ರೈತನಾಗಿ ಅಬ್ಬರಿಸುವ ‘ಗುಳ್ಟು’ ನವೀನ್ ಶಂಕರ್​; ‘ಕ್ಷೇತ್ರಪತಿ’ ಟ್ರೇಲರ್​ ಹೇಗಿದೆ ನೋಡಿದ್ರಾ?

|

Updated on: Aug 11, 2023 | 5:12 PM

Kshetrapati Trailer: ಈ ಮೊದಲು ಬಿಡುಗಡೆ ಆದ ಟೀಸರ್​ ಮೂಲಕ ‘ಕ್ಷೇತ್ರಪತಿ’ ಸಿನಿಮಾ ಸದ್ದು ಮಾಡಿತ್ತು. ಈಗ ಟ್ರೇಲರ್​ ಕೂಡ ಅಬ್ಬರಿಸುತ್ತಿದೆ. ಅನ್ಯಾಯದ ವಿರುದ್ಧ ಸಿಡಿದೆದ್ದು ನಿಲ್ಲುವ ಯುವಕನಾಗಿ ನವೀನ್​ ಶಂಕರ್​ ಅವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಅವರ ಆ್ಯಂಗ್ರಿ ಯಂಗ್​ ಮ್ಯಾನ್​ ಗೆಟಪ್​ ಗಮನ ಸೆಳೆಯುತ್ತಿದೆ.

ರೈತನಾಗಿ ಅಬ್ಬರಿಸುವ ‘ಗುಳ್ಟು’ ನವೀನ್ ಶಂಕರ್​; ‘ಕ್ಷೇತ್ರಪತಿ’ ಟ್ರೇಲರ್​ ಹೇಗಿದೆ ನೋಡಿದ್ರಾ?
ನವೀನ್ ಶಂಕರ್​
Follow us on

ನಟ ನವೀನ್​ ಶಂಕರ್​ (Naveen Shankar) ಅವರು ‘ಗುಳ್ಟು’ ಸಿನಿಮಾ ಮೂಲಕ ಸಖತ್​ ಜನಪ್ರಿಯತೆ ಪಡೆದರು. ಆ ಬಳಿಕ ಅವರು ಅನೇಕ ಸಿನಿಮಾಗಳಲ್ಲಿ ನಟಿಸಿ ಗಮನ ಸೆಳೆದಿದ್ದಾರೆ. ಈ ವರ್ಷ ತೆರೆಕಂಡ ‘ಹೊಂದಿಸಿ ಬರೆಯಿರಿ’, ‘ಹೊಯ್ಸಳ’ ಸಿನಿಮಾಗಳಲ್ಲಿನ ನವೀನ್​ ಶಂಕರ್​ ಅವರ ನಟನೆಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಈಗ ಮತ್ತೊಂದು ಡಿಫರೆಂಟ್​ ಅವತಾರದಲ್ಲಿ ಅಭಿಮಾನಿಗಳ ಎದುರು ಬರಲು ನವೀನ್​ ಶಂಕರ್​ ಸಜ್ಜಾಗಿದ್ದಾರೆ. ಅವರ ಹೊಸ ಸಿನಿಮಾ ‘ಕ್ಷೇತ್ರಪತಿ’ (Kshetrapati) ಆಗಸ್ಟ್​ 18ರಂದು ಬಿಡುಗಡೆ ಆಗಲಿದೆ. ಈ ಸಿನಿಮಾದಲ್ಲಿ ಅವರು ರೈತನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯಕ್ಕೆ ‘ಕ್ಷೇತ್ರಪತಿ’ ಟ್ರೇಲರ್​ (Kshetrapati Trailer) ಬಿಡುಗಡೆ ಆಗಿದ್ದು, ಸಿನಿಪ್ರಿಯರಲ್ಲಿ ಸಖತ್​ ಕೌತುಕ ಮೂಡಿಸಿದೆ. ರೈತರ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ರೀತಿಯಲ್ಲಿ ಈ ಟ್ರೇಲರ್​ ಮೂಡಿಬಂದಿದೆ.

ಈ ಮೊದಲು ಬಿಡುಗಡೆ ಆದ ಟೀಸರ್​ ಮೂಲಕ ‘ಕ್ಷೇತ್ರಪತಿ’ ಸಿನಿಮಾ ಸದ್ದು ಮಾಡಿತ್ತು. ಈಗ ಟ್ರೇಲರ್​ ಕೂಡ ಅಬ್ಬರಿಸುತ್ತಿದೆ. ಅನ್ಯಾಯದ ವಿರುದ್ಧ ಸಿಡಿದೆದ್ದು ನಿಲ್ಲುವ ಯುವಕನಾಗಿ ನವೀನ್​ ಶಂಕರ್​ ಅವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಅವರ ಆ್ಯಂಗ್ರಿ ಯಂಗ್​ ಮ್ಯಾನ್​ ಗೆಟಪ್​ ಗಮನ ಸೆಳೆಯುತ್ತಿದೆ. ಟ್ರೇಲರ್​ ನೋಡಿದ ಎಲ್ಲರೂ ಪಾಸಿಟಿವ್​ ಆಗಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಉತ್ತರ ಕರ್ನಾಟಕದ ಶೈಲಿಯಲ್ಲಿ ನವೀನ್​​ ಶಂಕರ್​ ಡೈಲಾಗ್​ ಹೊಡೆದಿದ್ದಾರೆ. ಅವರ ವೃತ್ತಿಜೀವನದಲ್ಲಿ ಈ ಪಾತ್ರ ಮತ್ತು ಸಿನಿಮಾ ತುಂಬ ಡಿಫರೆಂಟ್​ ಆಗಿರಲಿದೆ.

‘ಕ್ಷೇತ್ರಪತಿ’ ಸಿನಿಮಾಗೆ ಶ್ರೀಕಾಂತ್​ ಕಟಗಿ ಅವರು ನಿರ್ದೇಶನ ಮಾಡಿದ್ದಾರೆ. ನವೀಶ್​ ಶಂಕರ್​ ಅವರ ಜೊತೆ ‘ಕೆಜಿಎಫ್​’ ಖ್ಯಾತಿಯ ನಟಿ ಅರ್ಚನಾ ಜೋಯಿಸ್​ ಕೂಡ ಒಂದು ಪ್ರಮುಖ ಪಾತ್ರ ಮಾಡಿದ್ದಾರೆ. ಅಚ್ಯುತ್​ ಕುಮಾರ್​ ರಾಹುಲ್​ ಐನಾಪುರ್​​, ಕೃಷ್ಣ ಹೆಬ್ಬಾಳೆ, ನಾಟ್ಯ ರಂಗ, ಶೈಲಶ್ರೀ, ಹರ್ಷ ಅರ್ಜುನ್ ಮುಂತಾದವರು ಈ ಸಿನಿಮಾದ ಪಾತ್ರವರ್ಗದಲ್ಲಿ ಇದ್ದಾರೆ. ರವಿ ಬಸ್ರೂರು ಅವರು ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಟ್ರೇಲರ್​ನಲ್ಲಿ ಹಿನ್ನೆಲೆ ಸಂಗೀತ ಹೈಲೈಟ್​ ಆಗಿದೆ. ಇತ್ತೀಚೆಗೆ ಬಿಡುಗಡೆ ಆದ ‘ಪಲ್ಲಕ್ಕಿ..’ ಸಾಂಗ್​ ಜನಮೆಚ್ಚುಗೆ ಗಳಿಸಿದೆ.

ಇದನ್ನೂ ಓದಿ: ‘ಗುಳ್ಟು’ ಹೀರೋ-ನಿರ್ದೇಶಕರ ಕಾಂಬಿನೇಷನ್​ನಲ್ಲಿ ಬರಲಿದೆ ಮತ್ತೊಂದು ಸಿನಿಮಾ; ಹೆಚ್ಚಿದೆ ನಿರೀಕ್ಷೆ

ನವೀನ್ ಶಂಕರ್​ ಅವರ ಅಭಿಮಾನಿಗಳು ‘ಕ್ಷೇತ್ರಪತಿ’ ಸಿನಿಮಾ ಮೇಲೆ ಬಹಳ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ನವೀನ್ ಶಂಕರ್​ ಅವರ ಪಾಲಿಗೂ ಈ ಚಿತ್ರ ಬಹಳ ಸ್ಪೆಷಲ್​ ಆಗಿದೆ. ‘ಗುಳ್ಟು’ ಯಶಸ್ಸಿನ ಬಳಿಕ ತಾವು ಕೇಳಿದ ಬೆಸ್ಟ್​ ಕಥೆಗಳಲ್ಲಿ ಇದೂ ಒಂದು ಎಂದು ಅವರು ಹೇಳಿದ್ದಾರೆ. ನವೀನ್ ಶಂಕರ್​ ಅವರು ಉತ್ತರ ಕರ್ನಾಟಕದವರಾಗಿದ್ದು, ಈ ಸಿನಿಮಾ ಕೂಡ ಆ ಭಾಗದ ಕಥೆ ಆದ್ದರಿಂದ ಬಹಳ ಖುಷಿಯಿಂದ ನಟಿಸಿದ್ದಾರೆ. ರೈತಾಪಿ ಕುಟುಂಬದ ಬಸವ ಎಂಬ ಹುಡುಗನ ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಉತ್ತರ ಕರ್ನಾಟಕದಲ್ಲಿ ಈ ಸಿನಿಮಾ ಅಬ್ಬರಿಸುವ ನಿರೀಕ್ಷೆ ಇದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.