ಪುನೀತ್​ ಹೊಸ ಚಿತ್ರ ‘ಲಕ್ಕಿ ಮ್ಯಾನ್​’ ಶೀಘ್ರವೇ ರಿಲೀಸ್​; ಅಪ್ಪು ಅಭಿಮಾನಿಗಳಿಗೆ ಗುಡ್​ ನ್ಯೂಸ್​

| Updated By: ಮದನ್​ ಕುಮಾರ್​

Updated on: Nov 25, 2021 | 7:20 PM

Puneeth Rajkumar | Prabhu Deva: ‘ಲಕ್ಕಿ ಮ್ಯಾನ್​’ ಚಿತ್ರದಲ್ಲಿ ಪುನೀತ್​ ರಾಜ್​ಕುಮಾರ್​, ಪ್ರಭುದೇವ, ಡಾರ್ಲಿಂಗ್ ಕೃಷ್ಣ, ಸಂಗೀತಾ ಶೃಂಗೇರಿ, ರೋಶಿನಿ ಪ್ರಕಾಶ್ ಮುಂತಾದವರು ನಟಿಸಿದ್ದಾರೆ. ಶೂಟಿಂಗ್​ ಮುಗಿದಿದ್ದು, ಡಬ್ಬಿಂಗ್​ ಕೆಲಸ ನಡೆಯುತ್ತಿದೆ.

ಪುನೀತ್​ ಹೊಸ ಚಿತ್ರ ‘ಲಕ್ಕಿ ಮ್ಯಾನ್​’ ಶೀಘ್ರವೇ ರಿಲೀಸ್​; ಅಪ್ಪು ಅಭಿಮಾನಿಗಳಿಗೆ ಗುಡ್​ ನ್ಯೂಸ್​
ಪ್ರಭುದೇವ, ಪುನೀತ್​ ರಾಜ್​ಕುಮಾರ್​
Follow us on

ಪುನೀತ್​ ರಾಜ್​ಕುಮಾರ್​ (Puneeth Rajkumar) ಅವರನ್ನು ಕಳೆದುಕೊಂಡು ಕನ್ನಡ ಚಿತ್ರರಂಗ ಬಡವಾಗಿದೆ. ಹೃದಯಾಘಾತದಿಂದ ಮೃತರಾಗುವುದಕ್ಕೂ ಮುನ್ನ ಅವರು ಅನೇಕ ಸಿನಿಮಾಗಳಲ್ಲಿ ತೊಡಗಿಕೊಂಡಿದ್ದರು. ಆದರೆ ಆ ಚಿತ್ರಗಳು ತೆರೆ ಕಾಣುವುದಕ್ಕೂ ಮೊದಲೇ ಅಪ್ಪು ಇಹಲೋಕ ತ್ಯಜಿಸಿದ್ದು ವಿಪರ್ಯಾಸ. ಪುನೀತ್​ ನಟಿಸುತ್ತಿದ್ದ ಒಂದೆರಡು ಚಿತ್ರದ ಕೆಲಸಗಳು ಪೂರ್ಣಗೊಂಡಿವೆ ಎಂಬುದು ಸಮಾಧಾನಕರ ಸಂಗತಿ. ಆ ಪೈಕಿ ‘ಜೇಮ್ಸ್​’ ಸಿನಿಮಾ ರಿಲೀಸ್​ ಆಗುವುದು ಖಚಿತ ಎಂಬುದು ಈಗಾಗಲೇ ಗೊತ್ತಾಗಿದೆ. ಅಷ್ಟೇ ಅಲ್ಲದೇ, ಅಪ್ಪು ಜತೆ ಪ್ರಭುದೇವ (Prabhu Deva) ಮತ್ತು ಡಾರ್ಲಿಂಗ್​ ಕೃಷ್ಣ (Darling Krishna) ನಟಿಸಿರುವ ‘ಲಕ್ಕಿ ಮ್ಯಾನ್​’ ಶೂಟಿಂಗ್​ ಕೂಡ ಪೂರ್ಣಗೊಂಡಿದೆ. ಆ ಸಿನಿಮಾ ಶೀಘ್ರದಲ್ಲೇ ಬಿಡುಗಡೆ ಆಗಲಿದೆ. ಈ ಬಗ್ಗೆ ಚಿತ್ರತಂಡದಿಂದ ಮಾಹಿತಿ ಹೊರಬಿದ್ದಿದೆ. ಡಿಸೆಂಬರ್​ ಅಥವಾ ಜನವರಿಯಲ್ಲಿ ‘ಲಕ್ಕಿ ಮ್ಯಾನ್​’  (Lucky Man Movie)ಬಿಡುಗಡೆ ಮಾಡುವ ಗುರಿ ಇರಿಸಿಕೊಳ್ಳಲಾಗಿದೆ. ಅದಕ್ಕೆ ಅನುಗುಣವಾಗಿ ಈಗ ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳು ಭರದಿಂದ ಸಾಗುತ್ತಿವೆ.

ಪರ್ಸಾ ಪಿಕ್ಚರ್ಸ್ ಬ್ಯಾನರ್​ ಮೂಲಕ ನಿರ್ಮಾಣ ಆಗುತ್ತಿರುವ ಈ ಚಿತ್ರದ ಡಬ್ಬಿಂಗ್​ ಕೆಲಸಗಳು ಸಾಧು ಕೋಕಿಲ ಅವರ ಸ್ಟುಡಿಯೋದಲ್ಲಿ ನಡೆಯುತ್ತಿವೆ. ‘ಲಕ್ಕಿ ಮ್ಯಾನ್​’ ಚಿತ್ರಕ್ಕೆ ಡಾರ್ಲಿಂಗ್ ಕೃಷ್ಣ ಹೀರೋ ಆಗಿದ್ದರೂ ಕೂಡ ಪುನೀತ್ ರಾಜ್​ಕುಮಾರ್‌ ಅವರ ಪಾತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆಯಿದೆ. ವಿಶೇಷವಾಗಿ ಪುನೀತ್ ರಾಜ್​ಕುಮಾರ್ ಹಾಗೂ ಬಹುಭಾಷಾ ನಟ ಪ್ರಭುದೇವ ಅವರು ಹಾಡೊಂದರಲ್ಲಿ ಜೊತೆಯಾಗಿ ಹೆಜ್ಜೆ ಹಾಕಿದ್ದಾರೆ. ಡಾ. ರಾಜ್​ಕುಮಾರ್ ಅವರ ಮೇಲೆ ರಚಿಸಲಾದ ಈ ಹಾಡಿನಲ್ಲಿ ಅವರಿಬ್ಬರು ಡ್ಯಾನ್ಸ್​ ಮಾಡಿದ್ದು, ಅಭಿಮಾನಿಗಳಲ್ಲಿ ಭಾರಿ ನಿರೀಕ್ಷೆ ಮೂಡುವಂತಾಗಿದೆ. ಇದೇ ಮೊದಲ ಬಾರಿಗೆ ಇವರಿಬ್ಬರೂ ಒಟ್ಟಿಗೆ ತೆರೆ ಹಂಚಿಕೊಂಡಿದ್ದಾರೆ ಎಂಬುದು ಗಮನಾರ್ಹ ಅಂಶ.

‘ಲಕ್ಕಿ ಮ್ಯಾನ್​’ ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ ಅವರಿಗೆ ನಾಯಕಿಯಾಗಿ ಸಂಗೀತಾ ಶೃಂಗೇರಿ ನಟಿಸಿದ್ದಾರೆ. ರೋಶಿನಿ ಪ್ರಕಾಶ್ ದ್ವಿತೀಯ ನಾಯಕಿ ಪಾತ್ರ ನಿರ್ವಹಿಸಿದ್ದಾರೆ. ಆರ್ಯ, ರಂಗಾಯಣ ರಘು, ಸಾಧು ಕೋಕಿಲ, ನಾಗಭೂಷಣ್, ಸುಂದರ್ ರಾಜ್, ಸುಧಾ ಬೆಳವಾಡಿ, ಮಾಳವಿಕಾ ಅವಿನಾಶ್​ ಸೇರಿದಂತೆ ಅನೇಕ ಕಲಾವಿದರು ಅಭಿನಯಿಸಿದ್ದಾರೆ.

ಪಿ.ಆರ್. ಮೀನಾಕ್ಷಿ ಸುಂದರಮ್ ಹಾಗೂ ಸುಂದರ ಕಾಮರಾಜ್ ಅವರ ನಿರ್ಮಾಣದ ಈ ಚಿತ್ರಕ್ಕೆ ಎಸ್. ನಾಗೇಂದ್ರ ಪ್ರಸಾದ್ ನಿರ್ದೇಶನ ಮಾಡಿದ್ದಾರೆ. ಜೀವ ಶಂಕರ್ ಅವರ ಛಾಯಾಗ್ರಹಣ, ವಿಜಯ್ ಮತ್ತು ವಿಕ್ಕಿ ಅವರ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ. ಧನಂಜಯ ರಂಜನ್ ಹಾಡುಗಳನ್ನು ಬರೆದಿದ್ದಾರೆ. ಕಾರ್ತಿಕೇಯನ್ ಕ್ರಿಯೇಟಿವ್ ಪ್ರೊಡ್ಯೂಸರ್‌ ಆಗಿ ಜವಾಬ್ದಾರಿ ನಿರ್ವಹಿಸಿದ್ದಾರೆ. ಬಾಲಾಜಿ ಅವರ ಸಂಕಲನ, ಅಶ್ವಥ್ ಮಾರಿಮುತ್ತು ಅವರ ಕಥೆ, ಮಂಜು ಮಾಂಡವ್ಯ, ಸಂಪತ್ ಸಿರಿಮನೆ ಹಾಗೂ ರಘುನಂದನ್ ಕಾನಡ್ಕ ಅವರ ಸಂಭಾಷಣೆ, ಶೃಂಗೇರಿ ಸುರೇಶ್ ಅವರ ಸಹ-ನಿರ್ದೇಶನ ಈ ಚಿತ್ರಕ್ಕಿದೆ. ಮೋಹನ್ ಬಿ. ಕೆ. ಅವರು ಕಲಾ ನಿರ್ದೇಶನ ಮಾಡಿದ್ದಾರೆ.

ಇದನ್ನೂ ಓದಿ:

ಅಂಬರೀಷ್​ ಫ್ಯಾನ್ಸ್​ ನಿರ್ಧಾರಕ್ಕೆ ಸುಮಲತಾ ಬೇಸರ; ಪುನೀತ್​ ಮತ್ತು ಪ್ರಶಸ್ತಿ ಬಗ್ಗೆ ಹೇಳಿದ್ದೇನು?

ದೇವರಿಗೆ ಮುಡಿ ಕೊಟ್ಟು, ಪುನೀತ್​ಗಾಗಿ ಹಾಡು ಹೇಳಿದ ನಟಿ ವಿಜಯಲಕ್ಷ್ಮೀ; ಇಲ್ಲಿದೆ ವಿಡಿಯೋ