‘ಮಿಸ್​ಗೈಡ್’ ಮಾಡಿದ ನಿರ್ದೇಶಕನಿಗೆ ನಾಗೇಂದ್ರ ಪ್ರಸಾದ್ ಶುಭ ಹಾರೈಕೆ

ಮಂಜು ಕವಿ ನಿರ್ದೇಶನ ಮಾಡಿರುವ ‘ಮಿಸ್​ಗೈಡ್​’ ಚಿತ್ರಕ್ಕೆ ಈಗಾಗಲೇ ಶೂಟಿಂಗ್​ ಹಾಗೂ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಪೂರ್ಣಗೊಂಡಿವೆ. ಶೀಘ್ರದಲ್ಲೇ ಈ ಸಿನಿಮಾ ಬಿಡುಗಡೆ ಆಗಲಿದೆ. ಈ ಸಿನಿಮಾದಲ್ಲಿ 4 ಹಾಡುಗಳಿವೆ. ಅಮ್ಮ-ಮಗನ ಸೆಂಟಿಮೆಂಟ್ ಹಾಡಿಗೆ ಗುರುಕಿರಣ್ ಧ್ವನಿ ನೀಡಿದ್ದಾರೆ. ರಂಗಭೂಮಿ ಕಲಾವಿದರು ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.

‘ಮಿಸ್​ಗೈಡ್’ ಮಾಡಿದ ನಿರ್ದೇಶಕನಿಗೆ ನಾಗೇಂದ್ರ ಪ್ರಸಾದ್ ಶುಭ ಹಾರೈಕೆ
‘ಮಿಸ್​ಗೈಡ್​’ ಸಿನಿಮಾ ತಂಡ

Updated on: Mar 20, 2024 | 11:03 PM

ಮಂಜು ಕವಿ ಅವರು ಮಿಸ್​ಗೈಡ್ (Misguide) ಮಾಡಿದ್ದಾರೆ. ಹಾಗಂತ ಅವರು ಯಾರನ್ನೂ ದಾರಿ ತಪ್ಪಿಸಿಲ್ಲ. ಮಂಜು ಕವಿ (Manju Kavi) ನಿರ್ದೇಶನ ಮಾಡಿರುವ ಹೊಸ ಸಿನಿಮಾದ ಹೆಸರೇ ‘ಮಿಸ್​ಗೈಡ್’! ‘ಸೀಟಡೀಲ್ ಫಿಲಂಸ್’ ಮತ್ತು ‘ರಾಜ್ ಫಿಲ್ಮ್ಸ್​’ ಸಂಸ್ಥೆಯ ಮೂಲಕ ನಾಗರಾಜ್ ಮತ್ತು ಸುಬ್ಬು ಅವರು ಈ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಇತ್ತೀಚೆಗೆ ‘ಮಿಸ್​ಗೈಡ್’ ಸಿನಿಮಾದ ಟೀಸರ್​ ಬಿಡುಗಡೆ ಮಾಡಲಾಯಿತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಗೀತರಚನಕಾರ ವಿ. ನಾಗೇಂದ್ರ ಪ್ರಸಾದ್ (V. Nagendra Prasad) ಆಗಮಿಸಿದ್ದರು. ಟೀಸರ್​ ಬಿಡುಗಡೆ ಮಾಡಿ ಅವರು ಶುಭ ಕೋರಿದರು.

‘ಮಿಸ್​ಗೈಡ್’ ಸಿನಿಮಾಗೆ ಮಂಜು ಕವಿ ನಿರ್ದೇಶನ ಮಾಡುವುದರ ಜೊತೆಗೆ ಕಥೆ, ಚಿತ್ರಕಥೆ, ಸಂಭಾಷಣೆ ಮತ್ತು ಸಾಹಿತ್ಯ ಬರೆದಿದ್ದಾರೆ. ಅಷ್ಟೇ ಅಲದೇ, ಸಂಗೀತವನ್ನೂ ನೀಡಿದ್ದಾರೆ. ಟೀಸರ್ ಅನಾವರಣ ಮಾಡಿದ ನಾಗೇಂದ್ರ ಪ್ರಸಾದ್ ಅವರು ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಗಗನ್ ರಾಜ್ ಕೂಡ ಈ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ್ದರು. ಇದು ಮಂಜು ಕವಿ ನಿರ್ದೇಶನ ಮಾಡಿರುವ ಎರಡನೇ ಸಿನಿಮಾ.

ಇದನ್ನೂ ಓದಿ: ‘ದೇಸಾಯಿ’ ಟೀಸರ್​ಗೆ ಲಕ್ಷ್ಮಣ ಸವದಿ ಹಾರೈಕೆ; ‘ಲವ್​ 360’ ಹುಡುಗನ ಹೊಸ ಸಿನಿಮಾ

‘ನನ್ನ ಕಥೆಯನ್ನು ಇಷ್ಟಪಟ್ಟು ನಾಗರಾಜ್ ಮತ್ತು ಸುಬ್ಬು ಅವರು ನಿರ್ಮಾಣ ಮಾಡಿದ್ದಾರೆ. ಹಾವು ಮತ್ತು ಮುಂಗುಸಿ ಕಥೆ ಸ್ಫೂರ್ತಿಯಾಗಿ ಇಟ್ಟುಕೊಂಡು ಈ ಸಿನಿಮಾದ ಕಥೆ ಸಿದ್ಧಪಡಿಸಲಾಗಿದೆ. ಮುಂಗುಸಿಯು ಹಾವಿನೊಂದಿಗೆ ಸೆಣೆಸಾಡಿ ಮಗುವನ್ನು ಕಾಪಾಡುತ್ತದೆ. ಆದರೆ ಅದರ ಬಾಯಲ್ಲಿ ರಕ್ತವನ್ನು ನೋಡಿದ ಮಗುವಿನ ತಾಯಿ, ಮುಂಗುಸಿಯೇ ತನ್ನ ಮಗುವಿಗೆ ಏನೋ ಮಾಡಿದೆ ಎಂದು ಭಾವಿಸುತ್ತಾಳೆ. ನಮ್ಮ ಚಿತ್ರಕ್ಕೆ ಈ ಕಥೆಯೇ ಸ್ಫೂರ್ತಿ’ ಎಂದು ಮಂಜು ಕವಿ ಹೇಳಿದ್ದಾರೆ.

‘ಮಿಸ್​ಗೈಡ್​’ ಸಿನಿಮಾದ ಟೀಸರ್ ರಿಲೀಸ್​ ಕಾರ್ಯಕ್ರಮ

ಮಂಜು ಕವಿ ಹೇಳಿದ ಕಥೆ ತಮಗೆ ಇಷ್ಟವಾಗಿ ಈ ಸಿನಿಮಾವನ್ನು ನಿರ್ಮಾಣ ಮಾಡಿರುವುದಾಗಿ ನಿರ್ಮಾಪಕರಾದ ಸುಬ್ಬು ಮತ್ತು ನಾಗರಾಜ್ ಹೇಳಿದ್ದಾರೆ. ಸುಬ್ಬು ಅವರು ನಿರ್ಮಾಣ ಮಾಡುವುದರ ಜೊತೆಗೆ ಸಿನಿಮಾದ ಒಂದು ಮುಖ್ಯ ಪಾತ್ರದಲ್ಲೂ ನಟಿಸಿದ್ದಾರೆ. ಅವರ ಜತೆ ನಾಯಕನಾಗಿ ನಿತೀಶ್ ವಿನಯ್ ರಾಜ್ ಕೂಡ ಅಭಿನಯಿಸಿದ್ದಾರೆ. ಫರೀನ್ ಮತ್ತು ರಕ್ಷಾ ನಾಯಕಿಯಾಗಿ ನಟಿಸಿದ್ದಾರೆ. ನಟರಾದ ಪ್ರಾಣೇಶ್, ಜಗದೀಶ್ ಕೊಪ್ಪ, ಹಿನ್ನೆಲೆ ಸಂಗೀತ ನೀಡಿರುವ ವಿನು ಮನಸು, ಫೈಟ್​ ಮಾಸ್ಟರ್​ ಮಾಸ್ ಮಾದ ಕೂಡ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us