Rachita Ram: ವೇದಿಕೆ ಮೇಲೆ ಪುನೀತ್​ಗೆ ಅವಮಾನ: ಕ್ಷಮೆ ಕೇಳಿದ ರಚಿತಾ ರಾಮ್​ ಈಗ ನೀಡಿದ ಸಮಜಾಯಿಷಿ ಏನು?

| Updated By: ಮದನ್​ ಕುಮಾರ್​

Updated on: Nov 13, 2021 | 1:08 PM

Puneeth Rajkumar: ಪುನೀತ್​ ರಾಜ್​ಕುಮಾರ್​ ಫೋಟೋ ಎದುರು ಶಾಂಪೇನ್​ ಓಪನ್​ ಮಾಡಿ ‘ಏಕ್​ ಲವ್​ ಯಾ’ ಚಿತ್ರತಂಡ ವಿವಾದ ಸೃಷ್ಟಿಸಿದೆ. ಈ ಚಿತ್ರದ ಹಾಡು ಬಿಡುಗಡೆ ಕಾರ್ಯಕ್ರಮದಲ್ಲಿ ರಕ್ಷಿತಾ ಪ್ರೇಮ್​, ಮಂಗ್ಲಿ, ರಚಿತಾ ರಾಮ್​, ಅರ್ಜುನ್​ ಜನ್ಯ, ಅಕುಲ್​ ಬಾಲಾಜಿ ಮುಂತಾದವರು ಭಾಗಿ ಆಗಿದ್ದರು.

Rachita Ram: ವೇದಿಕೆ ಮೇಲೆ ಪುನೀತ್​ಗೆ ಅವಮಾನ: ಕ್ಷಮೆ ಕೇಳಿದ ರಚಿತಾ ರಾಮ್​ ಈಗ ನೀಡಿದ ಸಮಜಾಯಿಷಿ ಏನು?
ರಚಿತಾ ರಾಮ್​, ಪುನೀತ್​ ರಾಜ್​ಕುಮಾರ್​
Follow us on

ರಚಿತಾ ರಾಮ್​, ರಾಣಾ ನಟನೆಯ ‘ಏಕ್​ ಲವ್​ ಯಾ’ (Ek Love Ya) ಚಿತ್ರತಂಡ ಎಡವಟ್ಟು ಮಾಡಿಕೊಂಡಿದೆ. ಈ ಸಿನಿಮಾದ ಹಾಡು ಬಿಡುಗಡೆ ಕಾರ್ಯಕ್ರಮದಲ್ಲಿ ಪುನೀತ್​ ರಾಜ್​ಕುಮಾರ್​ (Puneeth Rajkumar) ಅವರಿಗೆ ಅಗೌರವ ತೋರಿಸಲಾಗಿದೆ. ಇದು ಅಪ್ಪು ಅಭಿಮಾನಿಗಳ ಆಕ್ರೋಶಕ್ಕೆ ಕಾರಣ ಆಗಿದೆ. ಈ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಜನರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ‘ಏಕ್​ ಲವ್​ ಯಾ’ ಚಿತ್ರತಂಡದವರು ಪುನೀತ್​ ಅವರ ಫೋಟೋ ಮುಂದೆ ಶಾಂಪೇನ್ (Champagne)​ ಓಪನ್​ ಮಾಡಿದ್ದಾರೆ. ಈಗ ಈ ಘಟನೆ ಕುರಿತು ರಚಿತಾ ರಾಮ್​ (Rachita Ram) ಪ್ರತಿಕ್ರಿಯೆ ನೀಡಿದ್ದಾರೆ. ‘ಆ ರೀತಿ ಘಟನೆ ಆಗಿದ್ದಕ್ಕೆ ಕ್ಷಮೆ ಕೇಳ್ತೀನಿ’ ಎಂದು ಅವರು ಹೇಳಿದ್ದಾರೆ. ಪುನೀತ್​ ಅವರಿಗೆ ಅವಮಾನ ಆಗುವ ರೀತಿಯಲ್ಲಿ ಚಿತ್ರತಂಡ ನಡೆದುಕೊಂಡಿರುವುದಕ್ಕೆ ರಚಿತಾ ಬೇಸರ ವ್ಯಕ್ತ ಪಡಿಸಿದ್ದಾರೆ.

ಸೋಶಿಯಲ್​ ಮೀಡಿಯಾದಲ್ಲಿ ಈ ಘಟನೆ ಬಗ್ಗೆ ರಚಿತಾ ರಾಮ್​ ಸಮಜಾಯಿಷಿ ನೀಡಿದ್ದಾರೆ. ‘ನಿನ್ನೆಯ ಏಕ್​ ಲವ್​ ಯಾ ಸಿನಿಮಾದ ಸಾಂಗ್​ ಲಾಂಚ್​ ಕಾರ್ಯಕ್ರಮದಲ್ಲಿ ಶಾಂಪೇನ್​ ಬಾಟಲ್​ ಓಪನ್​ ಮಾಡಿ ಹಾಡನ್ನು ಬಿಡುಗಡೆಗೊಳಿಸಿರುವ ಬಗ್ಗೆ ನಿಮ್ಮೆಲ್ಲರಿಗೆ ಅಸಮಾಧಾನ ಆಗಿದೆ. ಆ ಬಗ್ಗೆ ದಯವಿಟ್ಟು ಕ್ಷಮೆ ಇರಲಿ. ನಾನೂ ಕೂಡ ಚಿತ್ರದ ಭಾಗವಾಗಿರುವುದರಿಂದ ಕ್ಷಮೆ ಕೇಳುತ್ತೇನೆ. ಅಪ್ಪು ಅವರಿಗೆ ಅವಮಾನ ಮಾಡುವ ಉದ್ದೇಶ, ಆಲೋಚನೆ ಯಾವ ಕನ್ನಡಿಗರಿಗೂ ಇರುವುದಿಲ್ಲ. ಆದಾಗಿಯೂ ಉದ್ದೇಶಪೂರ್ವಕವಲ್ಲದ ತಪ್ಪನ್ನು ಅಭಿಮಾನಿಗಳು ಮನ್ನಿಸುತ್ತಾರೆಂದು ನಂಬಿದ್ದೇನೆ’ ಎಂದು ರಚಿತಾ ಪೋಸ್ಟ್​ ಮಾಡಿದ್ದಾರೆ.

ಏನಿದು ಘಟನೆ?

‘ಜೋಗಿ’ ಪ್ರೇಮ್​ ನಿರ್ದೇಶನದ ‘ಏಕ್​ ಲವ್​ ಯಾ’ ಸಿನಿಮಾದಲ್ಲಿ ರಕ್ಷಿತಾ ಪ್ರೇಮ್​ ಸಹೋದರ ರಾಣಾ ನಾಯಕನಾಗಿ ನಟಿಸಿದ್ದಾರೆ. ಈ ಚಿತ್ರದಲ್ಲಿ ‘ಎಣ್ಣೆಗೂ ಹೆಣ್ಣಿಗೂ..’ ಎಂಬ ಹಾಡು ಇದೆ. ಅದಕ್ಕೆ ಅರ್ಜುನ್​ ಜನ್ಯ ಸಂಗೀತ ಸಂಯೋಜನೆ ಮಾಡಿದ್ದು, ಖ್ಯಾತ ಗಾಯಕಿ ಮಂಗ್ಲಿ ಧ್ವನಿ ನೀಡಿದ್ದಾರೆ. ಬೆಂಗಳೂರಿನ ಖಾಸಗಿ ಹೋಟೆಲ್​ನಲ್ಲಿ ಶುಕ್ರವಾರ (ನ.12) ಸಂಜೆ ಈ ಹಾಡನ್ನು ಬಿಡುಗಡೆ ಮಾಡಲಾಯಿತು. ಹಾಡಿನ ಥೀಮ್​ಗೆ ತಕ್ಕಂತೆ ವೇದಿಕೆ ಮೇಲೆಯೇ ಚಿತ್ರತಂಡದವರು ಶಾಂಪೇನ್ ಬಾಟಲ್​​ ಓಪನ್​ ಮಾಡಿದರು. ಕೆಲವೇ ಕ್ಷಣಗಳ ಹಿಂದೆ ಅದೇ ವೇದಿಕೆಯಲ್ಲಿ ಪುನೀತ್​ ರಾಜ್​ಕುಮಾರ್ ಅವರಿಗೆ ನಮನ ಸಲ್ಲಿಸಿ, ಫೋಟೋ ಇರಿಸಲಾಗಿತ್ತು.

ಸಾ.ರಾ. ಗೋವಿಂದು ಗರಂ:

‘ಏಕ್​ ಲವ್​ ಯಾ’ ತಂಡದವರು ಮಾಡಿರುವ ಈ ಕೆಲಸಕ್ಕೆ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಸಾ.ರಾ. ಗೋವಿಂದು ಕೂಡ ಗರಂ ಆಗಿದ್ದಾರೆ. ‘ನಮ್ಮ ಚಿತ್ರರಂಗದವರೇ ಇಂಥ ಕೆಲಸ ಮಾಡಿದರೆ ನಾವು ಯಾರ ಮೇಲೆ ಆಪಾದನೆ ಮಾಡೋದು ಹೇಳಿ. ಸಾರ್ವಜನಿಕರಿಗೆ ಇದರಿಂದ ಆಕ್ರೋಶ ಬರುತ್ತೋ ಇಲ್ಲವೋ? ದಯವಿಟ್ಟು ಇಂಥದ್ದನ್ನೆಲ್ಲ ಮಾಡಬೇಡಿ. ಪುನೀತ್​ ಇಂದು ನಮ್ಮಿಂದ ದೂರವಾಗಿರಬಹುದು. ಆದರೆ ಅವರಿಗೆ ಅವಮಾನ ಆಗುವಂತಹ ಕೆಲಸವನ್ನು ಮಾಡಬೇಡಿ. ಪುನೀತ್​ಗೆ ಅವಮಾನ ಆಗುವಂತೆ ನಮ್ಮ ಚಿತ್ರರಂಗದವರು ನಡೆದುಕೊಂಡಿರುವುದರಿಂದ ನಾವೆಲ್ಲರೂ ತಲೆ ತಗ್ಗಿಸುವಂತೆ ಆಗಿದೆ’ ಎಂದು ಸಾ.ರಾ. ಗೋವಿಂದು ಹೇಳಿದ್ದಾರೆ.

ಪುನೀತ್​ ರಾಜ್​ಕುಮಾರ್​ ಕೇವಲ ನಟನೆಯಲ್ಲಿ ಮಾತ್ರ ತೊಡಗಿಕೊಂಡಿರಲಿಲ್ಲ. ಸದ್ದಿಲ್ಲದೇ ಅವರು ಅನೇಕ ಜನರಿಗೆ ಸಹಾಯ ಮಾಡುತ್ತಿದ್ದರು. ಅಂಥ ಸಾಮಾಜಿಕ ಕೆಲಸಗಳ ಕಾರಣಕ್ಕಾಗಿ ಅವರ ಬಗ್ಗೆ ಜನರು ಅಪಾರ ಗೌರವ ಇಟ್ಟುಕೊಂಡಿದ್ದಾರೆ. ಅನೇಕರು ಅವರನ್ನು ದೇವರ ರೀತಿ ನೋಡುತ್ತಾರೆ. ಅಂಥ ವ್ಯಕ್ತಿಯ ಫೋಟೋ ಎದುರು ಶಾಂಪೇನ್​ ಓಪನ್​ ಮಾಡಿರುವುದು ಎಲ್ಲರ ಕೋಪಕ್ಕೆ ಕಾರಣ ಆಗಿದೆ.

ಇದನ್ನೂ ಓದಿ:

‘ಅಪ್ಪು ಸರ್​ ವಿಚಾರದಲ್ಲಿ ಮರಣ ಎಂಬ ಪದ ಬಳಸೋಕೆ ನಾನು ಇಷ್ಟಪಡಲ್ಲ’: ರಚಿತಾ ರಾಮ್​​

Puneeth Rajkumar: ಪುನೀತ್​ ಬಗ್ಗೆ ಅವಹೇಳನಕಾರಿ ಪೋಸ್ಟ್​ ಮಾಡಿದ್ದ ವ್ಯಕ್ತಿ ಅರೆಸ್ಟ್​; ಸೈಬರ್​ ಪೊಲೀಸರ ಬಲೆಗೆ ಬಿದ್ದ ಕಿಡಿಗೇಡಿ

Published On - 1:07 pm, Sat, 13 November 21