Dr Rajkumar Birth Anniversary: ರಾಜ್​ಕುಮಾರ್​ ಜನ್ಮದಿನಕ್ಕೆ ಪುನೀತ್​ ನೀಡಿದ ಸುಮಧುರ ಕಾಣಿಕೆ

Puneeth Rajkumar: ಬದಲಾದ ಈ ಪರಿಸ್ಥಿತಿಯಲ್ಲಿ ಸೋಶಿಯಲ್​ ಮೀಡಿಯಾ ಮೂಲಕವೇ ‘ನಟ ಸಾರ್ವಭೌಮ’ನ ಹುಟ್ಟುಹಬ್ಬದ ಸಂಭ್ರಮ ಕಳೆಕಟ್ಟಿದೆ. ಅಪಾರ ಸಂಖ್ಯೆಯ ಅಭಿಮಾನಿಗಳು ಮೇರುನಟನ ಜನ್ಮದಿನಕ್ಕೆ ಶುಭಕೋರುತ್ತಿದ್ದಾರೆ.

Dr Rajkumar Birth Anniversary: ರಾಜ್​ಕುಮಾರ್​ ಜನ್ಮದಿನಕ್ಕೆ ಪುನೀತ್​ ನೀಡಿದ ಸುಮಧುರ ಕಾಣಿಕೆ
ಡಾ. ರಾಜ್​ಕುಮಾರ್​ - ಪುನೀತ್​ ರಾಜ್​ಕುಮಾರ್​

Updated on: Apr 24, 2021 | 10:05 AM

ಕನ್ನಡ ಸಿನಿಪ್ರಿಯರ ಮನಸ್ಸಿನಲ್ಲಿ ಶಾಶ್ವತ ಸ್ಥಾನ ಪಡೆದುಕೊಂಡಿರುವ ಡಾ. ರಾಜ್​ಕುಮಾರ್​ ಅವರ 92ನೇ ಜನ್ಮದಿನದ ಅಂಗವಾಗಿ ಇಂದು (ಏ.24) ಎಲ್ಲರಿಂದ ಶುಭಾಶಯಗಳು ಹರಿದುಬರುತ್ತಿವೆ. ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನು ಸ್ಮರಿಸಿಕೊಳ್ಳುತ್ತಿದ್ದಾರೆ. ನಟ ಪುನೀತ್​ ರಾಜ್​ಕುಮಾರ್​ ಅವರು ಅಪ್ಪಾಜಿಗೆ ವಿಶೇಷ ರೀತಿಯಲ್ಲಿ ಹುಟ್ಟುಹಬ್ಬದ ಶುಭಕೋರಿದ್ದಾರೆ. ಒಂದು ಹಾಡಿನ ಮೂಲಕ ಮೇರುನಟನ ಜನ್ಮದಿನದ ಸಂಭ್ರಮವನ್ನು ಅವರು ಹೆಚ್ಚಿಸಿದ್ದಾರೆ.

1976ರಲ್ಲಿ ತೆರಕಂಡ ‘ಬಡವರು ಬಂಧು’ ಸಿನಿಮಾದ ‘ನಿನ್ನ ಕಂಗಳ ಬಿಸಿಯ ಹನಿಗಳು ನೂರು ಕಥೆಯ ಹೇಳಿವೆ..’ ಹಾಡು ಇಂದಿಗೂ ಎವರ್​ಗ್ರೀನ್​. ಆ ಗೀತೆಯನ್ನು ಪುನೀತ್​ ಮತ್ತೊಮ್ಮೆ ಹಾಡಿದ್ದಾರೆ. ‘ತಂದೆಯಾಗಿ ತಾಯಿಯಾಗಿ ಮಮತೆಯಿಂದ ಬೆಳೆಸಿದೆ. ಬಿಸಿಲು-ಮಳೆಗೆ ನರಳದಂತೆ ನಿನ್ನ ನೆರಳಲಿ ಸಲಹಿದೆ. ಆ ಪ್ರೀತಿಯ ಮನ ಮರೆಯುದೇ..’ ಎಂಬ ಸಾಲುಗಳನ್ನು ತುಂಬ ಭಾವುಕವಾಗಿ ಪುನೀತ್​ ಹಾಡಿದ್ದಾರೆ. ತಂದೆಯನ್ನು ನೆನಪಿಸಿಕೊಂಡು ಅವರು ಭಾವಪರವಶರಾಗಿ ಧ್ವನಿ ನೀಡಿದ್ದಾರೆ.

ಈ ವಿಡಿಯೋವನ್ನು ಪುನೀತ್​ ರಾಜ್​ಕುಮಾರ್​ ಅವರು ತಮ್ಮ ಸೋಶಿಯಲ್​ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ಅದು ಎಲ್ಲರಿಗೂ ಸಖತ್​ ಇಷ್ಟ ಆಗುತ್ತಿದೆ. ಅಭಿಮಾನಿಗಳ ಇದನ್ನು ಶೇರ್​ ಮಾಡಿಕೊಳ್ಳುತ್ತಿದ್ದಾರೆ. ಪ್ರತಿವರ್ಷವೂ ಏ.24 ಬಂದರೆ ಅಣ್ಣಾವ್ರ ಅಭಿಮಾನಿಗಳ ಸಂಭ್ರಮ ಜೋರಾಗಿರುತ್ತಿತ್ತು. ಆದರೆ ಈ ಬಾರಿ ಲಾಕ್​ಡೌನ್​ ನಿಯಮಗಳ ಕಾರಣದಿಂದ ಮೇರುನಟನ ಜನ್ಮದಿನವನ್ನು ಸಿಂಪಲ್​ ಆಗಿ ಆಚರಿಸಲಾಗುತ್ತಿದೆ.

ರಾಜ್ಯದ ಮೂಲೆಮೂಲೆಗಳಿಂದ ಬರುತ್ತಿದ್ದ ಜನರು ಕಂಠೀರವ ಸ್ಟುಡಿಯೋ ಆವರಣದಲ್ಲಿ ಇರುವ ರಾಜ್​ ಸಮಾಧಿ ಸ್ಥಳಕ್ಕೆ ಭೇಟಿ ನೀಡಿ ನಮನ ಸಲ್ಲಿಸುತ್ತಿದ್ದರು. ರಕ್ತದಾನ, ನೇತ್ರದಾನ ನೋಂದಣಿ, ಉಚಿತ ಆರೋಗ್ಯ ತಪಾಸಣೆ, ಅನ್ನ ಸಂತರ್ಪಣೆ ಮುಂತಾದ ಸಮಾಜಮುಖಿ ಕಾರ್ಯಗಳು ನಡೆಯುತ್ತಿದ್ದವು. ಆದರೆ ಆ ಎಲ್ಲ ಕಾರ್ಯಗಳಿಗೆ ಕೊವಿಡ್​-19 ಬ್ರೇಕ್​ ಹಾಕಿದೆ. ಅದರಲ್ಲೂ ಶನಿವಾರ ಮತ್ತು ಭಾನುವಾರ ಲಾಕ್​ಡೌನ್​ ಜಾರಿಯಲ್ಲಿ ಇರುವುದರಿಂದ ಯಾರೂ ಕೂಡ ರಾಜ್​ ಸಮಾಧಿ ಸ್ಥಳಕ್ಕೆ ತೆರಳಲು ಸಾಧ್ಯವಾಗುತ್ತಿಲ್ಲ.

ಬದಲಾದ ಈ ಪರಿಸ್ಥಿತಿಯಲ್ಲಿ ಸೋಶಿಯಲ್​ ಮೀಡಿಯಾ ಮೂಲಕವೇ ‘ನಟ ಸಾರ್ವಭೌಮ’ನ ಹುಟ್ಟುಹಬ್ಬದ ಸಂಭ್ರಮ ಕಳೆಕಟ್ಟಿದೆ. ಅಪಾರ ಸಂಖ್ಯೆಯ ಅಭಿಮಾನಿಗಳು ಮೇರುನಟನ ಜನ್ಮದಿನಕ್ಕೆ ಶುಭಕೋರುತ್ತಿದ್ದಾರೆ. ರಾಘವೇಂದ್ರ ರಾಜ್​ಕುಮಾರ್​, ಪವನ್​ ಒಡಯರ್​, ರಮೇಶ್​ ಅರವಿಂದ್​, ಸಿಂಪಲ್​ ಸುನಿ, ಜಗ್ಗೇಶ್​, ವಸಿಷ್ಠ ಸಿಂಹ ಸೇರಿದಂತೆ ಕನ್ನಡ ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ಅಣ್ಣಾವ್ರನ್ನು ಸ್ಮರಿಸಿಕೊಂಡಿದ್ದಾರೆ. ಸಿಎಂ ಬಿಎಸ್​ ಯಡಿಯೂರಪ್ಪ ಕೂಡ ಟ್ವಿಟರ್​ ಮೂಲಕ ಡಾ. ರಾಜ್​ ಜನ್ಮದಿನಕ್ಕೆ ಶುಭಕೋರಿದ್ದಾರೆ.

ಇದನ್ನೂ ಓದಿ: Dr. Rajkumar Birth Anniversary: ರಾಜ್​ಕುಮಾರ್​ ಜತೆ ಫೋಟೋ ತೆಗೆಸಿಕೊಳ್ಳಲು ಲವರ್​​ ಕಾಯಿಸಿದ್ದೆ

(Dr Rajkumar 92nd Birth Anniversary: Puneeth Rajkumar BS Yediyurappa and others pay tribute to Legendary Kannada Superstar)

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us