‘ಸಲಗ’ ಗೆಲುವಿನ ವೇದಿಕೆಯಲ್ಲಿ ದುನಿಯಾ ವಿಜಯ್​ ಅಳು; ‘ಕರಿಚಿರತೆ’ ಕಣ್ಣೀರಿಗೆ ಕಾರಣ ಏನು?

Salaga movie success meet: ‘ದೇವರಾಣೆ, ಅಂದು ನನ್ನ ಜೇಬಲ್ಲಿ ಇದ್ದಿದ್ದು 40 ರೂಪಾಯಿ ಮಾತ್ರ. ಆ 40 ರೂಪಾಯಿಯನ್ನು ಫೋಟೋ ತೆಗೆದು ಇಟ್ಟಿದ್ದೇನೆ’ ಎನ್ನುತ್ತ ದುನಿಯಾ ವಿಜಯ್​ ಕಣ್ಣೀರು ಹಾಕಿದರು.

‘ಸಲಗ’ ಗೆಲುವಿನ ವೇದಿಕೆಯಲ್ಲಿ ದುನಿಯಾ ವಿಜಯ್​ ಅಳು; ‘ಕರಿಚಿರತೆ’ ಕಣ್ಣೀರಿಗೆ ಕಾರಣ ಏನು?
ದುನಿಯಾ ವಿಜಯ್
Edited By:

Updated on: Feb 05, 2022 | 9:52 AM

ನಟ ದುನಿಯಾ ವಿಜಯ್​ (Duniya Vijay) ಅವರು ನಿರ್ದೇಶಕನಾಗಿಯೂ ಗೆದ್ದಿದ್ದಾರೆ. ಮೊದಲ ಬಾರಿಗೆ ಅವರು ನಿರ್ದೇಶನ ಮಾಡಿದ ‘ಸಲಗ’ ಸಿನಿಮಾ (Salaga Movie) ಸೂಪರ್​ ಹಿಟ್​ ಆಯಿತು. ಎರಡನೇ ಲಾಕ್​ಡೌನ್​ ಕಳೆದ ಬಳಿಕ ಬಿಡುಗಡೆ ಆಗಿದ್ದ ಆ ಚಿತ್ರಕ್ಕೆ ಸಿಕ್ಕ ಗೆಲುವು ದೊಡ್ಡದು. ಆದರೆ ಆ ಯಶಸ್ಸನ್ನು ಎಲ್ಲರ ಜೊತೆ ಸೇರಿ ಸಂಭ್ರಮಿಸಲು ಕೊರೊನಾ ಮೂರನೇ ಅಲೆ ಅಡ್ಡ ಬಂದಿತ್ತು. ಈಗ ಕೊರೊನಾ ಹಾವಳಿ ಕಡಿಮೆ ಆಗಿರುವುದರಿಂದ ಅದ್ದೂರಿ ಕಾರ್ಯಕ್ರಮ ಮಾಡಿ ಸಕ್ಸಸ್​ ಮೀಟ್​ ಮಾಡಲಾಗಿದೆ. ಈ ಕಾರ್ಯಕ್ರಮಕ್ಕೆ ಕನ್ನಡ ಚಿತ್ರರಂಗದ (Sandalwood) ಅನೇಕರು ಸಾಕ್ಷಿಯಾದರು. ಶಿವರಾಜ್​ಕುಮಾರ್​, ಗೋಲ್ಡನ್​ ಸ್ಟಾರ್​ ಗಣೇಶ್​, ನೆನಪಿರಲಿ ಪ್ರೇಮ್​, ಶ್ರೀನಗರ ಕಿಟ್ಟಿ ಸೇರಿದಂತೆ ಅನೇಕ ಸ್ಟಾರ್​ ನಟರು ಭಾಗವಹಿಸಿದ್ದರು. ಈ ವೇದಿಕೆಯಲ್ಲಿ ಮಾತನಾಡುವಾಗ ದುನಿಯಾ ವಿಜಯ್​ ಅವರು ಭಾವುಕರಾದರು. ಅವರು ಕಣ್ಣೀರು ಹಾಕಿದ್ದು ನೋಡಿ ಎಲ್ಲರಿಗೂ ಅಚ್ಚರಿ ಆಯಿತು. ‘ಸಲಗ’ ಸಿನಿಮಾದ ಗೆಲುವಿನ ಹಿಂದೆ ಒಂದು ಕಷ್ಟದ ಜರ್ನಿ ಇದೆ. ಹಲವು ಏಳು-ಬೀಳುಗಳನ್ನು ದಾಟಿಕೊಂಡು ದುನಿಯಾ ವಿಜಯ್​ ಅವರು ಈ ಹಂತಕ್ಕೆ ಬಂದಿದ್ದಾರೆ. ಅದನ್ನೆಲ್ಲ ನೆನಪು ಮಾಡಿಕೊಂಡು ಅವರು ಭಾವುಕರಾದರು.

‘ಸಲಗ ಗೆದ್ದಿದೆ. ಈ ಕಾರ್ಯಕ್ರಮಕ್ಕೆ ನನ್ನ ಇಡೀ ತಂಡ ಬಂದಿದೆ. ನನ್ನ ಕುಟುಂಬದವರು ಬಂದಿದ್ದಾರೆ. ಚಿತ್ರರಂಗದ ಸ್ನೇಹಿತರು ಬಂದಿದ್ದಾರೆ. ಇದು ನನಗೆ ತುಂಬ ಎಮೋಷನಲ್​ ವಿಷಯ. ನನಗೆ, ಕೀರ್ತಿಗೆ, ಸಾಮ್ರಾಟ್​ಗೆ ಮತ್ತು ಮೊಹಮ್ಮದ್​ಗೆ ಮಾತ್ರ ಗೊತ್ತಿರುವುದು ಇದು. ಸಲಗ ಶುರು ಆಗುವುದಕ್ಕೂ ಮುನ್ನ ನಿರ್ಮಾಪಕ ಶ್ರೀಕಾಂತ್​ ಅವರು ಎಸ್​ಎಲ್​ವಿ ಮುಂದೆ ಇರುತ್ತಾರೆ ಅಂತ ಗೊತ್ತಿತ್ತು. ಅಲ್ಲಿಗೆ ನಾನು ಹೋದೆ. ನನ್ನ ಸಿನಿಮಾ ನಿರ್ಮಾಣ ಮಾಡಿ ಅಂತ ಕೇಳಿಕೊಳ್ಳೋಕೆ ಅಲ್ಲಿಗೆ ಹೋದೆ. ದೇವರಾಣೆ, ಅಂದು ನನ್ನ ಜೇಬಲ್ಲಿ ಇದ್ದಿದ್ದು 40 ರೂಪಾಯಿ ಮಾತ್ರ. ಆ 40 ರೂಪಾಯಿಯನ್ನು ಫೋಟೋ ತೆಗೆದು ಇಟ್ಟಿದ್ದೇನೆ. ಮುಂದೆ ಈ ಜರ್ನಿಯಲ್ಲಿ ಅದರ ಬಗ್ಗೆ ಹೇಳುತ್ತೇನೆ’ ಎಂದು ದುನಿಯಾ ವಿಜಯ್​ ಕಣ್ಣೀರು ಹಾಕಿದರು.

‘ನಾನು ನಡೆಯೋಕೆ ಸಾಧ್ಯವಿಲ್ಲದ ಪರಿಸ್ಥಿತಿಯಲ್ಲಿ ನನ್ನನ್ನು ಗೆಲ್ಲುವಂತೆ ಮಾಡಿದ್ದು ಕೆ.ಪಿ. ಶ್ರೀಕಾಂತ್​ ಅವರು. ನನ್ನ ಬದುಕಿನಲ್ಲಿ ಒಂದಷ್ಟು ವಿಷಯಗಳು ನಡೆದವು. ನಮ್ಮ ಅಮ್ಮ ತೀರಿ ಹೋಗೋದಕ್ಕಿಂತ ಮುಂಚೆ ಕೀರ್ತಿಗೆ ಒಂದು ಮಾತು ಹೇಳಿದ್ದರು. ಮನೆಯಲ್ಲಿ ಒಂದು ಶಿವಲಿಂಗ ಇದೆ, ಅದಕ್ಕೆ ಪೂಜೆ ಮಾಡು. ಮತ್ತೆ ತುಂಬ ಒಳ್ಳೆಯದಾಗುತ್ತೆ ಅಂತ ಹೇಳಿದ್ದರು. ಶಿವಣ್ಣನ ಮೂಲಕವೇ ನನಗೆ ಒಳ್ಳೆಯದು ಆಗಿರಬಹುದು. ನಾನು ಎರಡು ವರ್ಷ ಎಲ್ಲಿಯೂ ಮಾತನಾಡಿರಲಿಲ್ಲ. ಈಗ ಸಿಕ್ಕಿರುವ ಯಶಸ್ಸನ್ನು ಅಪ್ಪ-ಅಮ್ಮ, ಅಪ್ಪು ಮತ್ತು ಅಭಿಮಾನಿಗಳಿಗೆ ಸಲ್ಲಿಸುತ್ತೇನೆ’ ಎಂದು ದುನಿಯಾ ವಿಜಯ್​ ಭಾವುಕವಾಗಿ ಮಾತನಾಡಿದರು.

ಇದನ್ನೂ ಓದಿ:

‘ಅಪ್ಪ, ಅಮ್ಮ, ಅಪ್ಪು ಅವರನ್ನು ಕಳೆದುಕೊಂಡ ನೋವು ಕಾಡುತ್ತಿದೆ’ ಎಂದು ಬರ್ತ್​ಡೇ ಆಚರಣೆಗೆ ದುನಿಯಾ ವಿಜಯ್​ ಬ್ರೇಕ್​

ಟಾಲಿವುಡ್​ಗೆ ಎಂಟ್ರಿ ನೀಡಿದ ದುನಿಯಾ ವಿಜಯ್​; ನಂದಮೂರಿ ಬಾಲಕೃಷ್ಣ ಚಿತ್ರದಲ್ಲಿ ಬಂಪರ್​ ಚಾನ್ಸ್​