ಕನ್ನಡದ ‘ಮಣಿಕಂಠ’ ಸಿನಿಮಾಗೆ ಹಾರೈಸಲು ಕಾಶಿಯಿಂದ ಬಂದ ನಾಗಸಾಧುಗಳು

ಶಬರಿಮಲೆ ಸ್ವಾಮಿ ಅಯ್ಯಪ್ಪನ ಕುರಿತು ಈಗಾಗಲೇ ಹಲವು ಸಿನಿಮಾಗಳು ಬಂದು ಭಕ್ತರ ಮನ ಗೆದ್ದಿವೆ. ಈಗ ಕನ್ನಡದಲ್ಲಿ ‘ಮಣಿಕಂಠ’ ಎಂಬ ಹೊಸ ಸಿನಿಮಾ ಸೆಟ್ಟೇರಿದೆ. ಇತ್ತೀಚೆಗೆ ಮುಹೂರ್ತ ಮಾಡಲಾಗಿದೆ. ‘ಮಣಿಕಂಠ’ ಸಿನಿಮಾದ ಮಹೂರ್ತ ಸಮಾರಂಭಕ್ಕೆ ಕಾಶಿಯಿಂದ ನಾಗಸಾಧುಗಳು ಆಗಮಿಸಿದ್ದರು. ಆ ಕುರಿತು ಇಲ್ಲಿದೆ ಮಾಹಿತಿ..

ಕನ್ನಡದ ‘ಮಣಿಕಂಠ’ ಸಿನಿಮಾಗೆ ಹಾರೈಸಲು ಕಾಶಿಯಿಂದ ಬಂದ ನಾಗಸಾಧುಗಳು
Manikanta Movie Muhurtha

Updated on: Dec 01, 2025 | 6:18 PM

ಈಗ ಎಲ್ಲೆಲ್ಲೂ ಅಯ್ಯಪ್ಪನ ಜಪವೇ ಕೇಳಿಬರುತ್ತಿದೆ. ಅಯ್ಯಪ್ಪ ಭಕ್ತರು ಮಾಲೆ ಧರಿಸಿ ಶಬರಿಮಲೆಗೆ ಹೋಗಿ ಬರುತ್ತಿದ್ದಾರೆ. ಇಂಥ ಭಕ್ತಿಯ ವಾತಾವರಣ ಎಲ್ಲೆಲ್ಲೂ ತುಂಬಿರುವ ಈ ಸಂದರ್ಭದಲ್ಲೇ ಅಯ್ಯಪ್ಪ ಸ್ವಾಮಿ ಕುರಿತು ಕನ್ನಡದಲ್ಲಿ ಹೊಸ ಸಿನಿಮಾ ಸೆಟ್ಟೇರಿದೆ. ಈ ಸಿನಿಮಾಗೆ ‘ಮಣಿಕಂಠ’ (Manikanta) ಎಂದು ಹೆಸರು ಇಡಲಾಗಿದೆ. ಇತ್ತೀಚೆಗೆ ಈ ಚಿತ್ರಕ್ಕೆ ಮುಹೂರ್ತ ಸಮಾರಂಭ ಮಾಡಲಾಗಿದೆ. ಮಹಾಲಕ್ಷೀಪುರದ ಶ್ರೀ ಧರ್ಮಶಾಸ್ತ್ರ ಅಯ್ಯಪ್ಪ ದೇವಸ್ಥಾನದಲ್ಲಿ ‘ಮಣಿಕಂಠ’ ಸಿನಿಮಾಗೆ ಮುಹೂರ್ತ ನಡೆಯಿತು. ಈ ಸಿನಿಮಾ ತಂಡಕ್ಕೆ ಶುಭ ಹಾರೈಸಲು ಕಾಶಿಯಿಂದ ನಾಗಸಾಧುಗಳು (Naga Sadhus) ಆಗಮಿಸಿದ್ದರು ಎಂಬುದು ವಿಶೇಷ.

ನಾಗಸಾಧುಗಳ ಸಮ್ಮುಖದಲ್ಲಿ ‘ಮಣಿಕಂಠ’ ಸಿನಿಮಾಗೆ ಮುಹೂರ್ತ ಮಾಡಲಾಯಿತು. ‘ಅಶ್ವಿನಿ ಪ್ರೊಡಕ್ಷನ್ಸ್’ ಮೂಲಕ ಅಶ್ವಿನಿ ಸಂತೋಷ್‌ ಸಿಂಹ ಅವರು ಈ ಸಿನಿಮಾನ್ನು ನಿರ್ಮಾಣ ಮಾಡುತ್ತಿದ್ದಾರೆ. ಅಲ್ಲದೇ, ಅವರೇ ಮುಖ್ಯ ಪಾತ್ರ ಕೂಡ ಮಾಡುತ್ತಿದ್ದಾರೆ. ಈವರೆಗೂ ಬೇರೆ ಸಿನಿಮಾಗಳಲ್ಲಿ ಚಿಕ್ಕ-ಪುಟ್ಟ ಪಾತ್ರಗಳನ್ನು ಮಾಡಿದ್ದ ಅವರು ಈಗ ಇದೇ ಮೊದಲ ಬಾರಿಗೆ ಹೀರೋ ಆಗಿದ್ದಾರೆ.

ಸಂತೋಷ್ ಸಿಂಹ ಅವರೇ ಕಥೆ ಬರೆದು, ನಿರ್ದೇಶನ ಕೂಡ ಮಾಡಿದ್ದಾರೆ. ಅವರ ಇಬ್ಬರು ಮಕ್ಕಳು ಕೂಡ ಈ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಗುರು ಜೀವನ್‌ ಸಿಂಹ, ತನುಶ್ರೀ ಸಿಂಹ, ಬಿ.ಎಸ್. ಮಂಜುಳಾ, ಶರತ್ ಎಸ್.ಎಂ, ವೈಷ್ಣವಿ ಎಸ್.ಡಿ, ಮಮತಾ, ಶಿವಣ್ಣ ಮುಂತಾದ ಕಲಾವಿದರು ಕೂಡ ‘ಮಣಿಕಂಠ’ ಚಿತ್ರದಲ್ಲಿ ನಟಿಸುತ್ತಿದ್ದಾರೆ.

ಸ್ವರೂಪ್ ಆರ್. ಅವರು ‘ಮಣಿಕಂಠ’ ಸಿನಿಮಾಗೆ ಸಂಗೀತ ಸಂಯೋಜಿಸುತಿದ್ದಾರೆ. 5 ಹಾಡುಗಳಿಗೆ ಚೇತನ್‌ ಕುಮಾರ್ ಸಾಹಿತ್ಯ ಬರೆಯಲಿದ್ದಾರೆ. ವರ್ಷಿತ್ ಎಸ್.ಎನ್. ಅವರು ಛಾಯಾಗ್ರಹಣ ಮತ್ತು ಸಂಕಲನ ಮಾಡುತ್ತಿದ್ದಾರೆ. ಗಣೇಶ್ ಅವರು ಸಾಹಸ ನಿರ್ದೇಶನ ಮಾಡಲಿದ್ದಾರೆ. ಬೆಂಗಳೂರು, ಶಬರಿಮಲೆ, ಪಂಪ, ದೊಡ್ಡಪಾದ ಮುಂತಾದ ಕಡೆಗಳಲ್ಲಿ ಈ ಸಿನಿಮಾಗೆ ಶೂಟಿಂಗ್ ನಡೆಯಲಿದೆ.

ಇದನ್ನೂ ಓದಿ: ಅಯ್ಯಪ್ಪ ಮಾಲೆ ಧರಿಸಿ, 18 ಮೆಟ್ಟಿಲು ಹತ್ತಿದ ಮೋಹನ್​​ಲಾಲ್: ವಿಡಿಯೋ

ಮುಹೂರ್ತದ ಬಳಿಕ ಸಂತೋಷ್‌ ಸಿಂಹ ಅವರು ಈ ಸಿನಿಮಾ ಬಗ್ಗೆ ಮಾಹಿತಿ ನೀಡಿದರು. ‘ಪ್ರತಿಯೊಬ್ಬರ ಜೀವನದಲ್ಲಿ ಮಣಿಕಂಠ ಆವರಿಸಿಕೊಂಡಿದ್ದಾನೆ. ಅದನ್ನು ಅನುಭವಿಸಿದಾಗ ಮಾತ್ರ ತಿಳಿಯುತ್ತದೆ. 25 ವರ್ಷ ದೊಡ್ಡಪಾದಕ್ಕೆ ಹೋಗಿ ಭಕ್ತಿಯಿಂದ ಸ್ವಾಮಿಯ ದರ್ಶನ ಮಾಡಿದ್ದೇನೆ. ನನ್ನ ಬದುಕಲ್ಲಿ ನಡೆದ ಸತ್ಯ ಘಟನೆಗಳನ್ನು ಹಾಗೂ ಸ್ವಾಮಿಯ ಪವಾಡಗಳನ್ನು ಈ ಸಿನಿಮಾದಲ್ಲಿ ತೋರಿಸುವ ಪ್ರಯತ್ನ ಮಾಡುತ್ತಿದ್ದೇನೆ’ ಎಂದು ಅವರು ಹೇಳಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.