‘ನನಗಿಂತ ಮೊದಲು ಫೇಮಸ್ ಆಗಿದ್ದ’: ದಿಲೀಪ್ ರಾಜ್ ಬೆಳೆದು ಬಂದ ಹಾದಿ ನೆನಪಿಸಿಕೊಂಡ ನಟ ಗಣೇಶ್

ಸಿನಿಮಾ ಮತ್ತು ಸೀರಿಯಲ್ ನಟ ದಿಲೀಪ್ ರಾಜ್ ಅವರ ಹಠಾತ್ ನಿಧನದಿಂದ ಕನ್ನಡ ಚಿತ್ರರಂಗಕ್ಕೆ ಆಘಾತ ಆಗಿದೆ. ಗೋಲ್ಡನ್ ಸ್ಟಾರ್ ಗಣೇಶ್ ಅವರು ಬಂದು ಅಂತಿಮ ನಮನ ಸಲ್ಲಿಸಿದ್ದಾರೆ. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಗಣೇಶ್ ಅವರು ಹಳೇ ದಿನಗಳನ್ನು ನೆನಪಿಸಿಕೊಂಡರು.

‘ನನಗಿಂತ ಮೊದಲು ಫೇಮಸ್ ಆಗಿದ್ದ’: ದಿಲೀಪ್ ರಾಜ್ ಬೆಳೆದು ಬಂದ ಹಾದಿ ನೆನಪಿಸಿಕೊಂಡ ನಟ ಗಣೇಶ್
Dileep Raj, Ganesh

Updated on: May 13, 2026 | 12:13 PM

ಖ್ಯಾತ ನಟ ದಿಲೀಪ್ ರಾಜ್ (Dileep Raj) ಅವರು ನಿಧನರಾಗಿದ್ದು, ಹಲವು ಸೆಲೆಬ್ರಿಟಿಗಳು ಬಂದು ಅಂತಿಮ ದರ್ಶನ ಪಡೆಯುತ್ತಿದ್ದಾರೆ. ನಟ ಗೋಲ್ಡನ್ ಸ್ಟಾರ್ ಗಣೇಶ್ ಅವರು ದಿಲೀಪ್ ರಾಜ್ ಜೊತೆ ಒಡನಾಟ ಹೊಂದಿದ್ದರು. ಆ ದಿನಗಳನ್ನು ಅವರು ನೆನಪಿಸಿಕೊಂಡಿದ್ದಾರೆ. ‘ಏನು ಹೇಳಬೇಕು ಅಂತ ತಿಳಿಯುತ್ತಿಲ್ಲ. ಮನಸ್ಸಿಗೆ ತುಂಬ ನೋವಾಗುತ್ತಿದೆ. ದಿಲೀಪ್ ರಾಜ್ ಅವರು ಒಳ್ಳೆಯ ವ್ಯಕ್ತಿ ಆಗಿದ್ದರು. ಅದ್ಭುತ ನಟನಾಗಿದ್ದರು. ನಮ್ಮದೆಲ್ಲ ಒಂದು ಚಿಕ್ಕ ತಂಡ. ಕಾಲೇಜು ಮುಗಿಸಿ ಜೊತೆಯಲ್ಲಿ ಬಂದವರು ನಾವು. ನಾವೆಲ್ಲ ರಂಗಭೂಮಿಯಲ್ಲಿ ನಾಟಕಗಳನ್ನು ಮಾಡುತ್ತಿದ್ದೆವು. ನಮ್ಮ ತಂಡದಲ್ಲಿ ಮೊದಲು ಜನಪ್ರಿಯತೆ ಪಡೆದಿದ್ದೇ ದಿಲೀಪ್’ ಎಂದು ಗಣೇಶ್ ಅವರು ಹೇಳಿದ್ದಾರೆ.

‘ದಿಲೀಪ್ ರಾಜ್ ಅವರು ಅತ್ಯುತ್ತಮ ಡ್ಯಾನ್ಸರ್ ಆಗಿದ್ದರು. ಅವರನ್ನು ನೋಡಿ ನಮಗೆಲ್ಲ ಖುಷಿ ಆಗುತ್ತಿತ್ತು. ಪ್ರೀತಿಗಾಗಿ ಅಂತ ಒಂದು ಸೀರಿಯಲ್ ಬರುತ್ತಿತ್ತು. ಕಿಟ್ಟಿ ಮತ್ತು ದಿಲೀಪ್ ಜೊತೆಯಾಗಿ ನಟನೆ ಮಾಡುತ್ತಿದ್ದರು. ನಾವೆಲ್ಲ ಸೆಟ್​ಗೆ ಹೋಗುತ್ತಿದ್ದೆವು. ಆರಂಭದ ದಿನಗಳಿಂದಲೂ ನಾನು ದಿಲೀಪ್ ಅವರನ್ನು ನೋಡಿಕೊಂಡು ಬಂದಿದ್ದೇನೆ. ಬಹಳ ಶ್ರಮಜೀವಿ ಅವರು’ ಎಂದಿದ್ದಾರೆ ಗಣೇಶ್.

‘ಅವರಿಗೆ ಇನ್ನೂ ಚಿಕ್ಕ ವಯಸ್ಸು. 48 ವರ್ಷಕ್ಕೆ ಹೀಗಾಯಿತು ಎಂಬುದು ತಿಳಿದು ನಮಗೆಲ್ಲ ಶಾಕ್ ಆಗಿದೆ. ಬೆಳಗ್ಗೆ ಸುದ್ದಿ ತಿಳಿದ ಕೂಡಲೇ ಇದು ನಿಜನೋ ಸುಳ್ಳೋ ಎನಿಸಿತು. ಇಡೀ ಕುಟುಂಬಕ್ಕೆ, ಅವರ ಆಪ್ತರಿಗೆ ಈ ನಷ್ಟ ಭರಿಸುವ ಶಕ್ತಿಯನ್ನು ದೇವರು ನೀಡಲಿ ಅಂತ ಕೇಳಿಕೊಳ್ಳುತ್ತೇನೆ. ದಿಲೀಪ್ ರಾಜ್ ಅವರ ಆತ್ಮಕ್ಕೆ ಶಾಂತಿ ಸಿಗಲಿ’ ಎಂದು ಗಣೇಶ್ ಅವರು ಹೇಳಿದ್ದಾರೆ.

ನಟ ಸುಂದರ್ ಕೂಡ ಮಾತನಾಡಿದ್ದಾರೆ. ‘ಕಾಲೇಜು ದಿನಗಳಿಂದಲೂ ನಾನು ದಿಲೀಪ್​ನನ್ನು ನೋಡಿದ್ದೇನೆ. ಒಂದು ವರ್ಷ ನಾನು ಅವನಿಗೆ ಅಕೌಂಟ್ಸ್ ಪಾಠ ಮಾಡಿದ್ದೇನೆ. ಆಗ ಅವನು ಇನ್ನೂ ಸೀರಿಯಲ್​ಗೆ ಬಂದಿರಲಿಲ್ಲ. ತುಂಬಾ ಪ್ರತಿಭಾವಂತ ನಟ. ಇದು ಅವನು ಹೋಗುವಂತಹ ವಯಸ್ಸು ಅಲ್ಲ. ಸಿನಿಮಾದಲ್ಲಿ ಹೀರೋ ಆಗಿ ಮಿಂಚಬೇಕು ಎಂಬ ಆಸೆ ಅವನಿಗೆ ಇತ್ತು. ಅದು ಈಡೇರಲಿಲ್ಲ’ ಎಂದು ಸುಂದರ್ ಅವರು ಹೇಳಿದ್ದಾರೆ.

ಇದನ್ನೂ ಓದಿ: ದಿಲೀಪ್ ರಾಜ್ ನಿಧನ: ಅಂತಿಮ ದರ್ಶನ ಪಡೆದು ಕಂಬನಿ ಮಿಡಿದ ಸೆಲೆಬ್ರಿಟಿಗಳು

‘ಅವನ ಬಳಿ ಮಾತನಾಡಿ 6-7 ತಿಂಗಳು ಆಗಿತ್ತು. ಅಲ್ಲಿಯವರೆಗೂ ಅವನು ತುಂಬಾ ಚೆನ್ನಾಗಿದ್ದ. ದೈಹಿಕವಾಗಿ ಅವನು ಫಿಟ್ ಆಗಿದ್ದ. ಒಳ್ಳೆಯ ಪಾತ್ರಗಳನ್ನು ಮಾಡಿದ್ದೇನೆ ಎಂಬ ಖುಷಿ ಅವನಿಗೆ ಇತ್ತು. ಸ್ಟುಡಿಯೋ ಮಾಡಿದ್ದ, ಸೀರಿಯಲ್ ನಿರ್ಮಾಣ ಮಾಡಿದ್ದ. ಹೆಂಡತಿ ಮತ್ತು ಮಕ್ಕಳಿಗೆ ಈಗ ದೊಡ್ಡ ಆಘಾತ ಆಗಿದೆ’ ಎಂದಿದ್ದಾರೆ ಸುಂದರ್.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us