Rahul Dravid: ದ್ರಾವಿಡ್​ ನಟಿಸಬಹುದಾದ 8 ಕನ್ನಡ ಸಿನಿಮಾಗಳು! ಟೈಟಲ್​ ಕೇಳಿ ನಗುತ್ತಿರುವ ನೆಟ್ಟಿಗರು

|

Updated on: Apr 11, 2021 | 12:06 PM

Rahul Dravid Ad | Viral Video: ಒಂದು ವೇಳೆ ರಾಹುಲ್​ ದ್ರಾವಿಡ್​ ಕನ್ನಡ ಸಿನಿಮಾಗಳಲ್ಲಿ ನಟಿಸಿದರೆ ಅವರಿಗೆ ಯಾವ ಸಿನಿಮಾದ ಟೈಟಲ್​ ಸೂಕ್ತ ಆಗುತ್ತದೆ ಎಂಬ ಬಗ್ಗೆ ನೆಟ್ಟಿಗರು ಊಹೆ ಮಾಡುತ್ತಿದ್ದಾರೆ. ಅದಕ್ಕೆ ತಕ್ಕಂತಹ ಮೀಮ್​ಗಳನ್ನು ಮಾಡಿ ಹರಿಬಿಡಲಾಗುತ್ತಿದೆ.

Rahul Dravid: ದ್ರಾವಿಡ್​ ನಟಿಸಬಹುದಾದ 8 ಕನ್ನಡ ಸಿನಿಮಾಗಳು! ಟೈಟಲ್​ ಕೇಳಿ ನಗುತ್ತಿರುವ ನೆಟ್ಟಿಗರು
(ರಾಹುಲ್​ ದ್ರಾವಿಡ್​ ವೈರಲ್​ ಜಾಹೀರಾತಿನ ಮೀಮ್ಸ್​)
Follow us on

ರಾಹುಲ್​ ಡ್ರಾವಿಡ್​ ಅವರು ಕಳೆದ ಎರಡು ದಿನಗಳಿಂದ ಟ್ರೆಂಡ್​ನಲ್ಲಿದ್ದಾರೆ. ಖಾಸಗಿ ಕಂಪನಿಯ ಒಂದು ಜಾಹೀರಾತಿನಲ್ಲಿ ನಟಿಸಿದ್ದರಿಂದ ಅವರ ಬಗ್ಗೆ ಎಲ್ಲರೂ ಮಾತನಾಡುವಂತಾಗಿದೆ. ಒಂದು ಕಾಲದಲ್ಲಿ ಕ್ರಿಕೆಟ್​ನಿಂದ ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿದ್ದ ಅವರು ಈಗ ನಟನೆ ಮೂಲಕ ಅಭಿಮಾನಿಗಳ ಸಂಖ್ಯೆಯನ್ನು ಹೆಚ್ಚಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ, ಸಿನಿಮಾಗಳಲ್ಲೂ ಡ್ರಾವಿಡ್​ ನಟಿಸಬೇಕು ಎಂಬ ಬೇಡಿಕೆ ಕೇಳಿಬರುತ್ತಿದೆ. ಈ ಕುರಿತಂತೆ ಸೋಶಿಯಲ್​ ಮೀಡಿಯಾದಲ್ಲಿ ಹಲವು ಬಗೆಯ ಚರ್ಚೆ ನಡೆಯುತ್ತಿದೆ.

ಅತೀ ಸಿಟ್ಟಿನ ವ್ಯಕ್ತಿಯಾಗಿ ಈ ಜಾಹೀರಾತಿನಲ್ಲಿ ರಾಹುಲ್​ ದ್ರಾವಿಡ್​ ನಟಿಸಿದ್ದಾರೆ. ಅವರ ಅಭಿನಯಕ್ಕೆ ಎಲ್ಲರೂ ಫಿದಾ ಆಗಿದ್ದಾರೆ. ಒಂದು ವೇಳೆ ರಾಹುಲ್​ ದ್ರಾವಿಡ್​ ಕನ್ನಡ ಸಿನಿಮಾಗಳಲ್ಲಿ ನಟಿಸಿದರೆ ಅವರಿಗೆ ಯಾವ ಸಿನಿಮಾದ ಟೈಟಲ್​ ಸೂಕ್ತ ಆಗುತ್ತದೆ ಎಂಬ ಬಗ್ಗೆ ನೆಟ್ಟಿಗರು ಊಹೆ ಮಾಡುತ್ತಿದ್ದಾರೆ. ಅದಕ್ಕೆ ತಕ್ಕಂತಹ ಮೀಮ್​ಗಳನ್ನು ಮಾಡಿ ಹರಿಬಿಡಲಾಗುತ್ತಿದೆ. ಸದ್ಯ ಇಂಟರ್​ನೆಟ್​ನಲ್ಲಿ ಅವೆಲ್ಲಾ ಸಿಕ್ಕಾಪಟ್ಟೆ ವೈರಲ್​ ಆಗುತ್ತಿವೆ.

ಬೆಂಗಳೂರಿನ ಟ್ರಾಫಿಕ್​ ಕಿರಿಕಿರಿಗೆ ಬೇಸತ್ತ ದ್ರಾವಿಡ್​ ಅವರು ಎಲ್ಲರ ಜೊತೆಗೂ ಜಗಳ ಮಾಡಿಕೊಳ್ಳುವ ದೃಶ್ಯ ಈ ಜಾಹೀರಾತಿನಲ್ಲಿ ಇದೆ. ಹಾಗಾಗಿ ಅವರು ಸಂಪತ್ತಿಗೆ ಸವಾಲ್​ ರೀತಿ ‘ಟ್ರಾಫಿಕ್​​ಗೆ ಸವಾಲ್​’ ಸಿನಿಮಾದಲ್ಲಿ ನಟಿಸಬಹುದು. ನಾನು ಇಂದಿರಾ ನಗರದ ಗೂಂಡಾ ಎಂದು ದ್ರಾವಿಡ್​ ಹೊಡೆದಿರುವ ಡೈಲಾಗ್​ ಫೇಮಸ್​ ಆಗಿದೆ. ಹಾಗಾಗಿ, ‘ಸಿಂಹಾದ್ರಿಯ ಸಿಂಹ’ ರೀತಿಯಲ್ಲೇ ‘ಇಂದಿರಾನಗರದ ಸಿಂಹ’ ಎಂದು ಸಿನಿಮಾ ಮಾಡಬಹುದು ಎನ್ನುತ್ತಿದ್ದಾರೆ ನೆಟ್ಟಿಗರು.

ಟ್ರಾಫಿಕ್​ನ ಕಿರಿಕಿರಿಗೆ ಬೇಸತ್ತು ದ್ರಾವಿಡ್​ ಉಗ್ರ ಅವತಾರ ತಾಳಿದ್ದಾರೆ. ಉಗ್ರ ನರಸಿಂಹನ ರೀತಿಯಲ್ಲಿ ಕೋಪ ತೋರಿಸಿದ್ದಾರೆ. ಹಾಗಾಗಿ ಅವರು ‘ಉಗ್ರಂ’ ಸಿನಿಮಾದಲ್ಲಿ ನಟಿಸಬೇಕು. ರೌಡಿಯ ರೀತಿಯಲ್ಲಿ ಬ್ಯಾಟ್​ ಹಿಡಿದುಕೊಂಡು ಪಕ್ಕದ ಕಾರಿನ ಮಿರರ್​ ಒಡೆದು ಹಾಕಿದ್ದಾರೆ. ಆದ್ದರಿಂದ ಅವರ ಸಿನಿಮಾಗೆ ‘ರೌಡಿ ಅಳಿಯ’ ಸಿನಿಮಾ ಟೈಟಲ್​ ಸೂಕ್ತವಾಗುತ್ತದೆ. ಮಧ್ಯ ದಾರಿಯಲ್ಲಿ ನಿಂತು ಕೂಗಾಡಿರುವುದರಿಂದ ಅವರು ‘ದಾರಿ ತಪ್ಪಿದ ಮಗ’ ಕೂಡ ಆಗಬಹುದು ಎನ್ನುವಂತಹ ಮೀಮ್​ಗಳು ಹರಿದಾಡುತ್ತಿವೆ.

(ರಾಹುಲ್​ ದ್ರಾವಿಡ್​ ನಟಿಸಿದ ಜಾಹೀರಾತಿನ ವೈರಲ್​ ಮೀಮ್ಸ್​)

ಇಷ್ಟು ದಿನ ಸೈಲೆಂಟ್​ ಆಗಿದ್ದುಕೊಂಡು ಹೀಗೆ ಏಕಾಏಕಿ ವೈಲೆಂಟ್​ ಆಗುವಂತಹ ದ್ರಾವಿಡ್​ ಥರದ ವ್ಯಕ್ತಿ ಸಿಗುವುದು ಕೋಟಿಯಲ್ಲಿ ಒಬ್ಬರು ಮಾತ್ರ. ಹಾಗಾಗಿ ಅವರ ಸಿನಿಮಾಗೆ ‘ಕೋಟಿಗೊಬ್ಬ’ ಅಂತ ಹೆಸರು ಇಟ್ಟರೂ ನಡೆಯುತ್ತದೆ. ಜಾಹೀರಾತಿನಲ್ಲಿ ಅವರು ತೋರಿಸಿರುವ ಕೋಪ ನಿಜಕ್ಕೂ ಜ್ವಾಲಾಮುಖಿ ರೀತಿ ಇದೆ. ಆದ್ದರಿಂದ ದ್ರಾವಿಡ್​ ಸಿನಿಮಾಗೆ ‘ಜ್ವಾಲಾಮುಖಿ’ ಎಂಬ ಶೀರ್ಷಿಕೆ ಸೂಕ್ತವಾಗುತ್ತದೆ.

ಎಲ್ಲಕ್ಕಿಂತ ಹೆಚ್ಚಾಗಿ ಅವರು ರಿಯಲ್​ ಲೈಫ್​ನಲ್ಲಿ ಬಂಗಾರದಂತಹ ವ್ಯಕ್ತಿತ್ವ ಉಳ್ಳವರು. ಹಾಗಾಗಿ ‘ಬಂಗಾರದ ಮನುಷ್ಯ’ ಚಿತ್ರದ ಪೋಸ್ಟರ್​ಗೆ ದ್ರಾವಿಡ್​ ಮುಖವನ್ನು ಎಡಿಟ್​ ಮಾಡಿ ನೆಟ್ಟಿಗರು ಹರಿಬಿಡುತ್ತಿದ್ದಾರೆ.

ಇದನ್ನೂ ಓದಿ: Rahul Dravid: ರಾಹುಲ್​ ದ್ರಾವಿಡ್​ಗೆ ಚಿತ್ರರಂಗದಿಂದ ಬಂತು ಬೇಡಿಕೆ! ಒಂದೇ ದಿನದಲ್ಲಿ ಇದೆಂಥಾ ಮ್ಯಾಜಿಕ್​

(Rahul Dravid Viral Ad video makes netizens to suggest Kannada movie titles that suits to him)