AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ಯಾನ್ ಇಂಡಿಯಾ ಸಿನಿಮಾಗಳಿಂದ ಕನ್ನಡದ ಕಂಪು ಮಾಯ: ಹಂಸಲೇಖ

Hamsalekha: ಸಂಗೀತ ನಿರ್ದೇಶಕ, ಗೀತ ಸಾಹಿತಿ ಹಂಸಲೇಖ, ಪ್ಯಾನ್ ಇಂಡಿಯಾ ಸಿನಿಮಾಗಳಿಂದ ಕನ್ನಡದ ಕಂಪು ಕಡಿಮೆಯಾಗಿದೆ ಎಂದಿದ್ದಾರೆ. ಜೊತೆಗೆ ಇಂದಿನ ಸಿನಿಮಾಗಳ ಸಂಗೀತ, ರಿಯಾಲಿಟಿ ಶೋಗಳನ್ನು ಸಹ ಟೀಕಿಸಿದ್ದಾರೆ.

ಪ್ಯಾನ್ ಇಂಡಿಯಾ ಸಿನಿಮಾಗಳಿಂದ ಕನ್ನಡದ ಕಂಪು ಮಾಯ: ಹಂಸಲೇಖ
ಹಂಸಲೇಖ
ಮಂಜುನಾಥ ಸಿ.
|

Updated on:Sep 12, 2023 | 9:19 PM

Share

ಕನ್ನಡದ ಜನಪ್ರಿಯ ಗೀತ ಸಾಹಿತಿ, ಸಂಗೀತ ನಿರ್ದೇಶಕ ಹಂಸಲೇಖ (Hamsalekha), ಇತ್ತೀಚೆಗಿನ ಟ್ರೆಂಡ್ ‘ಪ್ಯಾನ್ ಇಂಡಿಯಾ’ವನ್ನು ಟೀಕೆ ಮಾಡಿದ್ದಾರೆ. ಪ್ಯಾನ್ ಇಂಡಿಯಾ ಎಂಬುದು ವ್ಯಾಪಾರದ ವ್ಯಾಮೋಹ ಎಂದು ಕರೆದಿರುವ ಹಂಸಲೇಖ, ಪ್ಯಾನ್ ಇಂಡಿಯಾ ಸಿನಿಮಾದಿಂದಾಗಿ ಕನ್ನಡದ ಕಂಪು ಕಳೆದು ಹೋಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಹಂಸಲೇಖ ‘ಪ್ಯಾನ್ ಇಂಡಿಯಾ’ ಸಿನಿಮಾಗಳ ಸಂಗೀತವನ್ನು ಸಹ ಟೀಕಿಸಿದ್ದು, ‘ಕಿವಿಮುಚ್ಚುವಂಥಹಾ ಸಂಗೀತ ಈಗ ಬರುತ್ತಿದೆ” ಎಂದಿದ್ದಾರೆ.

ಮೈಸೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹಂಸಲೇಖ, ”ಪ್ಯಾನ್ ಇಂಡಿಯಾ ವ್ಯಾಪಾರದ ಸೋಗು ಬಂದು ಎಲ್ಲರಿಗೂ ದಿಕ್ಕು ತಪ್ಪಿದೆ. ನಾವೇನು ಕನ್ನಡದಲ್ಲೇ ಬದುಕಬೇಕಾ? ಅಥವಾ ಕನ್ನಡವನ್ನು ಇಟ್ಟುಕೊಂಡು ಎಲ್ಲರೊಟ್ಟಿಗೆ ಬದುಕಬೇಕಾ ಎಂಬ ಗೊಂದಲ ಶುರುವಾಗಿದೆ” ಎಂದರು. ”ಮೊದಲೆಲ್ಲ ಪ್ರತಿ ಸಿನಿಮಾದಲ್ಲಿಯೂ ನಾಯಕ ಕನ್ನಡದ ಬಗ್ಗೆ ಹಾಡು ಹೇಳುತ್ತಿದ್ದ, ಆದರೆ ಈ ಪ್ಯಾನ್ ಇಂಡಿಯಾ ಕನ್ನಡದ ಬಗ್ಗೆ ಹಾಡು ಹಾಡಲು ಹೆದರುತ್ತಾರೆ. ಏಕೆಂದರೆ ಕನ್ನಡದ ಹಾಡು ಹಾಡಿದರೆ ಬೇರೆ ರಾಜ್ಯಗಳಲ್ಲಿ ಒಪ್ಪಲ್ಲ, ಅಲ್ಲಿ ಒಪ್ಪಿದ್ದನ್ನು ಇಲ್ಲಿ ಒಪ್ಪಲ್ಲ. ಇಂಥಹಾ ಪರಿಸ್ಥಿತಿ ನಿರ್ಮಾಣವಾಗಿದೆ” ಎಂದಿದ್ದಾರೆ.

”ಈಗ ಕೇವಲ ಆಕ್ಷನ್-ರಿಯಾಕ್ಷನ್ ಮಾತ್ರವೇ ಆಗಿದೆ. ಸಂಸ್ಕೃತಿ, ಸಂಗೀತ, ಅಕ್ಕ-ಅಣ್ಣ-ತಂಗಿ ಬಾಂಧವ್ಯಗಳು ಯಾವುದೂ ಸಿನಿಮಾಗಳಲ್ಲಿ ಇಲ್ಲ. ಬರೀ ಹೊಡಿ-ಬಡಿ ಆಗಿಬಿಟ್ಟಿದೆ. ಮ್ಯೂಸಿಕ್ ಅಂತೂ ಕಿವಿ ಮುಚ್ಚಿಕೊಳ್ಳುವಂತಿದೆ. ಈ ಫಾರ್ಮುಲಾ ಎಲ್ಲ ಭಾಷೆಗಳಿಗೂ ಮ್ಯಾಚ್ ಆಗುತ್ತೆ ಎಂದು ತಿಳಿದುಕೊಂಡಿದ್ದಾರೆ. ಇವರ್ಯಾರಿಗೂ ನಾವು ಯಾರಿಗೋಸ್ಕರ ಸಿನಿಮಾ ಮಾಡುತ್ತಿದ್ದೀವಿ, ಈ ವ್ಯಾಪಾರದ ಮಾರ್ಗವೇನು? ವ್ಯಾಪಾರದ ನೀತಿ ಏನು ಎಂಬುದು ಗೊತ್ತಿಲ್ಲ” ಎಂದು ಬೇಸರದಿಂದ ನುಡಿದರು ಹಂಸಲೇಖ.

ಇದನ್ನೂ ಓದಿ:‘ಶಾಂತಿಮಂತ್ರ ಸಾರಲು ಈ ಸಂದರ್ಭವನ್ನು ಸ್ಫೂರ್ತಿಯಾಗಿ ತೆಗೆದುಕೊಳ್ಳೋಣ’: ದಸರಾ ಉದ್ಘಾಟನೆ ಬಗ್ಗೆ ಹಂಸಲೇಖ ಸುದ್ದಿಗೋಷ್ಠಿ

”ಈಗ ಸಿನಿಮಾದಲ್ಲಿ ಹಾಡುಗಳೇ ಇಲ್ಲ. ಕರೋಕೆ, ರೀಲ್ಸ್​, ಆಕ್ಷನ್​ ಇಂಥಹುಗಳಷ್ಟೆ ಇವೆ. ಸಿನಿಮಾದಲ್ಲಿ ಹಾಡುಗಳು ಎಂಬುದಿಲ್ಲ. ರವಿಚಂದ್ರನ್ ಅವರ ಕಾಲಕ್ಕೆ ಅದು ಮುಕ್ತಾಯವಾಯ್ತು. ಈಗೇನಿದ್ದರು ಸಿಂಗಲ್ ಟ್ರ್ಯಾಕ್ ಅಷ್ಟೆ. ಎದ್ದ, ಕೋಪ ಮಾಡ್ಕೋಂಡ, ಹೊಡ್ದ, ಗೆದ್ದ ಇಷ್ಟೆ. ಇದೊಂದೆ ಭಾವನೆ ಮೇಲಷ್ಟೆ ಹಾಡುಗಳು ಬರುತ್ತಿವೆ. ಅಲ್ಲಿ-ಇಲ್ಲ ಒಂದೋ-ಎರಡು ಹಾಡುಗಳು ಬರುತ್ತಿವೆ, ಆ ಹಾಡುಗಳನ್ನು ಉಳಿಸಿಕೊಂಡು, ಬೆನ್ನು ತಟ್ಟಿ ಪ್ರೋತ್ಸಾಹಿಸಬೇಕು. ಆ ಹಾಡುಗಳನ್ನೂ ಬೈದರೆ ಅವೂ ಬರದೇ ಹೋಗಬಹುದು” ಎಂದು ಎಚ್ಚರಿಸಿದರು ಹಂಸಲೇಖ.

”ಈಗ ಸಿನಿಮಾ ನಿರ್ಮಾಣ ಜಾಸ್ತಿಯಾಗಿದೆ, ಗುಣಮಟ್ಟ ಕಡಿಮೆ ಆಗಿದೆ. ವರ್ಷಕ್ಕೆ 270 ಸಿನಿಮಾಗಳು ಬಿಡುಗಡೆ ಆಗುತ್ತಿವೆ. ಒಂದು ಸಿನಿಮಾಕ್ಕೆ ನಾಲ್ಕು ಹಾಡೆಂದರೆ 1000ಕ್ಕೂ ಹೆಚ್ಚು ಹಾಡುಗಳು ಅಷ್ಟು ಹಾಡುಗಳಿಗೆ ರಾಗ ಎಲ್ಲಿಂದ ತರುವುದು, ಹೊಸ ಪದಗಳು, ಸನ್ನಿವೇಶಗಳನ್ನು ಎಲ್ಲಿಂದ ತರುವುದು. ಮುಂಚೆ ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ನೋಡುವುದು ಎಂದರೆ ಹಬ್ಬವಿದ್ದಂತೆ. ಆದರೆ ಈಗ ಯಾವ ಸಿನಿಮಾಕ್ಕೆ ಹೋಗುವುದು ಎಂಬುದೇ ಗೊಂದಲ. ಪ್ರತಿವಾರ 15-20 ಸಿನಿಮಾಗಳು ಬಿಡುಗಡೆ ಆಗುತ್ತಿವೆ” ಎಂದರು.

ರಿಯಾಲಿಟಿ ಶೋಗಳನ್ನು ಟೀಕಿಸಿದ ಹಂಸಲೇಖ, ”ಮಾತಿನಲ್ಲಿ ಹೇಳಲಾಗದ್ದನ್ನು ಹಾಡಿನಲ್ಲಿ ಹೇಳಬೇಕು ಎಂಬುದು ನಿಯಮ. ಆದರೆ ಈಗ ಮಾತೇ ಹೆಚ್ಚಾಗಿದೆ. ರಿಯಾಲಿಟಿ ಶೋನಲ್ಲಿ ಒಂದು ಮಗು ಬಂದು ಹಾಡೊಂದನ್ನು ಹೇಳುತ್ತಾಳೆ. ಹಾಡು ಮೂರು ನಿಮಿಷ, ಹಾಡು ಮುಗಿದ ಕೂಡಲೇ ನಾನು ಸೇರಿ ಎಂಟು ಜನ ಆ ಹಾಡಿನ ಬಗ್ಗೆ ಮಾತನಾಡುತ್ತೇವೆ, ಆ ಮಗುವಿಗೆ ಪಾಪ ನಿಂತು-ನಿಂತು ಕಾಲು ಸೋಲುತ್ತದೆ” ಎಂದು ಹೇಳಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:18 pm, Tue, 12 September 23