ಒಟಿಟಿಗಳಿಂದ ಪವನ್ ಕಲ್ಯಾಣ್ ಸಿನಿಮಾಗಳ ಮೇಲೆ ಒತ್ತಡ, ಸಂಕಷ್ಟದಲ್ಲಿ ನಿರ್ಮಾಪಕರು
Pawan Kalyan: ಆಂಧ್ರ ಪ್ರದೇಶ ವಿಧಾನಸಭೆ ಚುನಾವಣೆಗೆ ಮುನ್ನ ನಟ ಪವನ್ ಕಲ್ಯಾಣ್ ಮೂರು ಸಿನಿಮಾಗಳಲ್ಲಿ ನಟಿಸುತ್ತಿದ್ದರು. ಆ ಸಿನಿಮಾಗಳ ಚಿತ್ರೀಕರಣ ನಿಂತು ಹೋಗಿತ್ತು. ಇದೀಗ ‘ಹರಿ ಹರ ವೀರ ಮಲ್ಲು’ ಸಿನಿಮಾ ಚಿತ್ರೀಕರಣ ಮರಳಿ ಪ್ರಾರಂಭ ಆಗಿದೆ. ಇದೀಗ ಪವನ್ ಸಿನಿಮಾಗಳ ನಿರ್ಮಾಪಕರ ಮೇಲೆ ಒಟಿಟಿಗಳು ಒತ್ತಡ ಹೇರಲು ಆರಂಭಿಸಿವೆ.

ಪವನ್ ಕಲ್ಯಾಣ್ (Pawan Kalyan) ಆಂಧ್ರ ಡಿಸಿಎಂ ಆದ ಬಳಿಕ ಚಿತ್ರರಂಗದಿಂದ ವಿಮುಖರಾಗಿದ್ದರು. ಆದರೆ ಆಂಧ್ರ ವಿಧಾನಸಭೆ ಚುನಾವಣೆ ಆರಂಭಕ್ಕೂ ಮುನ್ನ ಅವರು ಮೂರು ಸಿನಿಮಾಗಳಲ್ಲಿ ನಟಿಸುತ್ತಿದ್ದರು. ಮೂರೂ ಸಿನಿಮಾಗಳ ಚಿತ್ರೀಕರಣ ಅರ್ಧಕ್ಕೆ ನಿಂತಿದೆ. ಈಗ ಒಂದು ಸಿನಿಮಾದ ಚಿತ್ರೀಕರಣ ಪುನಃ ಪ್ರಾರಂಭಿಸಿದ್ದಾರಾದರೂ ಹಲವು ಅಡೆ-ತಡೆಗಳು ಎದುರಾಗುತ್ತಲೇ ಇವೆ. ಇದರ ನಡುವೆ ಪವನ್ ಕಲ್ಯಾಣ್ ಸಿನಿಮಾಗಳ ನಿರ್ಮಾಪಕರಿಗೆ ಒಟಿಟಿಗಳಿಂದ ಒತ್ತಡ ಜೋರಾಗಿದೆ. ನಿರ್ಮಾಪಕರು ಅಡಕತ್ತರಿಯಲ್ಲಿ ಸಿಲುಕಿದಂತಾಗಿದೆ.
ಆಂಧ್ರ ವಿಧಾನಸಭೆ ಚುನಾವಣೆಗೆ ಮುನ್ನ ಪವನ್ ಕಲ್ಯಾಣ್ ‘ಹರಿಹರ ವೀರ ಮಲ್ಲು’, ‘ಉಸ್ತಾದ್ ಭಗತ್ ಸಿಂಗ್’ ಮತ್ತು ‘ಓಜಿ’ ಸಿನಿಮಾಗಳಲ್ಲಿ ನಟಿಸುತ್ತಿದ್ದರು. ಮೂರು ಸಿನಿಮಾಗಳ ಚಿತ್ರೀಕರಣ ಬಹುತೇಕ ಒಂದೇ ಸಮಯದಲ್ಲಿ ಪ್ರಾರಂಭವಾಗಿತ್ತು. ಆದರೆ ವಿಧಾನಸಭೆ ಚುನಾವಣೆಗೆ ಧುಮುಕಿದ ಪವನ್ ಕಲ್ಯಾಣ್, ಚಿತ್ರೀಕರಣ ನಿಲ್ಲಿಸಿದರು. ಚುನಾವಣೆಯಲ್ಲಿ ಗೆದ್ದು ಡಿಸಿಎಂ ಆದ ಬಳಿಕವಂತೂ ಅವರಿಗೆ ಸಿನಿಮಾಗಳಲ್ಲಿ ನಟಿಸಲು ಸಮಯವೇ ಇಲ್ಲದಂತಾಗಿತ್ತು.
ಆದರೆ ಸಿನಿಮಾಗಳ ನಿರ್ಮಾಪಕರಿಂದ ಒತ್ತಡ ಬಂದ ಕಾರಣ ‘ಹರಿ ಹರ ವೀರ ಮಲ್ಲು’ ಸಿನಿಮಾದ ಚಿತ್ರೀಕರಣ ಪ್ರಾರಂಭ ಮಾಡಿದ್ದರು. ಆದರೆ ಅದಕ್ಕೂ ಕೆಲವು ಅಡೆ-ತಡೆಗಳು ವ್ಯಕ್ತವಾದವು. ಹೀಗಾಗಿ ಸಿನಿಮಾದ ಚಿತ್ರೀಕರಣ ಮತ್ತೆ ನಿಂತಿತ್ತು. ಆದರೆ ಇದೀಗ ಪವನ್ ಕಲ್ಯಾಣ್ ಸಿನಿಮಾ ನಿರ್ಮಾಪಕರುಗಳ ಮೇಲೆ ಒಟಿಟಿಗಳ ಒತ್ತಡ ಹೆಚ್ಚಾಗಿದ್ದು ಇದೇ ಕಾರಣಕ್ಕೆ ಈಗ ನಿರ್ಮಾಪಕರು ಪವನ್ ಕಲ್ಯಾಣ್ ಮೇಲೆ ಒತ್ತಡ ಹೇರಲು ಆರಂಭಿಸಿದ್ದಾರೆ.
ಇದನ್ನೂ ಓದಿ:ಪವನ್ ಕಲ್ಯಾಣ್ ಸಿನಿಮಾ ಸೆಟ್ನಲ್ಲಿ ತ್ರಿವಿಕ್ರಮ್, ಅಭಿಮಾನಿಗಳಿಗೆ ಆತಂಕ
ಸಿನಿಮಾ ನಿರ್ಮಾಪಕರು ಮುಂಚಿತವಾಗಿಯೇ ಒಟಿಟಿಗಳ ಜೊತೆಗೆ ಒಪ್ಪಂದ ಮಾಡಿಕೊಂಡಿದ್ದ ಕಾರಣ ಈಗ ಒಟಿಟಿಗಳು ಶೀಘ್ರವೇ ಸಿನಿಮಾ ಮುಗಿಸಿ ಬಿಡುಗಡೆ ಮಾಡುವಂತೆ ಪಟ್ಟು ಹಿಡಿದಿವೆ. ಮೊದಲು ಆಗಿದ್ದ ಒಪ್ಪಂದದಂತೆ ‘ಹರಿ ಹರ ವೀರ ಮಲ್ಲು’ ಹಾಗೂ ‘ಒಜಿ’ ಸಿನಿಮಾಗಳು ಕಳೆದ ವರ್ಷವೇ ಬಿಡುಗಡೆ ಆಗಬೇಕಿತ್ತು. ಆದರೆ ತಡವಾಗಿದೆ. ಹಾಗಾಗಿ ಈಗ ಒಟಿಟಿಗಳು ನಿರ್ಮಾಪಕರ ಮೇಲೆ ಒತ್ತಡ ಹೆಚ್ಚು ಮಾಡಿದ್ದು, ಶೀಘ್ರವೇ ಚಿತ್ರೀಕರಣ ಮುಗಿಸಿ ಸಿನಿಮಾ ಬಿಡುಗಡೆ ಮಾಡುವಂತೆ ಸೂಚಿಸಿವೆ.
‘ಹರಿ ಹರ ವೀರ ಮಲ್ಲು’ ಸಿನಿಮಾದ ಡಿಜಿಟಲ್ ಹಕ್ಕನ್ನು ಅಮೆಜಾನ್ ಪ್ರೈಂ ಖರೀದಿ ಮಾಡಿದೆ. ಸಿನಿಮಾವನ್ನು ‘ಹರಿ ಹರ ವೀರ ಮಲ್ಲು’ ಮೇ 30ರಂದು ತೆರೆಗೆ ತರುವಂತೆ ಪಟ್ಟು ಹಿಡಿದಿದೆ. ‘ಓಜಿ’ ಸಿನಿಮಾವನ್ನು ನೆಟ್ಫ್ಲಿಕ್ಸ್ ಖರೀದಿ ಮಾಡಿದ್ದು, ನೆಟ್ಫ್ಲಿಕ್ಸ್ ಸಹ ‘ಓಜಿ’ ಸಿನಿಮಾ ನಿರ್ಮಾಪಕರ ಮೇಲೆ ಒತ್ತಡ ಹೇರುತ್ತಿದೆ. ಇನ್ನು ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾದ ಚಿತ್ರೀಕರಣವನ್ನೇ ಕೈ ಬಿಡಲಾಗಿದೆ. ಆ ಸಿನಿಮಾದ ಬಗ್ಗೆ ಪವನ್ ಕಲ್ಯಾಣ್ ಆಸಕ್ತಿ ತೋರುತ್ತಿಲ್ಲ ಎಂಬ ಸುದ್ದಿ ಹರಿದಾಡುತ್ತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ