Nanu Kusuma: ಚಿತ್ರೋತ್ಸವಗಳಲ್ಲಿ ಗಮನ ಸೆಳೆದ ‘ನಾನು ಕುಸುಮ’ ಸಿನಿಮಾ ಜೂನ್​ 30ಕ್ಕೆ ಬಿಡುಗಡೆ; ಏನಿದರ ವಿಶೇಷ?

|

Updated on: Jun 20, 2023 | 3:08 PM

Nanu Kusuma Kannada Movie: ಸರ್ಕಾರಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕಾರ್ಯ ನಿರ್ವಹಿಸುವ ಹುಡುಗಿಯೊಬ್ಬಳು ಏನೆಲ್ಲ ಶೋಷಣೆಗಳನ್ನು ಅನುಭವಿಸುತ್ತಾಳೆ ಎಂಬುದನ್ನು ‘ನಾನು ಕುಸುಮ’ ಸಿನಿಮಾದಲ್ಲಿ ವಿವರಿಸಲಾಗಿದೆ. ಕೃಷ್ಣೇಗೌಡ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ.

Nanu Kusuma: ಚಿತ್ರೋತ್ಸವಗಳಲ್ಲಿ ಗಮನ ಸೆಳೆದ ‘ನಾನು ಕುಸುಮ’ ಸಿನಿಮಾ ಜೂನ್​ 30ಕ್ಕೆ ಬಿಡುಗಡೆ; ಏನಿದರ ವಿಶೇಷ?
ಗ್ರೀಷ್ಮಾ ಶ್ರೀಧರ್, ಕೃಷ್ಣೇಗೌಡ
Follow us on

ನಿರ್ಮಾಪಕ ಕೃಷ್ಣೇಗೌಡ (Krishne Gowda) ಅವರು ಗಮನಾರ್ಹ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿದ್ದಾರೆ. ಆ ಮೂಲಕ ಪ್ರತಿಭಾವಂತರಿಗೆ ಅವಕಾಶ ನೀಡುತ್ತಿದ್ದಾರೆ. ಇತ್ತೀಚೆಗೆ ಅವರ ನಿರ್ಮಾಣದಲ್ಲಿ ಬಂದ ‘ಪಿಂಕಿ ಎಲ್ಲಿ’ ಸಿನಿಮಾ ಸಾಕಷ್ಟು ಸುದ್ದು ಮಾಡಿತ್ತು. ಈಗ ಅದೇ ರೀತಿ ‘ನಾನು ಕುಸುಮ’ ಸಿನಿಮಾ (Nanu Kusuma Movie) ಕೂಡ ಅವರ ನಿರ್ಮಾಣದಲ್ಲಿ ಮೂಡಿಬಂದಿದೆ. ಈ ಸಿನಿಮಾ ಸಹ ಹಲವು ಸಿನಿಮೋತ್ಸವಗಳಲ್ಲಿ ಪ್ರದರ್ಶನಗೊಂಡು ಕುತೂಹಲ ಮೂಡಿಸಿದೆ. ಈ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಜೂನ್​ 30ರಂದು ರಾಜ್ಯಾದ್ಯಂತ ‘ನಾನು ಕುಸುಮ’ ಚಿತ್ರ ಬಿಡುಗಡೆ ಆಗಲಿದೆ. ನಿರ್ಮಾಣ ಮಾಡುವುದರ ಜೊತೆಗೆ ನಿರ್ದೇಶನವನ್ನೂ ಕೃಷ್ಣೇಗೌಡ ಅವರು ಮಾಡಿದ್ದಾರೆ. ಹಿರಿಯ ಲೇಖಕ ಬೆಸಗರಹಳ್ಳಿ ರಾಮಣ್ಣ ಅವರ ಕಥೆಯನ್ನು ಆಧರಿಸಿ ಈ ಸಿನಿಮಾ ಸಿದ್ಧವಾಗಿದೆ.

ಸರ್ಕಾರಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕಾರ್ಯ ನಿರ್ವಹಿಸುವ ಹುಡುಗಿಯೊಬ್ಬಳು ಅಲ್ಲಿ ಏನೆಲ್ಲ ಶೋಷಣೆಗಳನ್ನು ಅನುಭವಿಸುತ್ತಾಳೆ ಎಂಬುದನ್ನು ‘ನಾನು ಕುಸುಮ’ ಸಿನಿಮಾದಲ್ಲಿ ವಿವರಿಸಲಾಗಿದೆ. ಗ್ರೀಷ್ಮಾ ಶ್ರೀಧರ್, ಸನಾತನಿ ಜೋಶಿ, ಕೃಷ್ಣೇಗೌಡ, ಸೌಮ್ಯ ಭಾಗವತ್, ಕಾವ್ಯಾ ಶ್ರೀಧರ್, ವಿಜಯ್, ಪ್ರತಿಭಾ ಸಂಶಿಮಠ್ ಸೇರಿದಂತೆ ಹಲವು ಕಲಾವಿದರು ‘ನಾನು ಕುಸುಮ’ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಅನೇಕ ಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಾಣುವ ಮೂಲಕ ಚಿತ್ರರಂಗದಲ್ಲಿನ ಅನೇಕ ಖ್ಯಾತನಾಮರ ಗಮನವನ್ನು ಈ ಸಿನಿಮಾ ಸೆಳೆದಿದೆ.

ಇದೊಂದು ಓದಿ: Pinki Elli Review: ನಾಟಕೀಯ ತಂತ್ರಗಳಿಲ್ಲದೆ ಮಂತ್ರಮುಗ್ಧ ಆಗಿಸುವ ನೈಜ ಸಿನಿಮಾ

‘14ನೇ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವ’ದಲ್ಲಿ ಪ್ರದರ್ಶನಗೊಂಡು ಪ್ರಥಮ ಅತ್ಯುತ್ತಮ ಕನ್ನಡ ಚಿತ್ರ ಪ್ರಶಸ್ತಿಯನ್ನು ಪಡೆದುಕೊಂಡಿರುವುದು ‘ನಾನು ಕುಸುಮ’ ಸಿನಿಮಾದ ಹೆಗ್ಗಳಿಕೆ. ‘ತ್ರಿಶೂರ್ ಫಿಲ್ಮ್​ ಫೆಸ್ಟಿವಲ್’, ‘ಇಂಡಿಯನ್ ಪನೋರಮಾ’, ‘ರಾಜಸ್ಥಾನ್ ಫಿಲ್ಮ್​ ಫೆಸ್ಟಿವಲ್’ ಹೀಗೆ ಹಲವು ಪ್ರತಿಷ್ಠಿತ ಚಿತ್ರೋತ್ಸವಗಳಲ್ಲಿ ಈ ಸಿನಿಮಾ ಪ್ರದರ್ಶನ ಆಗಿದೆ. ಅಲ್ಲದೇ ಹಲವು ಪ್ರಶಸ್ತಿ ಮತ್ತು ಪ್ರಶಂಸೆಗಳನ್ನು ತನ್ನದಾಗಿಸಿಕೊಂಡಿದೆ. ಸಾಮಾನ್ಯವಾಗಿ ಚಿತ್ರೋತ್ಸವಗಳಲ್ಲಿ ಪ್ರಶಸ್ತಿಗಳಿಸಿದ ಸಿನಿಮಾಗಳನ್ನು ಬಿಡುಗಡೆ ಮಾಡಲು ಚಿತ್ರತಂಡ ಹಿಂದೇಟು ಹಾಕುತ್ತದೆ. ಆದರೆ ನಿರ್ಮಾಪಕ ಕೃಷ್ಣೇಗೌಡ ಅವರು ಹಾಗಲ್ಲ. ‘ಪಿಂಕಿ ಎಲ್ಲಿ’ ಚಿತ್ರವನ್ನು ಕೂಡ ಅವರು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಿದ್ದರು. ಈಗ ‘ನಾನು ಕುಸುಮ’ ತೆರೆಕಾಣಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ.

ಇದೊಂದು ಓದಿ: Koli Esru Movie: ಕನ್ನಡದ ‘ಕೋಳಿ ಎಸ್ರು’ ಚಿತ್ರಕ್ಕೆ ಅಟ್ಟಾವಾ ಇಂಡಿಯನ್​ ಫಿಲ್ಮ್​ ಫೆಸ್ಟಿವಲ್​ನಲ್ಲಿ 2 ಪ್ರಮುಖ ಪ್ರಶಸ್ತಿ

‘ನಾನು ಕುಸುಮ’ ಸಿನಿಮಾಕ್ಕೆ ಅರ್ಜುನ್ ರಾಜಾ ಛಾಯಾಗ್ರಹಣ ಮಾಡಿದ್ದಾರೆ. ಬೆಂಗಳೂರು ಸುತ್ತಮುತ್ತ ಈ ಸಿನಿಮಾದ ಚಿತ್ರೀಕರಣ ನಡೆಸಲಾಗಿದೆ. ಆಸ್ಪತ್ರೆ, ವಾರ್ಡ್, ಗಲ್ಲಿ, ಮನೆ ಸೇರಿದಂತೆ ಸಿನಿಮಾದ ಕಥೆಯಲ್ಲಿ ಬರುವ ಅನೇಕ ಸ್ಥಳಗಳನ್ನು ನೈಜ ಲೊಕೇಶನ್​ಗಳಲ್ಲೇ ಚಿತ್ರೀಕರಣ ಮಾಡಲಾಗಿದೆ. ಸಿಂಕ್ ಸೌಂಡ್​ನಲ್ಲಿ ಧ್ವನಿ ಗ್ರಹಣ ಮಾಡಿರುವುದು ಸಿನಿಮಾದ ಮತ್ತೊಂದು ವಿಶೇಷ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.