ಕೊವಿಡ್​ ಮಾರ್ಗಸೂಚಿ ಉಲ್ಲಂಘಿಸಿದ ‘ಯುವರತ್ನ’ ತಂಡ; ಹೈಕೋರ್ಟ್​ ಮೆಟ್ಟಿಲೇರಿದ ಪ್ರಕರಣ

ಗಣ್ಯರಿಂದ ಕೊವಿಡ್ ಮಾರ್ಗಸೂಚಿ ಉಲ್ಲಂಘನೆ ಮಾಡಿದ ಕುರಿತು ದಂಡ ವಿಧಿಸುವ ಬಗ್ಗೆ ಹೈಕೋರ್ಟ್​ಗೆ ಅಧಿಸೂಚನೆ ಸಲ್ಲಿಕೆ ಮಾಡಲಾಗಿದೆ.

ಕೊವಿಡ್​ ಮಾರ್ಗಸೂಚಿ ಉಲ್ಲಂಘಿಸಿದ ‘ಯುವರತ್ನ’ ತಂಡ; ಹೈಕೋರ್ಟ್​ ಮೆಟ್ಟಿಲೇರಿದ ಪ್ರಕರಣ
ಯುವ ಸಂಭ್ರಮದಲ್ಲಿ ಪುನೀತ್​ ರಾಜ್​ಕುಮಾರ್​
Edited By:

Updated on: Mar 24, 2021 | 7:41 PM

ನಿರ್ದೇಶಕ ಸಂತೋಷ್​ ಆನಂದ್​ ರಾಮ್​ ಮತ್ತು ನಟ ಪುನೀತ್​ ರಾಜ್​ಕುಮಾರ್​ ಕಾಂಬಿನೇಷನ್​ನ ಯುವರತ್ನ ಸಿನಿಮಾ ಏ.1ರಂದು ತೆರೆಕಾಣುತ್ತಿದೆ. ಇದಕ್ಕೂ ಮುನ್ನ ಯುವರತ್ನ ತಂಡ ‘ಯುವ ಸಂಭ್ರಮ’ ಹೆಸರಲ್ಲಿ ರಾಜ್ಯಾದ್ಯಂತ ಸಂಚಾರ ಮಾಡಿ ಪ್ರಚಾರ ನಡೆಸಿತ್ತು. ಈ ವೇಳೆ ಮಾಸ್ಕ್​ ಹಾಕದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಕೊವಿಡ್​ ನಿಯಮವನ್ನು ಉಲ್ಲಂಘನೆ ಮಾಡಿತ್ತು. ಈ ವಿಚಾರ ಈಗ ಹೈಕೋರ್ಟ್​ ಮೆಟ್ಟಿಲೇರಿದೆ.

ಗಣ್ಯರಿಂದ ಕೊವಿಡ್ ಮಾರ್ಗಸೂಚಿ ಉಲ್ಲಂಘನೆ ಮಾಡಿದ ಕುರಿತು ದಂಡ ವಿಧಿಸುವ ಬಗ್ಗೆ ಹೈಕೋರ್ಟ್​ಗೆ ಅಧಿಸೂಚನೆ ಸಲ್ಲಿಕೆ ಮಾಡಲಾಗಿದೆ. ಈ ವೇಳೆ ‘ಯುವರತ್ನ’ ಚಿತ್ರತಂಡದಿಂದ ಹಾಗೂ ಬಿಜೆಪಿ, ರಾಯಚೂರು ಸಮಾವೇಶದಲ್ಲಿ ಕೊವಿಡ್​ ನಿಯಮ ಉಲ್ಲಂಘನೆ ಆಗಿರುವ ಬಗ್ಗೆ ವಕೀಲ ಜಿ.ಆರ್.ಮೋಹನ್​ ಹೈಕೋರ್ಟ್​ಗೆ ಜ್ಞಾಪನಾ ಪತ್ರ ಸಲ್ಲಿಕೆ ಮಾಡಿದ್ದಾರೆ. ಜತೆಗೆ, ದಂಡ ಸ್ವೀಕರಿಸುವ ಅಧಿಕಾರಿಗಳ ಪಟ್ಟಿಯನ್ನು ಕೂಡ ಹೈಕೋರ್ಟ್​ಗೆ ಸಲ್ಲಿಕೆ ಮಾಡಿದ್ದಾರೆ. ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ, ಈ ಬಗ್ಗೆ ಸರ್ಕಾರ ಕೈಗೊಂಡ ಕ್ರಮದ ವಿವರಗಳನ್ನು ಏಪ್ರಿಲ್ 8ರೊಳಗೆ ನೀಡಲು ಸೂಚನೆ ಕೊಟ್ಟಿದೆ.

ಮಾಸ್ಕ್, ಸಾಮಾಜಿಕ ಅಂತರ ಪಾಲಿಸದವರಿಗೆ ನಗರ ಪಾಲಿಕೆ ವ್ಯಾಪ್ತಿಯಲ್ಲಿ 250 ರೂಪಾಯಿ ದಂಡ ಹಾಗೂ ಇತರೆ ಪ್ರದೇಶಗಳಲ್ಲಿ 100 ರೂಪಾಯಿ ದಂಡ ವಿಧಿಸಲಾಗುತ್ತಿದೆ. ಮಾರ್ಗಸೂಚಿ ಪಾಲಿಸದ ಪಾರ್ಟಿ ಹಾಲ್​ಗಳಿಗೆ 5,000 ರೂಪಾಯಿ ದಂಡ, ಎಸಿ ಪಾರ್ಟಿಹಾಲ್, ಹೋಟೆಲ್​ಗಳಿಗೆ 10,000 ರೂ. ದಂಡ, ಸಮಾವೇಶ ಮತ್ತು ಸಭೆಗಳ ಆಯೋಜಕರಿಗೆ 10,000 ರೂಪಾಯಿ ದಂಡ ವಿಧಿಸಲಾಗುತ್ತಿದೆ.

ಎಚ್ಚರಿಕೆ ನೀಡಿದ್ದ ಸುಧಾಕರ್​
‘ರಾಜ್ಯದಲ್ಲಿ ದಿನೇದಿನೆ ಕೊವಿಡ್ ಪ್ರಕರಣಗಳು ಹೆಚ್ಚಳ ಆಗುತ್ತಿವೆ. ಆದರೂ ಕೆಲವು ಸೆಲೆಬ್ರಿಟಿಗಳು ಸಾವಿರಾರು ಸಂಖ್ಯೆಗಳಲ್ಲಿ ಅಭಿಮಾನಿಗಳನ್ನು ಗುಂಪು ಸೇರಿಸುತ್ತಿರುವುದು ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಚಲನಚಿತ್ರ ತಾರೆಯರಿಗೆ ನಾನು ಮನವಿ ಮಾಡುತ್ತೇನೆ’ ಎಂದು ಸುಧಾಕರ್​ ಇಂದು ಹೇಳಿದ್ದರು. ’ಸಾವಿರಾರು ಜನರನ್ನು ಸೇರಿಸದಿರಿ. ನೀವೂ ಮಾಸ್ಕ್ ಧರಿಸಿ, ನಿಮ್ಮ ಅಭಿಮಾನಿಗಳಿಗೂ ಮಾಸ್ಕ್​ ಧರಿಸುವಂತೆ ಹೇಳಬೇಕು. ಎಲ್ಲರೂ ಕೋವಿಡ್​-19 ನಿಯಮಗಳನ್ನು ಪಾಲಿಸಬೇಕು. ಚಲನಚಿತ್ರ ತಾರೆಯರಿಗೆ ಇದು ನನ್ನ ಕಳಕಳಿಯ ಮನವಿ’ ಎಂದು ಹೇಳಿರುವ ಸುಧಾಕರ್, ಯಾವುದೇ ಸ್ಟಾರ್​ ನಟರ ಹೆಸರನ್ನೂ ಪ್ರಸ್ತಾಪಿಸಿರಲಿಲ್ಲ.

ಇದನ್ನೂ ಓದಿ: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಯುವರತ್ನ ಚಿತ್ರದ ಪ್ರಚಾರ: ಮಂಡ್ಯದಲ್ಲಿ ಅಪ್ಪುಗೆ ಗ್ರ್ಯಾಂಡ್ ವೆಲಕಮ್

ಪ್ರಚಾರಕ್ಕಾಗಿ ಜನರ ಗುಂಪು ಸೇರಿಸುತ್ತಿರುವ ಸ್ಟಾರ್​ಗಳಿಗೆ ಕೋವಿಡ್​-19 ನಿಯಮಾವಳಿ ನೆನಪಿಸಿದ ಸುಧಾಕರ್​!

Published On - 7:29 pm, Wed, 24 March 21

Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
Follow Us