ಎರಡು ಕಾಲಘಟ್ಟದ ಲವ್ ಸ್ಟೋರಿ ಹೇಳುವ ‘ಮತ್ತೆ ಮಳೆ ಹೊಯ್ಯುತ್ತಿದೆ’ ಸಿನಿಮಾ

ಎರಡು ಕಾಲಘಟ್ಟದಲ್ಲಿ ನಡೆಯುವ ಕಥೆಯನ್ನು ‘ಮತ್ತೆ ಮಳೆ ಹೊಯ್ಯುತ್ತಿದೆ’ ಚಿತ್ರದಲ್ಲಿ ತೋರಿಸಲಾಗುತ್ತಿದೆ. ಅದಕ್ಕೆ ತಕ್ಕಂತೆ ಎರಡು ಜೋಡಿಯ ಪ್ರೇಮಕಥೆ ಈ ಸಿನಿಮಾದಲ್ಲಿ ಇರಲಿದೆ ಎಂದು ಚಿತ್ರತಂಡ ತಿಳಿಸಿದೆ. ಶೃಂಗೇರಿ, ಹೊರನಾಡು, ಕೊಪ್ಪ, ಹರಿಹರಪುರ, ಆಗುಂಬೆ ಮುಂತಾದ ಕಡೆಗಳಲ್ಲಿ ಈ ಚಿತ್ರಕ್ಕೆ ಶೂಟಿಂಗ್ ಮಾಡಲಾಗಿದೆ.

ಎರಡು ಕಾಲಘಟ್ಟದ ಲವ್ ಸ್ಟೋರಿ ಹೇಳುವ ‘ಮತ್ತೆ ಮಳೆ ಹೊಯ್ಯುತ್ತಿದೆ’ ಸಿನಿಮಾ
Matthe Male Hoyyutthide Team

Updated on: Feb 17, 2026 | 9:35 PM

ಮಳೆಗೂ ಚಿತ್ರರಂಗಕ್ಕೂ ಬಿಡದ ನಂಟು. ಮಳೆಯ ಶೀರ್ಷಿಕೆಯಲ್ಲಿ ಹೊಸ ಸಿನಿಮಾ ಬರುತ್ತಿದೆ. ‘ಮತ್ತೆ ಮಳೆ ಹೊಯ್ಯುತ್ತಿದೆ’ (Matthe Male Hoyyutthide) ಎಂಬುದು ಈ ಸಿನಿಮಾದ ಶೀರ್ಷಿಕೆ. ಇತ್ತೀಚೆಗೆ ಈ ಸಿನಿಮಾದ ಹಾಡುಗಳನ್ನು ರಿಲೀಸ್ ಮಾಡಲಾಯಿತು. ಚಿತ್ರವನ್ನು ಗಂಗಾಧರ್ ಅವರ ‘ಶ್ರೀ ಗವಿರಂಗನಾಥ ಸ್ವಾಮಿ ಪಿಕ್ಚರ‍್ಸ್’ ಬ್ಯಾನರ್ ಮೂಲಕ ಸುಮ ಅವರು ನಿರ್ಮಾಣ ಮಾಡುತ್ತಿದ್ದರೆ. ಶ್ರುತಿ ಅನಿಲ್‌ಕುಮಾರ್ ಅವರು ಸಹ ನಿರ್ಮಾಪಕಿ ಆಗಿದ್ದಾರೆ. ಪರಮ್‌ ಗುಬ್ಬಿ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ.

ಇತ್ತೀಚೆಗೆ ಉತ್ಸವ್ ಲೆಗಸಿಯಲ್ಲಿ ಹಾಡುಗಳನ್ನು ಬಿಡುಗಡೆ ಮಾಡಲಾಯಿತು. ಈ ಸಿನಿಮಾಗೆ ಕಬ್ಬಡಿ ನರೇಂದ್ರ ಬಾಬು ಅವರು ಚಿತ್ರಕಥೆ, ಸಂಭಾಷಣೆ ಮತ್ತು ಸಾಹಿತ್ಯ ಬರೆದಿದ್ದಾರೆ. ಸಹ ನಿರ್ಮಾಪಕಿ ಶ್ರುತಿ ಅವರು ಪ್ರಾಧ್ಯಾಪಕಿಯ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಹಾಡುಗಳ ಬಿಡುಗಡೆ ಬಳಿಕ ಸುದ್ದಿಗೋಷ್ಠಿ ನಡೆಸಿ ಸಿನಿಮಾದ ಬಗ್ಗೆ ಮಾಹಿತಿ ಹಂಚಿಕೊಳ್ಳಲಾಯಿತು.

‘ಮತ್ತೆ ಮಳೆ ಹೊಯ್ಯುತ್ತಿದೆ’ ಸಿನಿಮಾದ ಸಾಂಗ್ ರಿಲೀಸ್ ಕಾರ್ಯಕ್ರಮಕ್ಕೆ ಶ್ರವಣಬೆಳಗೊಳ ಶಾಸಕ ಸಿ.ಎನ್. ಬಾಲಕೃಷ್ಣ ಹಾಗೂ ಹಿರಿಯ ನಿರ್ದೇಶಕ ನಾಗಣ್ಣ ಅವರು ಚಾಲನೆ ನೀಡಿದರು. ಈ ವೇಳೆ ಪ್ರಸ್ತುತ ಚಿತ್ರರಂಗವು ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಅದಕ್ಕೆ ಇರುವ ಪರಿಹಾರಗಳ ಬಗ್ಗೆ ನಾಗಣ್ಣ ಬೆಳಕು ಚೆಲ್ಲಿದರು. ನಂತರ ಇದೇ ಬ್ಯಾನರ್‌ನಿಂದ ನಿರ್ಮಾಣ ಆಗುತ್ತಿರುವ, ಕಬ್ಬಡ್ಡಿ ನರೇಂದ್ರಬಾಬು ನಿರ್ದೇಶನದ ‘ಭೀಮ ತೀರದ ಹಂತಕರು’ ಸಿನಿಮಾದ ಪೋಸ್ಟರ್‌ನ್ನು ಲೋಕಾರ್ಪಣೆ ಮಾಡಲಾಯಿತು.

ಈ ಸಿನಿಮಾದಲ್ಲಿ ನಿರ್ಮಾಪಕರ ಪುತ್ರ ಜಿ. ಲಿಖಿತ್ ಹೀರೋ ಆಗಿ ನಟಿಸಿದ್ದರೆ. ರಂಗಭೂಮಿ ಹಿನ್ನೆಲೆ ಹೊಂದಿರುವ ಜಯವರ್ಧನ್ ಅವರು ಎರಡು ಶೇಡ್‌ಗಳಲ್ಲಿ ನಟಿಸಿ ಮತ್ತೋರ್ವ ಹೀರೋ ಆಗಿದ್ದಾರೆ. ಸುಲಕ್ಷಖೈರ, ಭೂಮಿಕಾ ಗೌಡ ಅವರು ಈ ಸಿನಿಮಾದ ನಾಯಕಿಯರು. ಚಂದ್ರಶೇಖರ ರೆಡ್ಡಿ ಎ.ಎಂ, ಕುಮಾರಿ ಸ್ವರ್ಣ, ದಿನಮಣಿ, ಪ್ರಕಾಶ್‌ ಮೂರ್ತಿ, ಕಾವ್ಯ ಕುಮಾರಿ ಮುಂತಾದ ಕಲಾವಿದರು ಕೂಡ ಪಾತ್ರವರ್ಗದಲ್ಲಿ ಇದ್ದಾರೆ.

ಇದನ್ನೂ ಓದಿ: ಹಾಸನ ಎಸ್​ಪಿ ಕಚೇರಿ ಹೊರಗೆ ಕಾದು ಕುಳಿತ ಯಶ್ ತಾಯಿ ಪುಷ್ಪಾ

ನಿರ್ದೇಶಕ ಪರಮ್‌ ಗುಬ್ಬಿ ಮಾತನಾಡಿ, ‘ಸಾಹಿತಿ ಕೆ. ಸದಾಶಿವ ವಿರಚಿತ ಸಣ್ಣಕತೆಗಳಲ್ಲಿ ಒಂದಾದ ‘ಮತ್ತೆ ಮಳೆ ಹೂಯ್ಯುತಿದೆ’ ಕೃತಿಯನ್ನು ಬಳಸಲಾಗಿದೆ. ಅವರಿಗೆ ನೀಡಬಹುದಾದ ಸಂಭಾವನೆಯ ಮೊತ್ತವನ್ನು ಸಾಹಿತ್ಯ ಪರಿಷತ್‌ನಲ್ಲಿ ದತ್ತಿಯಾಗಿ ನೀಡಿ, ಪ್ರತಿ ವರ್ಷ ಸದಾಶಿವ ಹೆಸರಿನಲ್ಲಿ ಯುವ ಬರಹಗಾರರಿಗೆ ಪ್ರಶಸ್ತಿ ನೀಡುವ ಯೋಜನೆ ಬಗ್ಗೆ ನಿರ್ಮಾಪಕರಿಗೆ ತಿಳಿಸಿದಾಗ ಖುಷಿಯಿಂದ ಒಪ್ಪಿಕೊಂಡರು’ ಎಂದು ಹೇಳಿದರು. ಶಾಂತಾರಾವ್ ಇಪಿಲಿ ಅವರ ಛಾಯಾಗ್ರಹಣ, ಧನುಷ್ ವೀರ್ ಅವರ ಸಂಕಲನ, ಬಾಬು ಖಾನ್ ಅವರ ಕಲಾ ನಿರ್ದೇಶನ, ನಂದ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.