ಕೆರಳಿ ಕೆಂಡವಾದ ಪ್ರೇಮ್, ನಿರ್ಮಾಪಕ ಕನಕಪುರ ಶ್ರೀನಿವಾಸ್​ಗೆ ವಾರ್ನಿಂಗ್

ನಿರ್ದೇಶಕ ಪ್ರೇಮ್ ಬಗ್ಗೆ, ಅರ್ಜುನ್ ಜನ್ಯ ಇನ್ನೂ ಹಲವರ ಹೆಸರುಗಳನ್ನು ಹೇಳಿ ಟೀಕೆ, ವೈಯಕ್ತಿಕ ನಿಂದನೆಗಳನ್ನು ಮಾಡಿದ್ದರು ನಿರ್ಮಾಪಕ ಕನಕಪುರ ಶ್ರೀನಿವಾಸ್. ಇಂದು ನಿರ್ದೇಶಕ ಪ್ರೇಮ್ ಫಿಲಂ ಚೇಂಬರ್​​ಗೆ ಕನಕಪುರ ಶ್ರೀನಿವಾಸ್ ಬಗ್ಗೆ ದೂರು ನೀಡಿದ್ದಲ್ಲದೆ. ತಮ್ಮ ಬಗ್ಗೆ ಶ್ರೀನಿವಾಸ್ ಮಾಡಿರುವ ಆರೋಪಗಳಿಗೆ ಉತ್ತರ ನೀಡಿದ್ದಾರೆ ಜೊತೆಗೆ ಖಡಕ್ ಎಚ್ಚರಿಕೆಗಳನ್ನು ಸಹ ನೀಡಿದ್ದಾರೆ.

ಕೆರಳಿ ಕೆಂಡವಾದ ಪ್ರೇಮ್, ನಿರ್ಮಾಪಕ ಕನಕಪುರ ಶ್ರೀನಿವಾಸ್​ಗೆ ವಾರ್ನಿಂಗ್
Prem Srinivas

Updated on: Feb 07, 2026 | 6:59 PM

ಇತ್ತೀಚೆಗೆ ನಡೆದ ಸಿನಿಮಾ (Cinema) ಸಂಬಂಧಿ ಕಾರ್ಯಕ್ರಮದಲ್ಲಿ ಮಾತನಾಡಿದ್ದ ನಿರ್ಮಾಪಕ ಕನಕಪುರ ಶ್ರೀನಿವಾಸ್, ಬಹಳ ವೀರಾವೇಶದಿಂದ ಚಿತ್ರರಂಗದ ಹಲವು ದೊಡ್ಡ ನಟ-ನಿರ್ದೇಶಕರುಗಳ ವಿರುದ್ಧ ಬಹಳ ಲಘುವಾಗಿ ಮಾತನಾಡಿದ್ದರು. ಅದರಲ್ಲೂ ನಿರ್ದೇಶಕ ಪ್ರೇಮ್ ಬಗ್ಗೆ, ಅರ್ಜುನ್ ಜನ್ಯ ಇನ್ನೂ ಹಲವರ ಹೆಸರುಗಳನ್ನು ಹೇಳಿ ಟೀಕೆ, ವೈಯಕ್ತಿಕ ನಿಂದನೆಗಳನ್ನು ಮಾಡಿದ್ದರು. ಇಂದು ನಿರ್ದೇಶಕ ಪ್ರೇಮ್ ಫಿಲಂ ಚೇಂಬರ್​​ಗೆ ಕನಕಪುರ ಶ್ರೀನಿವಾಸ್ ಬಗ್ಗೆ ದೂರು ನೀಡಿದ್ದಲ್ಲದೆ. ತಮ್ಮ ಬಗ್ಗೆ ಶ್ರೀನಿವಾಸ್ ಮಾಡಿರುವ ಆರೋಪಗಳಿಗೆ ಉತ್ತರ ನೀಡಿದ್ದಾರೆ ಜೊತೆಗೆ ಖಡಕ್ ಎಚ್ಚರಿಕೆಗಳನ್ನು ಸಹ ನೀಡಿದ್ದಾರೆ.

ಸುಮಾರು ಹತ್ತು ವರ್ಷದ ಹಿಂದೆ ಸಿನಿಮಾ ಮಾಡಿಕೊಡಿರೆಂದು ಒಂಬತ್ತು ಲಕ್ಷ ರೂಪಾಯಿ ಅಡ್ವಾನ್ಸ್ ಕೊಟ್ಟಿದ್ದರು. ನಾನು ಆಫೀಸ್ ಮಾಡಿಕೊಂಡು, ಸಹಾಯಕರಿಗೆ ಸಂಬಳ ಕೊಟ್ಟುಕೊಂಡು ಸಿನಿಮಾ ಕೆಲಸಕ್ಕೆ ತೊಡಗಿಕೊಂಡೆ. ಆದರೆ ಮೂರು ವರ್ಷ ಆತ ಸಿನಿಮಾ ಮಾಡಲು ಬರಲೇ ಇಲ್ಲ. ಆ ಬಳಿಕ ಬಂದು ಹಣ ವಾಪಸ್ ಕೊಡುವಂತೆ ಕೇಳಿದ. ಅಷ್ಟರಲ್ಲಾಗಲೇ ನಾನು ಕತೆಗಾಗಿ ಸಾಕಷ್ಟು ಹಣ ಖರ್ಚು ಮಾಡಿದ್ದೆ. ಇವರ ಸಿನಿಮಾ ಮಾಡಲು ನಾನು ಮೂರು ವರ್ಷ ಖಾಲಿ ಕೂತಿದ್ದೆ, ಬೇರೆ ಸಿನಿಮಾಗಳನ್ನು ಕೈಬಿಟ್ಟಿದ್ದೆ. ಆದರೂ ಸಾರಾ ಗೋವಿಂದು ಹೇಳಿದರೆಂದು ಐದು ಲಕ್ಷ ರೂಪಾಯಿ ವಾಪಸ್ ಕೊಟ್ಟೆ’ ಎಂದಿದ್ದಾರೆ.

ಆದರೆ ಅದೆಲ್ಲ ಆದ ಮೇಲೆ ವರ್ಷಗಳ ಬಳಿಕ ಮತ್ತೆ ನನ್ನ ಕಚೇರಿ ಬಳಿ ಬಂದು ಹಣ ಕೊಟ್ಟಿಲ್ಲ ಎಂದು ಹೇಳಲು ಶುರು ಮಾಡಿದ. ನನಗೆ ನಾಲ್ಕು ಲಕ್ಷ ದೊಡ್ಡದಲ್ಲ ಆದರೆ ಆತ ಆಡಿರುವ ಮಾತುಗಳು, ಹೇಳಿರುವ ರೀತಿ ಇವೆಲ್ಲ ಸರಿಯಿಲ್ಲ. ಅದಕ್ಕೆ ಈಗ ನಾನು ಫಿಲಂ ಚೇಂಬರ್​​ಗೆ ಬಂದು ದೂರು ನೀಡಿದ್ದೇನೆ. ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಸಹ ಹಾಕಿದ್ದೇನೆ. ಕಾನೂನು ಪ್ರಕಾರ ಏನು ಕ್ರಮ ಕೈಗೊಳ್ಳಬೇಕೊ ಕೈಗೊಳ್ಳಲಿ, ಫಿಲಂ ಚೇಂಬರ್​​ಗೆ ಮಾಹಿತಿ ನೀಡದೆ ನೇರವಾಗಿ ಕೋರ್ಟ್​​ಗೆ ಹೋಗುವುದು ಸರಿಯಲ್ಲ ಎಂದು ಇಲ್ಲಿ ಬಂದೆ’ ಎಂದಿದ್ದಾರೆ.

ಇದನ್ನೂ ಓದಿ:ನಾಲಗೆ ಹರಿಬಿಟ್ಟ ನಿರ್ಮಾಪಕ ಕನಕಪುರ ಶ್ರೀನಿವಾಸ್ ವಿರುದ್ಧ ದೂರು ನೀಡಿದ ಪ್ರೇಮ್

‘ಶ್ರೀನಿವಾಸ್ ಬಹಳ ನೀಚವಾಗಿ ಮಾತನಾಡಿದ್ದಾರೆ. ನಾನು ಮಂಡ್ಯದವನು ಅವರಿಗಿಂತಲೂ ಕೆಟ್ಟದಾಗಿ ಮಾತನಾಡಬಲ್ಲೆ. ಆದರೆ ನಾನು ಮಾತನಾಡುವುದಿಲ್ಲ, ನನ್ನ ಸಂಸ್ಕಾರ ಬೇರೆ ಇದೆ. ನಾನು ಅವರನ್ನು ಸಂಕಷ್ಟಕ್ಕೆ ಸಿಲುಕಿಸಬೇಕು ಎಂದುಕೊಂಡರೆ ನನಗೆ ಹೆಚ್ಚು ಸಮಯ ಬೇಕಿಲ್ಲ, ಅಷ್ಟು ಶಕ್ತಿ ನನ್ನ ಬಳಿ ಇದೆ. ಆದರೆ ಅದೆಲ್ಲ ನನ್ನ ವ್ಯಕ್ತಿತ್ವ ಅಲ್ಲ. ಮೊದಲೆಲ್ಲ ಹೀಗೆ ಆಗುತ್ತಿರಲಿಲ್ಲ. ಅಂಬರೀಶಣ್ಣ ಇದ್ದಾಗ ಅಮ್ಮ (ಪಾರ್ವತಮ್ಮ ರಾಜ್​ಕುಮಾರ್) ಇದ್ದಾಗ ಯಾರಿಗೂ ಹೀಗೆಲ್ಲ ಮಾತನಾಡುವ ಧೈರ್ಯ ಇರಲಿಲ್ಲ’ ಎಂದಿದ್ದಾರೆ ಪ್ರೇಮ್.

ದಿವಂಗತ ಪುನೀತ್ ರಾಜ್‌ಕುಮಾರ್ ಮತ್ತು ಪ್ರಸ್ತುತ ಜೈಲಿನಲ್ಲಿರುವ ನಟ ದರ್ಶನ್ ಅವರ ಬಗ್ಗೆ ಕನಕಪುರ ಶ್ರೀನಿವಾಸ್ ಆಡಿದ ಹಗುರವಾದ ಮಾತುಗಳ ವಿರುದ್ಧವೂ ಪ್ರೇಮ್ ಕಿಡಿಕಾರಿದ್ದಾರೆ. “ಒಬ್ಬ ವ್ಯಕ್ತಿ ಕಷ್ಟದಲ್ಲಿದ್ದಾಗ ಅಥವಾ ಇಲ್ಲದಿದ್ದಾಗ ಈ ರೀತಿ ಮಾತನಾಡುವುದು ಸರಿಯಲ್ಲ. ನನ್ನ ಬಗ್ಗೆಯೂ ಸಹ ಸಾಕಷ್ಟು ಮಾತನಾಡಿದ್ದಾರೆ. ನಾನು ವೃತ್ತಿ ಆರಂಭಿಸಿದಾಗಿನಿಂದಲೂ ಹಣಕಾಸು ಶಿಸ್ತು ಕಾಪಾಡಿಕೊಂಡು ಬಂದಿದ್ದೀನಿ. ನಾನು ಎಷ್ಟು ವರ್ಷಕ್ಕೆ ಸಿನಿಮಾ ಮಾಡುತ್ತೀನಿ, ನನ್ನ ಸಿನಿಮಾಗಳಿಂದ ನಿರ್ಮಾಪಕರು ಎಷ್ಟು ಲಾಭ ಮಾಡಿಕೊಳ್ಳುತ್ತಾರೆ ಅದೆಲ್ಲ ಅವರಿಗೆ ಬಿಟ್ಟಿದ್ದು, ಇವನ್ಯಾರು ಮಾತನಾಡಲು’ ಎಂದು ಗುಡುಗಿದ್ದಾರೆ ಪ್ರೇಮ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:59 pm, Sat, 7 February 26