‘ರೇಣುಕಾ ಸ್ವಾಮಿ ಕೊಲೆ ಕೇಸ್​ನಲ್ಲಿ ದರ್ಶನ್​ ಬಂಧನದಿಂದ ಚಿತ್ರರಂಗ ಮಂಕಾಗಿದೆ’: ಶ್ರುತಿ

‘ಫೇಕ್​ ಅಕೌಂಟ್​ಗಳಿಂದ ಬರುವ ಕೆಟ್ಟ ಕಮೆಂಟ್​ಗಳು ನಮಗೆ ತುಂಬ ನೋವು ನೀಡುತ್ತವೆ. ಅದನ್ನು ನಾನು ಕೂಡ ಅನುಭವಿಸಿದ್ದೇನೆ’ ಎಂದು ಹಿರಿಯ ನಟಿ ಶ್ರುತಿ ಹೇಳಿದ್ದಾರೆ. ರೇಣುಕಾ ಸ್ವಾಮಿಯ ಹತ್ಯೆ ನಡೆಯುವುದರ ಹಿಂದೆ ಇರುವುದು ಕೂಡ ಒಂದು ಕೆಟ್ಟ ಕಮೆಂಟ್​. ಆತನ ಕೊಲೆಯ ಕೇಸ್​​ನಲ್ಲಿ ದರ್ಶನ್​ ಆರೋಪಿಯಾಗಿ ಜೈಲುಪಾಲಾಗಿದ್ದಾರೆ. ಈ ಕುರಿತು ನಟಿ ಶ್ರುತಿ ಅವರು ತಮ್ಮ ಅನಿಸಿಕೆ ತಿಳಿಸಿದ್ದಾರೆ.

‘ರೇಣುಕಾ ಸ್ವಾಮಿ ಕೊಲೆ ಕೇಸ್​ನಲ್ಲಿ ದರ್ಶನ್​ ಬಂಧನದಿಂದ ಚಿತ್ರರಂಗ ಮಂಕಾಗಿದೆ’: ಶ್ರುತಿ
ದರ್ಶನ್​, ಶ್ರುತಿ

Updated on: Jun 27, 2024 | 10:57 PM

ನಟ ದರ್ಶನ್​ (Darshan) ಅರೆಸ್ಟ್​ ಆದ ಬಳಿಕ ಚಿತ್ರರಂಗದಲ್ಲಿ ಕೆಲವು ಬದಲಾವಣೆಗಳು ಆಗುತ್ತಿವೆ. ಇಂಥ ಪ್ರಕರಣಗಳು ನಡೆದಾಗ ಚಿತ್ರರಂಗದ ಮೇಲೆ ಕಪ್ಪು ಚುಕ್ಕಿ ಆಗುತ್ತದೆ. ರೇಣುಕಾ ಸ್ವಾಮಿ (Renuka Swamy) ಎಂಬ ವ್ಯಕ್ತಿಯು ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳಿಸಿದ ಎಂಬ ಕಾರಣಕ್ಕೆ ಆತನನ್ನು ಹತ್ಯೆ ಮಾಡಿದ ಆರೋಪ ದರ್ಶನ್​ ಮೇಲಿದೆ. ನ್ಯಾಯಾಂಗ ಬಂಧನದಲ್ಲಿ ಇರುವ ದರ್ಶನ್​ ಈಗ ಪರಪ್ಪನ ಅಗ್ರಹಾರದಲ್ಲಿ ದಿನ ಕಳೆಯುತ್ತಿದ್ದಾರೆ. ಈ ಘಟನೆ ಕುರಿತಂತೆ ಚಿತ್ರರಂಗದ ಹಲವರು ಪ್ರತಿಕ್ರಿಯೆ ನೀಡುತ್ತಿದ್ದಾರೆ. ದರ್ಶನ್​ ಜೊತೆ ‘ಕಾಟೇರ’ ಸಿನಿಮಾದಲ್ಲಿ ನಟಿಸಿದ ಹಿರಿಯ ನಟಿ ಶ್ರುತಿ (Shruthi) ಕೂಡ ಈ ಬಗ್ಗೆ ಮಾತನಾಡಿದ್ದಾರೆ.

‘ಚಿತ್ರರಂಗ ಎಂದರೆ ಒಂದು ಕುಟುಂಬ ಇದ್ದಂತೆ. ಯಾವ ಕಲಾವಿದರನ್ನೂ ನಾವು ಪ್ರತ್ಯೇಕವಾಗಿ ನೋಡಿಲ್ಲ. ನಮ್ಮ ಕುಟುಂಬದಲ್ಲಿ ಯಾರಾದರೂ ಒಬ್ಬರಿಗೆ ತೊಂದರೆ ಆದರೆ ಆ ಛಾಯೆ ನಮ್ಮ ಚಿತ್ರರಂಗದ ಮೇಲೆ ಇದ್ದೇ ಇರುತ್ತದೆ. ಎಲ್ಲರೂ ಇದೇ ಮಾತಾಡುತ್ತಿದ್ದಾರೆ. ಎಲ್ಲ ನಿರ್ಮಾಪಕರು ಮಂಕಾಗಿದ್ದಾರೆ. ಮಾನಸಿಕವಾಗಿ ಎಲ್ಲರಿಗೂ ಪರಿಣಾಮ ಬೀರಿದೆ’ ಎಂದು ಶ್ರುತಿ ಹೇಳಿದ್ದಾರೆ.

ರೇಣುಕಾ ಸ್ವಾಮಿಯ ಕೊಲೆ ನಡೆಯಲು ಮುಖ್ಯ ಕಾರಣ ಆಗಿದ್ದೇ ಒಂದು ಅಶ್ಲೀಲ ಸಂದೇಶ. ಸೋಶಿಯಲ್​ ಮೀಡಿಯಾದಲ್ಲಿ ಫೇಕ್​ ಖಾತೆಗಳ ಮೂಲಕ ಕೆಟ್ಟ ಕಮೆಂಟ್​ ಮಾಡುವ ವ್ಯಕ್ತಿಗಳ ಬಗ್ಗೆ ಶ್ರುತಿ ಮಾತನಾಡಿದ್ದಾರೆ. ‘ತಿಳಿದವರು ಕಮೆಂಟ್​ ಮಾಡಿದರೆ ಅದನ್ನು ನಾವು ತಿದ್ದಿಕೊಂಡು ಮುಂದಕ್ಕೆ ಹೋಗಬಹುದು. ಆದರೆ ಫೇಕ್​ ಅಕೌಂಟ್​ಗಳಿಂದ ಹೆಣ್ಣು ಮಕ್ಕಳ ಬಗ್ಗೆ ಅಶ್ಲೀಲವಾದ ಕಮೆಂಟ್​ಗಳು ಬರುತ್ತಿವೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ. ಅದನ್ನು ಸಹಿಸಿಕೊಂಡು ಯಾವ ಹೆಣ್ಣು ಮಗಳೂ ಇರಲ್ಲ’ ಎಂದಿದ್ದಾರೆ ಶ್ರುತಿ.

ಇದನ್ನೂ ಓದಿ: ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ವಿಕಿಪೀಡಿಯಾ ಪೇಜ್; ದರ್ಶನ್​ ಬಗ್ಗೆಯೂ ಮಾಹಿತಿ

‘ಈ ಬಗ್ಗೆ ನಾನು ಎಲ್ಲರ ಜೊತೆ ಸಹಜವಾಗಿ ಮಾತನಾಡುವಾಗ ಒಂದು ವಿಷಯ ಕೇಳುತ್ತೇನೆ. ಪ್ರತಿಯೊಂದು ಇನ್​ಸ್ಟಾಗ್ರಾಮ್​ ಅಥವಾ ಫೇಸ್​ಬುಕ್​ ಖಾತೆಗಳನ್ನು ಕ್ರಿಯೇಟ್​ ಮಾಡುವಾಗ ಯಾಕೆ ಕೆವೈಸಿ ಮಾಡಬಾರದು? ಅಕೌಂಟ್​ ಹೋಲ್ಡರ್​ಗಳಿಗೆ ವಾಕ್​ ಸ್ವಾತಂತ್ರ್ಯ ಇರುತ್ತದೆ. ಅದು ಅವರ ಹಕ್ಕು. ಅದನ್ನು ನಾವು ಕಿತ್ತುಕೊಳ್ಳೋಕೆ ಆಗಲ್ಲ. ಆದರೆ ಒಬ್ಬರ ಜೀವ ಹೋಗುವಷ್ಟರಮಟ್ಟಿಗೆ ಕೆಟ್ಟ ಕಮೆಂಟ್​ಗಳನ್ನು ಮಾಡಿದರೆ ಅದರ ಹಿಂದೆ ಯಾರು ಇದ್ದಾರೆ ಎಂಬುದನ್ನು ಕಂಡುಹಿಡಿಯಲು ಸಾಧ್ಯವಾಗುತ್ತದೆ’ ಎಂದು ಶ್ರುತಿ ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us