CV Shivashankar: ಕನ್ನಡ ಚಿತ್ರರಂಗದ ಹಿರಿಯ ನಟ, ನಿರ್ದೇಶಕ ಸಿ.ವಿ. ಶಿವಶಂಕರ್​ ಹೃದಯಾಘಾತದಿಂದ ನಿಧನ

| Updated By: Digi Tech Desk

Updated on: Jun 27, 2023 | 4:28 PM

C.V. Shivashankar Death: ಚಿತ್ರ ಸಾಹಿತಿಯಾಗಿಯೂ ಸಿ.ವಿ. ಶಿವಶಂಕರ್​ ಗುರುತಿಸಿಕೊಂಡಿದ್ದರು. ‘ಸಿರಿವಂತನಾದರೂ ಕನ್ನಡ ನಾಡಲ್ಲಿ ಮೆರೆವೆ..’ ಹಾಡನ್ನು ಬರೆಯುವ ಮೂಲಕ ಅಪಾರ ಜನಪ್ರಿಯತೆ ಪಡೆದುಕೊಂಡಿದ್ದರು.

CV Shivashankar: ಕನ್ನಡ ಚಿತ್ರರಂಗದ ಹಿರಿಯ ನಟ, ನಿರ್ದೇಶಕ ಸಿ.ವಿ. ಶಿವಶಂಕರ್​ ಹೃದಯಾಘಾತದಿಂದ ನಿಧನ
ಸಿ.ವಿ. ಶಿವಶಂಕರ್​
Follow us on

ಚಂದನವನದಲ್ಲಿ (Sandalwood) ಹಲವು ವರ್ಷಗಳ ಅನುಭವ ಹೊಂದಿದ್ದ ನಟ, ನಿರ್ದೇಶಕ ಸಿ.ವಿ. ಶಿವಶಂಕರ್​ ಅವರು ನಿಧನರಾಗಿದ್ದಾರೆ. ಇಂದು (ಜೂನ್​ 27) ಮಧ್ಯಾಹ್ನ 2 ಗಂಟೆ ಸುಮಾರಿಗೆ ಅವರಿಗೆ ಹೃದಯಾಘಾತ (Heart Attack) ಆಗಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದರೆ ಅವರು ಬದುಕು ಉಳಿಯಲಿಲ್ಲ ಎಂಬುದು ನೋವಿನ ಸಂಗತಿ. ಸಿ.ವಿ. ಶಿವಶಂಕರ್​ ಅವರಿಗೆ 90 ವರ್ಷ ವಯಸ್ಸಾಗಿತ್ತು. ‘ಯಾವುದೇ ಗಂಭೀರವಾದ ಆರೋಗ್ಯ ಸಮಸ್ಯೆ ಅವರಿಗೆ ಇರಲಿಲ್ಲ. ಮಧ್ಯಾಹ್ನ ಊಟ ಮುಗಿಸಿದರು. ಪೂಜೆ ಮಾಡಿದ ಬಳಿಕ ಹಾರ್ಟ್​ ಅಟ್ಯಾಕ್​ ಆಯಿತು’ ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ. ಸಿ.ವಿ. ಶಿವಶಂಕರ್​ (C V Shivashankar) ಅವರ ನಿಧನಕ್ಕೆ ಚಿತ್ರರಂಗದವರು ಸಂತಾಪ ಸೂಚಿಸುತ್ತಿದ್ದಾರೆ. ಅಂತ್ಯಕ್ರಿಯೆ ಬಗ್ಗೆ ಇನ್ನಷ್ಟೇ ಮಾಹಿತಿ ಸಿಗಬೇಕಿದೆ.

ಆರಂಭದಲ್ಲಿ ಸಿ.ವಿ. ಶಿವಶಂಕರ್​ ಅವರು ರಂಗಭೂಮಿಯಲ್ಲಿ ತೊಡಗಿಕೊಂಡಿದ್ದರು. ಬಾಲನಟನಾಗಿಯೇ ರಂಗಭೂಮಿ ಪ್ರವೇಶಿಸಿದ್ದ ಅವರು ಅನೇಕ ನಾಟಕಗಳಲ್ಲಿ ಅಭಿನಯಿಸಿದ್ದರು. ನಂತರ ಅವರು ಚಿತ್ರರಂಗಕ್ಕೆ ಕಾಲಿಟ್ಟರು. ‘ಸ್ಕೂಲ್ ಮಾಸ್ಟರ್​’, ‘ಕೃಷ್ಣ ಗಾರುಡಿ’, ‘ರತ್ಮಮಂಜರಿ’, ‘ರತ್ನಗಿರಿ ರಹಸ್ಯ’ ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ಅವರು ನಟಿಸಿದ್ದರು. ಹಲವು ನಿರ್ದೇಶಕರ ಜೊತೆ ಸಹಾಯಕರಾಗಿ ಅನುಭವ ಪಡೆದ ಬಳಿಕ ‘ಮನೆ ಕಟ್ಟಿ ನೋಡು’ ಸಿನಿಮಾವನ್ನು ಸ್ವತಂತ್ರವಾಗಿ ನಿರ್ದೇಶಿಸಿದ್ದರು.

ಇದನ್ನೂ ಓದಿ: Kazan Khan: ಖ್ಯಾತ ಖಳನಟ ಕಝಾನ್​ ಖಾನ್​ ಇನ್ನಿಲ್ಲ; ಹೃದಯಾಘಾತದಿಂದ ಇಹಲೋಕ ತ್ಯಜಿಸಿದ ಕಲಾವಿದ

‘ಪದವೀಧರ’, ‘ನಮ್ಮ ಊರು’, ‘ಮಹಡಿಯ ಮನೆ’, ‘ಹೊಯ್ಸಳ, ‘ಮಹಾ ತಪಸ್ವಿ’, ‘ಕನ್ನಡ ಕುವರ’, ‘ವೀರ ಮಹಾದೇವ’ ಮತ್ತಿತರ ಸಿನಿಮಾಗಳಿಗೆ ಸಿ.ವಿ. ಶಿವಶಂಕರ್​ ಅವರು ನಿರ್ದೇಶನ ಮಾಡಿದ್ದರು. ಕನ್ನಡ ಚಿತ್ರರಂಗದಲ್ಲಿ ಗೀತರಚನಕಾರನಾಗಿಯೂ ಅವರು ಗುರುತಿಸಿಕೊಂಡಿದ್ದರು. ‘ಸಿರಿವಂತನಾದರೂ ಕನ್ನಡ ನಾಡಲ್ಲಿ ಮೆರೆವೆ..’ ಹಾಡನ್ನು ಬರೆಯುವ ಮೂಲಕ ಅವರು ಅಪಾರ ಜನಪ್ರಿಯತೆ ಪಡೆದುಕೊಂಡಿದ್ದರು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 4:13 pm, Tue, 27 June 23