ದರ್ಶನ್​ನ ಪೆರೋಲ್​ ಮೇಲೆ ಹೊರತರಲು ನಡೆದಿದೆ ಪ್ಲ್ಯಾನ್; ಉದ್ದೇಶ ಏನು?

| Updated By: ರಾಜೇಶ್ ದುಗ್ಗುಮನೆ

Updated on: Sep 09, 2024 | 10:44 AM

ನಟ ದರ್ಶನ್ ಹಾಗೂ ಗ್ಯಾಂಗ್ ರೇಣುಕಾ ಸ್ವಾಮಿ ಕೊಲೆ ಕೇಸ್​ನಲ್ಲಿ ಜೈಲಿನಲ್ಲಿ ಇದ್ದಾರೆ. ಈ ಪ್ರಕರಣ ನಡೆದು ಮೂರು ತಿಂಗಳು ಕಳೆಯುತ್ತಾ ಬಂದಿವೆ. ಇಂದಿಗೆ (ಸೆಪ್ಟೆಂಬರ್ 9) ಎಲ್ಲಾ ಆರೋಪಿಗಳ ನ್ಯಾಯಾಂಗ ಬಂಧನದ ಅವಧಿ ಪೂರ್ಣಗೊಳ್ಳಲಿದೆ. ಕೋರ್ಟ್​ನಲ್ಲಿ ಇದರ ವಿಚಾರಣೆ ಇಂದು ನಡೆಯಲಿದೆ. ಈಗ ದರ್ಶನ್ ಅವರನ್ನು ಪೆರೋಲ್ ಮೇಲೆ ತರಲು ಪ್ಲ್ಯಾನ್ ನಡೆದಿದೆ.

ದರ್ಶನ್​ನ ಪೆರೋಲ್​ ಮೇಲೆ ಹೊರತರಲು ನಡೆದಿದೆ ಪ್ಲ್ಯಾನ್; ಉದ್ದೇಶ ಏನು?
ದರ್ಶನ್
Follow us on

ನಟ ದರ್ಶನ್ ಅವರು ಸದ್ಯ ರೇಣುಕಾ ಸ್ವಾಮಿ ಕೊಲೆ ಕೇಸ್​ನಲ್ಲಿ ಜೈಲಿನಲ್ಲಿ ಇದ್ದಾರೆ. ಅವರಿಗೆ ಜಾಮೀನು ಸಿಗೋದು ದೂರದ ಮಾತಾಗಿದೆ. ಈಗ ದರ್ಶನ್ ಅವರನ್ನು ಪೆರೋಲ್ ಮೇಲೆ ಎರಡು‌ ಗಂಟೆ ಹೊರಗೆ ತರೋ ಪ್ಲಾನ್ ನಡೆದಿದೆ ಎನ್ನುವ ವಿಚಾರ ರಿವೀಲ್ ಆಗಿದೆ. ಇದನ್ನು ಯಾರೋ ಮೂಲಗಳು ಹೇಳುತ್ತಿಲ್ಲ. ಸ್ವತಃ ಇದಕ್ಕೆ ಯೋಜನೆ ಮಾಡಿರೋ ನಿರ್ಮಾಪಕಿ ಶಿಲ್ಪಾ ಶ್ರೀನಿವಾಸ್ ಹೇಳಿದ್ದಾರೆ.

ಅಕ್ಟೋಬರ್ 22ರಂದು ಉಪೇಂದ್ರ ನಿರ್ದೇಶನ ಮಾಡಿದ್ದ ‘ಉಪೇಂದ್ರ’ ಚಿತ್ರಕ್ಕೆ 25 ವರ್ಷ ತುಂಬುತ್ತಿದೆ. ಈ ವಿಶೇಷ ದಿನವನ್ನು ಸಂಭ್ರಮಿಸಲು ಶಿಲ್ಪಾ ನಿರ್ಧರಿಸಿದ್ದಾರೆ. ಈ ಸಂದರ್ಭದಲ್ಲಿ ಸ್ಯಾಂಡಲ್​ವುಡ್​ನ ಉಪೇಂದ್ರ, ಸುದೀಪ್, ದರ್ಶನ್ ಸೇರಿ ಎಲ್ಲ ಸ್ಟಾರ್​ಗಳನ್ನು ಒಂದೇ ವೇದಿಕೆಗೆ ಕರೆ ತರುವ ಪ್ಲಾನ್ ನಡೆದಿದೆ. ಇದಕ್ಕಾಗಿ ದರ್ಶನ್ ಅವರನ್ನು ಪೆರೋಲ್​ ಮೇಲೆ ತರುವ ಆಲೋಚನೆ ಶಿಲ್ಪಾಗೆ ಇದೆ.

ಈ ಬಗ್ಗೆ ಟಿವಿ9 ಕನ್ನಡ ಬಳಿ ಮಾತನಾಡಿರುವ ಶಿಲ್ಪಾ, ‘ದರ್ಶನ್ ಅವರನ್ನು ಪೆರೋಲ್​ ಮೇಲೆ ತರುವ ವಿಚಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ಲಾಯರ್ ಬಳಿ ಮಾತುಕತೆ ಮಾಡ್ತಿದ್ದೇನೆ. ಅದೆಷ್ಟು ಶುಲ್ಕ ಇದೆಯೋ ಅಷ್ಟು ಕೊಟ್ಟು ಕರೆ ತರುವ ಆಲೋಚನೆ ಇದೆ. ಅಂದಿನ ಕಾಲಕ್ಕೆ ದರ್ಶನ್ ಹಾಗೂ ವಿಜಯಲಕ್ಷ್ಮೀ ಮದುವೆಗೆ ಹೋದವರಲ್ಲಿ ನಾನು ಒಬ್ಬರು. ಅವತ್ತು ದರ್ಶನ್​ ಜೊತೆ ಸಿನಿಮಾ ಮಾಡಲು ಅಡ್ವಾನ್ಸ್ ಕೊಟ್ಟಿದ್ದೆ. ಹೀಗಾಗಿ ನನಗೆ ಆಹ್ವಾನ ನೀಡಿದ್ದರು. ಹೀಗಾಗಿ ಮದುವೆಗೆ ಹೋಗಿ ಶುಭ ಹಾರೈಸಿ ಬಂದಿದ್ದೆ’ ಎಂದಿದ್ದಾರೆ.

‘ಇತ್ತೀಚೆಗೆ ಅವರ ಸಹೋದರ ದಿನಕರ್ ಜೊತೆಗೆ ಮಾತಾಡಿದ್ದೇನೆ. ಏನಾದ್ರು ಸಹಾಯ ಬೇಕಾದರೆ ಕೇಳಿ ಜೊತೆಗೆ ಇರುತ್ತೇವೆ ಎಂದಿದ್ದೇನೆ. ವಿಜಯಲಕ್ಷ್ಮೀ ಇಂದಿರಾ ಗಾಂಧಿ ಇದ್ದ ಹಾಗೆಯೇ. ಒಂದು ಸಾರಿ ಗಂಡ ಎಂದು ಒಪ್ಕೊಂಡ್ರೆ ಅದನ್ನು ಪಾಲಿಸುತ್ತಾರೆ’ ಎಂದಿದ್ದಾರೆ ಅವರು.

ಇದನ್ನೂ ಓದಿ: ಇಂದಿಗೆ ಪೂರ್ಣಗೊಳ್ಳಲಿದೆ ದರ್ಶನ್ ನ್ಯಾಯಾಂಗ ಬಂಧನದ ಅವಧಿ; ಆರೋಪಿಗಳಿಗೆ ಪ್ರಮುಖ ದಿನ

ರೇಣುಕಾ ಸ್ವಾಮಿ ಕೊಲೆ ಕೇಸ್​ನಲ್ಲಿ ಅರೆಸ್ಟ್ ಆದವರ ಪೈಕಿ ಕೆಲವರ ಕುಟುಂಬದವರು ನಿಧನ ಹೊಂದಿದ್ದರು. ಈ ವೇಳೆ ಆ ಆರೋಪಿಗಳನ್ನು ಪೆರೋಲ್​ಮೇಲೆ ಹೊರಗೆ ತರಲಾಗಿತ್ತು. ಆದರೆ, ಈಗ ದರ್ಶನ್​ ಅವರನ್ನು ಹೊರಗೆ ತರಲು ಪ್ರಯತ್ನ ನಡೆದಿರೋದು ವಿಶೇಷ ಕಾರ್ಯಕ್ರಮದ ಉದ್ದೇಶಕ್ಕಾಗಿ. ಇದಕ್ಕೆ ಅವಕಾಶ ಸಿಗುತ್ತದೆಯೋ ಅಥವಾ ಇಲ್ಲವೋ ನೋಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.