AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಂದಿನಿ ಉತ್ಪನ್ನಗಳಿಗೆ ಸುಧಾರಾಣಿ ರಾಯಭಾರಿ: ಕೆಎಂಎಫ್ ಆಕ್ಷೇಪ

Sudharani: ಡಾ ರಾಜ್​​ಕುಮಾರ್, ಪುನೀತ್ ರಾಜ್​​ಕುಮಾರ್ ಅವರುಗಳು ರಾಯಭಾರಿ ಆಗಿದ್ದ ನಂದಿನಿ ಉತ್ಪನ್ನಗಳಿಗೆ ಇದೀಗ ಸುಧಾರಾಣಿ ಅವರು ರಾಯಭಾರಿ ಆಗಿದ್ದಾರೆ. ಬಮೂಲ್ ವತಿಯಿಂದ ಸುಧಾರಾಣಿ ರಾಯಭಾರಿ ಆಗಿದ್ದು, ಇದೀಗ ಸುಧಾರಾಣಿ ಅವರ ನೇಮಕಕ್ಕೆ ಕೆಎಂಎಫ್ ಆಕ್ಷೇಪ ವ್ಯಕ್ತಪಡಿಸಿದೆ. ಸುಧಾರಾಣಿ ನೇಮಕ್ಕೆ ಕೆಎಂಎಫ್ ವಿರೋಧ ಏಕೆ? ವಿವರ ಇಲ್ಲಿದೆ...

ನಂದಿನಿ ಉತ್ಪನ್ನಗಳಿಗೆ ಸುಧಾರಾಣಿ ರಾಯಭಾರಿ: ಕೆಎಂಎಫ್ ಆಕ್ಷೇಪ
Sudharani Dk Suresh
ಮಂಜುನಾಥ ಸಿ.
|

Updated on: Feb 12, 2026 | 12:19 PM

Share

ಕೆಲ ದಿನಗಳ ಹಿಂದಷ್ಟೆ ರಾಜ್ಯದ ಹೆಮ್ಮೆಯಾಗಿರುವ ಸರ್ಕಾರಿ ಮಾಲೀಕತ್ವದ ಮೈಸೂರು ಸ್ಯಾಂಡಲ್ ಉತ್ಪನ್ನಗಳಿಗೆ ಪ್ಯಾನ್ ಇಂಡಿಯಾ ನಟಿ ತಮನ್ನಾ ಭಾಟಿಯಾ (Tamannah Bhatia) ಅವರನ್ನು ರಾಯಭಾರಿ ಅನ್ನಾಗಿ ಮಾಡಲಾಗಿದೆ. ಕನ್ನಡದವರ ಬದಲು ಪರಭಾಷಾ ನಟಿಯನ್ನು ರಾಯಭಾರಿ ಮಾಡಿದ್ದಕ್ಕೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದರು. ಇದೀಗ ಬಮೂಲ್ (ಬೆಂಗಳೂರು ಹಾಲು ಒಕ್ಕೂಟ) ತಮ್ಮ ನಂದಿನಿ ಉತ್ಪನ್ನಗಳಿಗೆ ಸುಧಾರಾಣಿ ಅವರನ್ನು ರಾಯಭಾರಿ ಅನ್ನಾಗಿ ಮಾಡಿದೆ. ಆದರೆ ಇದಕ್ಕೆ ಕೆಎಂಎಫ್ (ಕರ್ನಾಟಕ ಹಾಲು ಮಹಾಮಂಡಳ) ವಿರೋಧ ವ್ಯಕ್ತಪಡಿಸಿದೆ.

ಬಮೂಲ್​​ನ ಅಧ್ಯಕ್ಷರಾಗಿರುವ ಡಿಕೆ ಸುರೇಶ್ ಅವರು ಸುಧಾರಾಣಿ ಅವರನ್ನು ಭೇಟಿಯಾಗಿ ಅವರಿಗೆ ಹೂಗುಚ್ಛ ನೀಡಿ ಅವರನ್ನು ಬಮೂಲ್​​ ಉತ್ಪನ್ನಗಳ ರಾಯಭಾರಿ ಆಗಿ ಸ್ವಾಗತಿಸಿದ್ದಾರೆ. ಈ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಹಿರಿಯ ನಟಿ ಸುಧಾರಾಣಿ, ‘ತಲೆಮಾರುಗಳಿಂದ ಪ್ರತಿಯೊಬ್ಬ ಕನ್ನಡಿಗನ ನಂಬಿಕೆಯ ಪ್ರತೀಕ ನಂದಿನಿ. ರೈತರ ಸಹಕಾರಿ ಸಂಸ್ಥೆಯಾದ ಬಮುಲ್ ನಂದಿನಿ (BAMUL Nandini) ಜೊತೆ ಒಡಗೂಡುವ ಅವಕಾಶ ನನಗೆ ಅತ್ಯಂತ ಗೌರವದ ವಿಷಯ. ಡಾ. ರಾಜ್‌ಕುಮಾರ್, ಶಿವರಾಜ್‌ಕುಮಾರ್ ಹಾಗೂ ಪುನೀತ್ ರಾಜ್‌ಕುಮಾರ್ ಅವರಂತಹ ಮೇರು ವ್ಯಕ್ತಿಗಳ ಹಾದಿಯನ್ನು ಅನುಸರಿಸಿ ಬ್ರ್ಯಾಂಡ್ ಅಂಬಾಸಿಡರ್ ಆಗಿರುವುದು ಕೇವಲ ಅನುಕರಣೆಯಲ್ಲ ಧನ್ಯತೆ ಮತ್ತು ಹೆಮ್ಮೆಯ ಜವಾಬ್ದಾರಿ’ ಎಂದಿದ್ದಾರೆ.

‘ಸಂಸ್ಥೆಯಿಂದ ಬರುವ ಹೊಸ ಉತ್ಪನ್ನಗಳ ಬಿಡುಗಡೆಯ ಹಿಂದೆ ಇರುವ ದೃಷ್ಟಿಕೋನ ನಿಜಕ್ಕೂ ಪ್ರೇರಣಾದಾಯಕವಾಗಿತ್ತು. ನಮ್ಮ ದೇಸಿ ಹಸುಗಳನ್ನು ಸಂರಕ್ಷಿಸುವುದು, ರೈತರಿಗೆ ನ್ಯಾಯಸಮ್ಮತ ಬೆಲೆ ಖಚಿತಪಡಿಸುವುದು ಹಾಗೂ ಗ್ರಾಹಕರಿಗೆ ಗುಣಮಟ್ಟದ, ವಿಶ್ವಾಸಾರ್ಹ ಉತ್ಪನ್ನಗಳನ್ನು ತಲುಪಿಸುವುದೇ ಇದರ ಮುಖ್ಯ ಉದ್ದೇಶವಾಗಿದೆ. ಈ ಹೊಸ ಅಧ್ಯಾಯದಲ್ಲಿ ದೇಸಿ ಹಸುಗಳಿಂದ ತಯಾರಿಸಿದ A2 ತುಪ್ಪ, A2 ಹಾಲು ಸೇರಿದಂತೆ ಹಲವು ಉತ್ಪನ್ನಗಳು ಸೇರಿದೆ. ಸಂಪ್ರದಾಯ, ಶುದ್ಧತೆ ಮತ್ತು ರೈತರ ಕಲ್ಯಾಣದ ಮೌಲ್ಯಗಳು ಅಡಕವಾಗಿರುವ, ರೈತರನ್ನು ಮನ್ನೆಲೆಗೆ ತರುವ, ನಮ್ಮ ಬೇರುಗಳನ್ನು ಗೌರವಿಸುವ ಮತ್ತು ಕರ್ನಾಟಕದ ಪರಂಪರೆಯನ್ನು ಮುಂದಿನ ಪೀಳಿಗೆಗಳಿಗೆ ಸಾಗಿಸುವ ಈ ಚಳವಳಿಗೆ ಬೆಂಬಲ ನೀಡಲು ನನಗೆ ಅಪಾರ ಹೆಮ್ಮೆಯಾಗುತ್ತಿದೆ’ ಎಂದಿದ್ದಾರೆ.

ಇದನ್ನೂ ಓದಿ:ಶೂಟಿಂಗ್ ಮಾಡುವಾಗ ಸಿಟ್ಟಾದ ತಮನ್ನಾ ಭಾಟಿಯಾ: ವಿಡಿಯೋ ನೋಡಿ

ಆದರೆ ಸುಧಾರಾಣಿ ಅವರನ್ನು ಬಮೂಲ್, ರಾಯಭಾರಿ ಅನ್ನಾಗಿ ನೇಮಕ ಮಾಡಿಕೊಂಡಿರುವುದಕ್ಕೆ ಮಾತೃಸಂಸ್ಥೆಯಾದ ಕೆಎಂಎಫ್ ಆಕ್ಷೇಪ ವ್ಯಕ್ತಪಡಿಸಿದೆ. ಬಮೂಲ್ ಸಂಸ್ಥೆಯು ಬೈಲಾದ ವಿರುದ್ಧವಾಗಿ ರಾಯಭಾರಿ ಅನ್ನು ನೇಮಕ ಮಾಡಿದೆ ಎಂದು ಆರೋಪಿಸಿದ್ದು, ಈ ನೇಮಕವು ನಿಯಮ ಬಾಹಿರವಾಗಿದೆ ಎಂದಿದೆ. ಕೆಎಂಎಫ್​​ಗೆ ಮಾಹಿತಿ ಸಹ ನೀಡದೆ ರಾಯಭಾರಿ ನೇಮಕ ಮಾಡಿರುವ ಬಗ್ಗೆ ಬಮೂಲ್ ಅಧಿಕಾರಿಗಳ ಬಳಿ ಸ್ಪಷ್ಟನೆ ಕೇಳಲಾಗುವುದು ಎಂದು ಕೆಎಂಎಫ್​​ನ ಅಧಿಕಾರಿಗಳು ಹೇಳಿರುವುದಾಗಿ ವರದಿಯಾಗಿದೆ.

ನಂದಿನಿಯ ಉತ್ಪನ್ನಗಳಿಗೆ ಡಾ ರಾಜ್​​ಕುಮಾರ್ ಪ್ರಥಮ ರಾಯಭಾರಿ ಆಗಿದ್ದರು. ರಾಜ್​​ಕುಮಾರ್ ಅವರು ನಂದಿನಿ ಉತ್ಪನ್ನಗಳಿಗೆ ನೀಡಿದ ಪ್ರಚಾರದಿಂದಾಗಿ ನಂದಿನಿಯ ಉತ್ಪನ್ನಗಳು ರಾಜ್ಯದಾದ್ಯಂತ ಮನೆ ಮಾತಾದವು. ಬಳಿಕ ಪುನೀತ್ ರಾಜ್​​ಕುಮಾರ್ ಅವರು ನಂದಿನಿ ಉತ್ಪನ್ನಗಳಿಗೆ ರಾಯಭಾರಿ ಆದರು. ಪುನೀತ್ ಅವರೂ ಸಹ ಉಚಿತವಾಗಿ ನಂದಿನಿಗೆ ರಾಯಭಾರಿ ಆಗಿದ್ದರು. ಆದರೆ ಅವರ ನೇಮಕವನ್ನು ಕೆಎಂಎಫ್​ ಮಾಡಿತ್ತು, ಇದೀಗ ಬಮೂಲ್ ಸ್ವತಂತ್ರ್ಯವಾಗಿ ಸುಧಾರಾಣಿ ಅವರನ್ನು ನೇಮಕ ಮಾಡಿರುವುದು ವಿವಾದಕ್ಕೆ ಕಾರಣವಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ