ಅಕ್ಟೋಬರ್ 18ರಂದು ಬಿಡುಗಡೆ ಆಗಲಿದೆ ಘೋಸ್ಟ್​ ಹಂಟರ್​ ಕುರಿತ ಸಿನಿಮಾ ‘ಮಾಂತ್ರಿಕ’

|

Updated on: Oct 11, 2024 | 8:34 PM

‘ಮಾಂತ್ರಿಕ’ ಸಿನಿಮಾಗೆ ಸೆನ್ಸಾರ್​ ಪ್ರಕ್ರಿಯೆ ಮುಗಿದಿದೆ. ಅಕ್ಟೋಬರ್ 18ಕ್ಕೆ ರಿಲೀಸ್​ ಮಾಡಲು ಚಿತ್ರತಂಡದವರು ಸಿದ್ಧತೆ ಮಾಡಿಕೊಂಡಿದ್ದಾರೆ. ವ್ಯಾನವರ್ಣ ಜಮ್ಮುಲ ಅವರ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿಬಂದಿದೆ. ಮುಖ್ಯ ಪಾತ್ರದಲ್ಲೂ ಅವರು ನಟಿಸಿದ್ದಾರೆ. ನಂಬಿಕೆ, ಅಪನಂಬಿಕೆ, ಟೈಮ್​ ಟ್ರಾವೆಲ್​ ಮುಂತಾದ ವಿಷಯಗಳ ಬಗ್ಗೆ ಈ ಸಿನಿಮಾದಲ್ಲಿ ಹೇಳಲಾಗಿದೆ.

ಅಕ್ಟೋಬರ್ 18ರಂದು ಬಿಡುಗಡೆ ಆಗಲಿದೆ ಘೋಸ್ಟ್​ ಹಂಟರ್​ ಕುರಿತ ಸಿನಿಮಾ ‘ಮಾಂತ್ರಿಕ’
‘ಮಾಂತ್ರಿಕ’ ಸಿನಿಮಾ ತಂಡ
Follow us on

ಹಾರರ್​ ಸಿನಿಮಾಗಳಿಗೆ ಯಾವಾಗಲೂ ಪ್ರೇಕ್ಷಕರು ಇರುತ್ತಾರೆ. ಕನ್ನಡದಲ್ಲಿ ಘೋಸ್ಟ್​ ಹಂಟರ್​ ಬಗ್ಗೆ ಬಂದ ಸಿನಿಮಾಗಳು ವಿರಳ. ಆ ಸಾಲಿಗೆ ‘ಮಾಂತ್ರಿಕ’ ಸಿನಿಮಾ ಕೂಡ ಸೇರ್ಪಡೆ ಆಗುತ್ತಿದೆ. ನೆಗೆಟಿವ್​ ಎನರ್ಜಿಗಳ ಸತ್ಯಾಸತ್ಯತೆಯ ಕುರಿತು ಹುಡುಕಾಟ ನಡೆಸುವ ಘೋಸ್ಟ್ ಹಂಟರ್ ಒಬ್ಬನ ಕಹಾನಿಯನ್ನು ಇಟ್ಟುಕೊಂಡು ಈ ಸಿನಿಮಾ ತಯಾರಾಗಿದೆ. ಇತ್ತೀಚೆಗೆ ಈ ಸಿನಿಮಾದ ಪ್ರೀ-ರಿಲೀಸ್​ ಸುದ್ದಿಗೋಷ್ಠಿ ನಡೆಯಿತು. ಈ ವೇಳೆ ಸಿನಿಮಾ ಬಗ್ಗೆ ಚಿತ್ರತಂಡದವರು ಮಾಹಿತಿ ಹಂಚಿಕೊಂಡರು. ವ್ಯಾನವರ್ಣ ಜಮ್ಮುಲ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ.

ವ್ಯಾನವರ್ಣ ಜಮ್ಮುಲ ಅವರು ಐಟಿ ಕ್ಷೇತ್ರದಿಂದ ಬಂದವರು. ನಿರ್ದೇಶನದ ಜೊತೆಗೆ ಅವರು ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ. ಸಿನಿಮಾದಲ್ಲಿ ಘೋಸ್ಟ್​ ಹಂಟರ್​ ಪಾತ್ರವನ್ನು ಕೂಡ ಅವರೇ ಮಾಡಿದ್ದಾರೆ. ನಿರ್ಮಾಣ, ನಿರ್ದೇಶನ ಸೇರಿದಂತೆ ಒಟ್ಟು 8 ವಿಭಾಗಗಳಲ್ಲಿ ಅವರು ಕೆಲಸ ಮಾಡಿದ್ದಾರೆ. ನಂಬಿಕೆ ಮತ್ತು ಅಪನಂಬಿಕೆಗಳ ಸುತ್ತ ಸಾಗುವ ಕಥೆ ಈ ಸಿನಿಮಾದಲ್ಲಿ ಇದೆ ಎಂದು ಅವರು ಹೇಳಿದ್ದಾರೆ.

‘ಈ ಸಿನಿಮಾದಲ್ಲಿ ಬೆಳಿಗ್ಗೆಯಿಂದ ಸಂಜೆ ತನಕ ನಡೆಯುವ ಟೈಂ ಟ್ರಾವೆಲ್ ಕಥೆ ಇದೆ. ವ್ಯಾಸವಾನ್ ಕೃಷ್ಟ ಎನ್ನುವ ಪಾತ್ರವನ್ನು ನಾನು ನಿರ್ವಹಿಸಿದ್ದೇನೆ. ಕರ್ನಾಟಕ ಹಾಗೂ ಮಹಾರಾಷ್ಟ್ರ ಗಡಿ ಭಾಗದ ಮಾರ್ನುಡಿ ಎಂಬ ಸ್ಥಳದಲ್ಲಿ ಈ ಕಥೆ ನಡೆಯುತ್ತದೆ. ದಿನದ 24 ಗಂಟೆಯೂ ಮಾನವ ಭಯದಲ್ಲೇ ಬದುಕುತ್ತಿದ್ದಾನೆ. ಮೊದಲು ಅಂಥ ಭಯವನ್ನು ನಾವು ನಮ್ಮ‌ ಮನಸಿನಿಂದ ತೆಗೆದುಹಾಕಿಬೇಕು. ಮೂಢನಂಬಿಕೆಯಿಂದ ಆಚೆ ಬನ್ನಿ ಎಂಬ ಸಂದೇಶವನ್ನು ಈ ಸಿನಿಮಾದಲ್ಲಿ ತೋರಿಸಿದ್ದೇವೆ’ ಎಂದು ನಿರ್ದೇಶಕರು ಹೇಳಿದ್ದಾರೆ.

ಇದನ್ನೂ ಓದಿ: ಘೋಷಣೆಯಾಯ್ತು ಭಾರತದ ಅತ್ಯುತ್ತಮ ಹಾರರ್ ಸಿನಿಮಾದ ಎರಡನೇ ಭಾಗ

ಈ ಸಿನಿಮಾವನ್ನು ಅಂದಾಜು 40ರಿಂದ 50 ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲಾಗುವುದು ಎಂದು ವಿತರಕ ವಿಜಯ್ ಕುಮಾರ್ ಹೇಳಿದ್ದಾರೆ. ರಾಧಿಕಾ ಮಾಲಿ ಪಾಟೀಲ ಮತ್ತು ಮೈಥಿಲಿ ನಾಯಕ್ ಅವರು ನಾಯಕಿಯರಾಗಿ ಅಭಿನಯಿಸಿದ್ದಾರೆ. ವ್ಯಾನವರ್ಣ ಅವರ ಪತ್ನಿ ಆಯನಾ ಅವರು ಚಿತ್ರದ ಕಾರ್ಯಕಾರಿ ನಿರ್ಮಾಪಕಿ ಹಾಗೂ ನಿರ್ದೇಶನದಲ್ಲೂ ಸಾಥ್ ನೀಡಿದ್ದಾರೆ. ‘ಕೃಷ್ಣ ಸಂಕುಲ ಬ್ರಾಂಡಿಂಗ್ ಪಿಕ್ಚರ್ಸ್’ ಮೂಲಕ ಈ ಸಿನಿಮಾ ನಿರ್ಮಾಣ ಆಗಿದೆ. ಸ್ಟಾಲಿನ್ ಅವರ ಸಂಗೀತ ನಿರ್ದೇಶನ, ಅನಿಲ್ ಆಂಟೋನಿ ಮತ್ತು ರಮೇಶ್ ಮರ‍್ರಿಪಲ್ಲಿ ಅವರ ಛಾಯಾಗ್ರಹಣ ಈ ಸಿನಿಮಾಗಿದೆ. ಲಯನ್ ಜಿ. ಗಂಗರಾಜು ಅವರು ಸಾಹಸ ನಿರ್ದೇಶನ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.