AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಮ್ಮ ಕಾರನ್ನು ಹಿಂಬಾಲಿಸಬೇಡಿ’; ಅಭಿಮಾನಿಗಳ ಬಳಿ ದರ್ಶನ್ ಮಾಡಿದ್ದ ಹಳೆಯ ಮನವಿ ವೈರಲ್

‘ದಯವಿಟ್ಟು ನಾನು ಗಾಡಿ ಓಡಿಸುವಾಗ ಅಕ್ಕಪಕ್ಕ ಬರಬೇಡಿ. ನಿಮ್ಮ ಮೊಬೈಲ್ ಹಿಡಿದುಕೊಂಡು ಲೈಕ್ಸ್, ಫೋಟೋಗಳಿಗೆ ನಿಮ್ಮ ಜೀವನ ಹಾಳು ಮಾಡಿಕೊಳ್ಳಬೇಡಿ’ ಎಂದು ದರ್ಶನ್ ಮನವಿ ಮಾಡಿದ್ದರು.

‘ನಮ್ಮ ಕಾರನ್ನು ಹಿಂಬಾಲಿಸಬೇಡಿ’; ಅಭಿಮಾನಿಗಳ ಬಳಿ ದರ್ಶನ್ ಮಾಡಿದ್ದ ಹಳೆಯ ಮನವಿ ವೈರಲ್
ದರ್ಶನ್​
 ಶ್ರೀಲಕ್ಷ್ಮೀ ಎಚ್
| Edited By: |

Updated on: Jan 09, 2024 | 1:11 PM

Share

ಯಶ್ (Yash) ಜನ್ಮದಿನದಂದು (ಜನವರಿ 8) ಅವರ ನಾಲ್ವರು ಅಭಿಮಾನಿಗಳು ಮೃತಪಟ್ಟಿದ್ದಾರೆ. ಗದಗದಲ್ಲಿ ಈ ದುರ್ಘಟನೆ ನಡೆದಿದೆ. ಮೂವರು ಯುವಕರು ವಿದ್ಯುತ್ ತಂತಿ ತಗುಲಿ ಮೃತಪಟ್ಟಿದ್ದಾರೆ. ಸಾಂತ್ವನ ಹೇಳಲು ಯಶ್ ತೆರಳಿದ್ದರು. ಈ ವೇಳೆ ಯಶ್ ನೋಡಲು ಬಂದ ಅಭಿಮಾನಿ ಒಬ್ಬರು ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಈ ಬೆನ್ನಲ್ಲೇ ದರ್ಶನ್ ಅವರ ಹಳೆಯ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ‘ನಾವು ವಾಹನದಲ್ಲಿ ಹೊಗುವಾಗ ನಮ್ಮನ್ನು ಫಾಲೋ ಮಾಡಬೇಡಿ’ ಎಂದು ದರ್ಶನ್ ಮನವಿ ಮಾಡಿದ್ದರು.

ಗದಗ ಜಿಲ್ಲೆಯು ಸೊರಣಗಿ ಗ್ರಾಮಕ್ಕೆ ಯಶ್ ತೆರಳಿದ್ದರು. ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದ್ದ ಯಶ್ ಅವರು ಕಿವಿ ಮಾತು ಕೂಡ ಹೇಳಿದ್ದರು. ‘ನಮ್ಮ ವಾಹನವನ್ನು ಫಾಲೋ ಮಾಡಬೇಡಿ’ ಎಂದು ಯಶ್ ಕೋರಿದ್ದರು. ಯಶ್ ಅವರನ್ನು ನೋಡಲು ಆ ‌ಗ್ರಾಮಕ್ಕೆ ನಿಖಿಲ್ ತೆರಳಿದ್ದರು. ಮರಳಿ ಬರುವಾಗ ಪೊಲೀಸ್ ವಾಹನಕ್ಕೆ ಡಿಕ್ಕಿ ಹೊಡೆದು ನಿಖಿಲ್ ಮೃತಪಟ್ಟಿದ್ದಾರೆ. ‘ಬೆಂಗಾವಲು ಪಡೆ ವಾಹನಕ್ಕೆ ಡಿಕ್ಕಿ ಹೊಡೆದು ನಿಖಿಲ್ ಮೃತಪಟ್ಟಿದ್ದಾರೆ’ ಎಂದು ಮೊದಲು ಹೇಳಲಾಗಿತ್ತು. ಆದರೆ, ಯಶ್ ಬೆಂಗಾವಲು ಪಡೆಗೂ, ಇದಕ್ಕೂ ಯಾವುದೇ ಸಂಬಂಧ ಇಲ್ಲ ಅನ್ನೋದು ತಿಳಿಯಿತು.

ಈ ಘಟನೆ ಬೆನ್ನಲ್ಲೇ ದರ್ಶನ್ ಅವರು ಸಿನಿಮಾ ಕಾರ್ಯಕ್ರಮ ಒಂದರಲ್ಲಿ ಮಾಡಿದ ಹಳೆಯ  ಮನವಿಯ ವಿಡಿಯೋ ವೈರಲ್ ಆಗಿದೆ. ‘ದಯವಿಟ್ಟು ನಾನು ಗಾಡಿ ಓಡಿಸುವಾಗ ಅಕ್ಕಪಕ್ಕ ಬರಬೇಡಿ. ನಿಮ್ಮ ಮೊಬೈಲ್ ಹಿಡಿದುಕೊಂಡು ಲೈಕ್ಸ್, ಫೋಟೋಗಳಿಗೆ ನಿಮ್ಮ ಜೀವನ ಹಾಳು ಮಾಡಿಕೊಳ್ಳಬೇಡಿ’ ಎಂದು ದರ್ಶನ್ ಮನವಿ ಮಾಡಿದ್ದರು.

‘ನಾವು 110-120 ಕಿಲೋಮೀಟರ್ ವೇಗದಲ್ಲಿ ಹೋಗ್ತಾ ಇರ್ತೀವಿ. ಆಗ ನೀವು ಅಡ್ಡ ಬಂದ್ರೆ ಏನಾಗುತ್ತದೆ ಹೇಳಿ. ಬದುಕಿದ್ರೆ ಮತ್ತೆ ನನ್ನ ನೋಡಬಹುದು. ನನ್ನ ನೋಡದೇ ಇದ್ರೂ ತೊಂದರೆ ಇಲ್ಲ. ಆದರೆ, ನಿಮ್ಮ ಮನೆಯಲ್ಲಿ ವಯಸ್ಸಾದ ತಂದೆ ತಾಯಿ ಇರ್ತಾರೆ. ಆಗತಾನೇ ಮದುವೆ ಆಗಿರ್ತೀರಾ. ಆಗತಾನೇ ಹುಟ್ಟಿದ ಮಗು ಇರುತ್ತದೆ. ಅವರ ಗತಿ ಏನಾಗಬೇಡ? ಅವರು ಸಾಯೋತನಕ ನನ್ನನ್ನು ದೂಷಿಸುತ್ತಾರೆ. ದಯವಿಟ್ಟು ಗಾಡಿಗಳ ಪಕ್ಕ ಬರಬೇಡಿ. ಲೈಕ್,​ ಕಮೆಂಟ್ ಸಿಗೋದ್ರಿಂದ ಏನೂ ಆಗಲ್ಲ. ಈ ಮಾತುಗಳನ್ನು ಅರ್ಥ ಮಾಡಿಕೊಳ್ಳಿ’ ಎಂದು ದರ್ಶನ್ ಹೇಳಿದ್ದರು.

ಇದನ್ನೂ ಓದಿ:ಹಳೆಯ ಕಥೆ: ಯಶ್ ಕಾಣಲಿಲ್ಲ ಎಂದು ಮನೆ ಎದುರೇ ಬೆಂಕಿ ಹಚ್ಚಿಕೊಂಡು ಮೃತಪಟ್ಟಿದ್ದ ಅಭಿಮಾನಿ   

ದರ್ಶನ್ ಹೇಳಿದ ಮಾತು ನೂರಕ್ಕೆ ನೂರು ಸತ್ಯ ಎಂದು ಅನೇಕರು ಹೇಳಿದ್ದಾರೆ. ದರ್ಶನ್, ಯಶ್, ಸುದೀಪ್ ಮೊದಲಾದ ಸ್ಟಾರ್​ಗಳು ರಸ್ತೆಯಲ್ಲಿ ಕಂಡಾಗ ಅವರನ್ನು ಫ್ಯಾನ್ಸ್ ಹಿಂಬಾಲಿಸುತ್ತಾರೆ. ಇದನ್ನು ನಿಲ್ಲಿಸಿ ಎಂದು ಸ್ಟಾರ್ ಹೀರೋಗಳು ಅನೇಕ ಬಾರಿ ಕೋರಿಕೊಂಡಿದ್ದಿದೆ. ಆದರೂ ಹುಚ್ಚು ಅಭಿಮಾನ ತೋರಿಸುವುದನ್ನು ಫ್ಯಾನ್ಸ್ ನಿಲ್ಲಿಸಿಲ್ಲ.

ದರ್ಶನ್ ಅವರು ಸದ್ಯ ‘ಕಾಟೇರ’ ಸಿನಿಮಾ ಗೆಲುವಿನ ಅಲೆಯಲ್ಲಿ ತೇಲುತ್ತಿದ್ದಾರೆ. ಈ ಸಿನಿಮಾ 100 ಕೋಟಿ ರೂಪಾಯಿ ಕ್ಲಬ್ ಸೇರಿದೆ. ಇತ್ತೀಚೆಗೆ ದುಬೈಗೆ ತೆರಳಿ ಅಲ್ಲಿನ ಅಭಿಮಾನಿಗಳ ಜೊತೆ ಈ ಚಿತ್ರದ ಗೆಲುವನ್ನು ಅವರು ಆಚರಿಸಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ