
ರಾಜ್ಕುಮಾರ್ ಅವರಿಗೆ ಇಂದು (ಏಪ್ರಿಲ್ 24) ಜನ್ಮದಿನ. ಅವರು ಬದುಕಿದ್ದರೆ ಅಭಿಮಾನಿಗಳು ಅವರ ಮನೆಯ ಬಳಿಯೇ ತೆರಳಿ ಹುಟ್ಟುಹಬ್ಬ ಆಚರಣೆ ಮಾಡುತ್ತಿದ್ದರು. ಆದರೆ, ಇಂದು ಅವರಿಲ್ಲ. ಅವರ ನೆನಪಲ್ಲಿ ಎಲ್ಲ ಕಡೆಗಳಲ್ಲಿ ಜನ್ಮದಿನವನ್ನು ಆಚರಣೆ ಮಾಡುವುದನ್ನು ನೀವು ಕಾಣಬಹುದು. ಈಗ ರಾಜ್ಕುಮಾರ್ ನಟಿಸಬೇಕಿದ್ದ ಒಂದು ಸಿನಿಮಾ ಸೆಟ್ಟೇರಲೇ ಇಲ್ಲ ಎಂಬ ವಿಷಯ ನಿಮಗೆ ಗೊತ್ತೇ? ಆ ಬಗ್ಗೆ ನಾವು ಹೇಳುತ್ತೇವೆ.
ರಾಜ್ಕುಮಾರ್ ಅವರು ಇಂತಹ ಪಾತ್ರ ಮಾಡಿಲ್ಲ ಎಂದಿಲ್ಲ. ಬಾಂಡ್, ಪ್ರಣಯದ ಸಿನಿಮಾಗಳು, ಸಮಾಜಕ್ಕೆ ಒಂದೊಳ್ಳೆಯ ಸಂದೇಶವನ್ನು ತಲುಪಿಸುವ ಚಿತ್ರಗಳನ್ನು ಮಾಡಿದರು. ಅದರಲ್ಲೂ ಅವರಿಗೆ ಪೌರಾಣಿಕ, ದೈವಿಕ ಹಾಗೂ ಐತಿಹಾಸಿಕ ಸಿನಿಮಾಗಳನ್ನು ಮಾಡುವುದು ಎಂದರೆ ಇಷ್ಟವಾಗಿತ್ತು. ಅವರು ನಾಟಕಗಳನ್ನು ಮಾಡಿ ಬಂದಿದ್ದಕ್ಕೋ ಏನೋ ಈ ಪಾತ್ರಗಳು ಅವರಿಗೆ ತುಂಬಾನೇ ಹೊಂದಿಕೆ ಆಗುತ್ತಿತ್ತು ಎಂದರೂ ತಪ್ಪಾಗಲಿಕ್ಕಿಲ್ಲ.
ಅಮೋಘವರ್ಷ ನೃಪತುಂಗ ಇದು ರಾಜ್ಕುಮಾರ್ ಅವರು ನಟಿಸಬೇಕಿದ್ದ ಸಿನಿಮಾ ಆಗಿತ್ತು. ಇದು ಅವರ 200ನೇ ಚಿತ್ರ ಆಗಬೇಕಿತ್ತು. ಅಂದಿನ ಕಾಲದಲ್ಲಿ ಜಾಹೀರಾತು ಕೂಡ ನೀಡಲಾಗಿತ್ತು. ಈ ಜಾಹೀರಾತನ್ನು ಲಿಖಿತಾ ಎಂಬುವವರು ಶೇರ್ ಮಾಡಿಕೊಂಡಿದ್ದಾರೆ.
ಅಮೋಘವರ್ಷ ನೃಪತುಂಗ – ಇದು #ಅಣ್ಣಾವ್ರ ಇನ್ನೂರನೆಯ ಸಿನಿಮಾ ಎಂದು ಆಗ ಜಾಹಿರಾತು ನೀಡಲಾಗಿತ್ತು ( 1986-87 ನಲ್ಲಿ ಅಂದಾಜು ). ತುಂಬಾ ದಿನ ಹಾಗೆ ಜಾಹಿರಾತು ಬರುತ್ತಲೇ ಇತ್ತು ಪತ್ರಿಕೆಗಳಲ್ಲಿ.
ನಾವೆಲ್ಲ ಆಗ ರೋಮಾಂಚನಗೊಂಡು, ಕಾತರದಿಂದ ಕಾಯುತ್ತಿದ್ದಾಗಲೇ ದಿಡೀರ್ ಎಂದು ಒಂದು ದಿನ – “ದೇವತಾ ಮನುಶ್ಯ” – 200 ನೇ ಚಿತ್ರ ಎಂದು…
— M S Sriharsha (@mssriharsha) April 21, 2026
ಈ ಸಿನಿಮಾ ಬಗ್ಗೆ ಎಂಎಸ್ ಶ್ರೀ ಹರ್ಷ ಎಂಬುವವರು ಬರೆದುಕೊಂಡಿದ್ದಾರೆ. ‘ಅಮೋಘವರ್ಷ ನೃಪತುಂಗ – ಇದು ಅಣ್ಣಾವ್ರ 200ನೇ ಸಿನಿಮಾ ಎಂದು ಆಗ ಜಾಹಿರಾತು ನೀಡಲಾಗಿತ್ತು ( 1986-87ನಲ್ಲಿ ಅಂದಾಜು ). ಪತ್ರಿಕೆಗಳಲ್ಲಿ ತುಂಬಾ ದಿನ ಹಾಗೆ ಜಾಹಿರಾತು ಬರುತ್ತಲೇ ಇತ್ತು. ನಾವೆಲ್ಲ ಆಗ ರೋಮಾಂಚನಗೊಂಡು, ಕಾತರದಿಂದ ಕಾಯುತ್ತಿದ್ದಾಗಲೇ ದಿಡೀರ್ ಎಂದು ಒಂದು ದಿನ ದೇವತಾ ಮನುಶ್ಯ ರಾಜ್ಕುಮಾರ್ 200 ನೇ ಚಿತ್ರ ಎಂದು ಘೋಷಣೆ ಮಾಡಲಾಯಿತು’ ಎಂದು ಶ್ರೀ ಹರ್ಷ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಡಾ. ರಾಜ್ಕುಮಾರ್ ಮೇಲಿನ ಅಭಿಮಾನಕ್ಕೆ ಅಮೆರಿಕದಲ್ಲಿ ಕನ್ನಡ ಗೀತೆ ಹಾಡಿದ ಮೋಹನ್ಲಾಲ್
‘ನೃಪತುಂಗ ಏಕೆ ಸೆಟ್ ಏರಲಿಲ್ಲ, ಏನು ಕಾರಣ ಎಂದು ಈವರೆಗೂ ನನಗೆ ಗೊತ್ತಿಲ್ಲ. ಆದರೆ ಅದೊಂದು ದೊಡ್ಡ ನಿರಾಶೆ. ಇನ್ನು ಆ ಪಾತ್ರವನ್ನು ಯಾರೂ ಮಾಡಿದರೂ ಅಷ್ಟು ರಸ ಇರುವುದಿಲ್ಲ. ಅದು ಮುಗಿದ ಅಧ್ಯಾಯ ಬಿಡಿ’ ಎಂದು ಅವರು ಬರೆದಿದ್ದಾರೆ. ಅಂದಹಾಗೆ ಈ ಚಿತ್ರವನ್ನು ಸಿಂಗೀತಂ ಶ್ರೀನಿವಾಸರಾವ್ ನಿರ್ದೇಶನ ಮಾಡಬೇಕಿತ್ತು. ಪಾರ್ವತಮ್ಮ ನಿರ್ಮಾಣ ಮಾಡಬೇಕಿತ್ತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 8:00 am, Fri, 24 April 26