ಜಾತಿ ನಿಂದನೆ ಆರೋಪದಲ್ಲಿ ಉಪೇಂದ್ರಗೆ ರಿಲೀಫ್; ನಟನ ವಿರುದ್ಧದ ಎಫ್‌ಐಆರ್​ಗೆ ಹೈಕೋರ್ಟ್ ತಡೆ

ಉಪೇಂದ್ರ ವಿರುದ್ಧ ಬೆಂಗಳೂರಿನ ಚೆನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿತ್ತು. ತಮ್ಮ ವಿರುದ್ಧ ಹಾಕಲಾಗಿದ್ದ ಎಫ್​ಐಆರ್​ಗೆ ತಡೆ ನೀಡಬೇಕು ಎಂದು ಕೋರಿ ಉಪೇಂದ್ರ ಅವರು ಹೈಕೋರ್ಟ್​ ಮೆಟ್ಟಿಲು ಏರಿದ್ದರು. ಈಗ ಅವರ ಪರವಾಗಿ ಕೋರ್ಟ್​ ಆದೇಶ ನೀಡಿದೆ.

ಜಾತಿ ನಿಂದನೆ ಆರೋಪದಲ್ಲಿ ಉಪೇಂದ್ರಗೆ ರಿಲೀಫ್; ನಟನ ವಿರುದ್ಧದ ಎಫ್‌ಐಆರ್​ಗೆ ಹೈಕೋರ್ಟ್ ತಡೆ
ಉಪೇಂದ್ರ

Updated on: Aug 14, 2023 | 3:47 PM

ಸೋಶಿಯಲ್​ ಮೀಡಿಯಾದಲ್ಲಿ ಜಾತಿ ನಿಂದನೆ ಪದ ಬಳಿಸಿದ ಆರೋಪವನ್ನು ಎದುರಿಸುತ್ತಿದ್ದ ನಟ ಉಪೇಂದ್ರ (Upendra) ಅವರು ಈಗ ನಿಟ್ಟುಸಿರು ಬಿಡುವಂತೆ ಆಗಿದೆ. ಅವರ ವಿರುದ್ಧ ದಾಖಲಾಗಿದ್ದ ಎಫ್​ಐಆರ್​ಗೆ ತಡೆ ನೀಡಿ ಹೈಕೋರ್ಟ್​ ಆದೇಶಿಸಿದೆ. ಉಪೇಂದ್ರ ವಿರುದ್ಧ ಬೆಂಗಳೂರಿನ ಚೆನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸ್​ ಠಾಣೆಯಲ್ಲಿ ದೂರು (Upendra Case) ದಾಖಲಾಗಿತ್ತು. ತಮ್ಮ ವಿರುದ್ಧ ಹಾಕಲಾಗಿದ್ದ ಎಫ್​ಐಆರ್​ಗೆ (FIR) ತಡೆ ನೀಡಬೇಕು ಎಂದು ಕೋರಿ ಉಪೇಂದ್ರ ಅವರು ಹೈಕೋರ್ಟ್​ ಮೆಟ್ಟಿಲು ಏರಿದ್ದರು. ಈಗ ಅವರ ಪರವಾಗಿ ಕೋರ್ಟ್​ ಆದೇಶ ನೀಡಿದೆ. ‘ಗಾದೆ ಮಾತು ಉಲ್ಲೇಖಿಸಿ ಉಪೇಂದ್ರ ಹೇಳಿಕೆ ನೀಡಿದ್ದಾರೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆ ಇದಕ್ಕೆ ಅನ್ವಯವಾಗುವುದಿಲ್ಲ’ ಎಂದು ಉಪೇಂದ್ರ ಪರವಾಗಿ ಹಿರಿಯ ವಕೀಲ ಉದಯ್ ಹೊಳ್ಳ ವಾದ ಮಂಡನೆ ಮಾಡಿದ್ದಾರೆ.

ಇತ್ತೀಚೆಗೆ ಪ್ರಜಾಕೀಯದ ಬಗ್ಗೆ ಮಾತನಾಡಲು ಸೋಶಿಯಲ್​ ಮೀಡಿಯಾದಲ್ಲಿ ಉಪೇಂದ್ರ ಅವರು ಲೈವ್​ ಬಂದಿದ್ದರು. ಈ ವೇಳೆ ಅವರು ಬಳಸಿದ್ದ ಗಾದೆ ಮಾತಿನಿಂದ ಜಾತಿ ನಿಂದನೆ ಆಗಿದೆ ಎಂಬ ಆರೋಪ ಕೇಳಿಬಂತು. ಹಾಗಾಗಿ ಅವರ ವಿರುದ್ಧ ದೂರು ದಾಖಲಿಸಲಾಯಿತು. ಜನರಿಂದ ತೀವ್ರ ಆಕ್ಷೇಪ ಎದುರಾದ ಹಿನ್ನೆಲೆಯಲ್ಲಿ ಉಪೇಂದ್ರ ಅವರು ಕ್ಷಮೆ ಕೇಳಿದ್ದರು ಮತ್ತು ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ್ದರು.

ಉಪೇಂದ್ರ ಮನೆಗೆ ಬಿಗಿ ಭದ್ರತೆ:

ಜಾತಿ ನಿಂದನೆ ಆರೋಪ ಎದುರಾದ ಬಳಿಕ ಉಪೇಂದ್ರ ಅವರ ವಿರುದ್ಧ ಸೋಶಿಯಲ್​ ಮೀಡಿಯಾದಲ್ಲಿ ಅನೇಕರು ಕಿಡಿಕಾರಲು ಆರಂಭಿಸಿದರು. ಈಗ ಉಪೇಂದ್ರ ಅವರ ಮನೆಗೆ ಪೊಲೀಸರು ಬಿಗಿ ಭದ್ರತೆ ನೀಡಿದ್ದಾರೆ. ಬೆಂಗಳೂರಿನ ಕತ್ತರಿಗುಪ್ಪೆ ಮತ್ತು ಸದಾಶಿವ ನಗರದ ತಮ್ಮ ನಿವಾಸದಲ್ಲಿ ಉಪೇಂದ್ರ ಇಲ್ಲ ಎಂದು ಹೇಳಲಾಗುತ್ತಿದೆ. ಆದರೂ ಮುಂಜಾಗೃತ ಕ್ರಮವಾಗಿ ಪೊಲೀಸರು ಭದ್ರತೆ ಒದಗಿಸಿದ್ದಾರೆ.

ಇದನ್ನೂ ಓದಿ: ಉಪೇಂದ್ರ ಹೇಳಿಕೆಗೆ ಹೆಚ್​ ಸಿ‌ ಮಹದೇವಪ್ಪ ಕಿಡಿ, ಕ್ರಮ ಕೈಗೊಳ್ಳಲಾಗುವುದು ಎಂದ ಸಮಾಜ ಕಲ್ಯಾಣ ಸಚಿವ

ಉಪೇಂದ್ರ ನೀಡಿದ್ದ ಹೇಳಿಕೆಯನ್ನು ವಿರೋಧಿಸಿ ರಾಜ್ಯಾದ್ಯಂತ ಪ್ರತಿಭಟನೆಗಳು ನಡೆದವು. ನಟನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅನೇಕರು ಆಗ್ರಹಿಸುತ್ತಿದ್ದಾರೆ. ಒಟ್ಟಾರೆ ಈ ಬೆಳವಣಿಗೆಯಿಂದಾಗಿ ಚರ್ಚೆ ಹುಟ್ಟಿಕೊಂಡಿದೆ. ಉಪೇಂದ್ರ ಅವರು ಕ್ಷಮೆ ಕೇಳಿದ್ದರೂ ಕೂಡ ಕೆಲವರು ಅದನ್ನು ಒಪ್ಪಿಕೊಂಡಿಲ್ಲ. ಆ ಬಗ್ಗೆ ಉಪೇಂದ್ರ ಬೇಸರದಿಂದ ಟ್ವೀಟ್​ ಮಾಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 3:26 pm, Mon, 14 August 23

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us