ದರ್ಶನ್​ ಪಾತ್ರದ ಬಗ್ಗೆ ಹರಡಿದ್ದ ಗಾಳಿಸುದ್ದಿಗೆ ಸ್ಪಷ್ಟನೆ ನೀಡಿದ ‘ಕರಾವಳಿ’ ಸಿನಿಮಾ ತಂಡ

ಪ್ರಜ್ವಲ್​ ದೇವರಾಜ್​ ಅವರು ‘ಕರಾವಳಿ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಗುರುದತ್ತ ಗಾಣಿಗ ನಿರ್ದೇಶನದ ಈ ಸಿನಿಮಾದ ಪೋಸ್ಟರ್​ಗಳು ಗಮನ ಸೆಳೆದಿವೆ. ಇದೇ ಸಿನಿಮಾದಲ್ಲಿ ದರ್ಶನ್​ ಕೂಡ ಅಭಿನಯಿಸುತ್ತಾರೆ ಎಂದು ಗಾಳಿಸುದ್ದಿ ಹರಡಿತ್ತು. ಅದಕ್ಕೆ ಸಂಬಂಧಿಸಿದಂತೆ ಈಗ ಚಿತ್ರತಂಡದವರು ಸ್ಪಷ್ಟನೆ ನೀಡಿದ್ದಾರೆ. ಇಂಥ ಗಾಸಿಪ್​ ಹರಡಿದ್ದು ಹೇಗೆ ಎಂಬುದನ್ನು ಕೂಡ ‘ಕರಾವಳಿ’ ವಿವರಿಸಿದೆ..

ದರ್ಶನ್​ ಪಾತ್ರದ ಬಗ್ಗೆ ಹರಡಿದ್ದ ಗಾಳಿಸುದ್ದಿಗೆ ಸ್ಪಷ್ಟನೆ ನೀಡಿದ ‘ಕರಾವಳಿ’ ಸಿನಿಮಾ ತಂಡ
ದರ್ಶನ್​, ಪ್ರಜ್ವಲ್​ ದೇವರಾಜ್​

Updated on: Jul 07, 2024 | 2:50 PM

ಕಳೆದ ಒಂದಷ್ಟು ದಿನಗಳಿಂದ ಎಲ್ಲೆಲ್ಲೂ ದರ್ಶನ್​ ಕುರಿತ ಸುದ್ದಿಯೇ ಕೇಳಿಬರುತ್ತಿದೆ. ಒಂದು ಕಡೆ ರೇಣುಕಾ ಸ್ವಾಮಿಯ ಕೊಲೆ ಪ್ರಕರಣದಲ್ಲಿ ದರ್ಶನ್​ ಎ2 ಆಗಿರುವ ಕಾರಣದಿಂದ ಈ ಕೇಸ್​ ಹೈಪ್​ ಪಡೆದುಕೊಂಡಿದೆ. ಇನ್ನೊಂದೆಡೆ, ದರ್ಶನ್​ ಏನಾದರೂ ಜೈಲುಪಾಲಾದರೆ ಅವರು ನಟಿಸಬೇಕಿರುವ ಸಿನಿಮಾಗಳ ಗತಿ ಏನು ಎಂಬ ಬಗ್ಗೆ ಚರ್ಚೆ ಕೂಡ ನಡೆಯುತ್ತಿದೆ. ಈ ನಡುವೆ ಪ್ರಜ್ವಲ್​ ದೇವರಾಜ್​ ನಟನೆಯ ‘ಕರಾವಳಿ’ ಸಿನಿಮಾದಲ್ಲಿ ದರ್ಶನ್ ನಟಿಸಬೇಕಿತ್ತು ಎಂದು ಇತ್ತೀಚೆಗೆ ಗಾಸಿಪ್​ ಹಬ್ಬಿತ್ತು. ಅಲ್ಲದೇ, ದರ್ಶನ್​ ನ್ಯಾಯಾಂಗ ಬಂಧನದಲ್ಲಿ ಇರುವುದರಿಂದ ದರ್ಶನ್​ ಬದಲಿಗೆ ಬೇರೆ ನಟರನ್ನು ಆಯ್ಕೆ ಮಾಡಲು ಚಿತ್ರತಂಡ ಆಲೋಚಿಸಿದೆ ಎಂದು ಕೂಡ ವದಂತಿ ಹರಡಿತ್ತು. ಆ ವಿಚಾರಕ್ಕೆ ಸಂಬಂಧಿಸಿದಂತೆ ಈಗ ‘ಕರಾವಳಿ’ ಚಿತ್ರತಂಡವೇ ಸ್ಪಷ್ಟನೆ ನೀಡಿದೆ.

ಸ್ಟಾರ್​ ಕಲಾವಿದರಿಂದ ಅತಿಥಿ ಪಾತ್ರ ಮಾಡಿಸಿದರೆ ಸಿನಿಮಾದ ಮೆರುಗು ಹೆಚ್ಚುತ್ತದೆ. ‘ಕರಾವಳಿ’ ಸಿನಿಮಾ ಕೂಡ ಅಂಥ ಪ್ಲ್ಯಾನ್​ ಮಾಡಿಕೊಂಡಿರುವುದು ಹೌದು. ಆದರೆ ಆ ಪಾತ್ರದಲ್ಲಿ ಯಾವ ಹೀರೋ ನಟಿಸುತ್ತಾರೆ ಎಂಬುದು ಇನ್ನೂ ಅಂತಿಮವಾಗಿರಲಿಲ್ಲ. ಅಷ್ಟರಲ್ಲಾಗಲೇ ಗಾಸಿಪ್​ ಮಂದಿಯ ಬಾಯಲ್ಲಿ ದರ್ಶನ್​ ಹೆಸರು ಕೇಳಿಬರಲು ಆರಂಭಿಸಿತು. ಆದರೆ ಇದರ ಹಿಂದಿರುವ ಅಸಲಿಯತ್ತು ಏನು ಎಂಬುದನ್ನು ತಿಳಿಸಲು ‘ಕರಾವಳಿ‘ ಚಿತ್ರತಂಡದವರು ಹೇಳಿಕೆ ಬಿಡುಗಡೆ ಮಾಡಿದ್ದಾರೆ.

‘ಮಾಧ್ಯಮಗಳಲ್ಲಿ ಕನ್ನಡ ಚಿತ್ರರಂಗದ ಜನಪ್ರಿಯ ನಟ ದರ್ಶನ್​ ತೂಗುದೀಪ ಅವರನ್ನು ಪ್ರಜ್ವಲ್ ದೇವರಾಜ್ ಅಭಿನಯದ, ಗುರುದತ್ತ ಗಾಣಿಗ ನಿರ್ದೇಶನದ ‘ಕರಾವಳಿ’ ಚಿತ್ರದಿಂದ ಕೈಬಿಡಲಾಗಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಆದರೆ ಈ ಸುದ್ದಿ ಸತ್ಯಕ್ಕೆ ದೂರವಾಗಿದೆ’ ಎಂದು ಚಿತ್ರತಂಡದವರು ಹೇಳಿದ್ದಾರೆ. ಆ ಮೂಲಕ ಎಲ್ಲ ವದಂತಿಗಳಿಗೆ ತೆರೆ ಎಳೆದಿದ್ದಾರೆ.

ಇದನ್ನೂ ಓದಿ: ದರ್ಶನ್​ಗೆ ಲಕ್ಷ ಲಕ್ಷ ಹಣ ಕೊಟ್ಟಿದ್ದಕ್ಕೆ ಕಾರಣ ನೀಡಿದ ಮಾಜಿ ಮೇಯರ್

‘ಕರಾವಳಿ ಸಿನಿಮಾದ ಮಹಾವೀರ ಎನ್ನುವ ವಿಶೇಷ ಪಾತ್ರವನ್ನು ಶಿವರಾಜ್​ಕುಮಾರ್, ಕಿಚ್ಚ ಸುದೀಪ್, ದರ್ಶನ್​ ತೂಗುದೀಪ ಅವರಂತಹ ಜನಪ್ರಿಯ ನಟರು ಅಭಿನಯಿಸಬೇಕು ಎನ್ನುವುದು ಚಿತ್ರತಂಡದ ಖಾಸಗಿ ಚರ್ಚೆಗಾಗಿತ್ತು. ಆದರೆ ಈ ವಿಚಾರ ಕಿಡಿಗೇಡಿಗಳಿಂದ ಹೊರಬಿದ್ದು ತಿರುಚಲ್ಪಟ್ಟು ಮಾಧ್ಯಮಗಳಲ್ಲಿ ಪ್ರಸಾರಗೊಂಡಿರುವುದು ಚಿತ್ರತಂಡಕ್ಕೆ ಬೇಸರತಂದಿದೆ. ಮಹಾವೀರ ಎಂಬ ಪಾತ್ರವನ್ನು ಯಾರು ಮಾಡಲಿದ್ದಾರೆ ಎನ್ನುವ ವಿಚಾರವನ್ನು ಅಧಿಕೃತವಾಗಿ ಸಿನಿಮಾತಂಡವೇ ತಿಳಿಸಲಿದೆ’ ಎಂದು ಕೂಡ ಸ್ಪಷ್ಟನೆ ನೀಡಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us