Puneetha Parva: ಪುನೀತ ಪರ್ವಕ್ಕೆ ಚೆನ್ನೈನಿಂದ ಸೂರ್ಯ ಬಂದರೂ ಕನ್ನಡದ ಕೆಲವು ನಟರೇ ಬರಲಿಲ್ಲ; ನೆಟ್ಟಿಗರ ಟೀಕೆ
Gandhada Gudi: ಪುನೀತ್ ರಾಜ್ಕುಮಾರ್ ಅವರಿಗೋಸ್ಕರ ಎಲ್ಲರೂ ಒಂದೆಡೆ ಸೇರಲು ಸಿಕ್ಕಿದ ಅಪರೂಪದ ಅವಕಾಶ ಇದಾಗಿತ್ತು. ಇಂಥ ಕಾರ್ಯಕ್ರಮಕ್ಕೆ ಬರಲಾಗದೇ ನೆಪ ಹೇಳಿರುವುದು ಸರಿಯಲ್ಲ ಎಂಬುದು ಜನರ ಅಭಿಪ್ರಾಯ.
ನಟ ಪುನೀತ್ ರಾಜ್ಕುಮಾರ್ (Puneeth Rajkumar) ಅವರು ಅಜಾತಶತ್ರು ಆಗಿದ್ದರು. ಚಿತ್ರರಂಗದ ಎಲ್ಲರ ಜೊತೆಗೂ ಅವರು ಉತ್ತಮ ಒಡನಾಟ ಹೊಂದಿದ್ದರು. ಅನೇಕ ಸಿನಿಮಾ ತಂಡಗಳಿಗೆ ಅವರು ಬೆನ್ನು ತಟ್ಟಿದ್ದರು. ಈಗ ಪುನೀತ್ ರಾಜ್ಕುಮಾರ್ ಅವರ ಕನಸಿನ ಪ್ರಾಜೆಕ್ಟ್ ‘ಗಂಧದ ಗುಡಿ’ (Gandhada Gudi) ಬಿಡುಗಡೆಗೆ ಸಜ್ಜಾಗಿದೆ. ಅದರ ಸಲುವಾಗಿ ಅ.21ರಂದು ಪ್ರೀ-ರಿಲೀಸ್ ಇವೆಂಟ್ ಮಾಡಲಾಯಿತು. ಬೆಂಗಳೂರಿನ ಅರಮನೆ ಮೈದಾನದಲ್ಲಿ ಲಕ್ಷಾಂತರ ಅಭಿಮಾನಿಗಳು ಹಾಗೂ ನೂರಾರು ಮಂದಿ ಸ್ಟಾರ್ ಕಲಾವಿದರು ಹಾಗೂ ತಂತ್ರಜ್ಞರ ಸಮ್ಮುಖದಲ್ಲಿ ಈ ಕಾರ್ಯಕ್ರಮ ನಡೆಯಿತು. ‘ಪುನೀತ ಪರ್ವ’ (Puneetha Parva) ಹೆಸರಿನಲ್ಲಿ ನಡೆದ ಕಾರ್ಯಕ್ರಮಕ್ಕೆ ಕನ್ನಡ ಕೆಲವು ಕಲಾವಿದರು ಗೈರಾಗಿದ್ದು ಬೇಸರದ ಸಂಗತಿ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಟೀಕೆ ವ್ಯಕ್ತವಾಗಿದೆ.
‘ಪುನೀತ ಪರ್ವ’ ಕಾರ್ಯಕ್ರಮಕ್ಕೆ ಹಾಜರಾಗದೇ ಇರುವುದಕ್ಕೆ ಕೆಲವು ನಟರು ಕುಂಟು ನೆಪಗಳನ್ನು ನೀಡಿದ್ದಾರೆ. ಈ ದಿನಾಂಕದಲ್ಲೇ ಕಾರ್ಯಕ್ರಮ ನಡೆಯಲಿದೆ ಎಂಬುದು ಮೊದಲೇ ಗೊತ್ತಾಗಿತ್ತು. ಆದರೂ ಕೂಡ ಕೆಲವರು ಸಮಯ ಹೊಂದಿಸಿಕೊಳ್ಳದೇ ಇರುವುದು ಯಾಕೆ ಎಂಬುದು ಎಲ್ಲರ ಮನದಲ್ಲೂ ಹುಟ್ಟಿಕೊಂಡಿರುವ ಪ್ರಶ್ನೆ. ಪರಭಾಷೆ ಕಲಾವಿದರು ಪುನೀತ್ ಮೇಲಿನ ಪ್ರೀತಿ-ಗೌರವದಿಂದ ಬೆಂಗಳೂರಿಗೆ ಬಂದರು. ತಮಿಳಿನ ನಟರಾದ ಸೂರ್ಯ, ಸಿದ್ಧಾರ್ಥ್, ತೆಲುಗು ಕಲಾವಿದರಾದ ರಾಣಾ ದಗ್ಗುಬಾಟಿ, ಅಖಿಲ್ ಅಕ್ಕಿನೇನಿ ಮುಂತಾದವರು ಬಂದು ಪುನೀತ್ ಬಗ್ಗೆ ಅಭಿಮಾನದ ಮಾತುಗಳನ್ನು ಆಡಿದರು. ವಿಡಿಯೋ ಬೈಟ್ ಮೂಲಕ ಅಮಿತಾಭ್ ಬಚ್ಚನ್, ಕಮಲ್ ಹಾಸನ್ ಅವರು ಮಾತನಾಡಿದರು. ಆದರೆ ಚಂದನವನದ ಒಂದಷ್ಟು ನಟರೇ ಗೈರಾಗಿದ್ದು ಅಭಿಮಾನಿಗಳಿಗೆ ಅಸಮಾಧಾನ ತರಿಸಿದೆ.
ಇಡೀ ದೇಶದ ಗಮನ ಸೆಳೆಯುವ ರೀತಿಯಲ್ಲಿ ‘ಪುನೀತ ಪರ್ವ’ ಕಾರ್ಯಕ್ರಮ ನಡೆಯಿತು. ಪುನೀತ್ ರಾಜ್ಕುಮಾರ್ ಅವರಿಗೋಸ್ಕರ ಎಲ್ಲರೂ ಒಂದೆಡೆ ಸೇರಲು ಸಿಕ್ಕಿದ ಅಪರೂಪದ ಅವಕಾಶ ಇದಾಗಿತ್ತು. ಇಂಥ ಕಾರ್ಯಕ್ರಮಕ್ಕೆ ಬರಲಾಗದೇ ನೆಪ ಹೇಳಿರುವುದು ಸರಿಯಲ್ಲ ಎಂಬುದು ಜನರ ಅಭಿಪ್ರಾಯ.
ಅದೇನೇ ಇರಲಿ, ಲಕ್ಷಾಂತರ ಅಭಿಮಾನಿಗಳು ಈ ಕಾರ್ಯಕ್ರಮವನ್ನು ಕಣ್ತುಂಬಿಕೊಂಡಿದ್ದಾರೆ. ಅಪ್ಪು ಕನಸಿನ ‘ಗಂಧದ ಗುಡಿ’ ಚಿತ್ರ ಸೂಪರ್ ಹಿಟ್ ಆಗಲಿ ಎಂದು ಹಾರೈಸಿದ್ದಾರೆ. ಅ.28ರಂದು ಥಿಯೇಟರ್ನಲ್ಲಿ ಈ ಸಾಕ್ಷ್ಯಚಿತ್ರ ರಿಲೀಸ್ ಆಗಲಿದ್ದು, ಪುನೀತ್ ರಾಜ್ಕುಮಾರ್ ಅಭಿಮಾನಿಗಳಿಗೆ ವಿಶೇಷ ಅನುಭವ ನೀಡುವುದು ಖಚಿತ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:47 pm, Sat, 22 October 22