Dr. Rajkumar: ವಿಶೇಷ ಸಿಹಿ ತಿನಿಸಿಗೆ ರಾಜ್​ ಲಡ್ಡು ಎಂದು ಅಣ್ಣಾವ್ರ ಹೆಸರು ಇಟ್ಟಿದ್ದಕ್ಕೆ ಇಲ್ಲಿದೆ ಇಂಟರೆಸ್ಟಿಂಗ್​ ಕಾರಣ

Dr Rajkumar Birth Anniversary 2006ರ ಜೂನ್ ತಿಂಗಳಲ್ಲಿ ರಾಜ್​ಕುಮಾರ್​ ಅವರ ಹೆಸರಿನಲ್ಲಿ ಒಂದು ಸ್ವೀಟ್​ ತಯಾರಿಸಬೇಕು ಎಂಬ ಆಲೋಚನೆ ಸದಾಶಿವ ರಾವ್​ ಅವರಿಗೆ ಬಂತು. ಆಗ ತಯಾರಾಗಿದ್ದೇ ರಾಜ್​ ಲಡ್ಡು.

Dr. Rajkumar: ವಿಶೇಷ ಸಿಹಿ ತಿನಿಸಿಗೆ ರಾಜ್​ ಲಡ್ಡು ಎಂದು ಅಣ್ಣಾವ್ರ ಹೆಸರು ಇಟ್ಟಿದ್ದಕ್ಕೆ ಇಲ್ಲಿದೆ ಇಂಟರೆಸ್ಟಿಂಗ್​ ಕಾರಣ
ಡಾ. ರಾಜ್​ಕುಮಾರ್​

Updated on: Apr 24, 2021 | 12:47 PM

ಡಾ. ರಾಜ್​ಕುಮಾರ್​ ಅವರ 92ನೇ ಜನ್ಮದಿನದ ಪ್ರಯುಕ್ತ ಅಭಿಮಾನಿಗಳು ಅವರನ್ನು ನೆನಪು ಮಾಡಿಕೊಳ್ಳುತ್ತಿದ್ದಾರೆ. ಮೇರುನಟನ ಬಗೆಗಿನ ಹಲವು ಸಂಗತಿಗಳನ್ನು ಮೆಲುಕು ಹಾಕಲಾಗುತ್ತಿದೆ. ‘ನಟ ಸಾರ್ವಭೌಮ’ನ ಹುಟ್ಟುಹಬ್ಬಕ್ಕೆ ಸೋಶಿಯಲ್​ ಮೀಡಿಯಾ ಮೂಲಕ ಎಲ್ಲರೂ ಶುಭಕೋರುತ್ತಿದ್ದಾರೆ. ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಗಣೇಶ ಸ್ವೀಟ್ಸ್​ ಅಂಗಡಿಯ ಮಾಲೀಕ ಸದಾಶಿವ್​ ರಾವ್​ ಅವರು ಒಂದು ವಿಶೇಷ ಸಂಗತಿಯನ್ನು ಟಿವಿ9 ಜೊತೆಗೆ ಹಂಚಿಕೊಂಡಿದ್ದಾರೆ. ಇವರ ಅಂಗಡಿಯಲ್ಲಿ ಸಿಗುವ ‘ರಾಜ್​ ಲಡ್ಡು’ ತುಂಬ ಫೇಮಸ್​. ಅದಕ್ಕೆ ಆ ಹೆಸರು ಬರಲು ಕಾರಣ ಏನು ಎಂಬುದನ್ನು ಅವರು ವಿವರಿಸಿದ್ದಾರೆ.

ನಾನು ರಾಜ್​ಕುಮಾರ್​ ಅವರ ಅಪ್ಪಟ ಅಭಿಮಾನಿ. ಎಲ್ಲ ಸಿನಿಮಾವನ್ನು 5-10 ಸಲ ನೋಡಿದ್ದೇನೆ. ಶಂಕರ್​ ಗುರು ಚಿತ್ರವನ್ನು 51 ಬಾರಿ ನೋಡಿದ್ದೆ. ಆಗಿನ ಕಾಲದಲ್ಲಿ ಸಿನಿಮಾ ನೋಡಲು ಹಣ ಇಲ್ಲದವರನ್ನು ನಾನೇ ಚಿತ್ರಮಂದಿರಕ್ಕೆ ಕರೆದುಕೊಂಡು ಹೋಗಿ ಸಿನಿಮಾ ತೋರಿಸುತ್ತಿದ್ದೆ. 1951ರಲ್ಲಿ ನಮ್ಮ ತಂದೆ ಕಾಟಪ್​ಪೇಟೆ ಚರ್ಚ್​ ಬಳಿ ಅಂಗಡಿ ಮಾಡಿದ್ದರು. ಆಗಿನ ಕಾಲದಲ್ಲೇ ಸಿನಿಮಾ ಕಲಾವಿದರು ಬಂದು ನಮ್ಮ ಅಂಗಡಿಯಲ್ಲಿ ಸ್ವೀಟ್​ ತೆಗೆದುಕೊಂಡು ಹೋಗುತ್ತಿದ್ದರು.

ಎರಡು ನಕ್ಷತ್ರ ಸಿನಿಮಾ ಬಿಡುಗಡೆಯಾಗಿ 15 ದಿನ ಆದ ಬಳಿಕ ಅಣ್ಣಾವ್ರ ಮನೆಗೆ ಸ್ವೀಟ್​ ತೆಗೆದುಕೊಂಡು ಹೋದೆವು. ಮೊದಲಿಗೆ ವಾಚ್​ಮ್ಯಾನ್​ ನಮ್ಮನ್ನು ಒಳಗೆ ಬಿಡಲಿಲ್ಲ. ನಾವು ಜೋರಾಗಿ ಕನ್ನಡದಲ್ಲಿ ಮಾತನಾಡಿದ್ದನ್ನು ಕೇಳಿ ಅಣ್ಣಾವ್ರು ಒಳಗೆ ಕರೆಸಿಕೊಂಡರು. ನಮಗೆ ಉಪ್ಪಿಟ್ಟು ಕಾಪಿ ಕೊಟ್ಟು ಉಪಚರಿಸಿದರು. ಸ್ವೀಟ್​ ತಿಂದು ಖುಷಿಪಟ್ಟರು.

ಮೊದಲೆಲ್ಲ ತುಪ್ಪದಲ್ಲಿ ಮಾಡಿದ ಲಾಡನ್ನು ಅವರಿಗೆ ತಿನ್ನಿಸುತ್ತಿದ್ದೆ. ನಮ್ಮ ಅಂಗಡಿಯಲ್ಲಿ ಅವರಿಗೆ ಮೈಸೂರು ಪಾಕ್​ ತುಂಬ ಇಷ್ಟ ಆಗುತ್ತಿತ್ತು. ಅವರ ಮನೆಗೆ ಸ್ವೀಟ್​ ತಲುಪಿಸುತ್ತಿದ್ದೆವು. 2006ರ ಜೂನ್ ತಿಂಗಳಲ್ಲಿ ರಾಜ್​ಕುಮಾರ್​ ಅವರ ಹೆಸರಿನಲ್ಲಿ ಯಾಕೆ ಒಂದು ಸ್ವೀಟ್​ ಮಾಡಬಾರದು ಎಂಬ ಆಲೋಚನೆ ಬಂತು. ಇದನ್ನು ವಿಭಿನ್ನವಾಗಿ ಮಾಡಬೇಕೆಂದು ಗೋಡುಂಬಿ ಬಾದಾಮಿ, ದ್ರಾಕ್ಷಿ, ಪಿಸ್ತಾ ಹಾಕಿದೆವು. ಬೇರೆ ಯಾವುದೇ ಬಣ್ಣ ಬೇಡ ಎಂದು ಬಿಳಿ ಬಣ್ಣದಲ್ಲಿ ತಯಾರಿಸಿದೆವು. ಯಾಕೆಂದರೆ ರಾಜ್​ಕುಮಾರ್​ ಅವರ ಬಟ್ಟೆ ಬಿಳಿ. ಮನಸ್ಸು ಕೂಡ ಶುಭ್ರವಾಗಿತ್ತು. ಹಾಗಾಗಿ ಈ ಲಾಡು ಕೂಡ ಬಿಳಿ.

(ಗಣೇಶ ಸ್ವೀಟ್ಸ್ ಅಂಗಡಿಯ ಮಾಲೀಕ ಸದಾಶಿವ್ ರಾವ್)

ರಾಜ್​ ಲಾಡನ್ನು ಎಲ್ಲರಿಗೂ ಹಂಚಿದೆವು. ರುಚಿ ನೋಡಿದ ಎಲ್ಲರೂ ಚೆನ್ನಾಗಿದೆ ಎಂದು ಹೇಳಿದರು. ಬೇರೆ ರಾಜ್ಯ, ದೇಶದಿಂದಲೂ ಬಂದು ರಾಜ್​ ಲಾಡು ತೆಗೆದುಕೊಂಡು ಹೋಗುತ್ತಿದ್ದರು. ಅಣ್ಣಾವ್ರ ಹುಟ್ಟುಹಬ್ಬದ ದಿನ ಮತ್ತು ಪುಣ್ಯತಿಥಿಯ ದಿನ ಸಾವಿರಾರು ಲಾಡುಗಳನ್ನು ನಾವು ಹಂಚುತ್ತಿದ್ದೆವು.

ಇದನ್ನೂ ಓದಿ: Dr. Rajkumar Birth Anniversary: ರಾಜ್​ಕುಮಾರ್​ ಜತೆ ಫೋಟೋ ತೆಗೆಸಿಕೊಳ್ಳಲು ಲವರ್​​ ಕಾಯಿಸಿದ್ದೆ

Dr Rajkumar Birth Anniversary: ರಾಜ್​ಕುಮಾರ್ ಊಟ​ ಮಾಡಿ ಎದ್ದರೆ ಒಂದಗಳು ಕೂಡ ಬಾಳೆಯಲ್ಲಿ ಉಳಿಯುತ್ತಿರಲಿಲ್ಲ

(Dr Rajkumar 92nd Birth Anniversary: interesting facts behind Raj laddu)

Published On - 12:39 pm, Sat, 24 April 21

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us