ಸ್ಟಾರ್ ನಟರ ಬಗ್ಗೆ ತುಚ್ಛ ಮಾತು, ಮಡೆನೂರು ಮನು ಅದ್ದು ಎನ್ನಲಾದ ಆಡಿಯೋ ವೈರಲ್

Madenooru Manu: ಕಾಮಿಡಿ ಕಿಲಾಡಿಗಳು ನಟ ಮಡೆನೂರು ಮನು ಮೇಲೆ ಈಗಾಗಲೇ ಅತ್ಯಾಚಾರ, ದೌರ್ಜನ್ಯ, ಬೆದರಿಕೆ ಪ್ರಕರಣಗಳು ದಾಖಲಾಗಿವೆ. ಇದೀಗ ಆಡಿಯೋ ಒಂದು ವೈರಲ್ ಆಗಿದ್ದು ಅದು ಮಡೆನೂರು ಮನುವಿನದ್ದೇ ಎನ್ನಲಾಗುತ್ತಿದೆ. ವೈರಲ್ ಆಗಿರುವ ಆಡಿಯೋನಲ್ಲಿ ಮಡೆನೂರು ಮನು ಕನ್ನಡದ ಸ್ಟಾರ್ ನಟರ ಬಗ್ಗೆ ಅತ್ಯಂತ ತುಚ್ಛವಾಗಿ ಮಾತನಾಡಿದ್ದಾರೆ.

ಸ್ಟಾರ್ ನಟರ ಬಗ್ಗೆ ತುಚ್ಛ ಮಾತು, ಮಡೆನೂರು ಮನು ಅದ್ದು ಎನ್ನಲಾದ ಆಡಿಯೋ ವೈರಲ್
Madenuru Manu

Updated on: May 24, 2025 | 9:28 PM

ಮಡೆನೂರು ಮನು (Madenooru Manu) ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿದ್ದು ನಟ ಈಗ ಪೊಲೀಸರ ಅತಿಥಿ ಆಗಿದ್ದಾನೆ. ಮಡೆನೂರು ಮಂಜು ಜೊತೆಗೆ ರಿಯಾಲಿಟಿ ಶೋನಲ್ಲಿ ಕೆಲಸ ಮಾಡುತ್ತಿದ್ದ ಕಲಾವಿದೆಯೊಬ್ಬರು ಅತ್ಯಾಚಾರ, ಲೈಂಗಿಕ ದೌರ್ಜನ್ಯ, ಬೆದರಿಕೆ ಇನ್ನಿತರೆ ಆರೋಪಗಳನ್ನು ಮಾಡಿದ್ದಾರೆ. ಮಡೆನೂರು ಮನು ಮಾಡಿರುವ ಹಲವು ನೀಚ ಕೃತ್ಯಗಳನ್ನು ಸಂತ್ರಸ್ತೆ ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದಾರೆ. ಇದೀಗ ಮಡೆನೂರು ಮನು ಅದ್ದು ಎನ್ನಲಾಗುತ್ತಿರುವ ಆಡಿಯೋ ಒಂದು ವೈರಲ್ ಆಗಿದ್ದು, ಕನ್ನಡ ಚಿತ್ರರಂಗದ ಸ್ಟಾರ್ ನಟರ ಬಗ್ಗೆ ಅತ್ಯಂತ ತುಚ್ಛವಾಗಿ, ಅಹಂಕಾರದಿಂದ ಮಾತನಾಡಲಾಗಿದೆ.

ಈಗ ವೈರಲ್ ಆಗಿರುವ ಆಡಿಯೋ ಮಡೆನೂರು ಮನುನದ್ದು ಎನ್ನಲಾಗುತ್ತಿದ್ದು, ಆಡಿಯೋನಲ್ಲಿ ಶಿವರಾಜ್ ಕುಮಾರ್ ಬಗ್ಗೆ ಮಾತನಾಡಿರುವ ಮಡೆನೂರು ಮನು, ಶಿವಣ್ಣ ಇನ್ನು ಐದಾರು ವರ್ಷ ಬದುಕಿದ್ದರೆ ಹೆಚ್ಚು ಆಮೇಲೆ ಸತ್ತು ಹೋಗುತ್ತಾನೆ. ಧ್ರುವ ಸರ್ಜಾ ಇನ್ನೆಂಟು ವರ್ಷ ಮಾರ್ಕೆಟ್​ನಲ್ಲಿ ಇರುತ್ತಾನೆ. ದರ್ಶನ್ ಈಗಾಗಲೇ ಸತ್ತು ಹೋಗಿದ್ದಾನೆ. ಇನ್ನು ನಾಲ್ಕು ವರ್ಷ ಕ್ರೇಜ್ ಇದ್ದರೆ ಹೆಚ್ಚು, ಇವರು ಮೂವರ ಮಧ್ಯೆ ಕಾಂಪಿಟೇಶನ್ ಕೊಡೋಕೆ ನಿಂತಿರೋ ಗಂಡು ಗಲಿ ಕಣ್ರಿ ನಾನು ಎಂದು ಬಲು ಅಹಂಕಾರದಿಂದ ಮಾತನಾಡಿದ್ದಾನೆ.

ವೈರಲ್ ಆಡಿಯೋ ಇಲ್ಲಿದೆ

ಈಗ ವೈರಲ್ ಆಗಿರುವ ಆಡಿಯೋ ನಲ್ಲಿ ಇರುವುದು ಮಡೆನೂರು ಮನುನದ್ದೇ ಧ್ವನಿ ಎನ್ನಲಾಗುತ್ತಿದೆ. ಎಲ್ಲೋ ಮದ್ಯ ಸೇವಿಸುವಾಗ ಗೆಳೆಯರ ಮುಂದೆ ಹೇಳಿರುವ ಮಾತುಗಳನ್ನು ಯಾರೋ ರೆಕಾರ್ಡ್ ಮಾಡಿಕೊಂಡು ಈಗ ವೈರಲ್ ಮಾಡಿದ್ದಾರೆ. ಮಡೆನೂರು ಮನು ನಟನೆಯ ‘ಕುಲದಲ್ಲಿ ಕೀಳ್ಯಾವುದೊ’ ಸಿನಿಮಾ ನಿನ್ನೆಯಷ್ಟೆ ಬಿಡುಗಡೆ ಆಗಿದೆ. ಸಿನಿಮಾ ಬಿಡುಗಡೆ ಆದ ದಿನವೇ ಮಡೆನೂರು ಮನು ಪೊಲೀಸರ ಅತಿಥಿ ಆಗಿದ್ದಾರೆ.

ಇದನ್ನೂ ಓದಿ:‘ನನ್ನ ಗಂಡನ ಪರ ನಿಲ್ಲುತ್ತೇನೆ, ನ್ಯಾಯ ಸಿಗುವವರೆಗೆ ಹೋರಾಡುತ್ತೇನೆ’; ಆರೋಪಿ ಮಡೆನೂರು ಮನು ಪತ್ನಿಯ ದೃಢ ನಿಲುವು

ಮಡೆನೂರು ಮನು ಪತ್ನಿ ಸಹ ಮಾಧ್ಯಮಗಳ ಬಳಿ ಮಾತನಾಡಿದ್ದು, ತನ್ನ ಪತಿಯ ಏಳ್ಗೆಯನ್ನು ಸಹಿಸದ ಕೆಲವರು ಹೀಗೆ ಸುಳ್ಳು ಆರೋಪಗಳನ್ನು ಮಾಡಿದ್ದಾರೆ. ಮನು ಬಹಳ ಒಳ್ಳೆಯ ವ್ಯಕ್ತಿ, ಏನೇ ಆದರು ನಾನು ಪತಿಯ ಪರವಾಗಿ ನಿಲ್ಲುತ್ತೀನಿ, ನಾವು ಕಾನೂನು ಹೋರಾಟ ಮಾಡುತ್ತೀನಿ ಎಂದೆಲ್ಲ ಹೇಳಿದ್ದಾರೆ. ಪ್ರಕರಣ ಹೊರಬಂದ ದಿನ ಮಾತನಾಡಿದ್ದ ಮಡೆನೂರು ಮನು, ತನ್ನ ವಿರುದ್ಧ ದೂರು ನೀಡಿದ್ದ ಸಂತ್ರಸ್ತೆಯನ್ನು ನಾನು ಚೆನ್ನಾಗಿ ನೋಡಿಕೊಳ್ಳುತ್ತೇನೆ, ನಾನು ಆಕೆಗೆ ತಾಳಿ ಕಟ್ಟಿದ್ದೇನೆ ಎಂದಿದ್ದರು. ಈ ವರೆಗೆ ಮಡೆನೂರು ಮನುಗೆ ಚಿತ್ರರಂಗದಿಂದ ಅಷ್ಟೋ ಇಷ್ಟೊ ಬೆಂಬಲ ಸಿಗುತ್ತಿತ್ತು, ಈಗ ಈ ಆಡಿಯೋ ವೈರಲ್ ಆದ ಬಳಿಕ ಆ ಬೆಂಬಲವೂ ನಿಂತು ಹೋಗುವ ಸಾಧ್ಯತೆ ಇದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:31 pm, Sat, 24 May 25

Loading...
Unable to load recommendations.
Follow Us