Karnataka Rajyotsava 2021: ‘ಜೀವ ಕನ್ನಡ, ದೇಹ ಕನ್ನಡ..’ ಎನ್ನುತ್ತ ‘ವೀರ ಕನ್ನಡಿಗ’ ಆಗಿದ್ದ ಪುನೀತ್​; ರಾಜ್ಯೋತ್ಸವದಲ್ಲಿ ಕಾಡುವ ನೆನಪು

| Updated By: ಮದನ್​ ಕುಮಾರ್​

Updated on: Nov 01, 2021 | 9:29 AM

Puneeth Rajkumar: ಕನ್ನಡಿಗರ ಪಾಲಿಗೆ ಡಾ. ರಾಜ್​ಕುಮಾರ್​ ಮಾದರಿ ವ್ಯಕ್ತಿ ಆಗಿದ್ದರು. ಪುನೀತ್​ ರಾಜ್​ಕುಮಾರ್​ ರೂಪದಲ್ಲೂ ಜನರು ಅಣ್ಣಾವ್ರನ್ನು ಕಾಣುತ್ತಿದ್ದರು. ರಾಜ್ಯೋತ್ಸವದ ಸಂದರ್ಭದಲ್ಲಿ ಈ ಇಬ್ಬರು ಮಹಾನ್​ ಪುರುಷರು ಅತಿಯಾಗಿ ನೆನಪಾಗುತ್ತಿದ್ದಾರೆ.

Karnataka Rajyotsava 2021: ‘ಜೀವ ಕನ್ನಡ, ದೇಹ ಕನ್ನಡ..’ ಎನ್ನುತ್ತ ‘ವೀರ ಕನ್ನಡಿಗ’ ಆಗಿದ್ದ ಪುನೀತ್​; ರಾಜ್ಯೋತ್ಸವದಲ್ಲಿ ಕಾಡುವ ನೆನಪು
‘ವೀರ ಕನ್ನಡಿಗ’ ಸಿನಿಮಾದಲ್ಲಿ ಪುನೀತ್​ ರಾಜ್​ಕುಮಾರ್​
Follow us on

ಕನ್ನಡಿಗರ ಪಾಲಿಗೆ ಇದೊಂದು ಸಂದಿಗ್ಧ ಪರಿಸ್ಥಿತಿ. ಒಂದು ಕಡೆ ಪುನೀತ್​ ರಾಜ್​ಕುಮಾರ್​ ಅವರನ್ನು ಕಳೆದುಕೊಂಡ ನೋವು ಎದುರಾಗಿದೆ. ಇನ್ನೊಂದು ಕಡೆ ಕನ್ನಡ ರಾಜ್ಯೋತ್ಸವ ಕೂಡ ಬಂದಿದೆ. ಬಂಗಾರದಂತಹ ಮನುಷ್ಯನನ್ನು ಕಳೆದುಕೊಂಡಿದ್ದಕ್ಕೆ ಅಳಬೇಕೋ ಅಥವಾ ನೋವು ಬದಿಗಿಟ್ಟು ಕನ್ನಡ ರಾಜ್ಯೋತ್ಸವವನ್ನು ಆಚರಿಸಬೇಕೋ ತಿಳಿಯುತ್ತಿಲ್ಲ. ಪುನೀತ್​ ಅವರಿಗೆ ಕನ್ನಡ ಭಾಷೆ ಮತ್ತು ಸಂಸ್ಕೃತಿ ಮೇಲೆ ಇದ್ದ ಗೌರವ ಅಪಾರ. ಅವರು ನಟಿಸಿದ್ದ ‘ವೀರ ಕನ್ನಡಿಗ’ ಸಿನಿಮಾದಲ್ಲಿ ಕನ್ನಡಿಗರ ಹೋರಾಟದ ಕಥೆಯನ್ನು ತೋರಿಸಲಾಗಿತ್ತು. ಅಭಿಮಾನಿಗಳ ಪಾಲಿಗೆ ಆ ಚಿತ್ರ ಈಗಲೂ ಅಚ್ಚುಮೆಚ್ಚು.

2004ರಲ್ಲಿ ‘ವೀರ ಕನ್ನಡಿಗ’ ಸಿನಿಮಾ ತೆರೆಕಂಡಿತ್ತು. ಆ ಚಿತ್ರದಲ್ಲಿ ಪುನೀತ್​ ಎರಡು ಪಾತ್ರ ನಿಭಾಯಿಸಿದ್ದರು. ತಂದೆ ಮತ್ತು ಮಗನ ಪಾತ್ರಗಳಲ್ಲಿ ಅವರು ಅತ್ಯುತ್ತಮವಾಗಿ ನಟಿಸಿದ್ದರು. ಆ ಚಿತ್ರದ ಕಥೆ ಕನ್ನಡಿಗರ ಅಸ್ತಿತ್ವದ ಕುರಿತಾಗಿತ್ತು. ಹೊಟ್ಟೆಪಾಡಿಗಾಗಿ ಕೂಲಿ ಕೆಲಸ ಹುಡುಕಿಕೊಂಡು ಮುಂಬೈಗೆ ಹೋಗುವ ಕನ್ನಡಿಗರು ಅಲ್ಲಿ ಹೇಗೆಲ್ಲ ಕಷ್ಟ ಅನುಭವಿಸುತ್ತಾರೆ? ಅವರ ಮೇಲೆ ಬೇರೆ ಭಾಷಿಕರು ಹೇಗೆ ದಬ್ಬಾಳಿಕೆ ನಡೆಸುತ್ತಾರೆ ಎಂಬುದನ್ನು ಈ ಚಿತ್ರದಲ್ಲಿ ತೋರಿಸಲಾಗಿತ್ತು.

‘ವೀರ ಕನ್ನಡಿಗ’ ಸಿನಿಮಾದ ಕಥಾನಾಯಕ ಮುನ್ನಾ ಎಂಬ ಪಾತ್ರದಲ್ಲಿ ಒಂದು ಕಿಚ್ಚು ಇತ್ತು. ಕನ್ನಡಿಗರಲ್ಲಿ ಒಗ್ಗಟ್ಟಿನ ಭಾವನೆ ಮೂಡಿಸುವ ಗುಣ ಇತ್ತು. ಅದರಲ್ಲೂ ‘ಜೀವ ಕನ್ನಡ.. ದೇಹ ಕನ್ನಡ..’ ಹಾಡಿನ ಮೂಲಕ ಪುನೀತ್​ ಎಲ್ಲರ ಮನದಲ್ಲೂ ಒಂದು ಬಗೆಯ ಕಿಡಿ ಹೊತ್ತಿಸಿದ್ದರು. ಈಗಲೂ ಆ ಹಾಡನ್ನು ಕೇಳಿದರೆ ಪುಳಕ ಆಗುತ್ತದೆ. ಆ ಗೀತೆಗೆ ಹಂಸಲೇಖ ಸಾಹಿತ್ಯ ಬರೆದು, ಚಕ್ರಿ ಸಂಗೀತ ನಿರ್ದೇಶನ ಮಾಡಿದ್ದರು. ಮೆಹರ್​ ರಮೇಶ್​ ನಿರ್ದೇಶನದಲ್ಲಿ ‘ವೀರ ಕನ್ನಡಿಗ’ ಸಿನಿಮಾ ಮೂಡಿಬಂದಿತ್ತು. ಇತ್ತೀಚೆಗೆ ನಿಧನರಾದ ನಟ ಸತ್ಯಜಿತ್​ ಅವರು ಈ ಸಿನಿಮಾದಲ್ಲಿ ಒಂದು ಪಾತ್ರ ನಿಭಾಯಿಸಿದ್ದರು. ಬುಲೆಟ್​ ಪ್ರಕಾಶ್​ ಎಂದಿನಂತೆ ಕಾಮಿಡಿ ಪಾತ್ರ ಮಾಡಿದ್ದರು. ಈ ಯಾವ ನಟರು ಕೂಡ ಈಗ ನಮ್ಮೊಂದಿಗಿಲ್ಲ ಎಂಬುದು ನೋವಿನ ಸಂಗತಿ.

ಆ ಸಿನಿಮಾ ಬಂದು 17 ವರ್ಷ ಕಳೆದಿದೆ. ಆದರೂ ‘ಜೀವ ಕನ್ನಡ ದೇಹ ಕನ್ನಡ..’ ಹಾಡಿನ ಹವಾ ಮಾತ್ರ ಕಮ್ಮಿ ಆಗಿಲ್ಲ. ಈಗಲೂ ಕನ್ನಡ ರಾಜ್ಯೋತ್ಸದ ಸಂದರ್ಭದಲ್ಲಿ ಈ ಗೀತೆ ಮೊಳಗುತ್ತದೆ. ಕನ್ನಡಿಗರ ಪಾಲಿಗೆ ಡಾ. ರಾಜ್​ಕುಮಾರ್​ ಅವರು ಮಾದರಿ ವ್ಯಕ್ತಿ ಆಗಿದ್ದರು. ಅವರ ಗುಣಗಳನ್ನೇ ಪಾಲಿಸುವ ಪುನೀತ್​ ರಾಜ್​ಕುಮಾರ್​ ರೂಪದಲ್ಲಿ ಜನರು ಅಣ್ಣಾವ್ರನ್ನು ಕಾಣುತ್ತಿದ್ದರು. ಈ ರಾಜ್ಯೋತ್ಸವದ ಸಂದರ್ಭದಲ್ಲಿ ಈ ಇಬ್ಬರು ಮಹಾನ್​ ಪುರುಷರು ಅತಿಯಾಗಿ ನೆನಪಾಗುತ್ತಿದ್ದಾರೆ.

ಇದನ್ನೂ ಓದಿ:

Puneeth Rajkumar: ಅಶ್ಲೀಲ ಪದಗಳಿಂದ ಪುನೀತ್​ಗೆ ಅವಮಾನ; ಜನರಿಗೆ ಮನುಷ್ಯತ್ವ ಇಲ್ವಾ? ಸುದೀಪ್​ ಪುತ್ರಿ ಸಾನ್ವಿ ಗರಂ

Puneeth Rajkumar: ಶಿವಣ್ಣನ ಎದುರು ಪುನೀತ್​ ಹೇಳಿಕೊಂಡಿದ್ದ ಆಸೆ ಈಡೇರಲೇ ಇಲ್ಲ; ಅಭಿಮಾನಿಗಳ ಹೃದಯ ನುಚ್ಚುನೂರು