ಎಂಇಎಸ್​ ಪುಂಡಾಟಿಕೆಗೆ ನಟ ಪ್ರೇಮ್​ ಗರಂ; ಸಂಘಟನೆ ಬ್ಯಾನ್​ ಮಾಡುವಂತೆ ‘ಲವ್ಲೀ ಸ್ಟಾರ್​’ ಒತ್ತಾಯ

‘ಚಿತ್ರರಂಗದವರಿಂದ ಈ ಸಮಸ್ಯೆ ಬಗೆಹರಿಯಲ್ಲ. ಎರಡು ರಾಜ್ಯಗಳ ಸರ್ಕಾರಗಳು ಕೂಡಿ ತೀರ್ಮಾನ ಮಾಡಬೇಕು. ಕಪಾಳಕ್ಕೆ ಹೊಡೆದು ಎಂಇಎಸ್ ಸಂಘಟನೆಗೆ ಬುದ್ಧಿ ಹೇಳಬೇಕು’ ಎಂದು ‘ಲವ್ಲೀ ಸ್ಟಾರ್​’ ಹೇಳಿದ್ದಾರೆ.

ಎಂಇಎಸ್​ ಪುಂಡಾಟಿಕೆಗೆ ನಟ ಪ್ರೇಮ್​ ಗರಂ; ಸಂಘಟನೆ ಬ್ಯಾನ್​ ಮಾಡುವಂತೆ ‘ಲವ್ಲೀ ಸ್ಟಾರ್​’ ಒತ್ತಾಯ
ನಟ ಪ್ರೇಮ್
Edited By:

Updated on: Dec 19, 2021 | 4:36 PM

ಮಿತಿ ಮೀರಿದ ‘ಮಹಾರಾಷ್ಟ್ರ ಏಕೀಕರಣ ಸಮಿತಿ’ (ಎಂಇಎಸ್​) ಕಾರ್ಯಕರ್ತರ ಪುಂಟಾಡಿಕೆಗೆ ಕನ್ನಡ ಚಿತ್ರರಂಗದ ಅನೇಕರು ಖಂಡನೆ ವ್ಯಕ್ತಪಡಿಸಿದ್ದಾರೆ. ಎಂಇಎಸ್ (MES) ಸಂಘಟನೆಯನ್ನು ನಿಷೇಧಿಸಬೇಕು ಎಂಬ ಒತ್ತಾಯ ಜೋರಾಗಿದೆ. ಬೆಳಗಾವಿಯಲ್ಲಿ ಎಂಇಎಸ್ ಕಾರ್ಯಕರ್ತರ ವರ್ತನೆಯನ್ನು ನಟ ಪ್ರೇಮ್​ (Lovely star Prem) ಖಂಡಿಸಿದ್ದಾರೆ. ಈ ಬಗ್ಗೆ ಭಾನುವಾರ (ಡಿ.19) ಬಾಗಲಕೋಟೆಯಲ್ಲಿ ಅವರು ಹೇಳಿಕೆ ನೀಡಿದ್ದಾರೆ. ‘ಕನ್ನಡಿಗರ ಶಾಂತಿಯನ್ನು ದೌರ್ಬಲ್ಯ ಎಂದು ಭಾವಿಸಬೇಡಿ. ನಾವೂ ಏನಾದ್ರೂ ರಾಂಗ್ ಸ್ಟೆಪ್ ತಗೊಂಡ್ರೆ ಸಾರ್ವಜನಿಕರಿಗೆ ತೊಂದರೆ ಆಗುತ್ತೆ. ಅದಕ್ಕೆ ನಾವೂ ಕಾನೂನು ಕೈಗೆ ತಗೊಳ್ತಿಲ್ಲ. ಅದನ್ನೇ ನಮ್ಮ ಬಲಹೀನತೆ ಎಂದು ತಿಳಿಯಬೇಡಿ’ ಎಂದು ‘ಲವ್ಲೀ ಸ್ಟಾರ್​’ ಪ್ರೇಮ್​ ಹೇಳಿದ್ದಾರೆ.

‘ಚಿತ್ರರಂಗದವರಿಂದ ಈ ಸಮಸ್ಯೆ ಬಗೆಹರಿಯಲ್ಲ. ಎರಡು ರಾಜ್ಯಗಳ ಸರ್ಕಾರಗಳು ಕೂಡಿ ತೀರ್ಮಾನ ಮಾಡಬೇಕು. ಕಪಾಳಕ್ಕೆ ಹೊಡೆದು ಎಂಇಎಸ್ ಸಂಘಟನೆಗೆ ಬುದ್ಧಿ ಹೇಳಬೇಕು. ಎಂಇಎಸ್ ಸಂಘಟನೆ ಬ್ಯಾನ್ ಮಾಡಿದಾಗ ಶಾಂತಿ ಸಿಗುತ್ತದೆ. ಶಾಶ್ವತ ಪರಿಹಾರಕ್ಕೆ ಎರಡು ಸರ್ಕಾರಗಳು ಕೂಡಿ ಚರ್ಚೆ ಮಾಡಬೇಕು’ ಎಂದು ಪ್ರೇಮ್​ ಹೇಳಿದ್ದಾರೆ.

‘ಪುಷ್ಪ’ ಹಾವಳಿ ಬಗ್ಗೆ ಪ್ರೇಮ್​ ಹೇಳಿದ್ದೇನು?

ಪರಭಾಷೆಯ ದೊಡ್ಡ ಸಿನಿಮಾಗಳು ಬಂದಾಗ ಕನ್ನಡದ ಚಿತ್ರಗಳಿಗೆ ತೊಂದರೆ ಆಗುತ್ತದೆ. ಈಗ ಅಲ್ಲು ಅರ್ಜುನ್​ ನಟನೆಯ ‘ಪುಷ್ಪ’ ರಿಲೀಸ್​ ಆಗಿರುವುದರಿಂದ ಸಹಜವಾಗಿ ಕೆಲವು ಕನ್ನಡ ಚಿತ್ರಗಳಿಗೆ ತೊಂದರೆ ಆಗಿದೆ. ಆ ಬಗ್ಗೆ ಪ್ರೇಮ್​ ಪ್ರತಿಕ್ರಿಯಿಸಿದ್ದಾರೆ. ‘ಮೊದಲಿನಿಂದಲೂ ಬೇರೆ ಭಾಷೆ ಸಿನಿಮಾಗಳು ಬಂದ್ರೆ ಕನ್ನಡ ಸಿನಿಮಾಗಳ ಥಿಯೇಟರ್ ಕಿತ್ತುಕೊಳ್ಳುವ ರಾಜಕೀಯ ನಡೆಯುತ್ತಲೇ ಬಂದಿದೆ. ಸಂತೋಷದ ವಿಷಯ ಏನಂದ್ರೆ, ಕನ್ನಡ ಸಿನಿಮಾಗಳು ಪೈಪೋಟಿ ನೀಡಿ ಮುನ್ನುಗ್ಗುವ ರೀತಿಯಲ್ಲಿಯೇ ತಯಾರಾಗುತ್ತಿವೆ. ಇದಕ್ಕೆ ಸ್ಪಷ್ಟ ಉದಾಹರಣೆ ನನ್ನ ಪ್ರೇಮಂ ಪೂಜ್ಯಂ ಸಿನಿಮಾ. ಎಲ್ಲಾ ಸೆಂಟರ್​​ಗಳಲ್ಲೂ ಪುಷ್ಪ ರಿಲೀಸ್ ಆಗಿದೆ. ಆದರೆ ಪುಷ್ಪ ಬದಲು ಪ್ರೇಮಂ‌ ಪೂಜ್ಯಂ ಸಿನಿಮಾ ಕೊಡುವಂತೆ ಥಿಯೇಟರ್ ಮಾಲೀಕರು ಕೇಳ್ತಿದಾರೆ. ಪುಷ್ಪ ತಂಡದವರು ಕೇಳ್ತಿರುವ ಬಾಡಿಗೆ, ಷೇರು ಜಾಸ್ತಿಯಿದೆ. ಹಾಗಾಗಿ ಕನ್ನಡ ಸಿನಿಮಾ ಕೊಡಿ ಅಂತಿದಾರೆ’ ಎಂದು ಪ್ರೇಮ್​ ಹೇಳಿದ್ದಾರೆ.

ಪ್ರೇಮ್​ ಜತೆ ಸೆಲ್ಫಿಗೆ ಮುಗಿಬಿದ್ದ ಜನ:

ಬಾಗಲಕೋಟೆ ವಾಸವಿ ಚಿತ್ರಮಂದಿರಕ್ಕೆ ಇಂದು ಪ್ರೇಮ್​ ಭೇಟಿ ನೀಡಿದ್ದರು. ವಾಸವಿ ಚಿತ್ರಮಂದಿರದ ಪಕ್ಕದಲ್ಲಿರುವ ಹರನಶಿಕಾರಿ ಕಾಲೋನಿಗೆ ಅವರು ತೆರಳಿದರು. ಕಾಲೋನಿಯಲ್ಲಿನ ದಂಡಿನ ದುರ್ಗಮ್ಮ ದೇವಿ ದರ್ಶನ ಪಡೆದ ಬಂದ ಪ್ರೇಮ್ ಅವರನ್ನು ನೋಡಲು ಜನರು ಮುಗಿಬಿದ್ದರು. ಪ್ರೇಮ್ ಬರುತ್ತಿದ್ದಂತೆಯೇ ಕನ್ನಡದ ಧ್ವಜ ಹಾಕಿ, ಮಾಲಾರ್ಪಣೆ ಮಾಡಿ ಸನ್ಮಾನಿಸಲಾಯಿತು. ಅವರ ಜತೆ ಸೆಲ್ಫಿ ತೆಗೆದುಕೊಳ್ಳಲು ಅಭಿಮಾನಿಗಳು ‌ಮುಗಿಬಿದ್ದರು.

ಇದನ್ನೂ ಓದಿ:

‘ಸಿನಿಮಾ ನಟರು ಟ್ವೀಟ್​ ಮಾಡಿದ್ರೆ ಸಾಲದು’; ಬೆಳಗಾವಿ ಹೋರಾಟದ ಬಗ್ಗೆ ಇಂದ್ರಜಿತ್​ ಲಂಕೇಶ್​ ಹೇಳಿಕೆ

‘ಬಡವರ, ಸಾಮಾನ್ಯರ ಪರವಾಗಿ ನನ್ನ ಹೋರಾಟ ಸದಾ ಇರುತ್ತದೆ’; ಇಂದ್ರಜಿತ್​ ಲಂಕೇಶ್​