
ಯಶ್ ನಟನೆಯ ‘ರಾಜಾಹುಲಿ’ (Rajahuli) ಸಿನಿಮಾ ಬಗ್ಗೆ ಎಲ್ಲರಿಗೂ ಗೊತ್ತು. ಈಗ ಅದೇ ಶೀರ್ಷಿಕೆಯಲ್ಲಿ ಹೊಸ ಸಿನಿಮಾ ಬರುತ್ತಿದೆ. ‘ರಾಜಾಹುಲಿ’ ಸಿನಿಮಾಗೆ ಅಸಿಸ್ಟೆಂಟ್ ಆಗಿ ಕೆಲಸ ಮಾಡಿದ್ದ ಹೊನ್ನರಾಜ್ ಅವರು ಈಗ ‘ಮಿಸ್ಟರ್ ಆ್ಯಂಡ್ ಮಿಸಸ್ ರಾಜಾಹುಲಿ’ (Mr And Mrs Rajahuli) ಸಿನಿಮಾ ಮಾಡಿದ್ದಾರೆ. ಈ ಸಿನಿಮಾ ಮೂಲಕ ಅವರು ಹೀರೋ ಹಾಗೂ ನಿರ್ದೇಶಕನಾಗಿದ್ದಾರೆ. ಅಲ್ಲದೇ, ಅವರೇ ನಿರ್ಮಾಣ ಕೂಡ ಮಾಡಿದ್ದಾರೆ. ರಾಮಲಿಂಗಾ ರೆಡ್ಡಿ (Ramalinga Reddy) ಅವರು ಈ ಸಿನಿಮಾಗೆ ಸಾಥ್ ನೀಡಿದ್ದಾರೆ.
‘ಮಿಸ್ಟರ್ ಆ್ಯಂಡ್ ಮಿಸಸ್ ರಾಜಾಹುಲಿ’ ಸಿನಿಮಾದ ಆಡಿಯೋ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ರಾಮಲಿಂಗಾರೆಡ್ಡಿ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ‘ನೆನಪಿರಲಿ’ ಪ್ರೇಮ್ ಅವರು ಹಾಡು ಬಿಡುಗಡೆ ಮಾಡಿದರು. ಎಂ.ಜಿ. ರಾಮಮೂರ್ತಿ, ಸಾರಾ ಗೋವಿಂದು ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಈ ವೇಳೆ ವೇದಿಕೆಯಲ್ಲಿ ಮಾತನಾಡಿದ ರಾಮಲಿಂಗಾ ರೆಡ್ಡಿ ಅವರು ಚಿತ್ರತಂಡಕ್ಕೆ ಶುಭ ಕೋರಿದರು. ‘ಹೊನ್ನರಾಜ್ ಅವರು ಈ ಸಿನಿಮಾದಲ್ಲಿ ನಟನೆ, ನಿರ್ದೇಶನದ ಜತೆಗೆ ಚಿತ್ರದ ನಿರ್ಮಾಣ ಕೂಡ ಮಾಡಿದ್ದಾರೆ. ಸಿನಿಮಾ ಚೆನ್ನಾಗಿ ಪ್ರದರ್ಶನಗೊಂಡು ಹಾಕಿದ ಹಣದ ನಾಲ್ಕು ಪಟ್ಟು ವಾಪಸ್ ಬರಲಿ’ ಎಂದು ಅವರು ವಿಶ್ ಮಾಡಿದರು. ಪ್ರೇಮ್ ಮಾತನಾಡಿ, ‘ಹೊನ್ನರಾಜ್ ನನಗೆ ಜೂನಿಯರ್. ಅವರಿಗೆ ಒಳ್ಳೆಯ ಫಲ ಸಿಗಲಿ’ ಎಂದರು.
ಸಾರಾ ಗೋವಿಂದು ಅವರು ಮಾತನಾಡಿ, ‘ಸಿರಿವಂತ ರಾಜಕಾರಣಿಯ ಕೈಯಲಿ ಆಡಿಯೋ ಬಿಡುಗಡೆ ಮಾಡಿಸಿದ್ದೀರಿ. ಸಚಿವರ ಕೈಗುಣ ಚೆನ್ನಾಗಿದೆ. ನಾವೆಲ್ಲ ನಿಮ್ಮ ಬೆನ್ನೆಲುಬಾಗಿರುತ್ತೇವೆ. ರಿಲೀಸ್ ಸಮಯದಲ್ಲಿ ನಿಮ್ಮ ಜತೆ ಇರುತ್ತೇವೆ’ ಎಂದರು. ‘ಶ್ರೀ ಸತ್ಯಲಕ್ಷ್ಮಿ ಕ್ರಿಯೇಶನ್ಸ್’ ಮೂಲಕ ಸಿನಿಮಾ ನಿರ್ಮಾಣ ಆಗಿದೆ. ಹಾಡುಗಳಿಗೆ ವಿನು ಮನಸು ಸಂಗೀತ ನೀಡಿದ್ದಾರೆ. ಶಿವಪುತ್ರ ಅವರು ಛಾಯಾಗ್ರಹಣ ಮಾಡಿದ್ದಾರೆ. ಶೃತಿ ಬಬಿತಾ, ರೂಪಾ, ಮೈಸೂರು ಮಂಜುಳಾ , ರೇಖಾದಾಸ್, ಮಂಜಣ್ಣ, ಗಿರೀಶ್ ಮುಂತಾದವರು ನಟಿಸಿದ್ದಾರೆ.
ಇದನ್ನೂ ಓದಿ: ‘ಮಿಸ್ಟರ್ ಆ್ಯಂಡ್ ಮಿಸೆಸ್ ರಾಜಾಹುಲಿ’ ಸಿನಿಮಾದ ಪೋಸ್ಟರ್ ಬಿಡುಗಡೆ ಮಾಡಿದ ವೀರೇಂದ್ರ ಹೆಗ್ಗಡೆ
ಸಿನಿಮಾ ಬಗ್ಗೆ ನಿರ್ದೇಶಕ ಹೊನ್ನರಾಜ್ ಅವರು ಮಾಹಿತಿ ಹಂಚಿಕೊಂಡರು. ‘ಇದು ಹಳ್ಳಿ ಸೊಗಡಿನ ಸಿನಿಮಾ. ಯಶ್ ಅಭಿಮಾನಿಯಾದ ನಾಯಕ ಸ್ನೇಹಕ್ಕೆ ಹೆಚ್ಚು ಬೆಲೆ ಕೊಡುತ್ತಾನೆ. ಹಳ್ಳಿಗೆ ಒಳ್ಳೆಯದನ್ನು ಮಾಡಲು ಹೋಗಿ ಆತ ಏನೆಲ್ಲ ತೊಂದರೆ ಅನುಭವಿಸುತ್ತಾನೆ ಎಂಬುದನ್ನು ಕೌಟುಂಬಿಕ ಕಥೆಯೊಂದಿಗೆ ಹೇಳಲು ಪ್ರಯತ್ನಿಸಿದ್ದೇನೆ. ಮದ್ದೂರು, ಹುಳಿಯಾರು, ಚಿಕ್ಕನಾಯಕನಾಹಳ್ಳಿ, ಶ್ರೀರಂಗಪಟ್ಟಣದ ಸುತ್ತಮುತ್ತ 65 ದಿನಗಳ ಕಾಲ ಚಿತ್ರದ ಚಿತ್ರೀಕರಣ ನಡೆಸಲಾಗಿದೆ’ ಎಂದು ಅವರು ಹೇಳಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.