ಸುದೀಪ್​ ಬಗ್ಗೆ ರಣವೀರ್​ ಸಿಂಗ್​ ಪ್ರೀತಿಯ ಮಾತು; ‘83’ ಚಿತ್ರಕ್ಕೆ ಸ್ಟಾರ್​ ನಟರ ಕಾತರ

| Updated By: ಮದನ್​ ಕುಮಾರ್​

Updated on: Dec 18, 2021 | 1:21 PM

83 Movie: ‘ಒಬ್ಬ ಕ್ರಿಕೆಟ್​ ಪ್ರೇಮಿಯಾಗಿ, ಭಾರತೀಯನಾಗಿ ಥಿಯೇಟರ್​ನಲ್ಲಿ ಈ ಚಿತ್ರವನ್ನು ನೋಡಿ ಎಂಜಾಯ್​ ಮಾಡಲು ಬಯಸುತ್ತೇನೆ’ ಎಂದು ‘83’ ಚಿತ್ರದ ಬಗ್ಗೆ ಕಿಚ್ಚ ಸುದೀಪ್​ ಹೇಳಿದ್ದಾರೆ.

ಸುದೀಪ್​ ಬಗ್ಗೆ ರಣವೀರ್​ ಸಿಂಗ್​ ಪ್ರೀತಿಯ ಮಾತು; ‘83’ ಚಿತ್ರಕ್ಕೆ ಸ್ಟಾರ್​ ನಟರ ಕಾತರ
ಕಿಚ್ಚ ಸುದೀಪ್​, ರಣವೀರ್​ ಸಿಂಗ್
Follow us on

ಕ್ರಿಕೆಟ್​ ಬಗ್ಗೆ ಕಿಚ್ಚ ಸುದೀಪ್ (Kichcha Sudeep)​ ಅವರಿಗೆ ಅಪಾರವಾದ ಆಸಕ್ತಿ ಇದೆ. 1983ರಲ್ಲಿ ಭಾರತೀಯ ಕ್ರಿಕೆಟ್​ ತಂಡ ವಿಶ್ವಕಪ್​ ಗೆದ್ದ ಘಟನೆಯನ್ನು ಆಧರಿಸಿ ‘83’ (83 Movie) ಸಿನಿಮಾ ಸಿದ್ಧಗೊಂಡಿದೆ. ಅದನ್ನು ಕರ್ನಾಟಕದಲ್ಲಿ ಸುದೀಪ್​ ಪ್ರಸ್ತುತಪಡಿಸುತ್ತಿದ್ದಾರೆ. ಅಲ್ಲದೇ, ಈ ಸಿನಿಮಾ ಬಗ್ಗೆ ತಮಗೆ ಎಷ್ಟು ಕಾತರ ಇದೆ ಎಂಬುದನ್ನು ಅವರು ವಿವರಿಸಿದ್ದಾರೆ. ಆ ವಿಡಿಯೋವನ್ನು ರಣವೀರ್​ ಸಿಂಗ್​ (Ranveer Singh) ಅವರು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ. ‘ಹೆಸರಾಂತ ನಟ, ನಿರ್ದೇಶಕ, ನಿರ್ಮಾಪಕ ಕಿಚ್ಚ ಸುದೀಪ್​ ಅವರು ಭಾರತದ ಮಹಾನ್​ ಗೆಲುವನ್ನು ಬೆಳ್ಳಿಪರದೆ ಮೇಲೆ ನೋಡಲು ಕಾತರಾಗಿದ್ದಾರೆ’ ಎಂದು ಆ ವಿಡಿಯೋಗೆ ರಣವೀರ್​ ಸಿಂಗ್​ ಅವರು ಕ್ಯಾಪ್ಷನ್​ ನೀಡಿದ್ದಾರೆ. ಹಿಂದಿಯಲ್ಲಿ ತಯಾರಾಗಿರುವ ‘83’ ಸಿನಿಮಾ ಕನ್ನಡ, ಮಲಯಾಳಂ, ತೆಲುಗು ಮತ್ತು ತಮಿಳು ಭಾಷೆಗೆ ಡಬ್​ ಆಗಿ ತೆರೆಕಾಣುತ್ತಿದೆ. ಡಿ.24ರಂದು ವಿಶ್ವಾದ್ಯಂತ ಈ ಚಿತ್ರ ಬಿಡುಗಡೆ ಆಗುತ್ತಿದೆ.

‘1983ರ ವಿಶ್ವಕಪ್​ ಬಗ್ಗೆ ಮಾತನಾಡಲು ಹಲವು ವಿಚಾರಗಳಿವೆ. ಅದರಲ್ಲೊಂದು ಕಥೆ ಇದೆ ಅಂತ ಒಂದು ತಂಡ ನಂಬಿದೆ. ಆ ಕಥೆ ಮಹತ್ವದ್ದಾಗಲಿದೆ ಎಂಬ ನಂಬಿಕೆ ಆ ತಂಡಕ್ಕೆ ಇದೆ. ಆ ನಂಬಿಕೆಯೇ ನನಗೆ ಒಂದು ಅದ್ಭುತ ಕಥೆಯಂತೆ ಕಾಣಿಸುತ್ತಿದೆ. ಒಬ್ಬ ಕ್ರಿಕೆಟ್​ ಪ್ರೇಮಿಯಾಗಿ, ಭಾರತೀಯನಾಗಿ ಥಿಯೇಟರ್​ನಲ್ಲಿ ಈ ಚಿತ್ರವನ್ನು ನೋಡಿ ಎಂಜಾಯ್​ ಮಾಡಲು ಬಯಸುತ್ತೇನೆ. ಇಂಥ ಕಥೆಯನ್ನು ಆಯ್ಕೆ ಮಾಡಿಕೊಂಡಿದ್ದಕ್ಕಾಗಿ ನಿರ್ದೇಶಕ ಕಬೀರ್​ ಖಾನ್​ ಮತ್ತು ಇಡೀ ತಂಡಕ್ಕೆ ನನ್ನ ಅಭಿನಂದನೆಗಳು. ಭಾರತ ವಿಶ್ವಕಪ್​ ಗೆದ್ದಾಗ ಎಷ್ಟು ಖುಷಿ ಆಗಿತ್ತೋ ಅದೇ ರೀತಿ ಈ ಸಿನಿಮಾ ತೆರೆ​ಕಾಣುತ್ತಿರುವುದಕ್ಕೆ ಖುಷಿ ಆಗುತ್ತಿದೆ’ ಎಂದು ಸುದೀಪ್​ ಹೇಳಿದ್ದಾರೆ.

ಈ ಚಿತ್ರವನ್ನು ಕಣ್ತುಂಬಿಕೊಳ್ಳಲು ಸಿನಿಪ್ರಿಯರು ಹಲವು ತಿಂಗಳಿಂದ ಕಾಯುತ್ತಿದ್ದರು. ಮೊದಲ ಲಾಕ್​ಡೌನ್​ ಶುರುವಾಗುವುದಕ್ಕೂ ಮುನ್ನವೇ ಈ ಸಿನಿಮಾ ರಿಲೀಸ್​ಗೆ ಸಿದ್ಧವಾಗಿತ್ತು. ಆದರೆ ಲಾಕ್​ಡೌನ್​ ಜಾರಿಯಾದ ಬಳಿಕ ಬಿಡುಗಡೆ ದಿನಾಂಕ ಮುಂದೂಡಿಕೊಳ್ಳುವುದು ಅನಿವಾರ್ಯ ಆಗಿತ್ತು. ರಣವೀರ್​ ಸಿಂಗ್​ ನಟನೆಯ ಈ ಚಿತ್ರ ಈಗ ಎಲ್ಲ ವಿಘ್ನಗಳನ್ನು ನಿವಾರಿಸಿಕೊಂಡು ಡಿ.24ರಂದು ತೆರೆ ಕಾಣಲಿದೆ. ಕಿಚ್ಚ ಸುದೀಪ್​ ಅವರು ಕೂಡ ಈಗ ಈ ಚಿತ್ರತಂಡಕ್ಕೆ ಸಾಥ್​ ನೀಡಿದ್ದಾರೆ. ಅಂದರೆ, ಕನ್ನಡದಲ್ಲಿ ‘83’ ಸಿನಿಮಾವನ್ನು ಸುದೀಪ್​ ಅರ್ಪಿಸುತ್ತಿದ್ದಾರೆ.

ಕಪಿಲ್​ ದೇವ್​ ಪಾತ್ರದಲ್ಲಿ ನಟಿಸಲು ರಣವೀರ್​ ಸಿಂಗ್​ ತುಂಬ ಶ್ರಮಪಟ್ಟಿದ್ದಾರೆ. ಟೀಸರ್​ ಮತ್ತು ಪೋಸ್ಟರ್​ಗಳಲ್ಲಿ ಅವರ ಲುಕ್​ ಗಮನ ಸೆಳೆದಿದೆ. ಕರ್ನಾಟಕದಲ್ಲಿ ಶಾಲಿನಿ ಆರ್ಟ್ಸ್ ಹಾಗೂ ರಿಲಯನ್ಸ್ ಎಂಟರ್​ಟೇನ್ಮೆಂಟ್​ ಸಂಸ್ಥೆಗಳು ವಿತರಣೆಯ ಜವಾಬ್ದಾರಿಯನ್ನು ಹೊತ್ತುಕೊಂಡಿವೆ. ದೀಪಿಕಾ ಪಡುಕೋಣೆ, ಕಬೀರ್ ಖಾನ್, ವಿಷ್ಣು ವರ್ಧನ್ ಇಂದುರಿ, ಸಾಜಿದ್ ನಾಡಿಯದ್ವಾಲ, ಫಾಂಟಮ್ ಫಿಲ್ಮ್ಸ್ ಹಾಗೂ 83 ಫಿಲ್ಮ್ ಲಿಮಿಟೆಡ್ ಮೂಲಕ ಈ ಚಿತ್ರ ನಿರ್ಮಾಣ ಆಗಿದೆ.

ಇದನ್ನೂ ಓದಿ:

ಜೆನಿಲಿಯಾ ರಿತೇಶ್​ ದಂಪತಿಗೆ ಸುದೀಪ್​ ಪ್ರೀತಿಯ ವಿಶ್​; ಹೊಸ ಕಾರ್ಯಕ್ಕೆ ಕಿಚ್ಚನ ಪ್ರೋತ್ಸಾಹ

ಕುಟುಂಬ ಸಮೇತ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದ ಕಿಚ್ಚ ಸುದೀಪ್​