ಫ್ಯಾನ್ಸ್​ ಕೈಯಿಂದ ‘ಅರ್ದಂಬರ್ಧ ಪ್ರೇಮಕಥೆ’ ಹಾಡು ಬಿಡುಗಡೆ; ‘ಹುಚ್ಚು ಮನಸ ಹುಡುಗಿ..’ ಅಂತಿದ್ದಾರೆ ಅರವಿಂದ್​ ಕೆ.ಪಿ.

ಬಿಗ್​ ಬಾಸ್​ನಿಂದ ಇಲ್ಲಿಯವರೆಗೆ ಪ್ರತಿ ಹೆಜ್ಜೆಯಲ್ಲೂ ತಮಗೆ ಬೆಂಬಲ ಮತ್ತು ಪ್ರೋತ್ಸಾಹ ನೀಡುತ್ತಿರುವ ಅಭಿಮಾನಿಗಳಿಗೆ ಈ ಗೀತೆ ಅರ್ಪಣೆ ಎಂದು ದಿವ್ಯಾ ಉರುಡುಗ ಹಾಗೂ ಅರವಿಂದ್​ ಕೆ.ಪಿ. ಹೇಳಿದ್ದಾರೆ. ಹಾಗಾಗಿ ಅಭಿಮಾನಿಗಳಿಂದಲೇ ‘ಅರ್ದಂಬರ್ಧ ಪ್ರೇಮಕಥೆ’ ಸಿನಿಮಾದ ‘ಹುಚ್ಚು ಮನಸ ಹುಡುಗಿ..’ ಹಾಡನ್ನು ಬಿಡುಗಡೆ ಮಾಡಿಸಲಾಗಿದೆ.

ಫ್ಯಾನ್ಸ್​ ಕೈಯಿಂದ ‘ಅರ್ದಂಬರ್ಧ ಪ್ರೇಮಕಥೆ’ ಹಾಡು ಬಿಡುಗಡೆ; ‘ಹುಚ್ಚು ಮನಸ ಹುಡುಗಿ..’ ಅಂತಿದ್ದಾರೆ ಅರವಿಂದ್​ ಕೆ.ಪಿ.
‘ಹುಚ್ಚು ಮನಸೇ..’ ಹಾಡು ಬಿಡುಗಡೆ ಕಾರ್ಯಕ್ರಮದಲ್ಲಿ ‘ಅರ್ದಂಬರ್ಧ ಪ್ರೇಮಕಥೆ’ ಚಿತ್ರತಂಡ

Updated on: Oct 19, 2023 | 4:19 PM

‘ಬಿಗ್​ ಬಾಸ್​’ ಶೋನಿಂದ ಅನೇಕರಿಗೆ ಪ್ರಸಿದ್ಧಿ ಸಿಕ್ಕಿದೆ. ‘ಬಿಗ್​ ಬಾಸ್​ ಕನ್ನಡ ಸೀಸನ್​ 8’ರಲ್ಲಿ ಸ್ಪರ್ಧಿಸಿದ್ದ ದಿವ್ಯಾ ಉರುಡುಗ (Divya Uruduga) ಮತ್ತು ಅರವಿಂದ್​ ಕೆ.ಪಿ. (Aravind KP) ಅವರಿಗೂ ಅಪಾರ ಜನಪ್ರಿಯತೆ ಸಿಕ್ಕಿತು. ಅವರಿಬ್ಬರ ನಡುವೆ ಉತ್ತಮ ಬಾಂಧವ್ಯ ಬೆಳೆಯಿತು. ಇಬ್ಬರೂ ಜೋಡಿಯಾಗಿ ‘ಅರ್ದಂಬರ್ಧ ಪ್ರೇಮಕಥೆ’ (Ardhambardha Prema Kathe) ಸಿನಿಮಾದಲ್ಲಿ ನಟಿಸಿರುವುದು ಗೊತ್ತೇ ಇದೆ. ಈ ಸಿನಿಮಾ ಈಗ ಬಿಡುಗಡೆಗೆ ಸಜ್ಜಾಗುತ್ತಿದೆ. ಪ್ರಚಾರ ಕಾರ್ಯ ಭರದಿಂದ ಸಾಗುತ್ತಿದ್ದು, ಹೊಸ ಹಾಡು ಬಿಡುಗಡೆ ಮಾಡಲಾಗಿದೆ. ಈಗಾಗಲೇ ಟೀಸರ್ ಹಾಗೂ ಫಸ್ಟ್ ಲುಕ್ ಬಿಡುಗಡೆ ಆಗಿ ಗಮನ ಸೆಳೆದಿದೆ. ಇದೇ ತಂಡದಿಂದ ಈಗ ಫಸ್ಟ್​ ಸಾಂಗ್​ ಬಿಡುಗಡೆ ಆಗಿದೆ. ‘ಹುಚ್ಚು ಮನಸ ಹುಡುಗಿ..’ ಎಂದು ಶುರುವಾಗುವ ಈ ಗೀತೆಯನ್ನು ಅಭಿಮಾನಿಗಳಿಂದಲೇ ರಿಲೀಸ್​ ಮಾಡಿಸಿದ್ದು ವಿಶೇಷ. ಅರವಿಂದ್ ಕೌಶಿಕ್ ಅವರು ‘ಅರ್ದಂಬರ್ಧ ಪ್ರೇಮಕಥೆ’ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ.

‘ಅರ್ದಂಬರ್ಧ ಪ್ರೇಮಕಥೆ’ ಶೀರ್ಷಿಕೆ ಕೇಳಿದರೆ ಇದು ಲವ್​ ಸ್ಟೋರಿ ಇರುವ ಸಿನಿಮಾ ಅಂತ ಗೊತ್ತಾಗುತ್ತದೆ . ಟೀಸರ್ ಮೂಲಕ ಕೌತುಕ ಹೆಚ್ಚಿಸಿರುವ ಈ ಸಿನಿಮಾದ ಹಾಡು ಕೂಡ ಗಮನ ಸೆಳೆಯುತ್ತಿದೆ. ಇತ್ತೀಚೆಗಷ್ಟೇ ಬಿಡುಗಡೆ ಆಗಿರುವ ಈ ಗೀತೆಗೆ ಅರ್ಜುನ್ ಜನ್ಯ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ಈ ಹಾಡಿಗೆ ಡೈರೆಕ್ಟರ್​ ಅರವಿಂದ್ ಕೌಶಿಕ್ ಅವರೇ ಸಾಹಿತ್ಯ ಬರೆದಿದ್ದಾರೆ. ವಾಸಕಿ ವೈಭವ್ ಹಾಗೂ ಪೃಥ್ವಿ ಭಟ್ ಅವರು ಈ ಹಾಡಿಗೆ ಧ್ವನಿ ನೀಡಿದ್ದಾರೆ.

Huchumanasa Hudugi Lyrical Video |Aravind KP |Divya Uruduga |Arjun Janya |Aravind Kaushik |A2 Music

ಲವ್​ಸ್ಟೋರಿ ಸಿನಿಮಾ ಎಂದಮೇಲೆ ರೊಮ್ಯಾಂಟಿಕ್​ ಆದಂತಹ ಹಾಡು ಇರಲೇಬೇಕು. ‘ಹುಚ್ಚು ಮನಸ ಹುಡುಗಿ..’ ಹಾಡು ಕೂಡ ರೊಮ್ಯಾಂಟಿಕ್ ಆಗಿ ಮೂಡಿಬಂದಿದೆ. ಬಿಗ್ ಬಾಸ್ ಮನೆಯೊಳಗೆ ದಿವ್ಯಾ ಉರುಡುಗ ಮತ್ತು ಅರವಿಂದ್ ಕೆ.ಪಿ. ಅವರನ್ನು ಪ್ರೇಕ್ಷಕರು ಇಷ್ಟಪಟ್ಟಿದ್ದರು. ಈಗ ದೊಡ್ಡ ಪರದೆಯಲ್ಲಿ ಜೋಡಿಯಾಗಿ ಕಾಣಿಸಿಕೊಳ್ಳಲಿರುವ ಇವರಿಬ್ಬರನ್ನು ನೋಡಲು ಫ್ಯಾನ್ಸ್​ ಕಾದಿದ್ದಾರೆ. ಬಿಗ್​ ಬಾಸ್​ನಿಂದ ಈ ತನಕ ತಮ್ಮ ಪ್ರತಿ ಹೆಜ್ಜೆಯಲ್ಲೂ ಬೆಂಬಲ, ಪ್ರೋತ್ಸಾಹ ನೀಡುತ್ತಿರುವ ಅಭಿಮಾನಿಗಳಿಗೆ ಈ ಗೀತೆ ಅರ್ಪಣೆ ಎಂದು ಅವರಿಬ್ಬರು ಹೇಳಿದ್ದಾರೆ. ಹಾಗಾಗಿ ಅಭಿಮಾನಿಗಳಿಂದಲೇ ‘ಹುಚ್ಚು ಮನಸ ಹುಡುಗಿ..’ ಹಾಡನ್ನು ಬಿಡುಗಡೆ ಮಾಡಿಸಲಾಗಿದೆ.

ಇದನ್ನೂ ಓದಿ: ಶುಭ ಸುದ್ದಿ ಕೊಡಲಿರುವ ದಿವ್ಯಾ ಉರುಡುಗ: ಮದುವೆ ಅಥವಾ ಸಿನಿಮಾ?

ಬಕ್ಸಸ್ ಮೀಡಿಯಾ, ಆರ್.ಎ.ಸಿ ವಿಷ್ಯೂಲ್ಸ್, ಲೈಟ್ ಹೌಸ್ ಮೀಡಿಯಾ ಮೂಲಕ ‘ಅರ್ದಂಬರ್ಧ ಪ್ರೇಮಕಥೆ’ ಸಿನಿಮಾ ನಿರ್ಮಾಣ ಆಗಿದೆ. ಸೂರ್ಯ ಅವರು ಛಾಯಾಗ್ರಹಣ ಮಾಡಿದ್ದಾರೆ. ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡಿದ್ದಾರೆ. ಅನುಭವಿ ನಿರ್ದೇಶಕ ಅರವಿಂದ್ ಕೌಶಿಕ್ ಅವರು ಬಿಗ್​ ಬಾಸ್​ ಜೋಡಿಗಾಗಿ ಮತ್ತು ಅವರ ಅಭಿಮಾನಿಗಳಿಗಾಗಿ ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow Us