ಯಶ್​ ಅಭಿಮಾನಿಗಳಿಗೆ ನೋವಾಗುವಂತೆ ಮಾತಾಡಿದ ರವಿತೇಜ; ಕ್ಷಮೆ ಕೇಳುವಂತೆ ಫ್ಯಾನ್ಸ್​ ಒತ್ತಾಯ

‘ರವಿತೇಜ ಅವರೇ.. ನಿಮ್ಮ ಬಗ್ಗೆ ನಮಗೆ ಬಹಳ ಗೌರವ ಇದೆ. ಬಳಸುವ ಪದಗಳು ತುಂಬ ಮುಖ್ಯ. ಅವು ನಿಮಗೆ ನೋವು ಉಂಟುಮಾಡಬಹುದು. ಯಶ್​ ಬಗ್ಗೆ ನೀವು ಹೇಳಿದ್ದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ನಿಮ್ಮಂತಹ ಹಿರಿಯ ನಟರಿಂದ ಈ ಮಾತು ಕೇಳಿ ನಿರಾಸೆ ಆಯಿತು’ ಎಂದು ಯಶ್​ ಅಭಿಮಾನಿಯೊಬ್ಬರು ಪೋಸ್ಟ್ ಮಾಡಿದ್ದಾರೆ.

ಯಶ್​ ಅಭಿಮಾನಿಗಳಿಗೆ ನೋವಾಗುವಂತೆ ಮಾತಾಡಿದ ರವಿತೇಜ; ಕ್ಷಮೆ ಕೇಳುವಂತೆ ಫ್ಯಾನ್ಸ್​ ಒತ್ತಾಯ
ರವಿತೇಜ, ಯಶ್​

Updated on: Oct 11, 2023 | 4:33 PM

ತೆಲುಗಿನಲ್ಲಿ ಮಾಸ್​ ಸಿನಿಮಾಗಳ ಮೂಲಕ ಹೆಸರು ಮಾಡಿರುವ ನಟ ರವಿತೇಜ (Ravi Teja) ಅವರು ದೇಶಾದ್ಯಂತ ಅಭಿಮಾನಿಗಳನ್ನು ಹೊಂದಿದ್ದಾರೆ. ಕರ್ನಾಟಕದಲ್ಲೂ ಅವರ ಸಿನಿಮಾಗಳು ಉತ್ತಮವಾಗಿ ಪ್ರದರ್ಶನವಾದ ಉದಾಹರಣೆ ಇದೆ. ಈಗ ಅವರು ನಟಿಸಿರುವ ‘ಟೈಗರ್​ ನಾಗೇಶ್ವರ ರಾವ್​’ (Tiger Nageswara Rao) ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಈ ಚಿತ್ರ ಅಕ್ಟೋಬರ್​ 20ರಂದು ರಿಲೀಸ್​ ಆಗಲಿದೆ. ಅದಕ್ಕೂ ಮುನ್ನ ಅವರೊಂದು ಕಿರಿಕ್​ ಮಾಡಿಕೊಂಡಿದ್ದಾರೆ. ನಟ ಯಶ್​ (Yash) ಬಗ್ಗೆ ರವಿತೇಜ ನೀಡಿದ ಒಂದು ಹೇಳಿಕೆ ಬಗ್ಗೆ ವಿರೋಧ ವ್ಯಕ್ತವಾಗಿದೆ. ರವಿತೇಜ ಕ್ಷಮೆ ಕೇಳಬೇಕು ಎಂದು ಯಶ್​ ಫ್ಯಾನ್ಸ್​ ಪಟ್ಟು ಹಿಡಿದಿದ್ದಾರೆ. ಈ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ.

ರವಿತೇಜ ಅವರು ‘ಟೈಗರ್ ನಾಗೇಶ್ವರ ರಾವ್​’ ಸಿನಿಮಾದ ಪ್ರಚಾರಕ್ಕಾಗಿ ಅನೇಕ ಕಡೆಗಳಲ್ಲಿ ಸಂದರ್ಶನ ನೀಡುತ್ತಿದ್ದಾರೆ. ಈ ವೇಳೆ ಅವರಿಗೆ ಹಲವು ಬಗೆಯ ಪ್ರಶ್ನೆಗಳು ಎದುರಾಗುತ್ತಿದೆ. ದಕ್ಷಿಣ ಭಾರತದ ಬಗ್ಗೆ ತಮಗೆ ಇರುವ ಅಭಿಪ್ರಾಯವನ್ನು ರವಿತೇಜ ವ್ಯಕ್ತಪಡಿಸಿದ್ದಾರೆ. ಈ ವೇಳೆ ‘ಯಶ್​ ತುಂಬ ಲಕ್ಕಿ’ ಎಂದು ಅವರು ಹೇಳಿದ್ದಾರೆ. ಇದೇ ಹೇಳಿಕೆ ಈಗ ವಿವಾದಕ್ಕೆ ಕಾರಣ ಆಗಿದೆ. ರವಿತೇಜ ಅವರು ಈ ಮಾತನ್ನು ಯಶ್​ ಫ್ಯಾನ್ಸ್​ ಒಪ್ಪಿಲ್ಲ.

‘ಪ್ರಭಾಸ್​, ರಾಮ್​ ಚರಣ್​, ರಾಜಮೌಳಿ, ಯಶ್​, ದಳಪತಿ ವಿಜಯ್​ ಅವರಿಂದ ನೀವು ಏನನ್ನು ಕದಿಯುತ್ತೀರಿ’ ಎಂದು ಪ್ರಶ್ನೆ ಕೇಳಲಾಯಿತು. ಅದಕ್ಕೆ ಉತ್ತರಿಸಿದ ರವಿತೇಜ ಅವರು, ‘ಪ್ರಭಾಸ್​ ಅವರಿಂದ ಅಪಿಯರೆನ್ಸ್​, ರಾಮ್​ ಚರಣ್​ ಅವರಿಂದ ಡ್ಯಾನ್ಸ್​, ರಾಜಮೌಳಿ ಅವರಿಂದ ವಿಷನ್​ ಹಾಗೂ ವಿಜಯ್​ ಅವರಿಂದ ಡ್ಯಾನ್ಸ್ ಕದಿಯುತ್ತೇನೆ’ ಎಂದರು. ‘ಯಶ್​ ಅವರನ್ನು ನಾನು ಕೆಜಿಎಫ್​ ಸಿನಿಮಾದಲ್ಲಿ ಮಾತ್ರ ನೋಡಿದ್ದು. ಅಂಥ ಸಿನಿಮಾದಲ್ಲಿ ನಟಿಸಲು ಅವರು ಲಕ್ಕಿ ಆಗಿದ್ದರು’ ಎಂದು ರವಿತೇಜ ಹೇಳಿದ್ದಾರೆ.

ಇದನ್ನೂ ಓದಿ: Yash: ಯಶ್​ ನಟನೆಯ ಸಿನಿಮಾಗಳನ್ನು ನೋಡಿ ‘ಜವಾನ್​’ ಚಿತ್ರಕ್ಕಾಗಿ ತಯಾರಿ ಮಾಡಿಕೊಂಡಿದ್ದ ಶಾರುಖ್​ ಖಾನ್​

‘ರವಿತೇಜ ಅವರೇ.. ನಿಮ್ಮ ಬಗ್ಗೆ ನಮಗೆ ಬಹಳ ಗೌರವ ಇದೆ. ಬಳಸುವ ಪದಗಳು ತುಂಬ ಮುಖ್ಯ. ಅವು ನಿಮಗೆ ನೋವು ಉಂಟುಮಾಡಬಹುದು. ಯಶ್​ ಬಗ್ಗೆ ನೀವು ಹೇಳಿದ್ದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ನಿಮ್ಮಂತಹ ಹಿರಿಯ ನಟರಿಂದ ಈ ಮಾತು ಕೇಳಿ ನಿರಾಸೆ ಆಯಿತು. ಬಸ್​ ಚಾಲಕನ ಮಗನಾಗಿ ಪ್ಯಾನ್​ ಇಂಡಿಯಾ ಸ್ಟಾರ್​ ಆಗುವ ಮಟ್ಟಕ್ಕೆ ಬೆಳೆದವರು ಯಶ್​. ಅವರು ಪ್ರತಿಭಾವಂತರು, ಶ್ರಮಜೀವಿ ಮತ್ತು ವಿನಯವಂತರು. ಅವರು ಲಕ್ಕಿ ಅಲ್ಲ. ಕೆಜಿಎಫ್​ ಸಿನಿಮಾವನ್ನು ಪಡೆದಿದ್ದಕ್ಕೆ ನಾವು ಲಕ್ಕಿ’ ಎಂದು ನೆಟ್ಟಿಗರೊಬ್ಬರು ಪೋಸ್ಟ್​ ಮಾಡಿದ್ದಾರೆ.

ಇದನ್ನೂ ಓದಿ: ಅಂದು ಯಶ್​, ಈಗ ಮಹೇಶ್​ ಬಾಬು; ರೇಂಜ್​ ರೋವರ್​ ಕಾರು ಖರೀದಿಸಿದ ಸೂಪರ್​ ಸ್ಟಾರ್ಸ್​

‘ಕೆಜಿಎಫ್​ ಚಿತ್ರ ಬರುವುದಕ್ಕೂ ಮುನ್ನ ಯಶ್​ 16 ಸಿನಿಮಾ ಮಾಡಿದ್ದರು. ಕೆಜಿಎಫ್​​ಗೂ ಮೊದಲು ಅವರು ಸ್ಟಾರ್​ ಆಗಿದ್ದರು. ಕನ್ನಡ ಚಿತ್ರರಂಗಕ್ಕೆ ಅವರ ಕೊಡುಗೆ ಅಪಾರ. ಕೆಜಿಎಫ್​ಗಾಗಿ ಅವರು 8 ವರ್ಷ ಮೀಸಲಿಟ್ಟರು’ ಎಂದು ಹೇಳುವ ಮೂಲಕ ಯಶ್​ ಅವರು ಅದೃಷ್ಟದಿಂದ ಈ ಗೆಲುವು ಪಡೆದಿಲ್ಲ ಎಂಬುದನ್ನು ರವಿತೇಜಗೆ ಫ್ಯಾನ್ಸ್​ ನೆನಪಿಸಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us