ರೇಣುಕಾ ಸ್ವಾಮಿ ಕೊಲೆ ಆರೋಪಿಗೆ ಮಧ್ಯಂತರ ಜಾಮೀನು ಮಂಜೂರು
Renuka Swamy: ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿಗಳು ಮರಳಿ ಜೈಲು ಸೇರಿ ಮೂರು ತಿಂಗಳಾಗಿವೆ. ಮತ್ತೊಮ್ಮೆ ಜಾಮೀನು ಪಡೆಯುವ ಪ್ರಯತ್ನದಲ್ಲಿ ಆರೋಪಿಗಳಿದ್ದು ಅದು ಸಾಧ್ಯವಾಗುತ್ತಿಲ್ಲ. ಆದರೆ ಇದೀಗ ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಲ್ಲಿ ಒಬ್ಬರಿಗೆ ಬೆಂಗಳೂರು 57 ಸಿಸಿಹೆಚ್ ನ್ಯಾಯಾಲಯ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.

ರೇಣುಕಾ ಸ್ವಾಮಿ (Renuka Swamy) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೇ ವರ್ಷದ ಆಗಸ್ಟ್ ತಿಂಗಳಲ್ಲಿ ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿತು. ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಏಳು ಆರೋಪಿಗಳ ಜಾಮೀನನ್ನು ರದ್ದು ಮಾಡಿತು. ಹೈಕೋರ್ಟ್ನಿಂದ ಜಾಮೀನು ಪಡೆದ ನೆಮ್ಮದಿಯಾಗಿದ್ದ ಏಳು ಮಂದಿ ಆರೋಪಿಗಳು ಮತ್ತೆ ಜೈಲು ಸೇರುವಂತಾಯ್ತು. ಜೈಲು ಸೇರಿದಾಗಿನಿಂದಲೂ ಪವಿತ್ರಾ, ದರ್ಶನ್ ಸೇರಿದಂತೆ ಇನ್ನೂ ಕೆಲವರು ಮತ್ತೆ ಜಾಮೀನು ಪಡೆಯುವ ಯತ್ನದಲ್ಲಿದ್ದಾರೆ ಆದರೆ ಸಾಧ್ಯವಾಗಿಲ್ಲ. ಇದೀಗ ಒಬ್ಬ ಆರೋಪಿಗೆ ನ್ಯಾಯಾಲಯವು ಮಧ್ಯಂತರ ಜಾಮೀನು ನೀಡಿದೆ.
ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ 14ನೇ ಆರೋಪಿ ಆಗಿರುವ ಪ್ರದೋಶ್ಗೆ ಮಧ್ಯಂತರ ಜಾಮೀನು ಮಂಜೂರಾಗಿದೆ. ಆದರೆ ಇದು ಕೇವಲ 20 ದಿನಗಳ ಜಾಮೀನು ಆಗಿರಲಿದೆ. ಆರೋಪಿ ಪ್ರದೋಶ್ ಅವರ ತಂದೆ ಇತ್ತೀಚೆಗಷ್ಟೆ ನಿಧನ ಹೊಂದಿದ್ದು, ಅವರ ಉತ್ತರಾಧಿ ಕ್ರಿಯೆಗಳನ್ನು ನೆರವೇರಿಸಲು ಪ್ರದೋಶ್ಗೆ ಜಾಮೀನು ನೀಡಬೇಕೆಂದು ಬೆಂಗಳೂರಿನ 57 ಸಿಸಿಹೆಚ್ ಕೋರ್ಟ್ಗೆ ಅರ್ಜಿ ಹಾಕಲಾಗಿತ್ತು. ನ್ಯಾಯಾಲಯವು ಮಾನವೀಯ ನೆಲೆಗಟ್ಟಿನಲ್ಲಿ 20 ದಿನಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಕೆಲ ದಿನಗಳ ಹಿಂದೆ ಪ್ರದೋಶ್ ಅವರ ಅಜ್ಜಿ ಸಹ ನಿಧನ ಹೊಂದಿದ್ದರು.
ಪ್ರದೋಶ್ ಅವರ ತಂದೆ ಸುಬ್ಬಾರಾವ್ ಅವರು ಇತ್ತೀಚೆಗಷ್ಟೆ ನಿಧನ ಹೊಂದಿದರು. ಪ್ರದೋಶ್ ಅವರು ಈ ಪ್ರಕರಣದ 14ನೇ ಆರೋಪಿ ಆಗಿದ್ದು, ಘಟನೆ ನಡೆದಾಗ ದರ್ಶನ್ ಜೊತೆಗೆ ಇದ್ದ ಪ್ರದೋಶ್, ಆ ನಂತರ ದರ್ಶನ್ ಅವರಿಂದ 30 ಲಕ್ಷ ರೂಪಾಯಿ ಹಣ ಪಡೆದುಕೊಂಡು ಸಾಕ್ಷ್ಯ ನಾಶಕ್ಕೆ ಯತ್ನಿಸಿದ ಆರೋಪವೂ ಅವರ ಮೇಲೆ ಇದೆ. ರೇಣುಕಾ ಸ್ವಾಮಿ ಕೊಲೆ ನಡೆದ ದಿನದಂದು ದರ್ಶನ್, ಪ್ರದೋಶ್ ಅವರ ಒಡೆತನದ ಸ್ಟೋನಿ ಬ್ರೂಕ್ ಹೋಟೆಲ್ನಲ್ಲಿಯೇ ಇದ್ದರು. ಸ್ಟೋನಿ ಬ್ರೂಕ್ನಲ್ಲಿಯೇ ರೇಣುಕಾ ಸ್ವಾಮಿ ಅಪಹರಣದ ಸಂಚು ಮಾಡಲಾಗಿತ್ತು ಎಂಬ ಆರೋಪವೂ ಇದೆ.
ಇದನ್ನೂ ಓದಿ:ದರ್ಶನ್ ಕ್ಷಮೆ ಕೇಳಿದರೆ ಒಪ್ಪಿಕೊಳ್ತೀರಾ? ರೇಣುಕಾ ಸ್ವಾಮಿ ತಂದೆ ಹೇಳಿದ್ದೇನು?
ಪ್ರದೋಶ್, ದರ್ಶನ್ರ ಆಪ್ತರಾಗಿದ್ದು ಸ್ಟೋನಿ ಬ್ರೂಕ್ ಹೋಟೆಲ್ನ ಮಾಲೀಕರಾಗಿದ್ದಾರೆ. ರೇಣುಕಾ ಸ್ವಾಮಿ ಕೊಲೆ ಮುಚ್ಚಿ ಹಾಕಲು ಪ್ರದೋಶ್ ಸಾಕಷ್ಟು ಪ್ರಯತ್ನ ಮಾಡಿದ್ದರು. ದರ್ಶನ್ ಇಂದ ಹಣ ಪಡೆದು ನಕಲಿ ಆರೋಪಿಗಳನ್ನು ಸೃಷ್ಟಿಸಿದ್ದರು. ರೇಣುಕಾ ಸ್ವಾಮಿಯ ಶವದ ಸಾಗಾಟ ಮತ್ತು ಅದರ ವಿಲೇವಾರಿಯಲ್ಲಿಯೂ ಸಹ ಪ್ರದೋಶ್ ಪಾತ್ರ ಇತ್ತು. ಪೊಲೀಸರ ತನಿಖೆಯ ದಿಕ್ಕು ತಪ್ಪಿಸುವ ಪ್ರಯತ್ನವನ್ನೂ ಸಹ ಪ್ರದೋಶ್ ಮಾಡಿದ್ದರು.
ತಂದೆಯನ್ನು ಕಳೆದುಕೊಂಡ ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಎರಡನೇ ಆರೋಪಿ ಪ್ರದೋಶ್ ಆಗಿದ್ದಾರೆ. ರೇಣುಕಾ ಸ್ವಾಮಿ ಕೊಲೆ ಪ್ರಕರಣ ಮೊದಲು ಬೆಳಕಿಗೆ ಬಂದಾಗ ಆರೋಪಿ ಆಗಿದ್ದ ಅನುಕುಮಾರ್ ಅವರ ತಂದೆ ನಿಧನ ಹೊಂದಿದ್ದರು. ಆಗಲೂ ಸಹ ಮಾನೀವಯತೆ ಮೇರೆಗೆ ಅನುಕುಮಾರ್ಗೆ ತಂದೆಯ ಅಂತಿಮಕ್ರಿಯೆಯಲ್ಲಿ ಭಾಗಿ ಆಗುವ ಅವಕಾಶ ನೀಡಲಾಗಿತ್ತು. ಈಗ ಪ್ರದೋಶ್ ಅವರ ತಂದೆ ನಿಧನರಾಗಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




