Kichcha Sudeep: ಸುದೀಪ್​ ವರ್ಸಸ್​ ಎಂ.ಎನ್​. ಕುಮಾರ್​ ವಿವಾದ ಹುಟ್ಟಿಕೊಂಡಿದ್ದು ಹೇಗೆ? ಪೂರ್ತಿ ಮಾಹಿತಿ ಇಲ್ಲಿದೆ..

| Updated By: ಮದನ್​ ಕುಮಾರ್​

Updated on: Jul 09, 2023 | 3:55 PM

Jack Manju Press Meet: ಹಣಕಾಸಿನ ವಿಚಾರವಾಗಿ ಕಿಚ್ಚ ಸುದೀಪ್​ ಮತ್ತು ನಿರ್ಮಾಪಕ ಎಂ.ಎನ್​. ಕುಮಾರ್​ ನಡುವೆ ಜಟಾಪಟಿ ನಡೆಯುತ್ತಿದೆ. ಇದಕ್ಕೆ ಕಾರಣ ಏನು ಎಂಬುದನ್ನು ಸುದೀಪ್​ ಅವರ ಆಪ್ತರಾದ ಜಾಕ್​ ಮಂಜು ವಿವರಿಸಿದ್ದಾರೆ.

Kichcha Sudeep: ಸುದೀಪ್​ ವರ್ಸಸ್​ ಎಂ.ಎನ್​. ಕುಮಾರ್​ ವಿವಾದ ಹುಟ್ಟಿಕೊಂಡಿದ್ದು ಹೇಗೆ? ಪೂರ್ತಿ ಮಾಹಿತಿ ಇಲ್ಲಿದೆ..
ಜಾಕ್​ ಮಂಜು
Follow us on

ಕಳೆದ ಕೆಲವು ದಿನಗಳಿಂದ ನಿರ್ಮಾಪಕ ಎಂ.ಎನ್​. ಕುಮಾರ್ (MN Kumar)​ ಅವರು ಕಿಚ್ಚ ಸುದೀಪ್​ ವಿರುದ್ಧ ಹಲವು ಆರೋಪಗಳನ್ನು ಹೊರಿಸುತ್ತಿದ್ದಾರೆ. ಈ ಕುರಿತಂತೆ ಸ್ಪಷ್ಟನೆ ನೀಡಲು ಸುದೀಪ್​ (Kichcha Sudeep) ಅವರ ಆಪ್ತರಾದ ಜಾಕ್​ ಮಂಜು ಇಂದು (ಜುಲೈ 9) ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ್ದಾರೆ. ಈ ವೇಳೆ ಅವರು ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಒಟ್ಟಾರೆಯಾಗಿ ಈ ಎಲ್ಲ ಸಮಸ್ಯೆ ಶುರುವಾಗಿದ್ದು ಹೇಗೆ ಎಂಬುದನ್ನು ಜಾಕ್​ ಮಂಜು ವಿವರಿಸಿದ್ದಾರೆ. ‘ಎಂ.ಎನ್​. ಕುಮಾರ್ ಅವರು ಸುದೀಪ್​ ಬಳಿ ಬಂದು ‘ಮುಕುಂದ ಮುರಾರಿ’ ಚಿತ್ರಕ್ಕೆ ಡಿಮಾನಿಟೈಸೇಷನ್​ನಿಂದ ತೊಂದರೆ ಆಗಿದೆ ಅಂದರು. ‘ರನ್ನ’ ಚಿತ್ರದ ನಿರ್ಮಾಪಕರಿಗೆ ತಾವು ಹಣ ಕೊಟ್ಟಿದ್ದು, ಅದು ವಾಪಸ್​ ಬಂದಿಲ್ಲ ಅಂತ ಕೂಡ ಹೇಳಿದರು. ಹಾಗಾಗಿ ಜೊತೆಯಾಗಿ ಒಂದು ಸಿನಿಮಾ ಮಾಡುವ ಮೂಲಕ ಸಹಾಯ ಮಾಡಿ ಎಂದು ಅವರು ಕೇಳಿಕೊಂಡರು. ಅದಕ್ಕೆ ಸುದೀಪ್​ ಒಪ್ಪಿಕೊಂಡಿದ್ದರು. ನಂತರ ನಿರ್ದೇಶಕರನ್ನು ಆಯ್ಕೆ ಮಾಡುವ ಕೆಲಸ ಶುರುವಾಯಿತು. ಆದರೆ ಯಾರೂ ಆಯ್ಕೆ ಆಗಲಿಲ್ಲ’ ಎಂದು ಜಾಕ್​ ಮಂಜು (Jack Manju) ಹೇಳಿದ್ದಾರೆ.

‘ಆ ಸಿನಿಮಾ ಬೇಗ ಸೆಟ್ಟೇರಲಿಲ್ಲ. ಕುಮಾರ್​​ ಅವರು ಒತ್ತಡದಲ್ಲಿ ಇದ್ದಿದ್ದರಿಂದ ಅವರು ಮಾತನಾಡುವ ರೀತಿ ಬದಲಾಯಿತು. ನಂತರ ಒಬ್ಬ ನಿರ್ದೇಶಕನನ್ನು ಸುದೀಪ್​ ಆಯ್ಕೆ ಮಾಡಿದರು. ಆದರೆ ಆ ನಿರ್ದೇಶಕರು ಕೇಳಿದಷ್ಟು ಸಂಭಾವನೆ ನೀಡಲು ಕುಮಾರ್​ ಒಪ್ಪಲಿಲ್ಲ. 2020ರ ಜನವರಿಯಲ್ಲಿ ಸುದೀಪ್​ ‘ವಿಕ್ರಾಂತ್​ ರೋಣ’ ಶುರುಮಾಡಿದರು. ಅದಕ್ಕೆ ಮೂರು ವರ್ಷ ಹಿಡಿಯಿತು. ಅನಾರೋಗ್ಯ, ಕೆಲಸದ ಒತ್ತಡ ಮುಂತಾದ ಕಾರಣಗಳಿಂದ ಕುಮಾರ್​ ಅವರನ್ನು ಭೇಟಿಯಾಗಲು ಸುದೀಪ್​ ಅವರಿಗೆ ಸಾಧ್ಯವಾಗಲಿಲ್ಲ. ನಂತರ ಪ್ರಿಯಾ ಮೇಡಂ ಅವರ ಜೊತೆ ಕುಮಾರ್​ ಮೀಟಿಂಗ್​ ನಡೆಸಿದರು. ಕುಮಾರ್ ಅವರ ಕಷ್ಟ ಏನು ಎಂಬುದನ್ನು ಸುದೀಪ್​ಗೆ ಹೇಳಲಾಯ್ತು. ನಂತರ ಅವರನ್ನು ಕರೆಸಿ ತಾತ್ಕಾಲಿಕವಾಗಿ 5 ಕೋಟಿ ರೂಪಾಯಿ ಸಹಾಯ ಮಾಡಲು ಸುದೀಪ್​ ಮುಂದಾದರು. ಆದರೆ ಕುಮಾರ್​ ಅವರು ಕೋಪದಲ್ಲಿ ಅದನ್ನು ಒಪ್ಪಿಕೊಳ್ಳಲಿಲ್ಲ. ಈ ರೀತಿ ಭಿಕ್ಷೆಯ ಹಣ ಬೇಡ, ಸಿನಿಮಾ ಮಾಡಿ ಅಂತ ಪಟ್ಟು ಹಿಡಿದರು’ ಎಂದು ಜಾಕ್​ ಮಂಜು ಹೇಳಿದ್ದಾರೆ.

ಇದನ್ನೂ ಓದಿ: Kichcha Sudeep: ಎಷ್ಟೇ ಮೀಟಿಂಗ್​ ಆದ್ರೂ ಸುದೀಪ್​-ಎಂ.ಎನ್​. ಕುಮಾರ್​ ನಡುವೆ ಕಿರಿಕ್​ ಯಾಕೆ ಬಗೆಹರಿಯಲಿಲ್ಲ? ವಿವರ ನೀಡಿದ ಜಾಕ್​ ಮಂಜು

‘ನನಗೆ ಬರಬೇಕಾದ ಹಣ ಕೊಡಿ’ ಎಂದು ಕುಮಾರ್​ ಅವರು ಪಟ್ಟು ಹಿಡಿದಿದ್ದರು. ಅದು ಸುದೀಪ್​ಗೆ ಬೇಸರ ಮೂಡಿಸಿತ್ತು. ‘ನಾನು ಕುಮಾರ್​ ಬಳಿ ಹಣ ತೆಗೆದುಕೊಂಡಿಲ್ಲ. ಸಹಾಯ ಕೇಳಿಕೊಂಡು ಬಂದವರು ಈಗ ಈ ರೀತಿ ಮಾತಾಡಿದ್ದು ಸರಿಯಲ್ಲ’ ಅಂತ ಸುದೀಪ್​ ಕೊಂಚ ಗರಂ ಆಗಿದ್ದರು. ‘ಸುದೀಪ್​ ಅವರಿಂದ ತಮಗೆ ಹಣ ಬರಬೇಕು. ಆ ಬಳಿಕ ನಿಮ್ಮ ಸಾಲ ತೀರಿಸುತ್ತೇನೆ’ ಅಂತ ಎನ್​. ಕುಮಾರ್​ ಅವರು ಕಂಡಕಂಡಲ್ಲಿ ಹೇಳಿಕೊಂಡು ತಿರುಗಾಡಿದ್ದಾರೆ ಎಂಬುದು ಜಾಕ್​ ಮಂಜು ಆರೋಪ.

ಇದನ್ನೂ ಓದಿ: MN Kumar: ‘ಸುದೀಪ್​ ಮಾಡಿದ 45 ಸಿನಿಮಾಗಳಿಗೆ ಅಗ್ರಿಮೆಂಟ್​ ಇದೆಯಾ?’; ದಾಖಲೆ ಕೇಳಿದ್ದಕ್ಕೆ ಎಂ.ಎನ್​. ಕುಮಾರ್​ ಮರುಪ್ರಶ್ನೆ

‘ಬೇರೆ ಸಿನಿಮಾಗಳಿಂದ ಆಗಿರುವ ನಷ್ಟಕ್ಕೆಲ್ಲ ಸುದೀಪ್​ ಅವರೇ ಕಾರಣ ಎಂಬ ರೀತಿಯಲ್ಲಿ ಎಂ.ಎನ್​. ಕುಮಾರ್​ ಮಾತನಾಡಿದ್ದಾರೆ. ಅದರಿಂದ ಸುದೀಪ್​ ಅವರಿಗೆ ಬಹಳ ನೋವಾಗಿದೆ. ಕುಮಾರ್​ ಅವರಿಗೆ ಸಹಾಯ ಆಗಲಿ ಎಂಬ ಉದ್ದೇಶದಿಂದ ಒಂದು ಕಂಪನಿಯ ಜೊತೆ ಕೈ ಜೋಡಿಸಿ ಒಂದು ಸಿನಿಮಾ ಮಾಡಿಕೊಡುವ ನಿರ್ಧಾರಕ್ಕೆ ಬರಲಾಯಿತು. ಅದರ ಬಜೆಟ್​ ಜಾಸ್ತಿ ಇತ್ತು. ಮೊದಲು ಒಪ್ಪಿಕೊಂಡ ಕುಮಾರ್​ ಅವರು ಮತ್ತೆ ಮಾತು ಬದಲಾಯಿಸಿದರು. ಅದೇ ಕೊನೆಯ ಭೇಟಿ’ ಎಂದು ಜಾಕ್​ ಮಂಜು ಹೇಳಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 3:25 pm, Sun, 9 July 23