ಪ್ರತಿವರ್ಷ ಹುಟ್ಟುಹಬ್ಬಕ್ಕೆ ಪುನೀತ್ ರಾಜ್​ಕುಮಾರ್ ಕೊಡುತ್ತಿದ್ದ ಉಡುಗೊರೆಗಳೇನು? ನೆನಪಿಸಿಕೊಂಡ ರಾಘಣ್ಣ

Puneeth Rajkumar: ಆಗಸ್ಟ್ 15 ರಾಘವೇಂದ್ರ ರಾಜ್​ಕುಮಾರ್ ಹುಟ್ಟುಹಬ್ಬ. ಪುನೀತ್ ಅಗಲಿದ ಬಳಿಕ ಹುಟ್ಟುಹಬ್ಬ ಆಚರಣೆಯನ್ನು ಕೈಬಿಟ್ಟಿದ್ದಾರೆ ರಾಘಣ್ಣ. ಆದರೆ ಅಪ್ಪು ಬದುಕಿದ್ದಾಗ ಹುಟ್ಟುಹಬ್ಬ ಆಚರಣೆ ಹೇಗಿರುತ್ತಿತ್ತು, ಅಪ್ಪು ತಮಗೆ ಕೊಡುತ್ತಿದ್ದ ಉಡಗೊರೆಗಳೇನು ಎಂಬುದನ್ನು ನೆನಪು ಮಾಡಿಕೊಂಡಿದ್ದಾರೆ.

ಪ್ರತಿವರ್ಷ ಹುಟ್ಟುಹಬ್ಬಕ್ಕೆ ಪುನೀತ್ ರಾಜ್​ಕುಮಾರ್ ಕೊಡುತ್ತಿದ್ದ ಉಡುಗೊರೆಗಳೇನು? ನೆನಪಿಸಿಕೊಂಡ ರಾಘಣ್ಣ
ಅಪ್ಪು-ರಾಘವೇಂದ್ರ ರಾಜ್​ಕುಮಾರ್

Updated on: Aug 15, 2023 | 8:51 PM

ಹಿರಿಯ ನಟ, ನಿರ್ಮಾಪಕ ರಾಘವೇಂದ್ರ ರಾಜ್​ಕುಮಾರ್ (Raghavendra Rajkumar) ಹುಟ್ಟುಹಬ್ಬ (Birthday) ಇಂದು (ಆಗಸ್ಟ್ 15). ಪುನೀತ್ (Puneeth Rajkumar) ಅವರನ್ನು ಕಳೆದುಕೊಂಡ ಬಳಿಕ ಹುಟ್ಟುಹಬ್ಬ ಆಚರಿಸುವುದನ್ನೇ ನಿಲ್ಲಿಸಿರುವ ರಾಘವೇಂದ್ರ ರಾಜ್​ಕುಮಾರ್, ತಮ್ಮ ಹುಟ್ಟುಹಬ್ಬದಂದು ಕೇಕ್ ಕತ್ತರಿಸುವುದಿಲ್ಲ, ಹಾರ ಹಾಕಿಸಿಕೊಳ್ಳುವುದಿಲ್ಲ, ಬಣ್ಣ-ಬಣ್ಣದ ಬಟ್ಟೆಗಳ ಬದಲಿಗೆ ಬಿಳಿಯ ಬಣ್ಣದ ಬಟ್ಟೆಯನ್ನಷ್ಟೆ ತೊಡುತ್ತಾರೆ. ಅಪ್ಪು ಇಲ್ಲದೆ ಸಮಯದಲ್ಲಿ ಖುಷಿ ಆಚರಿಸಬಾರದು ಎಂಬ ನಿಲುವು ತಳೆದಿದ್ದಾರೆ. ಹುಟ್ಟುಹಬ್ಬದ ದಿನ ಅವರನ್ನು ಹುಡುಕಿ ಹೋಗಿದ್ದ ಮಾಧ್ಯಮದವರೊಡನೆ ಮಾತನಾಡುತ್ತಾ, ಅಪ್ಪು ಇದ್ದಾಗ ತಮ್ಮ ಹುಟ್ಟುಹಬ್ಬ ಹೇಗಿರುತ್ತಿತ್ತು, ಅಪ್ಪು ಕೊಡುತ್ತಿದ್ದ ಉಡುಗೊರೆಗಳೇನು ಎಂದು ನೆನಪು ಮಾಡಿಕೊಂಡಿದ್ದಾರೆ.

”ಪ್ರತಿ ವರ್ಷವೂ ಬಂದು ವಿಷ್ ಮಾಡಿ ಆಶೀರ್ವಾದ ತೆಗೆದುಕೊಂಡು ಹೋಗುತ್ತಿದ್ದರು, ಸಂಜೆ ಅವರ ಮಕ್ಕಳ ಕೈಲಿ ಉಡುಗೊರೆ ಕಳಿಸುತ್ತಿದ್ದರು. ನಾನು ಆಫೀಸ್ ನೋಡಿಕೊಳ್ಳುತ್ತಿದ್ದ ಕಾರಣ ಪ್ರತಿ ವರ್ಷ ನನಗೆ ಹೊಸ ಸೂಟ್​ಕೇಸ್ ಕೊಡುತ್ತಿದ್ದರು ಮತ್ತು ಲೆಕ್ಕಗಳನ್ನು ನೋಡಿಕೊಳ್ಳುತ್ತಿದ್ದ ಕಾರಣ ಪ್ರತಿ ವರ್ಷವೂ ಹೊಸದೊಂದು ಲ್ಯಾಪ್​ಟಾಪ್ ಸಹ ಕೊಡಿಸುತ್ತಿದ್ದರು. ಒಮ್ಮೊಮ್ಮೆ ಅಂತೂ ಕಾರ್ಡ್ ನನ್ನ ಕೈಗೆ ಕೊಟ್ಟು ನಿಮಗೆ ಇಷ್ಟವಾದುದು ತೆಗೆದುಕೊಳ್ಳಿ ಅಣ್ಣ ಎನ್ನುತ್ತಿದ್ದ” ಎಂದು ನೆನಪು ಮಾಡಿಕೊಂಡರು ರಾಘವೇಂದ್ರ ರಾಜ್​ಕುಮಾರ್.

”ಪ್ರತಿ ವರ್ಷ ನಾಲ್ಕೂ ಜನ ಬಂದು ಹುಟ್ಟುಹಬ್ಬಕ್ಕೆ ಶುಭ ಹಾರೈಸಿ ವಿಷ್ ಮಾಡುತ್ತಿದ್ದರು, ಅದನ್ನು ಕಳೆದುಕೊಂಡಿದ್ದೇನೆ. ಈ ವರ್ಷವೂ ಸಹ ಮಕ್ಕಳು ಬಂದಿದ್ದರು, ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದರು. ಅಶ್ವಿನಿ ಸಹ ವಿಷ್ ಮಾಡಿದರು. ಪ್ರತಿ ದಿನ ನಾನೂ ಸಹ ಅವರ ಮನೆಗೆ ಹೋಗುತ್ತೇನೆ, ಮಾತನಾಡುತ್ತೇನೆ. ಆದರೆ ಅವನು ಇಲ್ಲ ಎಂಬುದಷ್ಟೆ ಕೊರಗು. ಅವನು ಇಲ್ಲವಾದ ಮೇಲೆ ನಾನು ಖುಷಿಯಾಗಿರುವುದು ಹೇಗೆ ಅದಕ್ಕೆ ಹುಟ್ಟುಹಬ್ಬದಂದು ಕೇಕ್ ಕತ್ತರಿಸಲ್ಲ, ಹಾರ ಹಾಕಿಸಿಕೊಳ್ಳಲ್ಲ, ಬಿಳಿ ಬಣ್ಣದ ಬೆಟ್ಟೆಗಳನ್ನಷ್ಟೆ ಹಾಕಿಕೊಳ್ಳುವುದು” ಎಂದರು ರಾಘಣ್ಣ.

ಇದನ್ನೂ ಓದಿ:ಎದೆಯೊಳಗಿದ್ದ ಅಪ್ಪುವನ್ನು ಎದೆಯ ಮೇಲೆ ಹಚ್ಚೆಯಾಗಿ ಹಾಕಿಸಿಕೊಂಡ ರಾಘವೇಂದ್ರ ರಾಜ್​ಕುಮಾರ್

”ಅಪ್ಪು ಹೋದ ಮೇಲೆ ಸಂಭ್ರಮ ಮಾಡುವ ಆಸೆ ಹೋಗಿದೆ, ಉಡುಗೊರೆ ಏನನ್ನೂ ಸ್ವೀಕರಿಸಲ್ಲ, 58 ವರ್ಷವಾಯಿತು, ಇಲ್ಲಿ ವರೆಗೆ ತೆಗೆದುಕೊಂಡಿದ್ದೇ ಆಗಿದೆ, ಇನ್ನು ಮೇಲೆ ಸಮಾಜಕ್ಕೆ ಕೊಡಬೇಕು ಎಂಬ ಯೋಚನೆ ಅಪ್ಪು ಇಂದಾಗಿ ನನ್ನಲ್ಲಿ ಮೂಡಿದೆ. ಅಪ್ಪು ಹಲವು ಜವಾಬ್ದಾರಿ ವಹಿಸಿ ಹೋಗಿದ್ದಾನೆ, ನನ್ನ ಜೀವ ತೇದಾದರೂ ಆ ಕೆಲಸಗಳನ್ನು ಮುಗಿಸುವ ಪ್ರಯತ್ನ ಮಾಡುತ್ತೇನೆ. ಇತ್ತೀಚೆಗಷ್ಟೆ ಉತ್ತರ ಕರ್ನಾಟಕದ ಶಾಲೆಯೊಂದರಲ್ಲಿ ಶೌಚಾಲಯ ಕಟ್ಟಿಸಿಕೊಟ್ಟೆವು, ಶಾಲೆಯ ಮಕ್ಕಳು ಬಹಳ ಖುಷಿ ಪಟ್ಟರು” ಎಂದರು ರಾಘವೇಂದ್ರ ರಾಜ್​ಕುಮಾರ್.

ಅಪ್ಪು ಹೆಸರಲ್ಲಿ ಹಲವು ಸಾಮಾಜಿಕ ಕಾರ್ಯಗಳನ್ನು ರಾಘವೇಂದ್ರ ರಾಜ್​ಕುಮಾರ್ ನಡೆಸುತ್ತಿದ್ದಾರೆ. ಗಿಡ ನೆಡುವ ಕಾರ್ಯಕ್ರಮವನ್ನು ದೊಡ್ಡ ಮಟ್ಟದಲ್ಲಿ ನಡೆಸುವ ಯೋಜನೆ ಹಾಕಿಕೊಂಡಿದ್ದಾರೆ. ಇನ್ನೂ ಹಲವು ಕಾರ್ಯಕ್ರಮಗಳನ್ನು ರಾಘವೇಂದ್ರ ರಾಜ್​ಕುಮಾರ್ ಸದ್ದಿಲ್ಲದೆ ಮಾಡುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us