Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೆಜಿಎಫ್, ಕಾಂತಾರ, ಲೂಸಿಯಾ ಸಿನಿಮಾಗಳ ಹೊಗಳಿದ ತಮಿಳು ನಟರು

Ponniyin Selvan 2: ಕನ್ನಡ ಚಿತ್ರರಂಗದೆಡೆ ನಿರ್ಲಕ್ಷ್ಯ ಧೋರಣೆ ಹೊಂದಿದ್ದ ನೆರೆ-ಹೊರೆಯ ಚಿತ್ರರಂಗದವರು ಈಗ ಕನ್ನಡ ಚಿತ್ರರಂಗವನ್ನು ಸ್ಪೂರ್ತಿಯಾಗಿ ತೆಗೆದುಕೊಂಡಿದ್ದಾರೆ. ಇತ್ತೀಚೆಗಿನ ಈ ಬದಲಾವಣೆಗೆ ಕಾರಣವಾದ ಕೆಜಿಎಫ್, ಕಾಂತಾರ ಸಿನಿಮಾಗಳನ್ನು ಪ್ರಶಂಸಿಸುತ್ತಿದ್ದಾರೆ.

ಕೆಜಿಎಫ್, ಕಾಂತಾರ, ಲೂಸಿಯಾ ಸಿನಿಮಾಗಳ ಹೊಗಳಿದ ತಮಿಳು ನಟರು
ಪೊನ್ನಿಯಿನ್ ಸೆಲ್ವನ್ 2
Follow us
ಮಂಜುನಾಥ ಸಿ.
|

Updated on:Apr 23, 2023 | 7:07 PM

ಕನ್ನಡ ಸಿನಿಮಾರಂಗದೆಡೆ (Sandalwood) ನಿರ್ಲಕ್ಷದಿಂದ ನೋಡುತ್ತಿದ್ದ ನೆರೆ-ಹೊರೆಯ ಚಿತ್ರರಂಗಗಳು ಇಂದು ಕನ್ನಡ ಚಿತ್ರರಂಗದೆಡೆಗೆ ಬೆರಗಿನಿಂದ, ಗೌರವದಿಂದ ನೋಡುವಂತೆ ಮಾಡಿವೆ ಕೆಜಿಎಫ್ ಹಾಗೂ ಕಾಂತಾರ ಸಿನಿಮಾಗಳು. ಕನ್ನಡ ಚಿತ್ರರಂಗವನ್ನು ಕರ್ನಾಟಕವನ್ನು ಕೇವಲ ತಮ್ಮ ಸಿನಿಮಾಗಳಿಗೆ ಮಾರುಕಟ್ಟೆಯಾಗಿ ಮಾತ್ರವೇ ನೋಡುತ್ತಿದ್ದ ಇತರೆ ಚಿತ್ರರಂಗದವರು ಈಗ ಸ್ಪೂರ್ತಿಯಾಗಿ ನೋಡುತ್ತಿದ್ದಾರೆ. ಇದಕ್ಕೆ ಹೊಸ ಉದಾಹರಣೆಯೆಂದರೆ, ನಿನ್ನೆಯಷ್ಟೆ (ಏಪ್ರಿಲ್ 22) ರಂದು ಬೆಂಗಳೂರಿಗೆ ಆಗಮಿಸಿದ್ದ ಪೊನ್ನಿಯಿನ್ ಸೆಲ್ವನ್ 2 (Ponniyin Selvan 2) ತಾರಾಗಣ ಕನ್ನಡ ಚಿತ್ರರಂಗವನ್ನು ಅದರ ಇತ್ತೀಚೆಗಿನ ಸಾಧನೆಗಳನ್ನು ಕೊಂಡಾಡಿರುವುದು.

ಮಣಿರತ್ನಂ (Manirathnam) ನಿರ್ದೇಶಿಸಿರುವ ‘ಪೊನ್ನಿಯಿನ್ ಸೆಲ್ವನ್ 2’ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಇದೇ ತಿಂಗಳ 28ರಂದು ವಿಶ್ವದಾದ್ಯಂತ ಈ ಸಿನಿಮಾ ಬಿಡುಗಡೆ ಆಗುತ್ತಿದೆ. ಉತ್ತರ ಭಾರತದಲ್ಲಿ ಪ್ರಚಾರ ಮುಗಿಸಿರುವ ಚಿತ್ರತಂಡ ದಕ್ಷಿಣದಲ್ಲಿ ಭರದ ಪ್ರಚಾರ ಕಾರ್ಯ ನಡೆಸುತ್ತಿದೆ. ಈಗಾಗಲೇ ಬೇರೆ ಬೇರೆ ರಾಜ್ಯಗಳಲ್ಲಿ ಪ್ರಮೋಷನ್ ಮಾಡಿರುವ ಪಿಎಸ್-2 ಬಳಗ ಬೆಂಗಳೂರಿನಲ್ಲಿ ನಿನ್ನೆ (ಏಪ್ರಿಲ್ 22) ಪ್ರಮೋಷನ್ ಮಾಡಿದೆ. ಖಾಸಗಿ ಹೋಟೆಲ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ನಟ ವಿಕ್ರಂ, ತ್ರಿಷಾ, ಕಾರ್ತಿ ಹಾಗೂ ಜಯಂರವಿ ಭಾಗಿಯಾಗಿದ್ದರು. ಈ ವೇಳೆ ಕನ್ನಡದ ಸಿನಿಮಾ ಹಾಗೂ ಕನ್ನಡ ಕಲಾವಿದರನ್ನು ತಮಿಳು ನಟರು ಬಹುವಾಗಿ ಕೊಂಡಾಡಿದರು.

ಮೊದಲಿಗೆ ಕನ್ನಡಿಗರಿಗೆ ವಂದಿಸಿ ಮಾತಾನಾಡಿದ ನಟ ಜಯಂರವಿ, ”ಕೆಜಿಎಫ್ ಭಾರತದ ಭಾಷೆ ಗಡಿ ಮುರಿದಿದ್ದರೆ, ಕಾಂತಾರ ಧಾರ್ಮಿಕ ಗಡಿ ಮುರಿದಿದೆ. ಅದರಿಂದ ನಮಗೆ ಧಾರ್ಮಿಕ ನಂಬಿಕೆ ಹೆಚ್ಚಾಗಿದೆ. ಪ್ರಪಂಚದ ಸಿನಿಮಾ ಲೋಕದಲ್ಲಿ ಕನ್ನಡ ಇಂಡಸ್ಟ್ರಿ ಗುರುತರ ಪಾತ್ರ ವಹಿಸಿದೆ ಎಂದರು.

ವಿಕ್ರಂ ಮಾತಾನಾಡಿ, ನನಗೆ ಎಲ್ಲಾ ತರಹ ಪಾತ್ರಗಳನ್ನು ಮಾಡಲು ಇಷ್ಟ. ಆದಿತ್ಯ ಕರಿಕಾಳನ್ ಪಾತ್ರ ನನಗೆ ತೃಪ್ತಿ ಕೊಟ್ಟಿದೆ. ಪಿಎಸ್ 2 ಒಂದೊಳ್ಳೆ ಐತಿಹಾಸಿಕ ಸಿನಿಮಾ. ಪ್ರತಿಯೊಬ್ಬರು ನೋಡಲೇಬೇಕು ಎಂದರು. ಜೊತೆಗೆ ಪ್ರಶ್ನೋತ್ತರ ವೇಳೆಯಲ್ಲಿ ಕೆಲವು ಬಾರಿ ಕಾಂತಾರ ಸಿನಿಮಾವನ್ನು ಉದಾಹರಣೆಯಾಗಿ ತೆಗೆದುಕೊಂಡು ಮಾತನಾಡಿ ಸಿನಿಮಾದ ಗರಿಮೆಯನ್ನು ಮೆರೆದರು.

ಕಾರ್ತಿ, ಪಿಎಸ್ 1 ಮತ್ತು ಪಿಎಸ್ 2 ಎರಡು ಸಿನಿಮಾಗಳು ಒಟ್ಟಿಗೆ ಚಿತ್ರೀಕರಣವಾಗಿತ್ತು. ಮೊದಲ ಭಾಗಕ್ಕೆ ನೀವು ತೋರಿಸಿದ ಪ್ರೀತಿ ಪಿಎಸ್2 ಸೀಕ್ವೆಲ್‌ ಮೇಲೆಯೂ ಇರಲಿ. ಹತ್ತನೇ ಶತಮಾನದ ರಾಜರು ಹಿಂದೆ ಹೇಗೆ ಬದುಕುತ್ತಿದ್ದರು ಎಂಬುವುದು ಗೊತ್ತಿಲ್ಲ. ಈ ಚಿತ್ರದಲ್ಲಿ ಅದನ್ನು ದೃಶ್ಯದ ಮೂಲಕ ಕಟ್ಟಿಕೊಡಲಾಗಿದೆ ಎಂದರು.

ತ್ರಿಷಾ ಕೂಡ ತಮ್ಮ ಪಾತ್ರದ ಬಗ್ಗೆ ಮಾಹಿತಿ ಹಂಚಿಕೊಂಡು. ಮಣಿರತ್ನಂ ಅವರ ಜೊತೆ ಕೆಲಸ ಮಾಡಿರುವುದಕ್ಕೆ ಸಂತಸ ಇದೆ ಎಂದರು. ಇನ್ನೂ ಪತ್ರಿಕಾಗೋಷ್ಠಿಯಲ್ಲಿ ನೀಡಿದ ಚನ್ನಪಟ್ಟಣ ಬೊಂಬೆ, ಚಿಕ್ಕಮಗಳೂರು ಕಾಫಿಪುಡಿ, ಧಾರವಾಡ ಪೇಡಾ, ಮೈಸೂರು ಸ್ಯಾಂಡಲ್ ಸೋಪ್ ಗಿಫ್ಟ್ ಬಾಕ್ಸ್ ನೋಡಿ ಚಿತ್ರತಂಡ ಖುಷಿಪಟ್ಟಿತು.

ಕಲ್ಕಿ ಕೃಷ್ಣಮೂರ್ತಿ ಬರೆದಿರೋ ಕಾದಂಬರಿ ‘ಪೊನ್ನಿಯಿನ್ ಸೆಲ್ವನ್’ ಆಧಾರಿಸಿದ ಸಿನಿಮಾವಿದು. ಸೆಪ್ಟೆಂಬರ್ 30ರಲ್ಲಿ ತೆರೆಕಂಡ ಮೊದಲ ಚಾಪ್ಟರ್ ಮೆಗಾ ಹಿಟ್ ಆಗಿತ್ತು. ಬಾಕ್ಸಾಫೀಸ್‌ನಲ್ಲಿ 500 ಕೋಟಿ ರೂ. ಲೂಟಿ ಮಾಡಿತ್ತು. ಅದೇ ಸಕ್ಸಸ್‌ನಲ್ಲೇ ‘ಪೊನ್ನಿಯಿನ್ ಸೆಲ್ವನ್ 2’ ಸೀಕ್ವೆಲ್ ತೆರೆಗೆ ಬರ್ತಿದೆ. ಚೋಳ ಸಾಮ್ರಾಜ್ಯದ ದೃಶ್ಯವೈಭೋಗದ ಈ ಸಿನಿಮಾ ತಮಿಳು, ತೆಲುಗು, ಕನ್ನಡ, ಹಿಂದಿ ಹಾಗೂ ಮಲಯಾಳಂ ಭಾಷೆಯಲ್ಲಿ ಏಪ್ರಿಲ್ 28ಕ್ಕೆ ತೆರೆಕಾಣಲಿದೆ.

ಲೈಕಾ ಪ್ರೊಡಕ್ಷನ್ಸ್ ಮತ್ತು ಮದ್ರಾಸ್ ಟಾಕೀಸ್ ಬ್ಯಾನರ್ ನಡಿ ಅದ್ದೂರಿಯಾಗಿ ಈ ಸಿನಿಮಾ ನಿರ್ಮಾಣವಾಗಿದೆ. ‘ಪೊನ್ನಿಯಿನ್ ಸೆಲ್ವನ್ -2’ ಸಿನಿಮಾದಲ್ಲಿ ಕಾರ್ತಿ, ಐಶ್ವರ್ಯಾ ರೈ, ಚಿಯಾನ್ ವಿಕ್ರಮ್, ಜಯಂ ರವಿ, ತ್ರಿಶಾ, ಶರತ್ ಕುಮಾರ್, ಪ್ರಕಾಶ್ ರಾಜ್ ದಿಗ್ಗಜ ಕಲಾವಿದರ ಸಮಾಗಮ ಆಗಿದೆ. ಮಣಿರತ್ನಂ ನಿರ್ದೇಶನ ಹೈಲೈಟ್ ಆದ್ರೆ, ಎ.ಆರ್.ರೆಹಮಾನ್ ಮ್ಯೂಸಿಕ್, ರವಿವರ್ಮನ್ ಕ್ಯಾಮೆರಾ ವರ್ಕ್‌ ಇದೆ. ಇದೇ 28ಕ್ಕೆ ವರ್ಲ್ಡ್ ವೈಡ್ ತೆರೆಗೆ ಬರ್ತಿರುವ ಪೊನ್ನಿಯಿನ್ ಸೆಲ್ವನ್ 2 ಸಿನಿಮಾವನ್ನು ಲೈಕಾ ಪ್ರೊಡಕ್ಷನ್ ಎಲ್ಲಾ ಭಾಷೆಯಲ್ಲಿಯೂ ಪ್ರೇಕ್ಷಕರ ಎದುರು ಅನಾವರಣ ಮಾಡುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:38 pm, Sun, 23 April 23