ಕೋರ್ಟ್​ ಕಟಕಟೆಯಲ್ಲಿ ಎಂ.ಎನ್​. ಕುಮಾರ್​ ವಿರುದ್ಧ ಹೇಳಿಕೆ ನೀಡಿದ ಸುದೀಪ್​; ಫಲ ನೀಡಲಿಲ್ಲ ಸಂಧಾನ

| Updated By: ಮದನ್​ ಕುಮಾರ್​

Updated on: Aug 10, 2023 | 5:38 PM

ಕಿಚ್ಚ ಸುದೀಪ್​ ಅವರು ಇಂದು (ಆಗಸ್ಟ್​ 10) ಕೋರ್ಟ್‌ನಲ್ಲಿ ಪ್ರಮಾಣಿತ ಹೇಳಿಕೆ ದಾಖಲಿಸಿದ್ದಾರೆ. ಈ ಹಿಂದೆ ಸುದ್ದಿಗೋಷ್ಠಿಯಲ್ಲಿ ಎಂ.ಎನ್. ಕುಮಾರ್ ಮಾಡಿದ ಆರೋಪಗಳೆಲ್ಲವೂ ಸುಳ್ಳು ಎಂದು ಸುದೀಪ್​ ಹೇಳಿದ್ದಾರೆ. ಇಬ್ಬರ ನಡುವೆ ಸಂಧಾನ ಮಾಡಿಸಲು ಚಿತ್ರರಂಗದ ಹಿರಿಯರು ಮಾಡಿದ ಪ್ರಯತ್ನಕ್ಕೆ ಫಲ ಸಿಕ್ಕಿಲ್ಲ.

ಕೋರ್ಟ್​ ಕಟಕಟೆಯಲ್ಲಿ ಎಂ.ಎನ್​. ಕುಮಾರ್​ ವಿರುದ್ಧ ಹೇಳಿಕೆ ನೀಡಿದ ಸುದೀಪ್​; ಫಲ ನೀಡಲಿಲ್ಲ ಸಂಧಾನ
ಕಿಚ್ಚ ಸುದೀಪ್​, ಎಂ.ಎನ್​. ಕುಮಾರ್​
Follow us on

ನಟ ಕಿಚ್ಚ ಸುದೀಪ್​ (Kichcha Sudeep) ಮತ್ತು ನಿರ್ಮಾಪಕ ಎಂ.ಎನ್​. ಕುಮಾರ್​ (MN Kumar) ನಡುವೆ ಭುಗಿಲೆದ್ದಿರುವ ವಿವಾದವನ್ನು ಬಗೆಹರಿಸಲು ಸಂಧಾನ ಸಭೆ ನಡೆದಿತ್ತು. ಹಿರಿಯ ನಟರಾದ ಶಿವರಾಜ್​ಕುಮಾರ್​, ರವಿಚಂದ್ರನ್​ ಮುಂತಾದವರ ಮಧ್ಯಸ್ಥಿಕೆಯಲ್ಲಿ ಸಂಧಾನ ಮಾಡಿಸಲು ಪ್ರಯತ್ನಿಸಲಾಗಿತ್ತು. ಆದರೆ ಅದಕ್ಕೆ ಕಿಚ್ಚ ಸುದೀಪ್​ ಒಪ್ಪಿಕೊಂಡಿರಲಿಲ್ಲ. ಈಗ ಅವರು ನ್ಯಾಯಾಲಯದಲ್ಲಿ ನಿರ್ಮಾಪಕರಾದ ಎಂ.ಎನ್​. ಕುಮಾರ್​ ಮತ್ತು ಎಂ.ಎನ್​. ಸುರೇಶ್​ ವಿರುದ್ಧ ಹೇಳಿಕೆ ದಾಖಲು ಮಾಡಿದ್ದಾರೆ. ಬೆಂಗಳೂರಿನ ನೃಪತುಂಗ ರಸ್ತೆಯಲ್ಲಿರುವ ಮ್ಯಾಜಿಸ್ಟ್ರೇಟ್​ ಕೋರ್ಟ್​ಗೆ (Magistrate Court) ಸುದೀಪ್​ ಅವರು ಹಾಜರಾಗಿದ್ದಾರೆ. ಕಟಕಟೆಯಲ್ಲಿ ನಿಂತು ಅವರು ತಮ್ಮ ಹೇಳಿಕೆ ನೀಡಿದ್ದಾರೆ. ಸಂಧಾನ ಸಭೆ ಬದಲು ನ್ಯಾಯಾಲಯದ ಮೂಲಕವೇ ಇತ್ಯರ್ಥ ಮಾಡಿಕೊಳ್ಳಲು ಅವರು ಮುಂದಾಗಿದ್ದಾರೆ.

ಕಿಚ್ಚ ಸುದೀಪ್​ ಅವರು ಇಂದು (ಆಗಸ್ಟ್​ 10) ಕೋರ್ಟ್‌ನಲ್ಲಿ ಪ್ರಮಾಣಿತ ಹೇಳಿಕೆ ದಾಖಲಿಸಿದ್ದಾರೆ. ಈ ಹಿಂದೆ ಸುದ್ದಿಗೋಷ್ಠಿಯಲ್ಲಿ ಎಂ.ಎನ್. ಕುಮಾರ್ ಮಾಡಿದ ಆರೋಪಗಳೆಲ್ಲವೂ ಸುಳ್ಳು ಎಂದು ಸುದೀಪ್​ ಹೇಳಿದ್ದಾರೆ. ‘ಆರ್‌.ಆರ್. ನಗರದಲ್ಲಿ ಮನೆ ಕಟ್ಟಲು ಹಣದ ನೆರವು ಪಡೆದಿರುವ ಬಗ್ಗೆ ಮಾಡಲಾಗಿರುವ ಆರೋಪ ಸುಳ್ಳು. ಎಂ.ಎನ್. ಕುಮಾರ್ ಹೇಳಿಕೆಯನ್ನು ಎಂ.ಎನ್. ಸುರೇಶ್ ಬೆಂಬಲಿಸಿದ್ದಾರೆ. ಇಬ್ಬರು ನಿರ್ಮಾಪಕರ ಸುದ್ದಿಗೋಷ್ಠಿಯಿಂದ ನನಗೆ ಮಾನಹಾನಿ ಆಗಿದೆ. ಹಲವರು ನನ್ನನ್ನು ಈ ಬಗ್ಗೆ ಪ್ರಶ್ನಿಸುತ್ತಿದ್ದಾರೆ’ ಎಂದು ಸುದೀಪ್ ಹೇಳಿದ್ದಾರೆ.

ಇದನ್ನೂ ಓದಿ: Exclusive: ತಮಿಳುನಾಡಲ್ಲಿ ಕನ್ನಡದ ಕಂಪು ಹರಡಿದ ಸುದೀಪ್: ಮಹಾಬಲಿಪುರಂ ಶೂಟಿಂಗ್ ಸೆಟ್‌ನಲ್ಲಿ ಕನ್ನಡಿಗರ ದರ್ಬಾರು

ವಕೀಲ ಅಜಯ್ ಕಡಕೋಳ್ ಜೊತೆ ಸುದೀಪ್​ ಅವರು ಕೋರ್ಟ್​ಗೆ ಹಾಜರಾದರು. ಅವರೊಂದಿಗೆ ಚಕ್ರವರ್ತಿ ಚಂದ್ರಚೂಡ್ ಮತ್ತು ನಿರ್ಮಾಪಕ ಜಾಕ್ ಮಂಜು ಕೂಡ ಆಗಮಿಸಿದರು. ತಮ್ಮ ಬಗ್ಗೆ ಅಪಪ್ರಚಾರ ಮಾಡಿದ ನಿರ್ಮಾಪಕರ ವಿರುದ್ಧ ಸುದೀಪ್​ ಅವರು ಮಾನನಷ್ಟ ಮೊಕದ್ದಮೆ ಹೂಡಿದ್ದು, ಆ ಕೇಸ್​ಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ವಿಚಾರಣೆ ಆರಂಭ ಆಗಿದೆ. ಫೋಟೋ ಸಹಿತ ಹಲವು ದಾಖಲೆಗಳನ್ನು ಸುದೀಪ್​ ಅವರು ಕೋರ್ಟ್​ಗೆ ಸಲ್ಲಿಸಿದ್ದಾರೆ.

ಇದನ್ನೂ ಓದಿ: Kichcha Sudeep: ಸುದೀಪ್​ ಅಭಿಮಾನಿಗಳಲ್ಲೂ ನಿರೀಕ್ಷೆ ಮೂಡಿಸಿದ ‘ಬ್ಯಾಂಗ್​’ ಸಿನಿಮಾ; ಅದಕ್ಕೆ ಕಾರಣ ಕಿಚ್ಚನ ಕಂಠ

ಒಂದು ವೇಳೆ ನಿರ್ಮಾಪಕರು ಕ್ಷಮೆ ಕೇಳಿದರೆ ರಾಜಿ ಸಂಧಾನ ಮಾಡಿಕೊಳ್ಳುತ್ತೀರಾ ಎಂದು ಸುದೀಪ್​ಗೆ ನ್ಯಾಯಾಧೀಶರು ಕೇಳಿದರು. ಅದಕ್ಕೆ ಸುದೀಪ್​ ಒಪ್ಪಿಕೊಂಡಿಲ್ಲ. ‘ಈ ಮೊದಲು ನೋಟೀಸ್ ನೀಡಿ ಮಾಧ್ಯಮಗಳಲ್ಲಿ ಕ್ಷಮೆಯಾಚಿಸಲು ಕೇಳಿದ್ದೆ. ಆದರೆ ಅವರು ಮಾಧ್ಯಮಗಳಲ್ಲಿ ಕ್ಷಮೆ ಯಾಚಿಸಿಲ್ಲ. ಅವರ ಹೇಳಿಕೆಯಿಂದ ನಾನು ಇಷ್ಟು ವರ್ಷ ಕಷ್ಟಪಟ್ಟು ಗಳಿಸಿದ ವರ್ಚಸ್ಸಿಗೆ ಹಾನಿಯಾಗಿದೆ. ಒಬ್ಬ ಸುದೀಪ್​ನನ್ನು ಬಗ್ಗಿಸಿದರೆ ಹಲವರನ್ನು ಬಗ್ಗಿಸಬಹುದೆಂದು ತಿಳಿದಿದ್ದಾರೆ’ ಎಂದು ಹೇಳುವ ಮೂಲಕ ರಾಜಿಗೆ ತಾವು ಸಿದ್ಧರಿಲ್ಲ ಎಂದು ನ್ಯಾಯಾಧೀಶರ ಎದುರು ಸುದೀಪ್​ ಹೇಳಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 5:22 pm, Thu, 10 August 23