂದು ಹಾಗೂ ರೇಣುಕಾ ಸ್ವಾಮಿಯ ಮರಣೋತ್ತರ ಪರೀಕ್ಷೆಗೂ 164 ಅಡಿಯಲ್ಲಿ ಸಾಕ್ಷಿಗಳು ದಾಖಲಿಸಿರುವ ಹೇಳಿಕೆಗೂ ವ್ಯತ್ಯಾಸ ಇದೆಯೆಂದು ಇನ್ನೂ ಹಲವು ಕೋನಗಳಲ್ಲಿ ದರ್ಶನ್ ಪರ ವಕೀಲರು ವಾದ ಮಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:05 pm, Fri, 27 September 24