ನಿರ್ಮಾಪಕ ಕೋಟಿ ರಾಮು ಅಂತ್ಯಕ್ರಿಯೆಗೆ ಕುಣಿಗಲ್​ನಲ್ಲಿ ಸಕಲ ಸಿದ್ಧತೆ

ಬೆಂಗಳೂರಿನಿಂದ ಬೆಳಗ್ಗೆ 9 ಗಂಟೆಗೆ ರಾಮು ಅವರ ಪಾರ್ಥಿವ ಶರೀರ ರವಾನೆ ಆಗಿದೆ. ಪತ್ನಿ ಮಾಲಾಶ್ರೀ ಮತ್ತು ಕುಟುಂಬದ ಕೆಲವೇ ಕೆಲವು ಮಂದಿ ಸದಸ್ಯರು ಅಂತ್ರಕ್ರಿಯೆಯಲ್ಲಿ ಭಾಗಿ ಆಗಲಿದ್ದಾರೆ.

ನಿರ್ಮಾಪಕ ಕೋಟಿ ರಾಮು ಅಂತ್ಯಕ್ರಿಯೆಗೆ ಕುಣಿಗಲ್​ನಲ್ಲಿ ಸಕಲ ಸಿದ್ಧತೆ
ನಿರ್ಮಾಪಕ ಕೋಟಿ ರಾಮು

Updated on: Apr 27, 2021 | 10:41 AM

ಕೋಟಿ ರಾಮು ಎಂದೇ ಸ್ಯಾಂಡಲ್​ವುಡ್​ನಲ್ಲಿ ಗುರುತಿಸಿಕೊಂಡಿದ್ದ ನಿರ್ಮಾಪಕ ರಾಮು ಅವರು ಕೊರೊನಾ ವೈರಸ್​ ಸೋಂಕಿನಿಂದ ಸೋಮವಾರ (ಏ.26) ನಿಧನರಾಗಿದ್ದು ನೋವಿನ ಸಂಗತಿ. ಇಡೀ ಕನ್ನಡ ಚಿತ್ರರಂಗಕ್ಕೆ ಈ ಘಟನೆಯಿಂದ ಆಘಾತ ಆಗಿದ್ದು, ಎಲ್ಲರೂ ಶ್ರದ್ಧಾಂಜಲಿ ಅರ್ಪಿಸಿಸುತ್ತಿದ್ದಾರೆ. ರಾಮು ಪತ್ನಿ, ನಟಿ ಮಾಲಾಶ್ರೀ ಅವರನ್ನು ಸೆಲೆಬ್ರಿಟಿಗಳು ಸಂತೈಸುತ್ತಿದ್ದಾರೆ. ಇಂದು (ಏ.27) ರಾಮು ಅಂತ್ಯಕ್ರಿಯೆ ನೆರವೇರುತ್ತಿದೆ.

ತುಮಕೂರು ತಾಲೂಕಿನ ಕುಣಿಗಲ್ ಬಳಿಯ ಕೊಡಿಗೇನಹಳ್ಳಿಯಲ್ಲಿ ರಾಮು ಅಂತ್ಯಕ್ರಿಯೆ ನಡೆಯಲಿದೆ. ಮಧ್ಯಾಹ್ನ 12.30ರ ಸುಮಾರಿಗೆ ಅಂತ್ಯ ಸಂಸ್ಕಾರ ನೆರವೇರಿಸಲು ತೀರ್ಮಾನಿಸಲಾಗಿದೆ. ಬೆಂಗಳೂರಿನಿಂದ ಬೆಳಗ್ಗೆ 9 ಗಂಟೆಗೆ ರಾಮು ಅವರ ಪಾರ್ಥಿವ ಶರೀರವನ್ನು ತೆಗೆದುಕೊಂಡು ಹೋಗಲಾಗಿದೆ. ಮಾಲಾಶ್ರೀ ಸೇರಿದಂತೆ ಕುಟುಂಬದ ಕೆಲವೇ ಕೆಲವು ಮಂದಿ ಸದಸ್ಯರು ಅಂತ್ಯಕ್ರಿಯೆಯಲ್ಲಿ ಭಾಗಿ ಆಗಲಿದ್ದಾರೆ. ಅದಕ್ಕಾಗಿ ಈಗಾಗಲೇ ಸಕಲ ಸಿದ್ಧತೆ ನಡೆದಿದೆ.

‘ರಾಮು ಅವರು ಭಾನುವಾರದವರೆಗೂ ಮಾತಾಡಿದ್ದರು. ನಿನ್ನೆ ಕೂಡ ಮಧ್ಯಾಹ್ನ ಮೇಡಂ ಊಟ ತಂದು ಕೊಟ್ಟಿದ್ರು. ಆಗಲೂ ಚೆನ್ನಾಗೇ ಇದ್ರು. ಅರ್ಜುನ್ ಗೌಡ ಸಿನಿಮಾ ಬಗ್ಗೆ ಬಹಳ ನೀರೀಕ್ಷೆ ಇಟ್ಕೊಂಡಿದ್ರು. ಅದರ ಬಗ್ಗೆ ಬಹಳ ದೊಡ್ಡ ಕನಸು ಕಂಡಿದ್ದರು’ ಎಂದು ಅವರ ಆಪ್ತ ಗೋವಿಂದ್​ ರಾಜ್​ ಹೇಳಿದ್ದಾರೆ.

ರಾಮು ನಿಧನಕ್ಕೆ ಕನ್ನಡ ಚಿತ್ರರಂಗದ ಅನೇಕರು ಕಂಬನಿ ಮಿಡಿಯುತ್ತಿದ್ದಾರೆ. ದರ್ಶನ್​, ಸುಮಲತಾ ಅಂಬರೀಶ್​, ಪುನೀತ್​ ರಾಜ್​ಕುಮಾರ್, ಶಿವರಾಜ್​ಕುಮಾರ್​, ಮಿಲನಾ ನಾಗರಾಜ್​, ದೇವರಾಜ್​, ಪ್ರಜ್ವಲ್​ ದೇವರಾಜ್​ ಮುಂತಾದವರು ರಾಮು ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿದ್ದಾರೆ. ಅಲ್ಲದೇ, ಈ ಸಂದರ್ಭದಲ್ಲಿ ಜನರೆಲ್ಲರೂ ಕೊವಿಡ್​ನಿಂದ ಪಾರಾಗಲು ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಪಾಲಿಸಿ ಎಂದು ಸೆಲೆಬ್ರಿಟಿಗಳು ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಕೇವಲ 21ನೇ ವಯಸ್ಸಿಗೆ ಚಿತ್ರರಂಗಕ್ಕೆ ಬಂದ ರಾಮು, ನಂತರ ಕೋಟಿ ರಾಮು ಆಗಿದ್ದರ ಹಿಂದಿದೆ ಅಚ್ಚರಿಯ ಕಥೆ

ನನಗಾಗಿ ರಾಜಕುಮಾರ ಸಿನಿಮಾ ಟೈಟಲ್ ಬಿಟ್ಟುಕೊಟ್ಟಿದ್ರು; ನಿರ್ಮಾಪಕ ರಾಮು ನಿಧನ ಸುದ್ದಿ ಕೇಳಿ ಭಾವುಕರಾದ ಪುನೀತ್​  

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us