
ನಟ ದರ್ಶನ್ (Darshan Thoogudeepa) ಅವರು ಇತ್ತೀಚೆಗೆ ಸಾಕಷ್ಟು ಕೆಟ್ಟ ಕಾರಣಗಳಿಂದ ಸುದ್ದಿಯಲ್ಲಿದ್ದಾರೆ. ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಎ 2 ಆರೋಪಿ ಆಗಿರುವ ಅವರು ಕೆಲವು ತಿಂಗಳು ಜೈಲಿನಲ್ಲಿ ಇರಬೇಕಾಯಿತು. ಈಗ ಜಾಮೀನು ಪಡೆದು ಅವರು ಹೊರ ಬಂದಿದ್ದಾರೆ. ಹೀಗಿರುವಾಗಲೇ ದರ್ಶನ್ ಮಾಡಿರುವ ಒಂದು ಒಳ್ಳೆಯ ಕೆಲಸ ಹೊರ ಬಂದಿದೆ. ಹಿರಿಯ ಸಿನಿಮಾ ಪತ್ರಕರ್ತ ಗಣೇಶ್ ಕಾಸರಗೋಡು ಅವರು ಈ ಬಗ್ಗೆ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.
ಕನ್ನಡದ ಹಿರಿಯ ನಟ ಆರ್ಎನ್ ಸುದರ್ಶನ್ ಅವರು 2017ರಲ್ಲಿ ನಮ್ಮನ್ನು ಅಗಲಿದರು. ಅವರ ತಂದೆ ನಾಗೇಂದ್ರ ರಾವ್ ಕೂಡ ಸಿನಿಮಾ ಕೃಷಿ ಮಾಡಿಕೊಂಡಿದ್ದವರು. ಅವರು ಸಿನಿಮಾ ನಿರ್ದೇಶನ, ನಿರ್ಮಾಣ ಮಾಡಿದ್ದಾರೆ. ಸುದರ್ಶನ್ ಪತ್ನಿ ಶೈಲಶ್ರೀ ಕೂಡ ಕಲಾವಿದೆ. ಕನ್ನಡ ಚಿತ್ರರಂಗಕ್ಕೆ ನಾಗೇಂದ್ರ ರಾವ್ ಕುಟುಂಬ ನೀಡಿದ ಕೊಡುಗೆ ಅಪಾರ. ಸುದರ್ಶನ್ ಮರಣಾ ನಂತರ ಅವರ ಪತ್ನಿ ಶೈಲಶ್ರೀ ಒಬ್ಬಂಟಿ ಆಗಿದ್ದಾರೆ.
ಗಣೇಶ್ ಕಾಸರಗೋಡು ಅವರು ವಿವರಿಸುವಂತೆ ಈ ಮೊದಲು ಅಪಾರ್ಟ್ಮೆಂಟ್ ಒಂದರಲ್ಲಿ ಶೈಲಶ್ರೀ ಅವರು ವಾಸವಿದ್ದರು. ಆದರೆ, ಅದರ ಮಾಲೀಕರು ಬಿಲ್ಡಿಂಗ್ ನೆಲಸಮ ಮಾಡಿದ್ದರಿಂದ ಶೈಲಶ್ರೀ ಅವರು ಬೇರೆ ನೆಲೆ ಕಂಡುಕೊಳ್ಳಬೇಕಿತ್ತು. ಆಗ ಹಿರಿಯ ನಟಿಯೊಬ್ಬರು ಶೈಲಶ್ರೀ ಸಹಾಯಕ್ಕೆ ಬಂದರು. ಅವರ ಸಲಹೆಯಂತೆ ಆಶ್ರಮ ಸೇರಿದರು. ಆರಂಭದಲ್ಲಿ ಖರ್ಚು ವೆಚ್ಛಗಳನ್ನು ಹಿರಿಯ ನಟಿ ನೋಡಿಕೊಳ್ಳುತ್ತಿದ್ದರು. ಆದರೆ, ತಿಂಗಳುಗಳು ಉರುಳಿದಂತೆ ಇದು ಸಾಧ್ಯವಾಗಿಲ್ಲ.
ಆಗ ಸಹಾಯಕ್ಕೆ ಬಂದಿದ್ದು ದರ್ಶನ್. ಶೈಲಿಶ್ರೀ ಅವರ ಕೊನೆಗಾಲದವರೆಗೂ ಸಹಾಯ ಮಾಡಲು ದರ್ಶನ್ ಒಪ್ಪಿ ಮುಂದೆ ಬಂದಿದ್ದಾರೆ. ಬಲಗೈ ಕೊಟ್ಟಿದ್ದು, ಎಡಗೈ ಗೊತ್ತಾಗಬಾರದು ಎಂಬುದು ದರ್ಶನ್ ಅವರ ಪಾಲಿಸಿ. ಹೀಗಾಗಿ, ಇದನ್ನು ಅವರು ಹೇಳಿಕೊಂಡಿಲ್ಲ. ಈಗ ದರ್ಶನ್ ಮಾಡಿರುವ ಸಹಾಯಕ್ಕೆ ಎಲ್ಲ ಕಡೆಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಾ ಇದೆ.
ಇದನ್ನೂ ಓದಿ: ‘ಅದು ಪರ್ಸನಲ್ ವಿಷಯ’: ದರ್ಶನ್ ಜೀವನದ ಬದಲಾವಣೆಗಳು ಬಗ್ಗೆ ಧನ್ವೀರ್ ಪ್ರತಿಕ್ರಿಯೆ
ದರ್ಶನ್, ಸುದೀಪ್, ಯಶ್ ಸೇರಿದಂತೆ ಹಿರಿಯ ಕಲಾವಿದರು ಅವರು ಅನೇಕ ಸಾಮಾಜಿಕ ಕೆಲಸಗಳನ್ನು ಮಾಡುತ್ತಾ ಬಂದಿದ್ದಾರೆ. ಚಿತ್ರರಂಗದ ಹಿರಿಯ ಕಲಾವಿದರು ಕಷ್ಟದಲ್ಲಿ ಇರುವಾಗ ಅವರ ಕಷ್ಟಕ್ಕೆ ಧ್ವನಿ ಆಗಿದ್ದಾರೆ. ಆದರೆ, ಅದನ್ನು ಹೊರಗೆ ಹೇಳಿಕೊಂಡು ಓಡಾಡಲು ಅವರಿಗೆ ಇಷ್ಟ ಇಲ್ಲ. ಆದಾಗ್ಯೂ ಅಲ್ಲೊಂದು-ಇಲ್ಲೊಂದು ಸುದ್ದಿಗಳು ಈ ರೀತಿ ಹೊರ ಬಂದು ಅಭಿಮಾನಿಗಳಿಂದ ಮೆಚ್ಚುಗೆ ಗಳಿಸುತ್ತದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.