ಕನ್ನಡ ಚಿತ್ರರಂಗದಲ್ಲಿ ಮತ್ತೆ ಮೀಟೂ ಬಿರುಗಾಳಿ? ತನಿಖೆಗೆ 153 ಮಂದಿ ಒತ್ತಾಯ

|

Updated on: Sep 04, 2024 | 3:18 PM

ಸ್ಯಾಂಡಲ್​ವುಡ್​ನಲ್ಲಿ ಈ ಹಿಂದೆ ಕೆಲವು ನಟಿಯರು ಮೀಟೂ ಆರೋಪ ಮಾಡಿದ್ದರು. ಆನಂತರ ಆ ವಿಷಯ ತಣ್ಣಗಾಯಿತು. ಈಗ ಮಲಯಾಳಂ ಚಿತ್ರರಂಗದಲ್ಲಿ ‘ಹೇಮಾ ಸಮಿತಿ ವರದಿ’ ಸಲ್ಲಿಕೆ ಆದ ನಂತರ ಕನ್ನಡ ಚಿತ್ರರಂಗದಲ್ಲೂ ತನಿಖೆ ಆಗಬೇಕು ಎಂಬ ಅಭಿಪ್ರಾಯ ಹಲವರಿಂದ ವ್ಯಕ್ತವಾಗಿದೆ. ಇದಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಫೈರ್​ ಸಂಸ್ಥೆ ಪತ್ರ ಬರೆದಿದೆ.

ಕನ್ನಡ ಚಿತ್ರರಂಗದಲ್ಲಿ ಮತ್ತೆ ಮೀಟೂ ಬಿರುಗಾಳಿ? ತನಿಖೆಗೆ 153 ಮಂದಿ ಒತ್ತಾಯ
ಸಹಿ ಮಾಡಿದ ಪ್ರಮುಖ ಸೆಲೆಬ್ರಿಟಿಗಳು
Follow us on

ಕೆಲವು ವರ್ಷಗಳ ಹಿಂದೆ ಸುದ್ದಿ ಆಗಿದ್ದ ಮೀಟೂ ವಿಷಯ ಈಗ ಮತ್ತೆ ಮುನ್ನೆಲೆಗೆ ಬಂದಿದೆ. ಬೇರೆ ಬೇರೆ ಭಾಷೆಯ ಚಿತ್ರರಂಗದ ಹಲವು ನಟಿಯರು ತಮಗೆ ಆಗಿರುವ ಲೈಂಗಿಕ ದೌರ್ಜನ್ಯಗಳ ಬಗ್ಗೆ ಮಾತನಾಡಲು ಆರಂಭಿಸಿದ್ದಾರೆ. ಇದಕ್ಕೆಲ್ಲ ಕಾರಣ ಆಗಿರುವುದು ಕೇರಳದ ‘ಹೇಮಾ ಸಮಿತಿ ವರದಿ’. ಹೌದು, ಹೇಮಾ ಕಮಿಟಿ ರಿಪೋರ್ಟ್​ ಪ್ರಕಟ ಆದ ಬಳಿಕ ತೆಲುಗು, ಕನ್ನಡ ಮುಂತಾದ ಚಿತ್ರರಂಗದಲ್ಲೂ ತನಿಖೆಗೆ ಒತ್ತಾಯ ಕೇಳಿಬಂದಿದೆ. ಫೈರ್​ (ಫಿಲ್ಮ್​ ಇಂಡಸ್ಟ್ರೀ ಫಾರ್​ ರೈಟ್ಸ್​ ಆ್ಯಂಡ್​ ಇಕ್ವಾಲಿಡಿ) ಸಂಸ್ಥೆಯ ಮೂಲಕ 153 ಜನರು ಕನ್ನಡ ಚಿತ್ರರಂಗದಲ್ಲಿಯೂ ತನಿಖೆ ಆಗಬೇಕು ಎಂದು ಒತ್ತಾಯಿಸಿದ್ದಾರೆ.

ನಟರು, ನಟಿಯರು, ಸಾಹಿತಿಗಳು, ಪತ್ರಕರ್ತರು, ನಿರ್ದೇಶಕರು, ನಿರ್ಮಾಪಕರು ಹಾಗೂ ವಿವಿಧ ವಿಭಾಗಗಳ ತಂತ್ರಜ್ಞರು ಸೇರಿದಂತೆ ಒಟ್ಟು 153 ಜನರು ಸಹಿ ಮಾಡಿ ಅರ್ಜಿ ಸಲ್ಲಿಸಿದ್ದಾರೆ. ಲೈಂಗಿಕ ಹಿಂಸೆಯ ಸಮಸ್ಯೆಗಳೂ ಸೇರಿದಂತೆ ಕನ್ನಡ ಚಿತ್ರರಂಗದಲ್ಲಿ ಮಹಿಳೆಯರು ಎದುರಿಸುತ್ತಿರುವ ಇನ್ನಿತರೆ ಸಮಸ್ಯೆಗಳ ಬಗ್ಗೆ ತನಿಖೆ ನಡೆಸಿ ವರದಿ ನೀಡಲು ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸುವಂತೆ ಕರ್ನಾಟಕ ರಾಜ್ಯ ಸರ್ಕಾರಕ್ಕೆ ಫೈರ್​ ಸಂಸ್ಥೆ ಮನವಿ ಮಾಡಿದೆ.

ವರದಿಯನ್ನು 3 ತಿಂಗಳ ಒಳಗೆ ಪೂರ್ಣಗೊಳಿಸಬೇಕು ಮತ್ತು ವರದಿಯ ವಿವರನ್ನು ಶೀಘ್ರವೇ ಸಾರ್ವಜನಿಕಗೊಳಿಸಬೇಕು ಎಂದು ಫೈರ್​ ಸಂಸ್ಥೆ ಒತ್ತಾಯಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆಯಲಾಗಿದೆ. ಮಲಯಾಳಂ ಚಿತ್ರರಂಗದ ರೀತಿಯೇ ಕನ್ನಡ ಚಿತ್ರರಂಗದಲ್ಲೂ ಒಂದು ವೇಳೆ ತನಿಖೆ ನಡೆದು ವರದಿ ಪ್ರಕಟವಾದರೆ ಒಂದಷ್ಟು ಮಂದಿಯ ಹೆಸರುಗಳು ಹೊರಬರುವ ಸಾಧ್ಯತೆ ಇದೆ.

ಇದನ್ನೂ ಓದಿ: ‘ಹೇಮಾ ಸಮಿತಿ ರೀತಿ ಟಾಲಿವುಡ್​ನಲ್ಲೂ ವರದಿ ಪ್ರಕಟವಾಗಲಿ’: ಸಮಂತಾ ಒತ್ತಾಯ

ಕವಿತಾ ಲಂಕೇಶ್​, ಐಂದ್ರಿತಾ ರೇ, ಅಕ್ಷತಾ ಪಾಂಡವಪುರ, ಶ್ರುತಿ ಹರಿಹರನ್​, ಆಶಿಕಾ ರಂಗನಾಥ್​, ಅಮೃತಾ ಅಯ್ಯಂಗಾರ್, ಕಿಶೋರ್​, ಕವಿರಾಜ್​, ಚೈತ್ರಾ ಜೆ. ಆಚಾರ್​, ಮಂಸೋರೆ, ಮೇಘನಾ ಗಾಂವ್ಕರ್​, ಮಾನ್ವಿತ ಕಾಮತ್​, ಪವನ್​ ಕುಮಾರ್​, ಪೂಜಾ ಗಾಂಧಿ, ಚೇತನ್​, ಜಯತೀರ್ಥ, ಸುದೀಪ್, ರಮ್ಯಾ, ಶಾನ್ವಿ ಶ್ರೀವಾಸ್ತವ ಮುಂತಾದವರು ಪತ್ರಕ್ಕೆ ಸಹಿ ಹಾಕಿದ್ದಾರೆ. ಅತ್ತ, ಟಾಲಿವುಡ್​ನಲ್ಲಿ ಕೂಡ ‘ಹೇಮಾ ಸಮಿತಿ’ ಮಾದರಿಯಲ್ಲೇ ಕಮಿಟಿ ರಚಿಸಿ ತನಿಖೆ ಮಾಡಬೇಕು ಎಂದು ಸಮಂತಾ ರುತ್​ ಪ್ರಭು, ಲಕ್ಷ್ಮಿ ಮಂಚು ಮುಂತಾದವರು ಆಗ್ರಹಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.