ದರ್ಶನ್​ ಪಾತ್ರದ ಬಗ್ಗೆ ಹರಡಿದ್ದ ಗಾಳಿಸುದ್ದಿಗೆ ಸ್ಪಷ್ಟನೆ ನೀಡಿದ ‘ಕರಾವಳಿ’ ಸಿನಿಮಾ ತಂಡ

|

Updated on: Jul 07, 2024 | 2:50 PM

ಪ್ರಜ್ವಲ್​ ದೇವರಾಜ್​ ಅವರು ‘ಕರಾವಳಿ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಗುರುದತ್ತ ಗಾಣಿಗ ನಿರ್ದೇಶನದ ಈ ಸಿನಿಮಾದ ಪೋಸ್ಟರ್​ಗಳು ಗಮನ ಸೆಳೆದಿವೆ. ಇದೇ ಸಿನಿಮಾದಲ್ಲಿ ದರ್ಶನ್​ ಕೂಡ ಅಭಿನಯಿಸುತ್ತಾರೆ ಎಂದು ಗಾಳಿಸುದ್ದಿ ಹರಡಿತ್ತು. ಅದಕ್ಕೆ ಸಂಬಂಧಿಸಿದಂತೆ ಈಗ ಚಿತ್ರತಂಡದವರು ಸ್ಪಷ್ಟನೆ ನೀಡಿದ್ದಾರೆ. ಇಂಥ ಗಾಸಿಪ್​ ಹರಡಿದ್ದು ಹೇಗೆ ಎಂಬುದನ್ನು ಕೂಡ ‘ಕರಾವಳಿ’ ವಿವರಿಸಿದೆ..

ದರ್ಶನ್​ ಪಾತ್ರದ ಬಗ್ಗೆ ಹರಡಿದ್ದ ಗಾಳಿಸುದ್ದಿಗೆ ಸ್ಪಷ್ಟನೆ ನೀಡಿದ ‘ಕರಾವಳಿ’ ಸಿನಿಮಾ ತಂಡ
ದರ್ಶನ್​, ಪ್ರಜ್ವಲ್​ ದೇವರಾಜ್​
Follow us on

ಕಳೆದ ಒಂದಷ್ಟು ದಿನಗಳಿಂದ ಎಲ್ಲೆಲ್ಲೂ ದರ್ಶನ್​ ಕುರಿತ ಸುದ್ದಿಯೇ ಕೇಳಿಬರುತ್ತಿದೆ. ಒಂದು ಕಡೆ ರೇಣುಕಾ ಸ್ವಾಮಿಯ ಕೊಲೆ ಪ್ರಕರಣದಲ್ಲಿ ದರ್ಶನ್​ ಎ2 ಆಗಿರುವ ಕಾರಣದಿಂದ ಈ ಕೇಸ್​ ಹೈಪ್​ ಪಡೆದುಕೊಂಡಿದೆ. ಇನ್ನೊಂದೆಡೆ, ದರ್ಶನ್​ ಏನಾದರೂ ಜೈಲುಪಾಲಾದರೆ ಅವರು ನಟಿಸಬೇಕಿರುವ ಸಿನಿಮಾಗಳ ಗತಿ ಏನು ಎಂಬ ಬಗ್ಗೆ ಚರ್ಚೆ ಕೂಡ ನಡೆಯುತ್ತಿದೆ. ಈ ನಡುವೆ ಪ್ರಜ್ವಲ್​ ದೇವರಾಜ್​ ನಟನೆಯ ‘ಕರಾವಳಿ’ ಸಿನಿಮಾದಲ್ಲಿ ದರ್ಶನ್ ನಟಿಸಬೇಕಿತ್ತು ಎಂದು ಇತ್ತೀಚೆಗೆ ಗಾಸಿಪ್​ ಹಬ್ಬಿತ್ತು. ಅಲ್ಲದೇ, ದರ್ಶನ್​ ನ್ಯಾಯಾಂಗ ಬಂಧನದಲ್ಲಿ ಇರುವುದರಿಂದ ದರ್ಶನ್​ ಬದಲಿಗೆ ಬೇರೆ ನಟರನ್ನು ಆಯ್ಕೆ ಮಾಡಲು ಚಿತ್ರತಂಡ ಆಲೋಚಿಸಿದೆ ಎಂದು ಕೂಡ ವದಂತಿ ಹರಡಿತ್ತು. ಆ ವಿಚಾರಕ್ಕೆ ಸಂಬಂಧಿಸಿದಂತೆ ಈಗ ‘ಕರಾವಳಿ’ ಚಿತ್ರತಂಡವೇ ಸ್ಪಷ್ಟನೆ ನೀಡಿದೆ.

ಸ್ಟಾರ್​ ಕಲಾವಿದರಿಂದ ಅತಿಥಿ ಪಾತ್ರ ಮಾಡಿಸಿದರೆ ಸಿನಿಮಾದ ಮೆರುಗು ಹೆಚ್ಚುತ್ತದೆ. ‘ಕರಾವಳಿ’ ಸಿನಿಮಾ ಕೂಡ ಅಂಥ ಪ್ಲ್ಯಾನ್​ ಮಾಡಿಕೊಂಡಿರುವುದು ಹೌದು. ಆದರೆ ಆ ಪಾತ್ರದಲ್ಲಿ ಯಾವ ಹೀರೋ ನಟಿಸುತ್ತಾರೆ ಎಂಬುದು ಇನ್ನೂ ಅಂತಿಮವಾಗಿರಲಿಲ್ಲ. ಅಷ್ಟರಲ್ಲಾಗಲೇ ಗಾಸಿಪ್​ ಮಂದಿಯ ಬಾಯಲ್ಲಿ ದರ್ಶನ್​ ಹೆಸರು ಕೇಳಿಬರಲು ಆರಂಭಿಸಿತು. ಆದರೆ ಇದರ ಹಿಂದಿರುವ ಅಸಲಿಯತ್ತು ಏನು ಎಂಬುದನ್ನು ತಿಳಿಸಲು ‘ಕರಾವಳಿ‘ ಚಿತ್ರತಂಡದವರು ಹೇಳಿಕೆ ಬಿಡುಗಡೆ ಮಾಡಿದ್ದಾರೆ.

‘ಮಾಧ್ಯಮಗಳಲ್ಲಿ ಕನ್ನಡ ಚಿತ್ರರಂಗದ ಜನಪ್ರಿಯ ನಟ ದರ್ಶನ್​ ತೂಗುದೀಪ ಅವರನ್ನು ಪ್ರಜ್ವಲ್ ದೇವರಾಜ್ ಅಭಿನಯದ, ಗುರುದತ್ತ ಗಾಣಿಗ ನಿರ್ದೇಶನದ ‘ಕರಾವಳಿ’ ಚಿತ್ರದಿಂದ ಕೈಬಿಡಲಾಗಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಆದರೆ ಈ ಸುದ್ದಿ ಸತ್ಯಕ್ಕೆ ದೂರವಾಗಿದೆ’ ಎಂದು ಚಿತ್ರತಂಡದವರು ಹೇಳಿದ್ದಾರೆ. ಆ ಮೂಲಕ ಎಲ್ಲ ವದಂತಿಗಳಿಗೆ ತೆರೆ ಎಳೆದಿದ್ದಾರೆ.

ಇದನ್ನೂ ಓದಿ: ದರ್ಶನ್​ಗೆ ಲಕ್ಷ ಲಕ್ಷ ಹಣ ಕೊಟ್ಟಿದ್ದಕ್ಕೆ ಕಾರಣ ನೀಡಿದ ಮಾಜಿ ಮೇಯರ್

‘ಕರಾವಳಿ ಸಿನಿಮಾದ ಮಹಾವೀರ ಎನ್ನುವ ವಿಶೇಷ ಪಾತ್ರವನ್ನು ಶಿವರಾಜ್​ಕುಮಾರ್, ಕಿಚ್ಚ ಸುದೀಪ್, ದರ್ಶನ್​ ತೂಗುದೀಪ ಅವರಂತಹ ಜನಪ್ರಿಯ ನಟರು ಅಭಿನಯಿಸಬೇಕು ಎನ್ನುವುದು ಚಿತ್ರತಂಡದ ಖಾಸಗಿ ಚರ್ಚೆಗಾಗಿತ್ತು. ಆದರೆ ಈ ವಿಚಾರ ಕಿಡಿಗೇಡಿಗಳಿಂದ ಹೊರಬಿದ್ದು ತಿರುಚಲ್ಪಟ್ಟು ಮಾಧ್ಯಮಗಳಲ್ಲಿ ಪ್ರಸಾರಗೊಂಡಿರುವುದು ಚಿತ್ರತಂಡಕ್ಕೆ ಬೇಸರತಂದಿದೆ. ಮಹಾವೀರ ಎಂಬ ಪಾತ್ರವನ್ನು ಯಾರು ಮಾಡಲಿದ್ದಾರೆ ಎನ್ನುವ ವಿಚಾರವನ್ನು ಅಧಿಕೃತವಾಗಿ ಸಿನಿಮಾತಂಡವೇ ತಿಳಿಸಲಿದೆ’ ಎಂದು ಕೂಡ ಸ್ಪಷ್ಟನೆ ನೀಡಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.